ಆ್ಯಪ್ನಗರ

ರೈಲ್ವೆ ಹಳಿ ಸುರಕ್ಷೆಗೆ ಡ್ರೋನ್‌ ಕಣ್ಗಾವಲು

ರೈಲು ಹಳಿಯ ಸುರಕ್ಷೆತೆ ಬಗ್ಗೆ ನಿಗಾ ವಹಿಸಲು ಹಳಿಯ ಮೇಲೆ ಹಾರಲಿದೆ ಡ್ರೋನ್‌ ಕ್ಯಾಮೆರಾಗಳು. ಪ್ರಸ್ತುತ ಟ್ರ್ಯಾಕ್‌ಮನ್‌ಗಳು ನಡೆದುಕೊಂಡು ಹೋಗಿ ಹಳಿಯ ಸುರಕ್ಷೆಯನ್ನು ಖಾತರಿಪಡಿಸುತ್ತಿದ್ದಾರೆ.

Vijaya Karnataka 14 Jul 2018, 5:00 am
ಕೆ. ಗಂಗಾಧರ್‌ ಯಾದವ್‌, ಕಾಸರಗೋಡು
Vijaya Karnataka Web drone camera to railway track
ರೈಲ್ವೆ ಹಳಿ ಸುರಕ್ಷೆಗೆ ಡ್ರೋನ್‌ ಕಣ್ಗಾವಲು


ರೈಲು ಹಳಿಯ ಸುರಕ್ಷೆತೆ ಬಗ್ಗೆ ನಿಗಾ ವಹಿಸಲು ಹಳಿಯ ಮೇಲೆ ಹಾರಲಿದೆ ಡ್ರೋನ್‌ ಕ್ಯಾಮೆರಾಗಳು. ಪ್ರಸ್ತುತ ಟ್ರ್ಯಾಕ್‌ಮನ್‌ಗಳು ನಡೆದುಕೊಂಡು ಹೋಗಿ ಹಳಿಯ ಸುರಕ್ಷೆಯನ್ನು ಖಾತರಿಪಡಿಸುತ್ತಿದ್ದಾರೆ. ಇನ್ನು ಮುಂದೆ ಡ್ರೋನ್‌ ಈ ಕೆಲಸವನ್ನು ನಿರ್ವಹಿಸಲಿದೆ. ಇದಕ್ಕಾಗಿ ರೂರ್ಕೀಯ ಐಐಟಿಯು ಅತ್ಯಾಧುನಿಕ ವ್ಯವಸ್ಥೆಯನ್ನು ಒಳಗೊಂಡ ಡ್ರೋನ್‌ನ್ನು ಅಭಿವೃದ್ಧಿಪಡಿಸಿದೆ.

ರೈಲು ಹಳಿಯ ಬಿರುಕು, ಹಳಿ ಕಳಚುವುದು, ಬೆಂಕಿ ಅನಾಹುತ, ಕ್ರಾಸಿಂಗ್‌ ವ್ಯವಸ್ಥೆಯ ಬದಲಾವಣೆ, ಹಳಿ ಜೋಡಿಸುವ ಭಾಗಗಳ ಸಮಸ್ಯೆ, ಅಪಘಾತಕ್ಕೆ ಕಾರಣವಾಗುವಂತಹ ರೀತಿಯ ವಸ್ತುಗಳ ಪತ್ತೆ ಮೊದಲಾದುವುಗಳ ಬಗ್ಗೆ ಈ ಡ್ರೋನ್‌ ಕ್ಯಾಮರಾ ಕಣ್ಗಾವಲು ಇರಿಸಲಿದೆ.

ಪ್ರಸ್ತುತ ರೈಲ್ವೆಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಟ್ರ್ಯಾಕ್‌ಮನ್‌ಗಳು ಈ ಕೆಲಸವನ್ನು ನಿಭಾಯಿಸುತ್ತಿದ್ದಾರೆ. ಪ್ರತಿಯೊಬ್ಬ ಟ್ರ್ಯಾಕ್‌ಮನ್‌ಗಳಿಗೆ ಆರು ಕಿಲೋ ಮೀಟರ್‌ನಷ್ಟು ನಿಗಾ ವಹಿಸುವ ಜವಾಬ್ದಾರಿಯನ್ನು ನೀಡಲಾಗಿರುತ್ತದೆ. ನಾಲ್ಕು ಬಾರಿ ನಡೆದಾಡಿಕೊಂಡು ಹಳಿ ಪರಿಶೀಲನೆಯೇ ಇವರ ಕೆಲಸವಾಗಿದೆ. ಮುಂದೆ ಕ್ಯಾಮೆರಾಗಳ ಸಹಾಯದಿಂದ ಆನ್‌ಲೈನ್‌ ಆಗಿ ನಿಗಾ ವಹಿಸುವುದರಿಂದ ತಪಾಸಣೆ ವೇಗ ಹೆಚ್ಚಾಗಲಿದೆ.

ರೈಲ್ವೇ ನಿಲ್ದಾಣದ ನಿಯಂತ್ರಣ ಕೊಠಡಿಯಲ್ಲಿ ಲಭಿಸುವ ಡ್ರೋನ್‌ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುವ ಮೂಲಕ ಹಳಿಗಳ ಸ್ಥಿತಿಗತಿಯನ್ನು ಶೀಘ್ರವಾಗಿ ತಿಳಿದುಕೊಳ್ಳಲು ಸಾಧ್ಯವಾಗಲಿದೆ. ಇದಕ್ಕೆ ಮೂಲ ಸೌಕರ‍್ಯ ಕಲ್ಪಿಸುವುದಕ್ಕಾಗಿ ರೈಲ್ವೆಯ ಅಧೀನದಲ್ಲಿರುವ ಸಂಸ್ಥೆಯಾದ ರೈಲ್‌ಟೆಲ್‌ಗೆ ನೀಡಲಾಗಿದೆ.

ನೂತನವಾಗಿ ಹೊಸ ತಂತ್ರಜ್ಞಾನದ ಮೂಲಕ ಅಭಿವೃದ್ದಿಪಡಿಸಿದ ಡ್ರೋನ್‌ ಬಳಸಿ ಸಂಗ್ರಹಿಸುವ ಮಾಹಿತಿಯು ನಿಖರವಾಗಿರುತ್ತದೆ. ಪ್ರಾಯೋಗಿಕವಾಗಿ ಆ ಪ್ರದೇಶದ ಡೇಟಾವನ್ನು ಸಂಗ್ರಹಿಸುವುದಲ್ಲದೆ ರೈಲು ಹಳಿಯ ದೋಷಗಳಿದ್ದರೆ ಅದನ್ನು ಪತ್ತೆ ಹಚ್ಚುವ ಸಾಮರ್ಥ್ಯ‌ವನ್ನು ಹೊಂದಿದೆ. ವೇಗವಾಗಿ ಸರಳ ರೀತಿಯಲ್ಲಿ ಕಂಪ್ಯೂಟರ್‌ ಮೂಲಕ ವೀಕ್ಷಿಸಬಹುದಾಗಿದೆ.

ಡ್ರೋನ್‌ ಮೂಲಕ ಲಭಿಸುವ ದೃಶ್ಯಾವಳಿಯೊಂದಿಗೆ ರೈಲ್ವೆ ಟ್ರ್ಯಾಕ್‌ನಲ್ಲಿ ನ್ಯೂನತೆಗಳಿದ್ದರೆ ಅದನ್ನು ವಿಶ್ಲೇಷಿಸಲಾಗುವುದು. ಈ ಮೂಲಕ ಮಾನವ ಕಣ್ಣಿಗಿಂತಲೂ ಸೂಕ್ಷ ್ಮವಾಗಿ ಡ್ರೋನ್‌ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದ ಮೂಲಕ ವೀಕ್ಷಿಸಬಹುದಾಗಿದೆ.

ಡ್ರೋನ್‌ ಕ್ಯಾಮೆರಾ ಬಳಸುವ ಬಗ್ಗೆ ರೈಲ್ವೆ ಸಿಬ್ಬಂದಿಗಳ ಸಂಘಟನೆಯಿಂದ ವಿರೋಧವೂ ವ್ಯಕ್ತವಾಗಿದೆ. ಡ್ರೋನ್‌ ಕ್ಯಾಮೆರಾ ಮೂಲಕ ಹಳಿ ನಿಗಾ ವಹಿಸುವ ಮೂಲಕ ಖಾಸಗೀಕರಣಗೊಳಿಸುವುದರ ಸೂಚನೆಯಾಗಿದೆ ಎಂಬ ಸಂಶಯವನ್ನು ಸಂಘಟನೆಗಳು ವ್ಯಕ್ತಪಡಿಸಿವೆæ. ರೈಲ್ವೆ ವಲಯದಲ್ಲಿ ಅತಿ ಹೆಚ್ಚು ಪ್ರಾಧಾನ್ಯತೆಯನ್ನು ಹೊಂದಿರುವುದು ರೈಲ್ವೆ ಹಳಿ ಸುರಕ್ಷೆ. ಇದು ದುರಸ್ತಿ ಕೆಲಸಗಳನ್ನು ಖಾಸಗೀಕರಣ ಗೊಳಿಸುವುದರ ಸೂಚನೆಯಾಗಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಅದರಂತೆ ರೈಲ್ವೆಯ ತಿರುವನಂತಪುರ, ಪಾಲ್ಘಾಟ್‌ ವಿಭಾಗಗಳ ಅಧೀನದಲ್ಲಿ ನಡೆಯುವ ದುರಸ್ತಿ ಕಾಮಗಾರಿಗಳು ವಿಳಂಬ ನೀತಿಯನ್ನು ಅನುಸರಿಸುತ್ತಿರುವುದು ಖಾಸಗೀಕರಣದ ಬಗ್ಗೆ ಸಂಘಟನೆಗಳ ಸಂಶಯಕ್ಕೆ ಕಾರಣವಾಗಿದೆ. ಅಲ್ಲದೆ ಡ್ರೋನ್‌ ಕ್ಯಾಮೆರಾ ಬಳಸುವುದರ ಮೂಲಕ ಮಾನವ ಉದ್ಯೋಗ ನಷ್ಟವಾಗಲಿದೆ. ತಿರುವನಂತಪುರ ರೈಲ್ವೆ ವಿಭಾಗದಲ್ಲೇ ಮೂವತ್ತು ಸಾವಿರದಷ್ಟು ಟ್ರ್ಯಾಕ್‌ಮೆನ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ