ಆ್ಯಪ್ನಗರ

ಮುಂದುವರಿದ ಘರ್ಷಣೆ: 800 ಮಂದಿ ವಿರುದ್ಧ ಕೇಸು ದಾಖಲು

ಶಬರಿಮಲೆ ಅಯ್ಯಪ್ಪ ಕ್ಷೇತ್ರ ಪ್ರವೇಶದ ಹಿನ್ನೆಲೆಯಲ್ಲಿ ಕೇರಳ ರಾಜ್ಯದಾದ್ಯಂತ ನಡೆದ ಹರತಾಳದ ಬಳಿಕವೂ ನಾನಾ ಕಡೆಗಳಲ್ಲಿ ಘರ್ಷಣೆ ಮುಂದುವರಿದಿದೆ...

Vijaya Karnataka 6 Jan 2019, 5:00 am
ಕಾಸರಗೋಡು: ಶಬರಿಮಲೆ ಅಯ್ಯಪ್ಪ ಕ್ಷೇತ್ರ ಪ್ರವೇಶದ ಹಿನ್ನೆಲೆಯಲ್ಲಿ ಕೇರಳ ರಾಜ್ಯದಾದ್ಯಂತ ನಡೆದ ಹರತಾಳದ ಬಳಿಕವೂ ನಾನಾ ಕಡೆಗಳಲ್ಲಿ ಘರ್ಷಣೆ ಮುಂದುವರಿದಿದೆ. ಕಾಸರಗೋಡು ಜಿಲ್ಲೆಯಲ್ಲಿ ನಾನಾ ಕಡೆ ನಡೆದ ಆಕ್ರಮಣಗಳಿಗೆ ಸಂಬಂಧಿಸಿದಂತೆ 800 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
Vijaya Karnataka Web clash continews case against 800 people
ಮುಂದುವರಿದ ಘರ್ಷಣೆ: 800 ಮಂದಿ ವಿರುದ್ಧ ಕೇಸು ದಾಖಲು


ಕಾಸರಗೋಡು ಜಿಲ್ಲೆಯ ನಾನಾ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆಯ ಆಧಾರದಲ್ಲಿ ಕೇಸು ದಾಖಲಿಸಿ ಈ ಸಂಬಂಧ 50ರಷ್ಟು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಉಳಿದಂತೆ 60ರಷ್ಟು ಮಂದಿಯನ್ನು ಮುಂಜಾಗ್ರತೆ ಕ್ರಮವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಮಂಜೇಶ್ವರ ವ್ಯಾಪ್ತಿಯಲ್ಲಿ ನಡೆದ ಘರ್ಷಣೆಯಲ್ಲಿ ಸುಮಾರು 125 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಾಲ್ಕು ಮಂದಿ ವಿರುದ್ಧ ಕೊಲೆ ಯತ್ನ ಕೇಸು ದಾಖಲಿಸಲಾಗಿದೆ. ಈಗಾಗಲೇ ಐವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಹಲ್ಲೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಅಯ್ಯಪ್ಪ ಭಕ್ತರ ವಾಹನಕ್ಕೆ ಕಲ್ಲು ತೂರಾಟದಂತಹ ನಾನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಸು ದಾಖಲಿಸಿಕೊಂಡಿದ್ದಾರೆ.

ಶುಕ್ರವಾರ ರಾತ್ರಿ ಅಯ್ಯಪ್ಪ ಭಕ್ತರ ಬಸ್‌ಗಳಿಗೆ ಮತ್ತೆ ಕಲ್ಲು ತೂರಾಟ ನಡೆದಿದೆ. ಕರ್ನಾಟಕದಿಂದ ಶಬರಿಮಲೆ ಯಾತ್ರೆಗೆ ಆಗಮಿಸುತ್ತಿದ್ದ ಭಕ್ತರ ಬಸ್‌ಗಳಿಗೆ ಉಪ್ಪಳದ ಕೈಕಂಬ, ನಯಾಬಜಾರ್‌ ಮುಂತಾದ ಕಡೆ ಕಲ್ಲೆಸೆತ ಉಂಟಾಗಿದೆ. ಇದರಿಂದಾಗಿ ಬಸ್‌ಗಳಿಗೆ ಹಾನಿಯಾಗಿದೆ. ಈ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಆಗಮಿಸಿ ನಿಗಾ ವಹಿಸಿದ್ದಾರೆ. ಬೈಕ್‌ನಲ್ಲಿ ಬರುವ ತಂಡ ಕಲ್ಲು ತೂರಾಟ ನಡೆಸಿ ಪರಾರಿಯಾಗುತ್ತಿರುವುದರಿಂದ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಹರತಾಳದ ಸಂದರ್ಭದಲ್ಲಿ ನೀರ್ಚಾಲು ಬಳಿಯ ಡಿವೈಎಫ್‌ಐ ಕಚೇರಿಗೆ ಕರಿ ಆಯಿಲ್‌ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬದಿಯಡ್ಕ ಠಾಣೆ ಪೊಲೀಸರು ಒಂಬತ್ತು ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಡಿವೈಎಫ್‌ಐ ನೇತಾರ ಶಾಹುಲ್‌ ಹಮೀದ್‌ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕುಂಬಳೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಹರತಾಳದ ಹಿನ್ನೆಲೆಯಲ್ಲಿ ನಡೆದ ಅಹಿತಕರ ಘಟನೆಯಂತೆ ಏಳು ಪ್ರಕರಣಗಳನ್ನು ದಾಖಲಿಸಿ, ಈ ಸಂಬಂಧ ಸುಮಾರು 200 ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

ರಾಜಕೀಯ ಮುಖಂಡರ ಮನೆಗೆ ಬಾಂಬೆಸೆತ: ರಾಜಕೀಯ ಪಕ್ಷ ಗಳ ನೇತಾರರ ನಿವಾಸದ ಮೇಲೆ ಬಾಂಬೆಸೆತ ನಡೆದಿದೆ. ಬಿಜೆಪಿ ರಾಜ್ಯಸಭೆ ಸದಸ್ಯ, ಮಾಜಿ ರಾಜ್ಯಾಧ್ಯಕ್ಷ ವಿ. ಮುರಳೀದರನ್‌ ಅವರ ಕಣ್ಣೂರು ಎರತ್ತೋಳಿಯಲ್ಲಿರುವ ತರವಾಡು ಮನೆಗೆ ಶುಕ್ರವಾರ ರಾತ್ರಿ ಬಾಂಬ್‌ ದಾಳಿ ನಡೆಸಲಾಗಿದೆ. ದಾಳಿಯಿಂದಾಗಿ ಮನೆಗೆ ಹಾನಿಯಾಗಿದೆ. ಮನೆಯೊಳಗಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಅದೇ ರೀತಿಯಲ್ಲಿ ತಲಶ್ಯೇರಿಯ ಸಿಪಿಎಂ ಶಾಸಕ ಶಂಸೀರ್‌ ಅವರ ಮಾಡಪೀಡಿಗದಲ್ಲಿರುವ ನಿವಾಸಕ್ಕೂ ಬಾಂಬೆಸೆತದಿಂದಾಗಿ ಮನೆಯ ಒಂದು ಭಾಗ ಹಾನಿಗೊಂಡಿದೆ. ಹೊರಗಿದ್ದ ಸಾಮಗ್ರಿಗಳಿಗೆ ಹಾನಿಯಾಗಿದೆ. ಯಾವುದೇ ಜೀವಪಾಯ ಉಂಟಾಗಿಲ್ಲ.

ಕಣ್ಣೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಕಡೆ ಘರ್ಷಣೆ ನಡೆದಿದೆ. ಸಿಪಿಎಂ ಮಾಜಿ ಕಾರ್ಯದರ್ಶಿ ಪಿ. ಶಶಿದ ಅವರ ಮನೆಗೆ ಬಾಂಬ್‌ಎಸೆತದಿಂದಾಗಿ ಮನೆಯ ಕಿಟಕಿ ಮತ್ತು ಗೋಡೆ ಹಾನಿಯಾಗಿದೆ. ಅದೇ ರೀತಿಯಲ್ಲಿ ಬಿಜೆಪಿ ಚಿರಯ್ಕಲ್‌ ವಲಯ ಕಚೇರಿ ಅಂಗಣಕ್ಕೆ ಅಕ್ರಮಿಗಳು ಬೆಂಕಿ ಹಚ್ಚಿದ್ದಾರೆ. ಅಲ್ಲಿಯೇ ಮಲಗಿದ್ದ ಸುರೇಶ್‌ ಎಂಬವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಅಳಿಯಕ್ಕೋಡು ಮಂಡಲ ಬಿಜೆಪಿ ಕಾರ್ಯದರ್ಶಿ ಬಿಜು ಅವರ ಮನೆಗೆ ಕಲ್ಲುತೂರಾಟ ನಡೆಸಲಾಗಿದೆ. ನೀಲೇಶ್ವರದಲ್ಲಿ ಬಿಎಂಎಸ್‌ ಕಾರ್ಯಕರ್ತ ಆಟೋಚಾಲಕ ಚೆರುಪ್ಪುಯ ನಿವಾಸಿ ಒ.ಕೆ. ಶಾಜಿ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ಅವರನ್ನು ಮಾವುಂಗಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್‌ಎಸ್‌ಎಸ್‌ ಗುರುವಾಯೂರು ಕಾರ್ಯಾಲಯಕ್ಕೆ ಪೆಟ್ರೋಲ್‌ ಬಾಂಬ್‌ ಎಸೆಯಲಾಗಿದೆ. ಕಣ್ಣೂರು ಪಿಲಾತ್ತಾರದ ಬಿಜೆಪಿ ನೇತಾರ ಕೆ.ಪಿ. ಉಣ್ಣಿಕೃಷ್ಣನ್‌ ಅವರ ಅಂಗಡಿಯನ್ನು ಪುಡಿ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ