ಆ್ಯಪ್ನಗರ

ಕಿದೂರು ಪಕ್ಷಿ ಲೋಕಕ್ಕೆ ಹೊಸ ಬಾನಾಡಿ ಆಗಮನ ಶ್ರೀಲಂಕಾ ಫ್ರಾಗ್‌ ಮೌತ್‌ ಕಿದೂರಿನಲ್ಲಿ ಪತ್ತೆ

ಕಾಸರಗೋಡು ಜಿಲ್ಲೆಯ ಕುಂಬಳೆಯ ಕಿದೂರು ಗ್ರಾಮ ಪಕ್ಷಿಗಳ ಕೇರಿ ಎಂದೇ ಜನಜನಿತ. ಇಲ್ಲಿನ ಪಕ್ಷಿಪ್ರೇಮಿಗಳ ಶ್ರಮ ಸಾರ್ಥಕವಾಗಿದೆ. ಕೊನೆಗೂ ಶ್ರೀಲಂಕಾದ ಫ್ರಾಗ್‌ ಮೌತ್‌ ಎನ್ನುವ ಪಕ್ಷಿ ಕಿದೂರು ಗ್ರಾಮದಲ್ಲಿ ಪತ್ತೆಯಾಗಿದ್ದು, ಈ ಮೂಲಕ ಇಲ್ಲಿನ ಪಕ್ಷಿ ವೈವಿಧ್ಯದ ಸಂಖ್ಯೆ 158ಕ್ಕೇರಿದೆ.

Vijaya Karnataka 18 Aug 2019, 5:00 am
ಕುಂಬಳೆ(ಕೇರಳ) : ಕಾಸರಗೋಡು ಜಿಲ್ಲೆಯ ಕುಂಬಳೆಯ ಕಿದೂರು ಗ್ರಾಮ ಪಕ್ಷಿಗಳ ಕೇರಿ ಎಂದೇ ಜನಜನಿತ. ಇಲ್ಲಿನ ಪಕ್ಷಿಪ್ರೇಮಿಗಳ ಶ್ರಮ ಸಾರ್ಥಕವಾಗಿದೆ. ಕೊನೆಗೂ ಶ್ರೀಲಂಕಾದ ಫ್ರಾಗ್‌ ಮೌತ್‌ ಎನ್ನುವ ಪಕ್ಷಿ ಕಿದೂರು ಗ್ರಾಮದಲ್ಲಿ ಪತ್ತೆಯಾಗಿದ್ದು, ಈ ಮೂಲಕ ಇಲ್ಲಿನ ಪಕ್ಷಿ ವೈವಿಧ್ಯದ ಸಂಖ್ಯೆ 158ಕ್ಕೇರಿದೆ.
Vijaya Karnataka Web bird


ಸುಮಾರು ದಿನಗಳಿಂದ ಇದರ ಪತ್ತೆಗಾಗಿ ಇಲ್ಲಿನ ಪಕ್ಷಿ ನಿರೀಕ್ಷಣಾ ತಂಡ ಕಾರ್ಯಪ್ರವೃತ್ತವಾಗಿತ್ತು. ಹಗಲಿರುಳೆನ್ನದೆ ಹುಡುಕಾಟ ನಡೆಸಿದ್ದರು. ಇದೀಗ ಪ್ರದೀಪ್‌ ಕಿದೂರು ಅವರ ಕಣ್ಣಿಗೆ ಈ ಪಕ್ಷಿ ಕಾಣ ಸಿಕ್ಕಿರುವುದು ಪಕ್ಷಿಪ್ರೇಮಿಗಳಿಗೆ ಖುಷಿ ತಂದಿದೆ.

ನೋಡಲು ಕಪ್ಪೆಯ ಮುಖವನ್ನು ಹೋಲುವುದರಿಂದ ಹಾಗೂ ಶ್ರೀಲಂಕಾದಲ್ಲಿನ ಬಿದಿರು ಕಾಡುಗಳೆಡೆಯಲ್ಲಿ ಸಾಮಾನ್ಯವಾಗಿ ಕಂಡು ಬರುವುದರಿಂದ ಈ ಹಕ್ಕಿಗೆ ಫ್ರಾಗ್‌ ಮೌತ್‌ ಎಂಬ ಹೆಸರು ಬಂದಿದೆ. ಈ ಹಕ್ಕಿ ಸಂಜೆಯಾಯಿತೆಂದರೆ ಹೊಟ್ಟೆ ತುಂಬಿಸಲು ಗೂಡಿನಿಂದ ಹೊರ ಬರುವ ನಿಶಾಸಲಭ. ಸಣ್ಣಪುಟ್ಟ ಕ್ರಿಮಿಕೀಟಗಳೇ ಭೂರಿ ಭೋಜನವಾಗುತ್ತವೆ. ಸಾಧಾರಣವಾಗಿ ಗಂಡು ಹಾಗೂ ಹೆಣ್ಣು ಜತೆಯಾಗಿ ವಾಸಿಸುವ ಇವುಗಳು ನಿರಂತರ ಮೃದುವಾದ ವಿಸಿಲ್‌ ಸದ್ದನ್ನು ಹೊರಡಿಸುತ್ತಿದ್ದು, ಕೇಳಲು ಇಂಪಾಗಿದೆ.

ಭಾರತದ ಪಕ್ಷಿ ಪ್ರಪಂಚದಲ್ಲಿ ಎರಡು ರೀತಿಯ ಫ್ರಾಗ್‌ ಮೌತ್‌ಗಳು ಮಾತ್ರವೇ ಕಂಡುಬರುತ್ತದೆ. ಕಿದೂರಿನಲ್ಲಿ ಕಂಡು ಬಂದ ಶ್ರೀಲಂಕಾ ಫ್ರಾಗ್‌ ಮೌತ್‌ ಪಶ್ಚಿಮಘಟ್ಟಗಳ ಸಾಲಿನಲ್ಲಿ ಸೇರುತ್ತವೆ. ಹೊಡ್ಗಸನ್‌ ಫ್ರಾಗ್‌ ಮೌತ್‌ ಎನ್ನುವ ಇನ್ನೊಂದು ಹಕ್ಕಿ ಹಿಮಾಲಯ ಹಾಗೂ ಈಶಾನ್ಯ ರಾಜ್ಯಗಳ ಪರ್ವತ ಶ್ರೇಣಿಗಳಲ್ಲಿ ಬಹಳ ಅಪರೂಪವಾಗಿ ಕಂಡುಬರುವವು. ಕಾಸರಗೋಡಿನ ಇರಿಯಣ್ಣಿ, ಏಳ್ಕಾನ, ಅರಂತೋಡು, ಮಾಣಿಮೂಲೆ ಹಾಗೂ ಪೊಸಡಿ ಗುಂಪೆಯಲ್ಲಿ ಪಕ್ಷಿ ನಿರೀಕ್ಷ ಕರು ಈ ಹಕ್ಕಿಯನ್ನು ಈ ಹಿಂದೆ ನೋಡಿದ್ದಾರೆ ಎಂದು ತಿಳಿದುಬಂದಿದೆ.

ಕಿದೂರು ಪಕ್ಷಿ ಪ್ರೇಮಿ ತಂಡದ ಪರಿಸರ ಸಂರಕ್ಷ ಣೆಯ ವಿವಿಧ ಕಾರ್ಯಕ್ರಮಗಳ ಮುಂದಾಳತ್ವ ವಹಿಸುತ್ತಿರುವ ಪ್ರದೀಪ್‌ ಕಿದೂರು ಉರಗ ಪ್ರೇಮಿಯೂ ಹೌದು. ಕಪ್ಪೆಗಳ ಬಗ್ಗೆ ಅವರಿಗೆ ವಿಶೇಷ ಆಸಕ್ತಿ ಇದ್ದು, ಕಾಸರಗೋಡಿನ ಮಂಡೂಕ ಪ್ರಪಂಚದ ಅಧ್ಯಯನಕ್ಕೆ ತಮ್ಮದೇ ಕಾಣಿಕೆ ಸಲ್ಲಿಸುತ್ತಿದ್ದಾರೆ.

ನಾನು ಬಹಳ ಹತ್ತಿರದಿಂದ ಇದರ ಮೊಬೈಲ್‌ ಫೊಟೋಗ್ರಫಿ ಹಾಗೂ ವೀಡಿಯೋಗ್ರಫಿ ಮಾಡಿದೆ. ಹಕ್ಕಿಯ ಕೂಗನ್ನೂ ದಾಖಲಿಸಿದೆ. ಹಲವು ದಿನಗಳಿಂದ ಇದರ ಪತ್ತೆಗೆ ಬಯಸುತ್ತಿದ್ದ ನನ್ನ ಕನಸು ನನಸಾಯಿತು. ಕಿದೂರಿನ ಪಕ್ಷಿ ಕುಟುಂಬಕ್ಕೆ ಹೊಸ ಸದಸ್ಯನನ್ನು ನೀಡಲು ಸಾಧ್ಯವಾಗಿದ್ದಕ್ಕೆ ಸಂತಸವಿದೆ. ಕಾಸರಗೋಡಿನಲ್ಲಿ ಪಕ್ಷಿ ಪ್ರಭೇದಗಳ ಸಂಖ್ಯೆಯನ್ನು 215ಕ್ಕೆ ಹೆಚ್ಚಿಸಲು ನನ್ನ ಪಾತ್ರವೂ ಇರುವುದು ಇನ್ನೂ ಖುಷಿ ನೀಡಿದೆ.
-ಪ್ರದೀಪ್‌ ಕಿದೂರು, ಪಕ್ಷಿ ಪ್ರೇಮಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ