ಆ್ಯಪ್ನಗರ

ಯಡಿಯೂರಪ್ಪ ಗುರುವಾರ ದಿಲ್ಲಿಗೆ, ಸಂಪುಟ ವಿಸ್ತರಣೆ ಅನುಮಾನ

ವರಿಷ್ಠರಿಂದ ಭೇಟಿಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿ ಯಡಿಯೂರಪ್ಪ ದಿಲ್ಲಿಗೆ ತೆರಳುತ್ತಿದ್ದಾರಾದರೂ ಸಂಪುಟ ವಿಸ್ತರಣೆ ಬಗ್ಗೆ ಖಾತರಿಯಿಲ್ಲ. ಹಾಗಾಗಿ ಮುಖ್ಯಮಂತ್ರಿಗಳ ದಿಲ್ಲಿ ಪ್ರವಾಸಕ್ಕೆ ಮುನ್ನವೇ ಆಕಾಂಕ್ಷಿಗಳಿಗೆ ನಿರಾಸೆಯಾಗುವಂತಾಗಿದೆ.

Vijaya Karnataka 15 Sep 2020, 11:12 pm
ಬೆಂಗಳೂರು: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ದಿಲ್ಲಿ ಭೇಟಿಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಗುರುವಾರ (ಸೆ.17) ಮಧ್ಯಾಹ್ನ ಅವರು ಅಲ್ಲಿಗೆ ತೆರಳಲಿದ್ದಾರೆ. ಈ ನಡುವೆಯೂ ವಿಧಾನಮಂಡಲ ಅಧಿವೇಶನಕ್ಕೆ ಮುನ್ನ ಸಂಪುಟ ವಿಸ್ತರಣೆಯಾಗುವುದು ಅನುಮಾನವಾಗಿದೆ.
Vijaya Karnataka Web BS Yediyurappa


ಕರ್ನಾಟಕ ಭವನ-1 ಪುನರ್‌ ನಿರ್ಮಾಣಕ್ಕೆ ಶಂಕು ಸ್ಥಾಪನೆ, ರಾಜ್ಯದ ಅಭಿವೃದ್ಧಿ ಯೋಜನೆ ಸಂಬಂಧ ಕೇಂದ್ರ ಸಚಿವರೊಂದಿಗೆ ಸಮಾಲೋಚನೆಯ ಜೊತೆಗೆ ಸಂಪುಟ ವಿಸ್ತರಣೆ ಬಗ್ಗೆಯೂ ಪ್ರಸ್ತಾಪಿಸಲು ಸಿಎಂ ದಿಲ್ಲಿಗೆ ಹೊರಟು ನಿಂತಿದ್ದಾರೆ. ಸಂಸತ್‌ ಅಧಿವೇಶನದಲ್ಲಿ ಬಿಜೆಪಿ ವರಿಷ್ಠರು ವ್ಯಸ್ತರಾಗಿರುವುದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವುದರಿಂದ ಸಂಪುಟ ವಿಸ್ತರಣೆಯ ತೀರ್ಮಾನ ಹೊರಹೊಮ್ಮುವುದು ಕಷ್ಟವೆಂದು ಹೇಳಲಾಗುತ್ತಿದೆ.

ರಾಜ್ಯದ ಬಿಜೆಪಿ ಸರಕಾರ 1 ವರ್ಷ ಪೂರೈಸುತ್ತಿದ್ದಂತೆಯೇ ಸಂಪುಟ ವಿಸ್ತರಣೆಯ ಮಾತು ಕೇಳಿ ಬಂದಿತ್ತು. ಆಕಾಂಕ್ಷಿಗಳೂ ಲಾಬಿ ಶುರು ಮಾಡಿದ್ದರು. ತಮ್ಮನ್ನು ನಂಬಿ ಬಿಜೆಪಿಗೆ ಬಂದವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಸಿಎಂ ಅವರೂ ಆಸಕ್ತರಾಗಿದ್ದರು. ಆದರೆ, ನಾನಾ ಕಾರಣದಿಂದ ಅವರು ದಿಲ್ಲಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಇದೀಗ ವರಿಷ್ಠರಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿ ದಿಲ್ಲಿಗೆ ತೆರಳುತ್ತಿದ್ದಾರಾದರೂ ಸಂಪುಟ ವಿಸ್ತರಣೆ ಬಗ್ಗೆ ಖಾತರಿಯಿಲ್ಲ. ಹಾಗಾಗಿ ಸಿಎಂ ದಿಲ್ಲಿ ಪ್ರವಾಸಕ್ಕೆ ಮುನ್ನವೇ ಆಕಾಂಕ್ಷಿಗಳಿಗೆ ನಿರಾಸೆಯಾಗುವಂತಾಗಿದೆ.

ಸುದ್ದಿ ಕೇಂದ್ರದಲ್ಲಿ ನಾಯಕತ್ವ ಬದಲಾವಣೆ ಚರ್ಚೆ, ಕುತೂಹಲ ಕೆರಳಿಸಿದೆ ಬಿಜೆಪಿ ಪಾಳಯದ ನಡೆ!
ಅಸಮಾಧಾನದ ಆತಂಕ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ದಿಲ್ಲಿಯಲ್ಲಿ ಭೇಟಿಯಾಗಲಿರುವ ಸಿಎಂ ಅವರು ಸಂಪುಟ ವಿಸ್ತರಣೆಯ ಜತೆಗೆ ಶಿರಾ ಉಪ ಚುನಾವಣೆ ಕಾರ್ಯತಂತ್ರದ ಬಗ್ಗೆಯೂ ಚರ್ಚಿಸುವ ನಿರೀಕ್ಷೆಯಿದೆ. ಒಂದು ವೇಳೆ ನಡ್ಡಾ ಹಂತದಲ್ಲೇ ಸಂಪುಟ ವಿಸ್ತರಣೆಗೆ ಒಪ್ಪಿಗೆ ಸಿಕ್ಕಿದರೆ ಅಧಿವೇಶನಕ್ಕೆ ಮುನ್ನವೇ ಈ ಪ್ರಕ್ರಿಯೆ ನಡೆಯಬಹುದು. ಇದರ ಬೆನ್ನಿಗೇ ಮಂತ್ರಿ ಸ್ಥಾನ ವಂಚಿತರು ಅತೃಪ್ತಿ ಹೊರಹಾಕುವುದೂ ನಿಶ್ಚಿತ. ಮಂತ್ರಿಮಂಡಲ ವಿಸ್ತರಣೆಯಾಗದಿದ್ದರೂ ಒಂದಲ್ಲ ಒಂದು ವೇದಿಕೆಯಲ್ಲಿ ಆಕಾಂಕ್ಷಿಗಳು ಬೇಸರ ತೋಡಿಕೊಳ್ಳುತ್ತಾರೆ. ಅಧಿವೇಶನದ ಸಂದರ್ಭದಲ್ಲಿ ಈ ಪರಿಸ್ಥಿತಿ ನಿಭಾಯಿಸುವುದು ಸವಾಲಾಗಲಿದೆ. ಹಾಗಾಗಿ ಸಂಪುಟ ವಿಸ್ತರಿಸಿದರೂ ಇಕ್ಕಟ್ಟು. ವಿಸ್ತರಿಸದೇ ಹೋದರೂ ಬಿಕ್ಕಟ್ಟು ಎಂಬ ಸನ್ನಿವೇಶ ನಿರ್ಮಾಣವಾದಂತಾಗಿದೆ.

3 ದಿನದ ಪ್ರವಾಸ

ಸಿಎಂ ಗುರುವಾರ ಬೆಳಗ್ಗೆ ಕಲಬುರಗಿಗೆ ತೆರಳಲಿದ್ದು, ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ವಿಶೇಷ ವಿಮಾನದಲ್ಲಿ ದಿಲ್ಲಿಗೆ ತೆರಳಲಿರುವ ಅವರು ಅಂದು ಸಂಜೆ ಕೇಂದ್ರದ ಕೆಲವು ಸಚಿವರನ್ನು ಭೇಟಿಯಾಗಲಿದ್ದಾರೆ.

ಸಂಪುಟ ವಿಸ್ತರಣೆ: ಸೆ. 18 ಕ್ಕೆ ಬಿಎಸ್‌ವೈ ದೆಹಲಿ ಭೇಟಿ ಫಿಕ್ಸ್!

ಶುಕ್ರವಾರ ಬೆಳಗ್ಗೆ 9ಕ್ಕೆ ಕರ್ನಾಟಕ ಭವನ-1 (ಕಾವೇರಿ) ಪುನರ್‌ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಿದ್ದಾರೆ. ನಂತರ ಪುನಃ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದಾರೆ. ಶನಿವಾರವೂ ಕೇಂದ್ರ ಸಚಿವರ ಭೇಟಿ ಕಾರ್ಯಕ್ರಮವಿದೆ. ಇದರ ಮಧ್ಯೆ ರಾಜ್ಯದ ಸಂಸದರೊಂದಿಗೆ ಸಭೆ ನಡೆಸಲು ಉದ್ದೇಶಿಸಿದ್ದಾರೆ. ಹಾಗೆಯೇ ಪ್ರಧಾನಿ ಮೋದಿ ಅವರ ಭೇಟಿಗೂ ಸಮಯ ಕೋರಿದ್ದಾರೆ. ಸೆ. 19ರಂದು ರಾತ್ರಿ ರಾಜ್ಯಕ್ಕೆ ವಾಪಸಾಗಲಿದ್ದಾರೆ.

ಯಾವ್ಯಾವ ಸಚಿವರ ಭೇಟಿಗೆ ಸಮಯ ನಿಗದಿ?


ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ, ನಿರ್ಮಲಾ ಸೀತಾರಾಮನ್‌. ಎಸ್‌. ಜೈಶಂಕರ್‌ ಭೇಟಿಗೆ ಸಮಯ ನಿಗದಿಯಾಗಿದೆ.

ಬೆಂಗಳೂರು ಮೆಟ್ರೊ ವಿಸ್ತರಣೆಗೆ ಡಿಫೆನ್ಸ್‌ ಲ್ಯಾಂಡ್‌ ಪಡೆಯುವ ಸಂಬಂಧ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರೊಂದಿಗೆ ಸಮಾಲೋಚಿಸಲಿದ್ದಾರೆ. ರಾಜ್ಯದ ಹೆದ್ದಾರಿ ಯೋಜನೆಗಳ ಬಗ್ಗೆ ಗಡ್ಕರಿ ಜತೆಗೆ ಚರ್ಚೆಯಾಗಲಿದೆ. ಜಿಎಸ್‌ಟಿ, ಪ್ರವಾಹ ಪರಿಹಾರದ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಅಮೆರಿಕದ ವೀಸಾ ಕಚೇರಿಯನ್ನು ಬೆಂಗಳೂರಿನಲ್ಲಿ ತೆರೆಯುವ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್‌ ಅವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ