ಆ್ಯಪ್ನಗರ

ಸವಾಲುಗಳಿಗೆ ಎದೆಗುಂದದಿರಿ: ಚೈತ್ರಾ ಕುಂದಾಪುರ

ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಪುರುಷನಿಗೆ ಸರಿ ಸಮಾನವಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಮಹಿಳಾ ಸಂಘಟನೆಗಳು ಸಾಮಾಜಿಕ ಚಿಂತನೆ, ಶಿಸ್ತುಬದ್ದ ನೆಲೆಗಟ್ಟಿನೊಂದಿಗೆ ಸಾಮಾಜಿಕ ಜವಾಬ್ದಾರಿಗಳನ್ನು ಹೆಗಲ ಮೇಲೇರಿಸಿ ಸಮಾಜದ ಕೊಂಡಿಯಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೇಳಿದರು.

Vijaya Karnataka 10 Dec 2018, 5:00 am
ಪೆರ್ಲ : ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಪುರುಷನಿಗೆ ಸರಿ ಸಮಾನವಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಮಹಿಳಾ ಸಂಘಟನೆಗಳು ಸಾಮಾಜಿಕ ಚಿಂತನೆ, ಶಿಸ್ತುಬದ್ದ ನೆಲೆಗಟ್ಟಿನೊಂದಿಗೆ ಸಾಮಾಜಿಕ ಜವಾಬ್ದಾರಿಗಳನ್ನು ಹೆಗಲ ಮೇಲೇರಿಸಿ ಸಮಾಜದ ಕೊಂಡಿಯಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೇಳಿದರು.
Vijaya Karnataka Web dont go back from challenges chaitra kundapura
ಸವಾಲುಗಳಿಗೆ ಎದೆಗುಂದದಿರಿ: ಚೈತ್ರಾ ಕುಂದಾಪುರ


ಸ್ತ್ರೀಯರ ಸವಲತ್ತುಗಳು, ಮಹಿಳಾ ಸಂಘಟನೆ ಹಾಗೂ ಮಹಿಳಾ ಹಕ್ಕುಗಳನ್ನು ತಿಳಿಯಪಡಿಸುವ ಸಲುವಾಗಿ ಮಾತೃ ಶಕ್ತಿ ಪೆರ್ಲ ಆಶ್ರಯದಲ್ಲಿ ಪೆರ್ಲ ಶ್ರೀಸತ್ಯ ನಾರಾಯಣ ಶಾಲೆಯಲ್ಲಿ ಶನಿವಾರ ನಡೆದ ಮಹಿಳಾ ಚೇತನ ವಿನೂತನ ಕಾರ್ಯಕ್ರಮದ ಸಮಾರೋಪ ಸಮಾರಂಭದ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು.

ಸೈದ್ಧಾಂತಿಕವಾಗಿ ಮಹಿಳೆಯರ ಮೇಲೆ ತುಳಿತ ನಡೆಯುತ್ತಿದೆ. ಸ್ತ್ರೀಯು ತನಗಾಗುವ ಅನ್ಯಾಯವನ್ನು ಖಂಡಿಸುವ ಮತ್ತು ಅದರ ವಿರುದ್ಧ ಧ್ವನಿಯಾಗಬೇಕು. ಅನ್ಯಾಯಕ್ಕೊಳಗಾದ ಸ್ತ್ರೀಯನ್ನು ಮಹಿಳಾ ಸಂಘಟನೆಗಳು ಬೆಂಬಲಿಸಿ ನ್ಯಾಯ ಒದಗಿಸಲು ಪ್ರಯತ್ನಿಸಬೇಕು. ಕೆಲವೊಂದು ಚಲನ ಚಿತ್ರಗಳು ಭಾರತೀಯ ಸಂಸ್ಕೃತಿಯಲ್ಲಿ ಸಂಪ್ರದಾಯದ ಕೊಂಡಿಯನ್ನು ಕಳಚಿ ಹೊರ ಬರುವುದೇ ಸ್ತ್ರೀ ಸಬಲೀಕರಣ ಎಂಬ ಸಂದೇಶ ನೀಡುವ ರೀತಿಯಲ್ಲಿ ಚಿತ್ರಿಸಿ ಸ್ತ್ರೀಯರ ಆತ್ಮಸೈ್ಥರ್ಯವನ್ನು ಕುಗ್ಗಿಸುವ ಪ್ರಯತ್ನ ನಡೆಸಿವೆ. ಸಿನೆಮಾಗಳು ಕೇವಲ ಮನರಂಜನೆಗೆ ಸೀಮಿತವಾಗಿರದೆ ಸಿದ್ಧಾಂತಗಳನ್ನು ಚಿಂತಿಸಿ ಪ್ರಶ್ನಿಸಬೇಕಾಗಿದೆ ಎಂದರು.

ಎಣ್ಮಕಜೆ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷೆ ರೂಪವಾಣಿ ಆರ್‌.ಭಟ್‌ ಅಧ್ಯಕ್ಷ ತೆ ವಹಿಸಿದರು. ಮುಖ್ಯ ಅತಿಥಿ ಧಾರ್ಮಿಕ ಮುಖಂಡರಾದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಮಾತನಾಡಿ, ಮಾತೃಧರ್ಮವನ್ನು ಪರಿ ಪಾಲಿಸುವುದರೊಂದಿಗೆ ಭಾರತ ಮಾತೆಯ ಚರಣಗಳಿಗೆ ನಮಿಸುವ ಸಂಸ್ಕೃತಿ ಹಿಂದು ಸಂಸ್ಕೃತಿಯದ್ದಾಗಿದೆ. ತೀರ್ಥ ಸಮಾನವಾದ ನದಿ, ಬೆಟ್ಟಗಳನ್ನು ತಾಯಂದಿರ ಹೆಸರಲ್ಲಿ ಕರೆಯಲಾಗುತ್ತಿದೆ. ಎಂದಿಗೂ, ಯಾವ ರೀತಿಯಲ್ಲೂ ಇಲ್ಲಿ ಸ್ತ್ರೀ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿಲ್ಲ. ದೇಶದ ಭದ್ರ ಅಡಿಪಾಯ, ಅಧ್ಯಾತ್ಮಿಕ ವಿಚಾರ, ಧಾರ್ಮಿಕ ಚಿಂತನೆ ಆಯಾ ಪ್ರದೇಶಕ್ಕನುಗುಣವಾಗಿ ವ್ಯತ್ಯಸ್ಥವಾಗಿರುತ್ತದೆ. ನಾಸ್ತಿಕ ಮೂಲ ಭೂತವಾದಿಗಳು ಆಚಾರ ಅನುಷ್ಠಾನಗಳ ಸಂಪೂರ್ಣ ನಿರ್ಮೂಲನೆಯ ಸಂಕಲ್ಪದೊಂದಿಗೆ ಅಧರ್ಮ ಮಾರ್ಗ ಅನುಸರಿಸುತ್ತಿದೆ ಎಂದರು.

ಮಾತೃ ಶಕ್ತಿ ಸಂಘಟನೆ ಪ್ರಧಾನ ಮಂತ್ರಿ ಜೀವನ್‌ ಸುರಕ್ಷಾ ಯೋಜನೆಯ 10 ವರ್ಷಗಳ ಪ್ರೀಮಿಯಂ ಬ್ಯಾಂಕ್‌ ಗಳಿಗೆ ಪಾವತಿಸುವ 50 ಫಲಾನುಭವಿಗಳಿಗೆ ನೀಡುವ ಬಾಂಡ್‌ ವಿತರಣೆಗೆ ಚಾಲನೆ ನೀಡಲಾಯಿತು. ನಿವೃತ್ತ ಸೈನಿಕರು ಹಾಗೂ ಸಾಧಕಿಯರನ್ನು ಗೌರವಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪೆರ್ಲ ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಶಶಿಭೂಷಣ್‌ ಶಾಸ್ತ್ರಿ, ಉಕ್ಕಿನಡ್ಕ ಆಯುರ್ವೇದ ನಿರ್ದೇಶಕಿ ಡಾ.ಸ್ವಪ್ನಾ ಜೆ., ಬ್ಲಾಕ್‌ ಪಂಚಾಯಿತಿ ಸದಸ್ಯೆ ಸವಿತಾ ಬಾಳಿಕೆ ಉಪಸ್ಥಿತರಿದ್ದರು.

ರತ್ನಮಾಲಾ ಪ್ರಾರ್ಥಿಸಿದರು. ಸಂಘಟನೆಯ ಶ್ಯಾಮಲಾ ಆರ್‌.ಭಟ್‌ ಪತ್ತಡ್ಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನಳಿನಿ ಸೈಪಂಗಲ್ಲು ವಂದಿಸಿದರು. ಸ್ನೇಹ ಬಾಳಿಕೆ ನಿರೂಪಿಸಿದರು.

ಶ್ರೀಸತ್ಯ ನಾರಾಯಣ ವಿದ್ಯಾ ಸಂಸ್ಥೆ ವ್ಯವಸ್ಥಾಪಕ ಶ್ರೀಕೃಷ್ಣ ವಿಶ್ವಾಮಿತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜವನ್ನು ಮುನ್ನಡೆಸುವಲ್ಲಿ ಮಹಿಳೆಯರ ಪಾತ್ರ ಹಿರಿದು. ಪ್ರಸ್ತುತ ಹಲವಾರು ಸಂಘಟನೆಗಳಿದ್ದು ಅವುಗಳನ್ನು ಮುನ್ನಡೆಸಲು ಒಗ್ಗಟ್ಟು ಅಗತ್ಯ. ಮಕ್ಕಳಿಗೆ ಎಳವೆಯಿಂದಲೇ ಉತ್ತಮ ರೀತಿಯ ಸಂಸ್ಕಾರದ ಜತೆಗೆ ಸಂಸ್ಕೃತಿ, ಪರಂಪರೆ, ಮಾನವೀಯ ಮೌಲ್ಯಗಳನ್ನು ಕಲಿಸುವಲ್ಲಿ ಶಿಕ್ಷ ಕರು ಮತ್ತು ಪಾಲಕರು-ಪೋಷಕರು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

ಆರ್ಥಿಕ ಸಾಕ್ಷ ರತಾ ತರಬೇತುದಾರ ಕೃಷ್ಣ ಕೆ. ಕೇಂದ್ರ ಸರಕಾರದ ನಾನಾ ಯೋಜನೆಗಳ ಮಾಹಿತಿ ನೀಡಿದರು. ದೇಶ ಭಕ್ತಿ ಗೀತೆ, ಪ್ರಬಂಧ, ರಸಪ್ರಶ್ನೆ ಮೊದಲಾಗಿ ಸ್ಪರ್ಧೆಗಳು ನಡೆದವು. ಮಧ್ಯಾಹ್ನ ಆಧುನಿಕ ಸಮಾಜದಲ್ಲಿ ಮಹಿಳೆಯರು ಎದುರಿಸುವ ಸವಾಲುಗಳು ವಿಷಯದ ಕುರಿತಾಗಿ ಲೇಖಕಿ ಕೃಷ್ಣ ವೇಣಿ ಕಿದೂರು, ಮಂಗಳೂರು ವಿಭಾಗ ದುರ್ಗಾವಾಹಿನಿ ಸಂಯೋಜಕಿ ವಿದ್ಯಾ ಮಲ್ಯ, ಕೇರಳ ರಾಜ್ಯ ಮೊಗೇರ ಸರ್ವಿಸಸ್‌ ಸೊಸೈಟಿ ಪ್ರಧಾನ ಕಾರ್ಯದರ್ಶಿ ಗಿರಿಜಾ ತಾರನಾಥ್‌ ಕುಂಬಳೆ, ವಿವೇಕಾನಂದ ಕಾಲೇಜು ಉಪನ್ಯಾಸಕಿ ಶೋಭಿತಾ ಸತೀಶ್‌ ನೇತೃತ್ವದಲ್ಲಿ ವಿಚಾರ ಗೋಷ್ಠಿ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ