ಆ್ಯಪ್ನಗರ

ಅತೃಪ್ತರಿಗೆ ಝೀರೋ ಟ್ರಾಫಿಕ್‌ ಮಾಡಿದ್ದನ್ನು ದೇಶವೇ ನೋಡಿತ್ತು: ರಮೇಶ್‌ ಕುಮಾರ್‌ ಗುಡುಗು

ರೆಬೆಲ್‌ ಶಾಸಕರಿಗೆ ಝೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿದೆ ಎಂಬ ಎಟಿ ರಾಮಸ್ವಾಮಿ ಪ್ರಸ್ತಾಪಕ್ಕೆ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಸಚಿವ ಎಂಬಿ ಪಾಟೀಲ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಝೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಿಲ್ಲ ಎಂಬ ಹೇಳಿಕೆಗೆ ಅಸಮಾಧಾನಗೊಂಡ ಸ್ಪೀಕರ್‌ ಇಡೀ ದೇಶವೇ ನೋಡಿದೆ ಎಂದು ಗುಡಿಗಿದರು.

Vijaya Karnataka Web 22 Jul 2019, 7:42 pm
ಬೆಂಗಳೂರು: ಅಪರಾಧಿಗಳಿಗೆ ಝೀರೋ ಟ್ರಾಫಿಕ್‌ ಕೊಡಿ, ಹೇಗೆ ನಡಿಸ್ತೀರಿ ಈ ಸಮಾಜನ ಮುಂದಕ್ಕೆ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಗೃಹಸಚಿವ ಎಂಬಿ ಪಾಟೀಲ್‌ಗೆ ಪ್ರಶ್ನಿಸಿದ್ದಾರೆ.
Vijaya Karnataka Web ramesh


ವಿಶ್ವಾಸಮತ ಯಾಚನೆ ನಿರ್ಣಯದ ಮೇಲೆ ನಡೆಯುತ್ತಿರುವ ಚರ್ಚೆಯ ವೇಳೆ ಶಾಸಕ ಎಟಿ ರಾಮಸ್ವಾಮಿ ಅವರ ಮಾತಿನ ಬಳಿಕ, ರೆಬೆಲ್‌ ಶಾಸಕರಿಗೆ ಝಿರೋ ಟ್ರಾಫಿಕ್‌ ನೀಡಿರುವ ವಿಚಾರ ಪ್ರಸ್ತಾಪವಾಗಿದೆ. ಇದಕ್ಕೆ ಸ್ಪಷ್ಟೀಕರಣ ನೀಡಿದ ಸಚಿವ ಎಂಬಿ ಪಾಟೀಲ್. ಝೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಿಲ್ಲ ಎಂದು ಉತ್ತರಿಸಿದರು.

ಈ ಉತ್ತರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್‌ ರಮೇಶ್‌ ಕುಮಾರ್, ನೀವು ಹೇಳಿದ ಉತ್ತರ ನಿಮಗೇ ಸರಿ ಕಾಣುತ್ತಿದೆಯೇ? ರಾಜಕಾರಣಿಯಾಗಿ ನೀವು ಮಾತನಾಡುತ್ತಿದ್ದೀರಲ್ಲ. ಅವರಿಗೆ ಝೀರೋ ಟ್ರಾಫಿಕ್‌ ಮಾಡಿಕೊಟ್ಟಿರುವುದನ್ನು ಇಡೀ ದೇಶವೇ ನೋಡಿದೆ. ನಿಮ್ಮ ಹೇಳಿಕೆ ಸತ್ಯ ಎಂದು ನೀವು ಒಪ್ಪುತ್ತೀರಾ ಎಂದು ಗದರಿದರು.

ಸ್ಪೀಕರ್‌ ಮಾತಿನ ನಡುವೆಯೇ ಸ್ಪಷ್ಟೀಕರಣ ನೀಡಲು ಮುಂದಾದ ಎಂಬಿ ಪಾಟೀಲ್‌ ಅವರ ಮಾತನ್ನು ಕೇಳಲೂ ರಮೇಶ್‌ ಕುಮಾರ್‌ ಸಿದ್ಧವಿರಲಿಲ್ಲ. ಎತ್ತ ಸಾಗುತ್ತಿದೆ ನಮ್ಮ ಸಮಾಜ? ಅಪರಾಧಿಗಳಿಗೆ, ಕಳ್ಳರಿಗೆ ಎಲ್ಲರಿಗೂ ಝಿರೋ ಟ್ರಾಫಿಕ್‌ ಕೊಡಿ. ದೇಶಸೇವಕರಿಗೆ, ಜನ ಸೇವಕರಿಗೆ, ಸಾಮಾನ್ಯ ಜನರಿಗೆ ಏನೂ ಮಾಡಬೇಡಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಅವರಿಗೆ ಝೀರೋ ಟ್ರಾಫಿಕ್‌ ಮಾಡಿ ಕಳಿಸಿದ್ದನ್ನೂ ಇಡೀ ದೇಶವೇ ನೋಡಿದೆ. ಇಷ್ಟಾಗ್ಯೂ ನೀವು ನಿಮ್ಮ ಹೇಳಿಕೆಯನ್ನು ಒಪ್ಪುತ್ತೀರಾ ಎಂದ ರಮೇಶ್‌ ಕುಮಾರ್, ಹೇಗೆ ನಡಿಸ್ತೀರಿ ಈ ಸಮಾಜನ ಮುಂದಕ್ಕೆ ಎಂದು ಕಳವಳ ವ್ಯಕ್ತಪಡಿಸಿದರು. ತಮ್ಮ ಹೇಳಿಕೆಯನ್ನು ಮತ್ತೆ ತಿದ್ದಿದ ಸಚಿವ ಪಾಟೀಲ್‌, ಈ ಬಗ್ಗೆ ಪರಾಮರ್ಶೆ ಮಾಡುವುದಾಗಿ ಹೇಳಿಕೆ ನೀಡಿದರು.

ಪಾಟೀಲ್‌ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಎಟಿ ರಾಮಸ್ವಾಮಿ, ಗೃಹಸಚಿವರಿಂದ ಇಂತಹ ಉತ್ತರಕ್ಕೆ ನಮ್ಮ ಸಹಮತವಿಲ್ಲ. ಸದನದಲ್ಲಿ ನಾನಿರುವುದಿಲ್ಲ. ನಾವು ಕಾನೂನಿಗಿಂತ ದೊಡ್ಡವರೇ? ಏನೆಲ್ಲ ನಡೆದಿದೆ ಎಂಬುದನ್ನು ಎಲ್ಲರೂ ನೋಡಿದ್ದರು ಎಂದು ಹೇಳಿ ರಾಮಸ್ವಾಮಿ ಸಭಾತ್ಯಾಗ ಮಾಡಿದರು.


ಕಮಿಷನರ್‌ ವಿಧಾನಸೌದಕ್ಕೆ ದೌಡು
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕಮಿಷನರ್‌ ಅಲೋಕ್‌ ಕುಮಾರ್‌ ಅವರಿಂದ ಖುದ್ದು ವಿವರಣೆ ಪಡೆಯಲು ಎಂಬಿ ಪಾಟೀಲ್‌ ನಿರ್ಧರಿಸಿದರು. ಅಲ್ಲದೆ ಅಲೋಕ್‌ ಕುಮಾರ್‌ ಅವರನ್ನು ವಿಧಾನಸೌಧಕ್ಕೆ ಕರೆಸಿದರು. ಸ್ಪೀಕರ್‌ ರಮೇಶ್‌ ಕುಮಾರ್‌ ಅವರನ್ನು ಭೇಟಿ ಮಾಡಲು ಬಂದ ಸಂದರ್ಭದಲ್ಲಿ ರೆಬೆಲ್‌ ಎಂಎಲ್‌ಎಗಳಿಗೆ ಝೀರೋ ಟ್ರಾಫಿಕ್‌ ನೀಡಲಾಗಿರುವ ಕುರಿತು ಅಲೋಕ್‌ ಕುಮಾರ್ ಅವರೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ