ಆ್ಯಪ್ನಗರ

ಸದನದಲ್ಲಿಂದು ಆಡಿಯೊ ಸದ್ದು

ಆಪರೇಷನ್‌ ಕಮಲ ಕುರಿತ ಆಡಿಯೊವನ್ನು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದಾಗ ಅದರಲ್ಲಿನ ಧ್ವನಿ ತಮ್ಮದಲ್ಲವೆಂದು ಬಿಎಸ್‌ವೈ ನಿರಾಕರಿಸಿದ್ದರು. ಇದೀಗ ಬಿಎಸ್‌ವೈ ಅವರೇ ಮಾತುಕತೆ ನಡೆಸಿದ್ದು ನಿಜವೆಂದಿದ್ದರಿಂದ ರಾಜಕೀಯ ವಲಯದಲ್ಲಿ ಮತ್ತಷ್ಟು ಸಂಚಲನ ಮೂಡಿದೆ.

Vijaya Karnataka Web 11 Feb 2019, 6:29 am
ಬೆಂಗಳೂರು: ಗುರುಮಠಕಲ್‌ ಕ್ಷೇತ್ರದ ಜೆಡಿಎಸ್‌ ಶಾಸಕರ ಪುತ್ರನೊಂದಿಗೆ ಸಂಭಾಷಣೆ ನಡೆಸಿದ್ದನ್ನು ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಒಪ್ಪಿಕೊಂಡಿದ್ದರಿಂದ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಂತಾಗಿದೆ. ಹಾಗಾಗಿ 'ಆಡಿಯೊ ವಾರ್‌' ಸೋಮವಾರದ ಬಜೆಟ್‌ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಸುವುದು ನಿಶ್ಚಿತವಾಗಿದೆ.
Vijaya Karnataka Web Vidhan Soudha


ಆಪರೇಷನ್‌ ಕಮಲ ಕುರಿತ ಆಡಿಯೊವನ್ನು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದಾಗ ಅದರಲ್ಲಿನ ಧ್ವನಿ ತಮ್ಮದಲ್ಲವೆಂದು ಬಿಎಸ್‌ವೈ ನಿರಾಕರಿಸಿದ್ದರು. ಇದೀಗ ಬಿಎಸ್‌ವೈ ಅವರೇ ಮಾತುಕತೆ ನಡೆಸಿದ್ದು ನಿಜವೆಂದಿದ್ದರಿಂದ ರಾಜಕೀಯ ವಲಯದಲ್ಲಿ ಮತ್ತಷ್ಟು ಸಂಚಲನ ಮೂಡಿದೆ. ಬಿಎಸ್‌ವೈ 'ರಾಜಕೀಯ ನಿವೃತ್ತಿ'ಗೆ ದೋಸ್ತಿ ಪಕ್ಷಗಳ ನಾಯಕರು ಆಗ್ರಹಿಸಿದ್ದಾರೆ. ಈ ನಡುವೆ, ಕುಮಾರಸ್ವಾಮಿ ವಿರುದ್ಧ ಪ್ರತಿತಂತ್ರ ಹೆಣೆದೇ ಯಡಿಯೂರಪ್ಪ ಈ ಅಚ್ಚರಿಯ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.

ದೋಸ್ತಿಗಳಿಗೆ ತಿರುಗೇಟು ನೀಡಲು ಬಿಜೆಪಿಯೂ ಸನ್ನದ್ಧವಾಗಿದೆ. ವಿಜುಗೌಡ ಪಾಟೀಲ್‌ ಅವರಿಗೆ ಎಂಎಲ್ಸಿ ಸ್ಥಾನ ನೀಡಲು 25 ಕೋಟಿ ರೂ. ನೀಡುವಂತೆ ಎಚ್‌ಡಿಕೆ ಬೇಡಿಕೆಯಿಟ್ಟಿದ್ದರು ಎನ್ನಲಾದ ಪ್ರಕರಣವನ್ನು ಬಿಜೆಪಿ ಕೆದಕಿ ತೆಗೆದಿದೆ. ದೋಸ್ತಿ ಪಕ್ಷಗಳ ವಿರುದ್ಧ ಪ್ರಯೋಗಿಸಲು ಇನ್ನೂ ಹಲವು ಪ್ರಬಲ ಅಸ್ತ್ರಗಳು ತಮ್ಮಲ್ಲಿ ಇರುವುದಾಗಿ ಬಿಜೆಪಿ ನಾಯಕರು ಸುಳಿವು ನೀಡಿದ್ದಾರೆ.

ಸ್ಪೀಕರ್‌ರತ್ತ ಎಲ್ಲರ ಗಮನ
ಸ್ಪೀಕರ್‌ ರಮೇಶ್‌ಕುಮಾರ್‌ ಅವರು ಈ ಪ್ರಕರಣ ಸಂಬಂಧ ಸ್ವಯಂಪ್ರೇರಿತವಾಗಿ ಪ್ರಸ್ತಾಪಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಎಚ್‌ಡಿಕೆ ಸಿಡಿಸಿದ ಆಡಿಯೊ ಬಾಂಬ್‌ನಲ್ಲಿ ಸ್ಪೀಕರ್‌ ಹೆಸರೂ ಪ್ರಸ್ತಾಪವಾಗಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ನೀಡುವ ರೂಲಿಂಗ್‌ ಅತ್ಯಂತ ಮಹತ್ವದ್ದಾಗಲಿದೆ.

ಈ ವಿದ್ಯಮಾನದ ನಡುವೆಯೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ನಾಲ್ವರು ಬಂಡಾಯ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆಯಡಿ ಕ್ರಮ ಜರುಗಿಸುವಂತೆ ಸ್ಪೀಕರ್‌ಗೆ ದೂರು ಸಲ್ಲಿಸಲು ಕಾಂಗ್ರೆಸ್‌ ಸಜ್ಜಾಗಿದೆ. ಹಾಗಾಗಿ ದಿನವಿಡೀ ಬಿರುಸಿನ ರಾಜಕೀಯ ಚಟುವಟಿಕೆಗಳೂ ನಡೆದಿವೆ.

ಸದನದಲ್ಲಿ ಏನೇನಾಗಬಹುದು?
ಬಿಎಸ್‌ವೈ ರಾಜಕೀಯ ನಿವೃತ್ತಿಗೆ ದೋಸ್ತಿಗಳಿಂದ ಪಟ್ಟು,

ಎಚ್‌ಡಿಕೆ ಆಡಿಯೊ ಟೇಪ್‌ನ ಹಳೆ ಪ್ರಕರಣ ಕೆದಕಲಿರುವ ಬಿಜೆಪಿ,

ಆಡಳಿತ-ಪ್ರತಿಪಕ್ಷ ಪ್ರಮುಖರ ನಡುವೆ ಕೋಲಾಹಲ ಸಾಧ್ಯತೆ,

ಆಪರೇಷನ್‌ ಕಮಲ ಆಡಿಯೊ ಬಗ್ಗೆ ನಿರ್ಧಾರ ಪ್ರಕಟಿಸಲಿರುವ ಸ್ಪೀಕರ್‌.

ಆಡಿಯೊ ಟೇಪ್‌ನಲ್ಲಿದ್ದ ಧ್ವನಿ ನನ್ನದೆನ್ನುವುದು ಸಾಬೀತಾದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಘೋಷಿಸಿದ್ದ ಬಿಎಸ್‌ವೈ ಅವರು ಮೊದಲು ನಿವೃತ್ತಿ ಘೋಷಿಸಿ ನುಡಿದಂತೆ ನಡೆಯಲಿ.
ಸಿದ್ದರಾಮಯ್ಯ, ಮಾಜಿ ಸಿಎಂ.

ಬಿಎಸ್‌ವೈ ಹೇಳಿಕೆಯಿಂದ ಆಪರೇಷನ್‌ ಕಮಲ ನಡೆಯುತ್ತಿರುವುದು ನಿಜ ಎಂದಾಯಿತು. ನೈತಿಕತೆಯಿದ್ದರೆ ಅವರು ಪ್ರತಿಪಕ್ಷದ ನಾಯಕ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದ ನಿವೃತ್ತಿ ಹೊಂದಲಿ.
ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ.

ಮಾತುಕತೆ ನಡೆಸಿರುವುದು ನಿಜ. ಆದರೆ ಆಡಿಯೊದಲ್ಲಿರುವುದು ಎಚ್‌ಡಿಕೆ ಕಟ್ಟುಕತೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಶರಣಗೌಡ ಅವರನ್ನು ಮಧ್ಯರಾತ್ರಿ ವೇಳೆ ಬಿಎಸ್‌ವೈ ಬಳಿ ಕಳುಹಿಸುವ ಸಂಚು ರೂಪಿಸಿದವರೇ ಕುಮಾರಸ್ವಾಮಿ.
ಎನ್‌.ರವಿಕುಮಾರ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

ವಿಜುಗೌಡ ಪಾಟೀಲ್‌ಗೆ ಪರಿಷತ್‌ ಸದಸ್ಯ ಸ್ಥಾನ ನೀಡಲು 25 ಕೋಟಿ ರೂ.ಗೆ ಬೇಡಿಕೆ ಇಟ್ಟ ಆಡಿಯೊ ಹಾಗೂ ಸಚಿವ ರೇವಣ್ಣ ಪುತ್ರ ಪ್ರಜ್ವಲ್‌ ರೇವಣ್ಣ ಸೂಟ್‌ಕೇಸ್‌ ರಾಜಕಾರಣದ ಬಗ್ಗೆಯೂ ಕುಮಾರಸ್ವಾಮಿ ಬಾಯಿ ಬಿಡಲಿ.
ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ