ಆ್ಯಪ್ನಗರ

ಮಾಧ್ಯಮ ಸ್ವಾತಂತ್ರ್ಯಕ್ಕೆ ಸದಾ ಬದ್ಧ: ಟ್ವೀಟ್‌ ಮಾಡಿದ ಕೆಲವೇ ಕ್ಷಣಗಳಲ್ಲಿ ನಾಪತ್ತೆಯಾಯ್ತು ಸಿಎಂ ಟ್ವೀಟ್‌

ಮಾಧ್ಯಮ ನಿರ್ಬಂಧ ವಿಚಾರದ ಬಗ್ಗೆ ಹೆಚ್ಚು ಟೀಕೆ ಕೇಳಿಬರುತ್ತಿದ್ದಂತೆ ಸಿಎಂ ಯಡಿಯೂರಪ್ಪ ಈ ಕುರಿತು ವಿನಂತಿ ಮಾಡುತ್ತೇನೆ ಎಂದು ಟ್ವೀಟ್‌ ಮಾಡಿದ್ದರು. ಆದರೆ, ಟ್ವೀಟ್‌ ಮಾಡಿದ ಕೆಲವೇ ಕ್ಷಣಗಳಲ್ಲಿ ತಮ್ಮ ಟ್ವೀಟ್ ತೆಗೆದುಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ.

Vijaya Karnataka Web 10 Oct 2019, 11:32 am
ಬೆಂಗಳೂರು: ಗುರುವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಕಲಾಪವನ್ನು ನೇರ ಪ್ರಸಾರ ಮಾಡದಂತೆ ಖಾಸಗಿ ಟಿವಿ ವಾಹಿನಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಈ ಸಂಬಂಧ ಬುಧವಾರ ಸ್ಪೀಕರ್ ಆದೇಶ ಹೊರಡಿಸಿದ್ದರು. ಆದರೆ, ಈ ಕುರಿತು ಹೆಚ್ಚು ಟೀಕೆ ಕೇಳಿಬರುತ್ತಿದ್ದಂತೆ ಸಿಎಂ ಯಡಿಯೂರಪ್ಪ ಗುರುವಾರ ಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದು, ಸ್ಪೀಕರ್ ನಿರ್ಧಾರವನ್ನು ಪುನರ್ ಪರಿಶೀಲಿಸಲು ವಿನಂತಿ ಮಾಡುತ್ತೇನೆ ಎಂದು ಟ್ವೀಟ್‌ ಮಾಡಿದ್ದರು.
Vijaya Karnataka Web yeddyurappa


ಆದರೆ, ಸಿಎಂ ಆಫ್‌ ಕರ್ನಾಟಕ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್‌ ಮಾಡಿದ ಕೆಲವೇ ಕ್ಷಣಗಳಲ್ಲಿ ತಮ್ಮ ಟ್ವೀಟ್‌ಗಳನ್ನು ಸಿಎಂ ಯಡಿಯೂರಪ್ಪ ಡಿಲೀಟ್‌ ಮಾಡಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್‌ ಎರಡರಲ್ಲೂ ಟ್ವೀಟ್‌ ಮಾಡಿದ್ದ ಸಿಎಂ, ಬಳಿಕ ಕೆಲವೇ ಕ್ಷಣಗಳಲ್ಲಿ ತಮ್ಮ ಟ್ವೀಟ್‌ಗಳನ್ನು ತೆಗೆದುಹಾಕಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ.

ಯಡಿಯೂರಪ್ಪ ಟ್ವೀಟ್‌


ಮಾಧ್ಯಮ ಸ್ವಾತಂತ್ರ್ಯಕ್ಕೆ ನನ್ನ ಸರಕಾರ ಸದಾ ಬದ್ಧವಾಗಿದೆ. ವಿಧಾನ ಸಭೆಯ ಕಲಾಪದ ನೇರ ಪ್ರಸಾರಕ್ಕೆ ತಡೆ ಹಾಕಿರುವ ಸ್ಪೀಕರ್ ನಿರ್ಧಾರವನ್ನು ಪುನರ್ ಪರಿಶೀಲಿಸಲು ವಿನಂತಿ ಮಾಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಟ್ವೀಟ್‌ ಮಾಡಿದ್ದರು. ಇದೇ ಟ್ವೀಟ್‌ ಅನ್ನು ಇಂಗ್ಲಿಷ್‌ನಲ್ಲೂ ಮಾಡಿದ್ದರು.

ಈ ಸುದ್ದಿ ಓದಿ: ಮಾಧ್ಯಮಗಳ ಕಣ್ತಪ್ಪಿಸಿ ಕಲಾಪ: ಖಾಸಗಿ ಟಿವಿಗಳ ನೇರ ಪ್ರಸಾರಕ್ಕೆ ತಡೆ ಒಡ್ಡಿದ ಕರ್ನಾಟಕ ಸರಕಾರ

ಸ್ಪೀಕರ್ ನಿರ್ಧಾರದ ವಿರುದ್ಧ ಸಿಎಂ ಯಡಿಯೂರಪ್ಪ ಬುಧವಾರವೇ ವಿರೋಧ ವ್ಯಕ್ತಪಡಿಸಿ ಅಸಮಾಧಾನ ಹೊರಹಾಕಿದ್ದರು. ಆದರೂ ಸಹ ಸಿಎಂ ಮಾತಿಗೆ ಕ್ಯಾರೇ ಅನ್ನದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈ ನಿರ್ಧಾರ ತೆಗೆದುಕೊಂಡಿದ್ದರು ಎಂದು ಹೇಳಲಾಗಿದೆ.

ಇನ್ನೊಂದೆಡೆ, ಸ್ಪೀಕರ್ ಆದೇಶದ ವಿರುದ್ಧ ಹೆಚ್ಚು ಟೀಕೆಗಳು ಕೇಳಿಬರುತ್ತಿದ್ದು, ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವ ನಿರ್ಧಾರಕ್ಕೆ ರಾಜ್ಯ ಜನತೆ, ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಅಧಿವೇಶನಕ್ಕೆ ಕ್ಯಾಮರಾ, ಮೊಬೈಲ್ ನೋ ಎಂಟ್ರಿ -ಅಧಿಕೃತ ಆದೇಶ ಪ್ರಕಟ

ಕಲಾಪಗಳನ್ನು ಎಚ್ಚರಿಕೆ ಕಣ್ಣಿನಿಂದ ವೀಕ್ಷಿಸುತ್ತ ವಿಧಾನ ಮಂಡಲದಲ್ಲಿ ಜನಪ್ರತಿನಿಧಿಗಳ ನಡವಳಿಕೆಗಳನ್ನು ಬಯಲು ಮಾಡುತ್ತಿದ್ದ ಮಾಧ್ಯಮಗಳ ಕಣ್ಣಿಗೆ ಕಪ್ಪುಪಟ್ಟಿ ಹಾಕಲು ಬುಧವಾರ ನಿರ್ಧರಿಸಲಾಗಿದೆ. ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಕಲಾಪವನ್ನು ನೇರ ಪ್ರಸಾರ ಮಾಡದಂತೆ ಖಾಸಗಿ ಟಿವಿ ವಾಹಿನಿಗಳಿಗೆ ನಿರ್ಬಂಧ ವಿಧಿಸಲಾಗಿದೆ.

ದಿನಪತ್ರಿಕೆಗಳ ಛಾಯಾಗ್ರಾಹಕರು ಫೋಟೊ ತೆಗೆಯಲು ಅವಕಾಶ ನಿರಾಕರಿಸಲಾಗಿದೆ. ಅಲ್ಲದೆ, ಮಾಧ್ಯಮ ಪ್ರತಿನಿಧಿಗಳು ಮೊಬೈಲ್‌, ಟ್ಯಾಬ್‌ಗಳನ್ನೂ ತರಬಾರದು ಎಂದು ಕಟ್ಟಾಜ್ಞೆ ವಿಧಿಸಲಾಗಿದೆ.

ಅಧಿವೇಶನದಲ್ಲಿ ಸರಕಾರಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷಗಳ ಮಾಸ್ಟರ್ ಪ್ಲಾನ್

ಸ್ಪೀಕರ್‌ ಕಾಗೇರಿರವರ ಈ ಕಠಿಣ ತೀರ್ಮಾನಕ್ಕೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಅಧಿವೇಶನದಲ್ಲಿ ಶಾಸಕರು ತೋರುವ ಹದ್ದು ಮೀರಿದ ವರ್ತನೆ, ಅಸಭ್ಯ, ಅಕ್ರಮ ನಡವಳಿಕೆಗಳನ್ನು ಮುಚ್ಚಿಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ