ಆ್ಯಪ್ನಗರ

ಗಡಿನಾಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮೇಲೆ ನಿರಂತರ ಹೊಡೆತ

ಗಡಿನಾಡಿನಲ್ಲಿ ಕನ್ನಡ ಭಾಷೆಯ ಮೇಲೆ, ಕನ್ನಡ ಸಂಸ್ಕೃತಿ, ಚರಿತ್ರೆಯನ್ನೇ ತಿರುಚುವ ಕೆಲಸಗಳು ನಿತ್ಯ ನಿರಂತರವಾಗಿದೆ ಎಂಬುದಾಗಿ ಹಿರಿಯ ಶಾಸ್ತ್ರ ಸಾಹಿತಿ, ವಿದ್ವಾಂಸ, ವಿಶ್ರಾಂತ ಪ್ರಾಧ್ಯಾಪಕ ಡಾ. ಪಿ. ಶ್ರೀಕೃಷ್ಣ ಭಟ್‌ ಕಳವಳ ವ್ಯಕ್ತಪಡಿಸಿದರು.

Vijaya Karnataka 20 Jan 2019, 5:00 am
ಕಾಸರಗೋಡು: ಗಡಿನಾಡಿನಲ್ಲಿ ಕನ್ನಡ ಭಾಷೆಯ ಮೇಲೆ, ಕನ್ನಡ ಸಂಸ್ಕೃತಿ, ಚರಿತ್ರೆಯನ್ನೇ ತಿರುಚುವ ಕೆಲಸಗಳು ನಿತ್ಯ ನಿರಂತರವಾಗಿದೆ ಎಂಬುದಾಗಿ ಹಿರಿಯ ಶಾಸ್ತ್ರ ಸಾಹಿತಿ, ವಿದ್ವಾಂಸ, ವಿಶ್ರಾಂತ ಪ್ರಾಧ್ಯಾಪಕ ಡಾ. ಪಿ. ಶ್ರೀಕೃಷ್ಣ ಭಟ್‌ ಕಳವಳ ವ್ಯಕ್ತಪಡಿಸಿದರು.
Vijaya Karnataka Web attack on kannada bhase samskruthi
ಗಡಿನಾಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮೇಲೆ ನಿರಂತರ ಹೊಡೆತ


ಕಾಸರಗೋಡು ಬದಿಯಡ್ಕ ಸಮೀಪದ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜಜಿನ ಹೈಯರ್‌ ಸೆಕೆಂಡರಿ ಶಾಲೆಯ ದಿ. ಕಯ್ಯಾರ ಕಿಂಞ್ಞಣ್ಣ ರೈ ವೇದಿಕೆಯಲ್ಲಿ ಶನಿವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ದ್ವಿದಿನ ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ರ ಭಾಷಣ ಮಾಡಿದರು.

ಕಾಸರಗೋಡನ್ನು ಭಾಷಾ ಅಲ್ಪಸಂಖ್ಯಾತ ಪ್ರದೇಶ ಎಂಬುದನ್ನು ಅಲ್ಲಗಳೆಯುತ್ತಾ, ಕಡ್ಡಾಯ ಮಲೆಯಾಳ ಕಲಿಕೆಯನ್ನು ಹೇರುವುದರ ಮೂಲಕ ಕನ್ನಡವನ್ನು ಕೊಲ್ಲುವ, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಬೋಧನೆಗಾಗಿ ಕನ್ನಡ ಅರಿಯದ ಮಲೆಯಾಳಿ ಶಿಕ್ಷಕರನ್ನು ನೇಮಿಸಿ ಕನ್ನಡ ಕಲಿಕೆಗೆ ನಿರುತ್ಸಾಹಪಡಿಸುವ ಹುನ್ನಾರ ನಡೆಯುತ್ತಿದೆ. ಆದ್ದರಿಂದ ಕಾಸರಗೋಡಿನ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಮತ್ತು ನಮ್ಮ ಆಸ್ಮಿತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಅಗತ್ಯದ ಕೆಲಸಗಳನ್ನು ಮಾಡಿಕೊಂಡು ಸರಕಾರದ ಗಮನ ಸೆಳೆಯಬೇಕು ಎಂಬುದಾಗಿ ಅವರು ಆಗ್ರಹಿಸಿದರು.

ಪಾರ್ತಿಸುಬ್ಬನ ಕಾಲದಿಂದಲೇ ಕಾಸರಗೋಡಿನ ಕನ್ನಡ ಸಾಹಿತ್ಯ ರೂಪ ಕಾಣಿಸಿಕೊಂಡಿರುವುದು. ಖ್ಯಾತ ಸಾಹಿತಿ ಗೋವಿಂದ ಪೈ, ಕಯ್ಯಾರ ಕಿಂಞ್ಞಣ್ಣ ರೈ, ರಾಮಕೃಷ್ಣ ಶೆಟ್ಟಿ, ಕೆ.ವಿ. ತಿರುಮಲೇಶ್‌, ವೇಣುಗೋಪಾಲ, ಲಕ್ಷ್ಮೀನಾರಾಯಣ ಪುಂಚಿತ್ತಾಯ ಮುಂತಾದವರು ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೃತಿ ರಚಿಸಿ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೇ ಆ ಮೇಲಿನ ಯುವ ಸಾಹಿತಿಗಳು ಈಗಲೂ ಸಾಹಿತ್ಯ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲೂ ಅಮೂಲ್ಯ ಕೊಡುಗೆಯನ್ನು ಗೋವಿಂದ ಪೈಗಳು, ವೆಂಕಟರಾಜ ಪುಣಿಂಚಿತ್ತಾಯರು ನೀಡಿರುವುದು ಅದ್ವಿತೀಯವಾದುದು.

ಕಾಸರಗೋಡಿನ ಕನ್ನಡವನ್ನು ಉಳಿಸಿ ಬೆಳೆಸುವುದರಲ್ಲಿ ಯಕ್ಷ ಗಾನದ ಕೊಡುಗೆ ಅಷ್ಟಿಷ್ಟಲ್ಲ. ಅದು ಈಗಲೂ ಮುಂದುವರಿಯುತ್ತಿರುವುದು ಶ್ಲಾಘನೀಯವಾಗಿದೆ. ಗಡಿನಾಡಿನ ಭಾಷೆಯ ಬೆಳವಣಿಗೆಯಲ್ಲಿ ಪರಭಾಷಾ ಪದಗಳು ಎರವಲು ಪಡೆಯುವುದು ಸಾಮಾನ್ಯವಾಗಿದೆ. ಪ್ರಧಾನವಾಗಿ ಮಲೆಯಾಳ ಭಾಷೆಯ ಪದಗಳನ್ನು ಬಳಸುತ್ತಿರುವುದು ಸಮರ್ಥನೀಯವಲ್ಲ. ಎಚ್ಚರಿಕೆಯಿಂದ ಕನ್ನಡ ಭಾಷೆಯನ್ನು ಬಳಸಿದರೆ ಮಾತ್ರ ಮುಂದಿನ ತಲೆಮಾರಿಗೆ ಶುದ್ಧ ಕನ್ನಡ ಉಳಿಸಿ ಬೆಳೆಸಲು ಸಾಧ್ಯವಾಗುವುದು ಎಂದು ಅಭಿಪ್ರಾಯಪಟ್ಟರು.

ಕಾಸರಗೋಡಿನಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ಪ್ರಸ್ತುತ ಸಾಧ್ಯವಾಗಬಹುದಾದ ಕೆಲವು ಕಾರ್ಯಗಳನ್ನು ಮಾಡಬೇಕಾದ ಅನಿವಾರ‍್ಯತೆಯೂ ಇದೆ. ಇದರಲ್ಲಿ ಪ್ರಧಾನವಾಗಿ ಕಣ್ಣೂರು ವಿವಿ ಭಾರತೀಯ ಭಾಷಾ ಅಧ್ಯಯನಾಂಗವನ್ನು ಮಂಜೇಶ್ವರ ಸರಕಾರಿ ಕಾಲೇಜು ಪರಿಸರಕ್ಕೆ ಸ್ಥಳಾಂತರಿಸಬೇಕು, ಸರಕಾರಿ ಕಾಲೇಜುಗಳಲ್ಲಿ ಸಾಕಷ್ಟು ಕನ್ನಡ ಬಲ್ಲ ಎಲ್‌ಡಿ ಕ್ಲರ್ಕ್‌ಗಳನ್ನು ನೇಮಿಸಬೇಕು, ಹತ್ತನೇ ತರಗತಿ ತನಕ ಕನ್ನಡ ಕಲಿತವರನ್ನೇ ಕನಿಷ್ಠ ಅರ್ಹತೆಯಾಗಿ ನಿಗಧಿಪಡಿಸಬೇಕು, ಕನ್ನಡ ಭಾಷಾ ಅಕಾಡೆಮಿ, ಜಿಲ್ಲಾ ಮುದ್ರಣಾಲಯ ಸ್ಥಾಪಿಸಬೇಕು, ಸರಕಾರದ ಎಲ್ಲ ಸುತ್ತೋಲೆ, ಅರ್ಜಿ ನಮೂನೆಗಳು ಕನ್ನಡದಲ್ಲಿ ಒದಗಿಸುವಂತೆ ಒತ್ತಾಯಿಸಬೇಕು, ನಾಮಫಲಕಗಳನ್ನು ಕನ್ನಡದಲ್ಲೇ ಬರೆಸಬೇಕು, ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭಾಷಾಂತರ ವಿಭಾಗ ಸ್ಥಾಪಿಸಬೇಕು, ಕನ್ನಡ ಶಾಲೆಗಳ ಹಿಂದಿ ಹಾಗೂ ಸಂಸ್ಕೃತ ಅಧ್ಯಾಪಕ ಹುದ್ದೆಗಳಿಗೆ ಕನ್ನಡದಲ್ಲಿಯೇ ಕಲಿತ ಅಧ್ಯಾಪಕರನ್ನೇ ನೇಮಿಸುವ ಮೂಲಕ ಕನ್ನಡಿಗರ ಸಮಸ್ಯೆಗಳಿಗೆ ಅಲ್ಪಮಟ್ಟಿಗೆ ಪರಿಹಾರ ಕಲ್ಪಿಸಬಹುದು.

ಗಡಿನಾಡಿನಲ್ಲಿ ಕನ್ನಡ ಭಾಷೆ ಸಂಸ್ಕೃತಿಗಳನ್ನು ಕಾಪಾಡುವ ಬೆಳೆಸುವ ಕೆಲಸ ನಿರಂತರವಾಗಿರಬೇಕು, ಅದಕ್ಕಾಗಿ ಎಲ್ಲ ವ್ಯಕ್ತಿಗಳೂ, ಸಂಘಟನೆಗಳು ಐಕ್ಯಭಾವದಿಂದ ಹೋರಾಟ ನಡೆಸಬೇಕು ಅದಾಗಲೇ ನಮ್ಮ ಯಶಸ್ಸು ಸಾಧ್ಯ ಎಂಬುದಾಗಿ ಡಾ. ಪಿ. ಶ್ರೀಕೃಷ್ಣ ಭಟ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ