ಆ್ಯಪ್ನಗರ

Karnataka Weather: ಚಳಿಗೆ ಬೆಂಗಳೂರು ಗಡಗಡ; ಬೆಳಗಾವಿಯಲ್ಲಿ ಕನಿಷ್ಠ 8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲು

ಬೆಂಗಳೂರು ಸೇರಿ ಕರ್ನಾಟಕದ ಜನ ಮೈಕೊರೆವ ಚಳಿಗೆ ನುಡುಗುತ್ತಿದ್ದಾರೆ. ರಾಜಧಾನಿಯಲ್ಲಂತೂ ಥಂಡಾ ಥಂಡಾ ವಾತಾವರಣವಿದ್ದು, ಜನರು ಬೆಚ್ಚಗೆಯ ಮೊರೆ ಹೋಗಿದ್ದಾರೆ. ಭಾನುವಾರ ಬಹುತೇಕ ಬೆಂಗಳೂರಲ್ಲಿ ಕನಿಷ್ಠ 12 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದರೆ, ಬೆಳಗಾವಿಯ ಬಸವನಕೊಳ್ಳದಲ್ಲಿ ಕನಿಷ್ಠ 8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಚಳಿಯ ತೀವ್ರತೆ ಇನ್ನೂ ಹೆಚ್ಚಿದೆ.

Edited byಅವಿನಾಶ ವಗರನಾಳ | Vijaya Karnataka Web 21 Nov 2022, 1:12 pm

ಹೈಲೈಟ್ಸ್‌:


  • ಮೈಕೊರೆವ ಚಳಿಗೆ ರಾಜಧಾನಿ ಬೆಂಗಳೂರು ಜನ ಗಡಗಡ
  • ಬೆಂಗಳೂರಿನಲ್ಲಿ ಕನಿಷ್ಠ 12 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲು
  • ಬೆಳಗಾವಿಯ ಬಸವನಕೊಳ್ಳದಲ್ಲಿ 8 ಡಿಗ್ರಿ ಸೆಲ್ಸಿಯಸ್‌ ತಾಪಮಾನ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Bengaluru Winter
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ಇಡೀ ಕರ್ನಾಟಕ ಮೈ ಕೊರೆವ ಚಳಿಗೆ ಗಡಗಡ ನಡುಗುತ್ತಿದೆ. ಸಿಲಿಕಾನ್‌ ಸಿಟಿಯಲ್ಲಿ ಥಂಡಾ ಥಂಡಾ ವಾತಾವರಣವಿದ್ದು, ಜನ ಹಾಸಿಗೆಯಿಂದ ಹೊರಬರಲು ಪರದಾಡುತ್ತಿದ್ದಾರೆ. ಭಾನುವಾರ ಬಹುತೇಕ ಬೆಂಗಳೂರಿನಲ್ಲಿ ಕನಿಷ್ಠ 12 ಡಿಗ್ರಿ ಸೆಲ್ಸಿಯಸ್‌ನಿಂದ 14 ಡಿಗ್ರಿ ಸೆಲ್ಸಿಯಸ್‌ವರೆಗೂ ತಾಪಮಾನ ದಾಖಲಾಗಿದೆ.
ಸೋಮವಾರ ಬೆಳಗ್ಗೆಯೂ 13.9 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಇದು ನವೆಂಬರ್‌ನಲ್ಲಿ ಕಳೆದ 10 ವರ್ಷಗಳಲ್ಲಿ ದಾಖಲಾದ ಕನಿಷ್ಠ ತಾಪಮಾನ ಆಗಿದೆ. ಮೋಡ ಕವಿದ ವಾತಾವರಣ ಇರುವುದರಿಂದ ಈ ರೀತಿಯ ಚಳಿ ಮಂಗಳವಾರವೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕನಿಷ್ಠ ತಾಪಮಾನ ದಾಖಲಾಗುತ್ತಿರುವ ಹಿನ್ನೆಲೆ ಜನರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಬೆಳ್ಳಂಬೆಳಗ್ಗೆ ಎದ್ದೇಳಲು ಹಿಂದೇಟು ಹಾಕುತ್ತಿದ್ದು, ಬೆಳಗ್ಗೆ ಎದ್ದು ವಾಕ್‌ ಮಾಡುವವರ ಸಂಖ್ಯೆಯೂ ಕೂಡ ಕನಿಷ್ಠ ತಾಪಮಾನದಿಂದ ಕಡಿಮೆಯಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿದು ವಾರದ ಹಿಂದೆ ಸುರಿದ ಮಳೆಯಿಂದ ಚಳಿ ಇನ್ನಷ್ಟು ಹೆಚ್ಚಿದೆ. ಈ ಸಲ ರಾಜ್ಯದಲ್ಲಿ ದಾಖಲೆಯ ಪ್ರಮಾಣದ ಮಳೆಯಾಗಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಷ್ಟೇ ಅಲ್ಲದೆ ನಗರ ಪ್ರದೇಶದಲ್ಲೂ ಚಳಿ ಹೆಚ್ಚಿದೆ. ಸೂರ್ಯ ನೆತ್ತಿ ಮೇಲೆ ಬಂದರೂ ಚಳಿ ಇಳಿಯದೇ ಜನ ಮನೆಯಿಂದ ಹೊರಬರುತ್ತಿಲ್ಲ. ಸಂಜೆಯಾಗುತ್ತಿದ್ದಂತೆ ಮಂಜು ಮಿಶ್ರಿತ ಚಳಿ ಬೀಳುತ್ತಿದ್ದು, ಜನರು ಬೆಚ್ಚನೆಯ ರಕ್ಷಣೆ ಪಡೆಯುತ್ತಿದ್ದಾರೆ.

ಕುಂದಾನಗರಿ ಈಗ 'ಚಳಿ'ಗಾವಿ: ಪ್ರತಿದಿನ ಸರಾಸರಿ 500 ಜನರಿಗೆ ಶೀತಜ್ವರ ಬಾಧೆ!
ಬೆಳಗಾವಿಯಲ್ಲಿ ಕನಿಷ್ಠ ತಾಪಮಾನ ದಾಖಲು!
ಇನ್ನು, ಬೆಳಗಾವಿಯ ಬಸವನಕೊಳ್ಳದಲ್ಲಿ ಭಾನುವಾರ ಕನಿಷ್ಠ 8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿರುವುದು ಚಳಿಯ ತೀವ್ರತೆಗೆ ಸಾಕ್ಷಿಯಾಗಿದೆ. ಬಾಗಲಕೋಟೆಯ ಲೋಕಾಪುರ, ಕಲಡಗಿಯಲ್ಲಿ 8.8 ಡಿಗ್ರಿ ಸೆಲ್ಸಿಯಸ್‌, ವಿಜಯಪುರದ ಚಡಚಣದಲ್ಲಿ 8.90, ಚಿಕ್ಕಬಳ್ಳಾಪುರದ ಹೊಸೂರಿನಲ್ಲಿ 9.10 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

ಊಟಿಯಂತಾದ ಮೈಸೂರು; ಎಲ್ಲೆಲ್ಲೂ ಚುಮುಚುಮು ಚಳಿ, ಆಗಾಗ ತುಂತುರು ಮಳೆ
ಉತ್ತರ, ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಚಳಿ, ಕರಾವಳಿಯಲ್ಲಿ ಕಡಿಮೆ!
ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗಿದ್ದು, ಚಳಿ ಹೆಚ್ಚಿದೆ. ಆದರೆ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಷ್ಟೊಂದು ಚಳಿ ಇಲ್ಲ ಎನ್ನುವುದು ಹವಾಮಾನ ಇಲಾಖೆಯ ವರದಿಯಿಂದ ತಿಳಿದು ಬಂದಿದೆ.


ಜಿಲ್ಲಾವಾರು ತಾಪಮಾನ
ಬಾಗಲಕೋಟೆಯಲ್ಲಿ 8.40 ರಿಂದ 19 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದ್ದು, ಬೆಳಗಾವಿ - 7.70 ರಿಂದ 18, ಬಳ್ಳಾರಿ - 11.30 ರಿಂದ 20.70, ಬೆಂಗಳೂರು ಗ್ರಾಮೀಣ - 9.60 ರಿಂದ 15.60, ಬೆಂಗಳೂರು ನಗರ - 10.70 ರಿಂದ 18.60, ಬೀದರ್‌ - 9.70 ರಿಂದ 17.40, ಚಾಮರಾಜನಗರ - 9.60 ರಿಂದ 17.40, ಚಿಕ್ಕಬಳ್ಳಾಪುರ - 9.10 ರಿಂದ 16.90, ಚಿಕ್ಕಮಗಳೂರು - 9.40 ರಿಂದ 16.90, ಚಿತ್ರದುರ್ಗ - 9.90 ರಿಂದ 19.70, ಮಂಡ್ಯ- 11.70 ರಿಂದ 17.00, ಮೈಸೂರು - 12.40 ರಿಂದ 18.90, ರಾಯಚೂರು - 11.90 ರಿಂದ 20.00, ರಾಮನಗರ - 11.30 ರಿಂದ 18.30, ಶಿವಮೊಗ್ಗ - 10.70 ರಿಂದ 18.70 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ.

ಇನ್ನು, ತುಮಕೂರಲ್ಲಿ - 10 ರಿಂದ 18.80, ಉಡುಪಿ - 19.20 ರಿಂದ 23.80, ಉತ್ತರ ಕನ್ನಡ - 10.10 ರಿಂದ 23.70, ವಿಜಯಪುರ - 8.90 ರಿಂದ 18.70, ಯಾದಗಿರಿ - 12.51 ರಿಂದ 21, ದಕ್ಷಿಣ ಕನ್ನಡ 18.40 ರಿಂದ 23.50, ದಾವಣಗೆರೆ 10.60 ರಿಂದ 18.80, ಧಾರವಾಡ 9.50 ರಿಂದ 18, ಗದಗ 11.40 ರಿಂದ 15.40, ಹಾಸನ 10.40 ರಿಂದ 20.30, ಹಾವೇರಿ 11 ರಿಂದ 17.30, ಕಲಬುರಗಿ 9.80 ರಿಂದ 19.20, ಕೊಡಗು 12.10 ರಿಂದ 19, ಕೋಲಾರ 11.60 ರಿಂದ 17.40, ಕೊಪ್ಪಳ 9.30 ರಿಂದ 17.40 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ