ಆ್ಯಪ್ನಗರ

ಬೀಚ್‌ ಕೊಡೆ ವಿತರಣೆ

ಲಾಟರಿ ವಲಯದ ಕಾರ್ಮಿಕರು ರಾಜ್ಯದ ಆರ್ಥಿಕ ಬಲ ಹೆಚ್ಚಿಸುವವರು. ಅವರನ್ನು ನಿರ್ಲಕ್ಷಿಸಿದರೆ ನಾಡಿನ ಚರಿತ್ರೆ ಅಪೂರ್ಣವಾದೀತು ಎಂದು ಶಾಸಕ ಎನ್‌.ಎ. ನೆಲ್ಲಿಕುನ್ನು ಹೇಳಿದರು.

Vijaya Karnataka 2 Mar 2019, 5:00 am
ಕಾಸರಗೋಡು: ಲಾಟರಿ ವಲಯದ ಕಾರ್ಮಿಕರು ರಾಜ್ಯದ ಆರ್ಥಿಕ ಬಲ ಹೆಚ್ಚಿಸುವವರು. ಅವರನ್ನು ನಿರ್ಲಕ್ಷಿಸಿದರೆ ನಾಡಿನ ಚರಿತ್ರೆ ಅಪೂರ್ಣವಾದೀತು ಎಂದು ಶಾಸಕ ಎನ್‌.ಎ. ನೆಲ್ಲಿಕುನ್ನು ಹೇಳಿದರು.
Vijaya Karnataka Web beach umbrella distribution
ಬೀಚ್‌ ಕೊಡೆ ವಿತರಣೆ


ಕೇರಳ ರಾಜ್ಯ ಕಲ್ಯಾಣನಿಧಿ ಮಂಡಳಿ ಜಾಲ್ಲಾ ಕಚೇರಿ ವತಿಯಿಂದ ಬೀದಿ ಬದಿ ಲಾಟರಿ ಮಾರಾಟಗಾರರಾಗಿರುವ ಕಲ್ಯಾಣ ನಿಧಿ ಸದಸ್ಯರಿಗೆ ನೀಡಲಾಗುವ ಬೀಚ್‌ ಅಂಬ್ರೆಲ್ಲ (ದೊಡ್ಡ ಕೊಡೆ) ವಿತರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದಿದ್ದು, ಅದನ್ನು ಉದ್ಘಾಟಿಸಿ ಮಾತನಾಡಿದರು.

ಲಾಟರಿ ಮಾರಾಟಗಾರರಿಗೆ ಅವರು ಕೊಡೆ ವಿತರಿಸಿದರು. ರಾಜ್ಯಕ್ಕೆ ಲಾಟರಿ ವಲಯದ ದುಡಿಮೆಗಾರರು ನೀಡುತ್ತಿರುವ ಕೊಡುಗೆ ಗಮನಿಸಿದರೆ ಯಾವ ಆಡಳಿತವೂ ಅವರ ಕುರಿತು ಅಸಡ್ಡೆ ತೋರದು. ಈ ನಿಟ್ಟಿನಲ್ಲಿ ಕಲ್ಯಾಣನಿಧಿ ಮಂಡಳಿ ಅನೇಕ ಜನಪರ ಯೋಜನೆಗಳನ್ನು ಈ ವಲಯದ ಮಂದಿಗಾಗಿ ಜಾರಿಗೊಳಿಸಿದೆ ಎಂದು ಹೇಳಿದರು.

ಭಾಗ್ಯದಾಯಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾಸರಗೋಡು ಜಿಲ್ಲೆಯಲ್ಲಿ ಭಾಗ್ಯವನ್ನು ಮಾರುತ್ತಿರುವ ಲಾಟರಿ ಮಾರಾಟಗಾರರ ಬಗ್ಗೆ ಜನತೆಯ ಆಸಕ್ತಿ ಹೆಚ್ಚಬೇಕು. ನವ ಕೇರಳ ನಿರ್ಮಾಣದಲ್ಲಿ ಲಾಟರಿ ಕಾರ್ಮಿಕರ ಸಹಭಾಗಿತ್ವ ಅನಿವಾರ್ಯ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಡಳಿ ರಾಜ್ಯ ಸಮಿತಿ ಅಧ್ಯಕ್ಷ ಪಿ.ಆರ್‌. ಜಯಪ್ರಕಾಶ್‌, ಮಂಡಳಿ ಲಾಟರಿ ವಲಯದ ಕಾರ್ಮಿಕರಿಗೆ ಒದಗಿಸುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಲಾಟರಿ ಎಂಬುದು ಜನಪರ ವ್ಯವಹಾರವಾಗಿದೆ. ಕಾರುಣ್ಯ ಲಾಟರಿ ಒಂದರಿಂದಲೇ 39 ಸಾವಿರ ಜನರು ಚಿಕಿತ್ಸೆ ಸಹಾಯ ಪಡೆದುಕೊಂಡಿದ್ದಾರೆ. 3 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಕಾರುಣ್ಯ ಯೋಜನೆ ಮೂಲಕ ಲಭಿಸುತ್ತಿದೆ. ಏಪ್ರಿಲ್‌ ತಿಂಗಳ ನಂತರ ಲಾಟರಿ ವಲಯದಲ್ಲಿ ಆರೋಗ್ಯ ಕಾರ್ಡ್‌ ನೀಡಲಾಗುತ್ತಿದ್ದು, 5 ಲಕ್ಷ ರೂ.ವರೆಗಿನ ಚಿಕಿತ್ಸಾ ಸೌಲಭ್ಯ ಪಡೆಯಲು ಇಲ್ಲಿ ಅವಕಾಶಗಳಿವೆ ಎಂದರು.

ಲಾಟರಿ ವಲಯದ ಮೂಲಕ ಕೇರಳ ಸರಕಾರಕ್ಕೆ ಕಳೆದ ವರ್ಷ 10 ಸಾವಿರ ಕೋಟಿ ರೂ. ಆದಾಯ ಲಭಿಸಿದೆ. ಈ ವರ್ಷ 12 ಸಾವಿರ ಕೋಟಿ ರೂ. ಆದಾಯ ಲಭಿಸುವ ನಿರೀಕ್ಷೆ ಇದೆ. ಇಷ್ಟು ಪೂರಕವಾದ ವಿಭಾಗವನ್ನು ರಾಜ್ಯ ಸರಕಾರವೂ ಅಕ್ಕರೆಯಿಂದ ಪೋಷಿಸಿದೆ ಎಂದು ಅವರು ಹೇಳಿದರು.

ಮಂಡಳಿ ಸದಸ್ಯ ವಿ. ಬಾಲನ್‌ ಅಧ್ಯಕ್ಷ ತೆ ವಹಿಸಿದ್ದರು. ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್‌ ಎಂ., ಲಾಟರಿ ವಲಯದ ಬೇರೆ ಬೇರೆ ಸಂಘಟನೆಗಳ ನೇತಾರರಾದ ಪಿ. ಪ್ರಭಾಕರನ್‌, ಎನ್‌.ಕೆ. ಬಿಜು, ಸತ್ಯನಾಥನ್‌ ವಿ.ಬಿ., ಎ. ಮಧುಸೂದನನ್‌ ನಂಬ್ಯಾರ್‌, ಪಿ.ವಿ. ಉಮೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಲಾಟರಿ ಕಲ್ಯಾಣನಿಧಿ ಅಧಿಕಾರಿ ಕೆ. ಹರೀಶ ಸ್ವಾಗತಿಸಿದರು. ಸಹಾಯಕ ಅಧಿಕಾರಿ ಪಿ. ಸಜುಕುಮಾರ್‌ ವಂದಿಸಿದರು. ಆಲಪ್ಪ್ಪುಳ ಜಿಲ್ಲೆಯ ಕುಟುಂಬಶ್ರೀ ಸದಸ್ಯರು ಸಿದ್ಧಪಡಿಸಿದ ಬೀಚ್‌ ಕೊಡೆ ತಲಾ 150 ರೂ. ಮೌಲ್ಯ ಹೊಂದಿದ್ದು, ಮಂಡಳಿ ವತಿಯಿಂದ ಸದಸ್ಯರಾದ ಲಾಟರಿ ಮಾರಾಟಗಾರರಿಗೆ ಉಚಿತ ರೂಪದಲ್ಲಿ ವಿತರಿಸಲಾಯಿತು. ಈ ಮೂಲಕ ಬಿಸಿಲು, ಮಳೆಯಲ್ಲಿ ತಡೆ ಇಲ್ಲದೆ ವ್ಯವಹಾರ ನಡೆಸಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ