ಆ್ಯಪ್ನಗರ

ತುಳು ಭಾಷೆಗೆ ಜಾಗತಿಕ ಮನ್ನಣೆ ಲಭಿಸಲಿ: ದೇವಿದಾಸ್‌

ತುಳು ನಾಡಿನ ವಿಶೇಷ ಆಚರಣೆ ದೀಪಾವಳಿ ಐಕ್ಯತೆಯ ಸಂದೇಶವಾಗಿದೆ. ತುಳು ಭಾಷೆ ಹಾಗೂ ಸಂಸ್ಕೃತಿಯ ಅಭಿವೃದ್ಧಿ ಇಂತಹ ಕಾರ್ಯಕ್ರಮಗಳಿಂದ ಸಾಧ್ಯವಾದೀತು. ತುಳು ಲಿಪಿಯು ನಿತ್ಯ ಬಳಕೆಯ ಮೂಲಕ ಜಾಗತಿಕ ಮನ್ನಣೆ ಲಭಿಸಬೇಕೆಂದು ಹೆಚ್ಚುವರಿ ದಂಡಾಧಿಕಾರಿ ಎನ್‌.ದೇವಿದಾಸ್‌ ಹೇಳಿದರು.

Vijaya Karnataka 10 Nov 2018, 2:58 pm
ಕಾಸರಗೋಡು: ತುಳು ನಾಡಿನ ವಿಶೇಷ ಆಚರಣೆ ದೀಪಾವಳಿ ಐಕ್ಯತೆಯ ಸಂದೇಶವಾಗಿದೆ. ತುಳು ಭಾಷೆ ಹಾಗೂ ಸಂಸ್ಕೃತಿಯ ಅಭಿವೃದ್ಧಿ ಇಂತಹ ಕಾರ್ಯಕ್ರಮಗಳಿಂದ ಸಾಧ್ಯವಾದೀತು. ತುಳು ಲಿಪಿಯು ನಿತ್ಯ ಬಳಕೆಯ ಮೂಲಕ ಜಾಗತಿಕ ಮನ್ನಣೆ ಲಭಿಸಬೇಕೆಂದು ಹೆಚ್ಚುವರಿ ದಂಡಾಧಿಕಾರಿ ಎನ್‌.ದೇವಿದಾಸ್‌ ಹೇಳಿದರು.
Vijaya Karnataka Web
ತುಳು ಭಾಷೆಗೆ ಜಾಗತಿಕ ಮನ್ನಣೆ ಲಭಿಸಲಿ: ದೇವಿದಾಸ್‌


ಕೇರಳ ತುಳು ಅಕಾಡೆಮಿಯ ಆಶ್ರಯದಲ್ಲಿ ಗುರುವಾರ ದೀಪಾವಳಿ ಹಬ್ಬದ ಆಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ಕಾಸರಗೋಡು ಜಿಲ್ಲಾಧಿಕಾರಿಗಳ ಕಛೇರಿ ಆವರಣದ ತುಳು ಅಕಾಡೆಮಿ ಕಚೇರಿಯಲ್ಲಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್‌ ಎಂ. ಸಾಲಿಯಾನ್‌ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಕೇರಳ ತುಳು ಅಕಾಡೆಮಿಯ ಕಾರ್ಯಾಲಯ ತುಳು ಭವನದ ನಿರ್ಮಾಣಕ್ಕಾಗಿ ಮಂಜೇಶ್ವರ ತಾಲೂಕಿನ ಕಡಂಬಾರಿನಲ್ಲಿ ಮೀಸಲಿಟ್ಟಿರುವ ಒಂದು ಎಕರೆ ನಿವೇಶನದಲ್ಲಿ ಶಾಸಕರ ನಿಧಿಯಲ್ಲಿ ಮೀಸಲಿಟ್ಟಿರುವ 45 ಲಕ್ಷ ರೂ.ಗಳನ್ನು ಬಳಸಿ ಕಟ್ಟಡ ನಿರ್ಮಿಸಲು ಯೋಜನೆ ಅಂತಿಮ ಹಂತದಲ್ಲಿದ್ದು, ಶೀಘ್ರ ಶಂಕುಸ್ಥಾಪನೆಯೊಂದಿಗೆ ತುಳು ಭವನ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಜತೆಗೆ ತುಳು ಅಕಾಡೆಮಿ ವತಿಯಿಂದ ಪ್ರತಿ ತಿಂಗಳೂ ನಿರಂತರ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಿದ್ದು, ತುಳು ಗ್ರಂಥ, ತಾಳೆಯೋಲೆ, ವೈದ್ಯಕೀಯ, ಜಾನಪದ ಗೀತೆಗಳ ಸಂಗ್ರಹ ಮೊದಲಾದ ದಾಖಲೀಕರಣಗಳ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗುವುದು ಎಂದು ಆಶಯ ವ್ಯಕ್ತಪಡಿಸಿದರು.

'ತುಳು ನಾಡ ಬಲಿಯೇಂದ್ರ ಪರ್ಬ' ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದ ಕವಯಿತ್ರಿ, ಜಾನಪದ ಸಂಶೋಧಕಿ ರಾಜಶ್ರೀ ಟಿ ರೈ ಪೆರ್ಲ, ತುಳುನಾಡಿನ ಆರಾಧನೆ, ಆಚರಣೆಗಳ ಹಿನ್ನೆಲೆಯಲ್ಲಿ ಶ್ರೀಮಂತವಾದ ಉದಾತ್ತ ಸಾರ್ವಕಾಲಿಕ ಮೌಲ್ಯಗಳಿವೆ. ಅದನ್ನು ಉಳಿಸಿ ಬೆಳೆಸಲು, ಮುಂದಿನ ಜನಾಂಗಕ್ಕೆ ತಿಳಿಸುವಲ್ಲಿ ವರ್ತಮಾನದ ಜನಸಮೂಹ ಬದ್ಧರಾಗಬೇಕು ಎಂದರು.

ಕೇರಳ ತುಳು ಅಕಾಡೆಮಿ ತಿಂಗಳಿಗೊಂದರಂತೆ ಕಾರ್ಯಕ್ರಮಗಳನ್ನು ಅಳವಡಿಸುವುದರ ಮೂಲಕ ಜನಜಾಗೃತಿ ಮೂಡಿಸಬೇಕು. ಕೇವಲ ಸಾಂಸ್ಕೃತಿಕ ಚಟುವಟಿಕೆಗಳೇ ಅಲ್ಲದೆ ಸಾಹಿತ್ಯ, ತೌಳವ ಕ್ರೀಡೆಗಳಂತಹ ವೈವಿಧ್ಯತೆಗಳಿಗೂ ಪೂರಕವಾಗುವ ಕಾರ್ಯಯೋಜನೆ ರೂಪಿಸಬೇಕು. ಈ ಮೂಲಕ ಹೊಸ ಬರಹಗಾರರಿಗೆ, ಕ್ರೀಡಾ ಸಾಧಕರಿಗೆ, ವಿದ್ಯಾರ್ಥಿಗಳ ಪ್ರತಿಭಾ ಅನಾವರಣಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಜೇಶ್ವರದ ಮಾಜಿ ಶಾಸಕ ನ್ಯಾಯವಾದಿ ಸಿ.ಎಚ್‌. ಕುಂಞಂಬು, ಹಿರಿಯ ಪತ್ರಕರ್ತ ಮಲಾರ್‌ ಜಯರಾಮ ರೈ, ಅಕಾಡೆಮಿ ಸದಸ್ಯ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಸುರೇಶ್‌ ಬೇಕಲ, ಕೇಶವ ಶೆಟ್ಟಿ ಆದೂರು, ಗೋಪಾಲಕೃಷ್ಣ, ಮಂಜೇಶ್ವರ ಕಲಾ ಸ್ಪರ್ಶಂ ನಿರ್ದೇಶಕಿ ಜೀನ್‌ ಲವೀನ ಮೊಂತೇರೋ ಮತ್ತಿತರರು ಭಾಗವಹಿಸಿದ್ದರು. ವಿಶೇಷ ಆಕರ್ಷಣೆಯಾಗಿ ಯಶೋಧ ಶಂಕರ ಸ್ವಾಮಿ ಕೃಪಾ ಹಾಗೂ ತಂಡದವರಿಂದ ಪಾಡ್ದನ ಗಮನ ಸೆಳೆಯಿತು. ಬೊಳಿಕೆ ಜಾನಪದ ತಂಡ ಕನ್ನೆಪ್ಪಾಡಿಯ ಶಂಕರ ಸ್ವಾಮಿಕೃಪಾ ಸಂಯೋಜಿಸಿದರು. ಸವಾಕ್‌ ಸಂಘಟನೆಯ ಪ್ರತಿನಿಧಿಗಳಾದ ಭಾರತೀ ಬಾಬು, ಜಯಂತಿ ಸುವರ್ಣ, ರಂಗ ನಿರ್ದೇಶಕ ಉದಯ ಸಾರಂಗ್‌, ರಾಜ್ಯ ಲೈಬ್ರೆರಿ ಕೌನ್ಸಿಲ್‌ ಮಂಜೇಶ್ವರ ತಾಲೂಕು ಅಧ್ಯಕ್ಷ ಎಸ್‌. ನಾರಾಯಣ ಭಟ್‌ ಭಾಗವಹಿಸಿದ್ದರು. ತುಳು ಅಕಾಡೆಮಿ ಕಾರ್ಯದರ್ಶಿ ವಿಜಯ ಕುಮಾರ್‌ ಪಾವಳ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ವಿಶ್ವನಾಥ ಕುದುರು ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ