ಆ್ಯಪ್ನಗರ

ಜಿಂದಾಲ್‌ಗೆ ಭೂಮಿ, ಉಪ ಸಮಿತಿ ಅಸ್ತು

ಜಿಂದಾಲ್‌ ಸ್ಟೀಲ್ಸ್‌ ಕಂಪನಿಗೆ ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಭೂಮಿ ...

Vijaya Karnataka 10 Jul 2019, 5:00 am
ಬಳ್ಳಾರಿ/ಬೆಂಗಳೂರು: ಜಿಂದಾಲ್‌ ಸ್ಟೀಲ್ಸ್‌ ಕಂಪನಿಗೆ ಬಳ್ಳಾರಿ ಜಿಲ್ಲೆಯಲ್ಲಿ 3,667 ಎಕರೆ ಭೂಮಿ ಪರಭಾರೆ ಮಾಡುವ ಪ್ರಸ್ತಾವನೆಗೆ ಸಚಿವ ಸಂಪುಟ ಉಪಸಮಿತಿ ಕೂಡ ಅನುಮತಿ ನೀಡಿದೆ. ಆಡಳಿತ, ಪ್ರತಿಪಕ್ಷ ಮತ್ತು ನಾನಾ ಸಂಘಟನೆಗಳ ಭಾರಿ ವಿವಾದದ ಮಧ್ಯೆಯೂ ಭೂಮಿ ನೀಡಲು ಸಮ್ಮತಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
Vijaya Karnataka Web zindal land
ಜಿಂದಾಲ್‌ಗೆ ಭೂಮಿ, ಉಪ ಸಮಿತಿ ಅಸ್ತು


2006ರಲ್ಲಿ ಭೂಮಿ ಮಂಜೂರು ಪಡೆದುಕೊಂಡಿದ್ದ ಜಿಂದಾಲ್‌ ಕಂಪನಿಯು ಒಪ್ಪಂದದ ಎಲ್ಲ ಷರತ್ತುಗಳನ್ನು ಪೂರೈಸಿದೆ. ಹೀಗಾಗಿ, ನಿಯಮಾವಳಿಯಂತೆ ಗುತ್ತಿಗೆ ಆಧಾರದಲ್ಲಿ ಮಂಜೂರಾಗಿದ್ದ ಭೂಮಿಯನ್ನು ಶುದ್ಧ ಕ್ರಯಕ್ಕೆ ಮಂಜೂರು ಮಾಡುವ ತೀರ್ಮಾನ ಸೂಕ್ತ ಮತ್ತು ಕಾನೂನುಬದ್ಧವಾಗಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ಅಧ್ಯಕ್ಷತೆಯ ಸಂಪುಟ ಉಪಸಮಿತಿ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.

ರಾಜಕೀಯ ಬಿಕ್ಕಟ್ಟಿನ ನಡುವೆಯೂ ತರಾತುರಿಯಲ್ಲಿ ಸೋಮವಾರ ಸಭೆ ನಡೆಸಿದ ಉಪಸಮಿತಿ ಈ ತೀರ್ಮಾನ ಕೈಗೊಂಡಿದೆ. ಉಪಸಮಿತಿಯ ಈ ಶಿಫಾರಸು ಆಧರಿಸಿ ಸಚಿವ ಸಂಪುಟ ಸಭೆ ಅಂತಿಮ ನಿರ್ಣಯ ಕೈಗೊಳ್ಳಬೇಕಿದೆ.

ಜಿಂದಾಲ್‌ ಕಂಪನಿಗೆ ಸಾವಿರಾರು ಎಕರೆ ಭೂಮಿಯನ್ನು ಪರಭಾರೆ ಮಾಡುವ ಸಂಬಂಧ ಸಚಿವ ಸಂಪುಟ ಸಭೆ ಕೈಗೊಂಡಿದ್ದ ತೀರ್ಮಾನಕ್ಕೆ ಆಡಳಿತಾರೂಢ ಕಾಂಗ್ರೆಸ್‌ನ ಹಿರಿಯರಾದ ಎಚ್‌.ಕೆ.ಪಾಟೀಲ್‌ ಸೇರಿದಂತೆ ಸಮಾಜದ ನಾನಾ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ತೀರ್ಮಾನ ಕೈಬಿಡುವಂತೆ ಪ್ರತಿಪಕ್ಷ ಬಿಜೆಪಿ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ನಡೆಸಿತ್ತು. ಒತ್ತಡಕ್ಕೆ ಮಣಿದ ಸರಕಾರ ಈ ತೀರ್ಮಾನದ ಮರುಪರಿಶೀಲನೆಗೆ ಸಚಿವ ಸಂಪುಟ ಉಪಸಮಿತಿ ರಚಿಸಿತ್ತು. ಎಂ.ಬಿ.ಪಾಟೀಲ್‌ ನೇತೃತ್ವದ ಸಮಿತಿಯಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಬಂಡೆಪ್ಪ ಕಾಶಂಪುರ ಹಾಗೂ ಪ್ರಿಯಾಂಕ್‌ ಖರ್ಗೆ ಸದಸ್ಯರಾಗಿದ್ದರು.

ರಾಜೀನಾಮೆಗೂ ಕ್ಯಾರೆ ಎನ್ನಲಿಲ್ಲ

ರಾಜ್ಯ ಸಮ್ಮಿಶ್ರ ಸರಕಾರದಲ್ಲಿ ರಾಜೀನಾಮೆ ಪರ್ವಕ್ಕೆ ನಾಂದಿ ಹಾಡಿದ ವಿಜಯನಗರ ಶಾಸಕ ಆನಂದ್‌ ಸಿಂಗ್‌ ಅವರು, ಜಿಂದಾಲ್‌ಗೆ ಭೂಮಿ ಮಾರಾಟ ಮಾಡುವ ತೀರ್ಮಾನ ಹಿಂಪಡೆಯಬೇಕೆಂಬುದನ್ನೇ ಪ್ರಮುಖ ಬೇಡಿಕೆಯಾಗಿ ಇಟ್ಟಿದ್ದರು. ತೋರಣಗಲ್ಲು, ಕುಡತಿನಿಯಲ್ಲಿ ಮಾಜಿ ಶಾಸಕ ಅನಿಲ್‌ ಲಾಡ್‌ ಅವರ ಜತೆಗೂಡಿ ರೋಡ್‌ ಶೋ ನಡೆಸಿ, ಭೂಮಿ ಮಾರಾಟ ವಿರೋಧಿಸಿ ಹೋರಾಟ ನಡೆಸಿದ್ದರು. ಮಾರಾಟದ ನಿರ್ಧಾರ ಕೈಬಿಟ್ಟರೆ ರಾಜೀನಾಮೆ ವಾಪಸ್‌ ಪಡೆಯುವುದಾಗಿ ಹೇಳಿದ್ದರು. ಆದರೆ, ಇದ್ಯಾವುದನ್ನು ಲೆಕ್ಕಿಸದೆ ಭೂಮಿ ಮಾರಾಟಕ್ಕೆ ಸದ್ದಿಲ್ಲದೇ ಒಪ್ಪಿಗೆ ಸೂಚಿಸಲಾಗಿದೆ.

ಜನಪ್ರತಿನಿಧಿಗಳು, ಸಂಘಟನೆಗಳು ನಡೆಸಿದ ಹೋರಾಟಕ್ಕೆ ಬೆಲೆಯಿಲ್ಲದಂತಾಗಿದೆ. ಏಕಾಏಕಿ ಭೂಮಿ ಮಾರಾಟಕ್ಕೆ ಉಪ ಸಮಿತಿ ಒಪ್ಪಿಗೆ ನೀಡಿರುವುದು ಖಂಡನೀಯ. ಇದನ್ನು ವಿರೋಧಿಸಿ ಜನಸಂಗ್ರಾಮ ಪರಿಷತ್‌ನಿಂದ ಆ.8ರಂದು ತೋರಣಗಲ್‌ನಿಂದ ಡಿಸಿ ಕಚೇರಿಗೆ ಪಾದಯಾತ್ರೆ ನಡೆಸಲಾಗುವುದು.

- ಚಾಗನೂರು ಮಲ್ಲಿಕಾರ್ಜುನ, ಜನಸಂಗ್ರಾಮ ಪರಿಷತ್‌ ಮುಖಂಡ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ