ಆ್ಯಪ್ನಗರ

ಚುನಾವಣಾ ಸಿಬ್ಬಂದಿಯ 3 ಬೆರಳಿಗೆ ಸುಟ್ಟ ಗಾಯ

ಚುನಾವಣೆ ಸಂದರ್ಭ ಮತದಾರರ ಕೈ ಬೆರಳಿಗೆ ಹಾಕಿದ ಶಾಯಿ ತಗುಲಿ, ಚುನಾವಣಾ ಸಿಬ್ಬಂದಿಯ ಮೂರು ಬೆರಳುಗಳಿಗೆ ಸುಟ್ಟ ಗಾಯವಾಗಿದೆ. ಬಲಗೈ ಬೆರಳಿಗೆ ಗಾಯವಾದ ಕಾರಣ ಯಾವುದೇ ಕೆಲಸ ಮಾಡಲು ಸಾಧ್ಯವಾಗದೇ ಮೂರು ವಾರಗಳ ವಿಶ್ರಾಂತಿ ಪಡೆಯುವ ಅನಿವಾರ್ಯತೆಯಲ್ಲಿದ್ದಾರೆ.

Vijaya Karnataka 4 May 2019, 5:00 am
-ಕೆ. ಗಂಗಾಧರ್‌ ಯಾದವ್‌ ಕಾಸರಗೋಡು
Vijaya Karnataka Web election ink three fingers damage
ಚುನಾವಣಾ ಸಿಬ್ಬಂದಿಯ 3 ಬೆರಳಿಗೆ ಸುಟ್ಟ ಗಾಯ


ಚುನಾವಣೆ ಸಂದರ್ಭ ಮತದಾರರ ಕೈ ಬೆರಳಿಗೆ ಹಾಕಿದ ಶಾಯಿ ತಗುಲಿ, ಚುನಾವಣಾ ಸಿಬ್ಬಂದಿಯ ಮೂರು ಬೆರಳುಗಳಿಗೆ ಸುಟ್ಟ ಗಾಯವಾಗಿದೆ. ಬಲಗೈ ಬೆರಳಿಗೆ ಗಾಯವಾದ ಕಾರಣ ಯಾವುದೇ ಕೆಲಸ ಮಾಡಲು ಸಾಧ್ಯವಾಗದೇ ಮೂರು ವಾರಗಳ ವಿಶ್ರಾಂತಿ ಪಡೆಯುವ ಅನಿವಾರ್ಯತೆಯಲ್ಲಿದ್ದಾರೆ.

ತಳಂಗರೆ ಸರಕಾರಿ ಮುಸ್ಲಿಂ ಎಲ್‌ಪಿ ಶಾಲೆಯ ಅಧ್ಯಾಪಕಿ, ತೃಕ್ಕರಿಪುರ ಉಡುಂಬುತ್ತಲ ಕಿಯಾಕ್ಕೆಪ್ಪಾರ ನಿವಾಸಿ ಕೆ.ಪಿ. ರಮ್ಲಾಬೀಬಿ(42) ಎಂಬವರ ಮೂರು ಬೆರಳುಗಳಿಗೆ ಸುಟ್ಟ ಗಾಯವಾಗಿದೆ.

ಶಾಯಿ ತಗುಲಿದ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದಲ್ಲದೇ, ಸ್ಪರ್ಶ ಜ್ಞಾನವೂ ಕಡಿಮೆಯಾಗಿದೆ. ಇದಕ್ಕಾಗಿ ಮಂಗಳೂರಿನ ಫಾದರ್‌ ಮುಲ್ಲರ್ಸ್‌ ವೈದ್ಯಕೀಯ ಕಾಲೇಜಿನ ಚರ್ಮರೋಗ ತಜ್ಞೆ ಡಾ. ಜ್ಯೋತಿ ಅವರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ. ಕಣ್ಣೂರು ಜಿಲ್ಲೆಯ ಒಬ್ಬ ಸಿಬ್ಬಂದಿಗೆ ಇದೇ ರೀತಿಯ ಗಾಯಗಳಾಗಿವೆ.

ಕಾಸರಗೋಡು ಲೋಕಸಭೆ ಕ್ಷೇತ್ರದ ಮಂಜೇಶ್ವರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮುಳಿಂಜ 72ನೇ ಮತಗಟ್ಟೆಯಾದ ಸರಕಾರಿ ಎಲ್‌ಪಿ ಶಾಲೆಯಲ್ಲಿ ಎರಡನೇ ಪೋಲಿಂಗ್‌ ಆಫೀಸರ್‌ ಆಗಿ ಕರ್ತವ್ಯ ನಿರ್ವಹಿಸಿ ಮತದಾರರ ಬೆರಳಿಗೆ ಶಾಯಿ ಹಾಕುವುದಲ್ಲದೇ ರಿಜಿಸ್ಟ್ರಾರ್‌ನಲ್ಲಿ ಸಹಿ ಹಾಕಿಸುವುದು ಮುಂತಾದ ಕೆಲಸ ನಿರ್ವಹಿಸಿದ್ದರು. ಏ.23ರಂದು ನಡೆದ ಚುನಾವಣೆಯಲ್ಲಿ ಅಂದು ಬೆಳಗ್ಗಿನಿಂದಲೇ ಈ ಮತಗಟ್ಟೆಯಲ್ಲಿ ಮತದಾರರ ಸರತಿ ಸಾಲು ಇದ್ದು, ಮಧ್ಯಾಹ್ನವಾಗುವಾಗಲೇ ಕೈ ಬೆರಳುಗಳಲ್ಲಿ ನೋವು ಕಾಣಿಸಿಕೊಂಡಿತ್ತು. ಆ ಬಳಿಕ ರಿಜಿಸ್ಟ್ರಾರ್‌ ಬರೆಯುವ ಕೆಲಸವನ್ನು ಇತರರಿಗೆ ವಹಿಸಿಕೊಟ್ಟರೂ ಶಾಯಿ ಹಾಕುವ ಕೆಲಸವನ್ನು ಇವರೇ ನಿರ್ವಹಿಸಿದ್ದರು.

ಸುಮಾರು ಸಾವಿರಕ್ಕಿಂತಲೂ ಹೆಚ್ಚು ಮತದಾರರಿರುವ ಬೂತ್‌ನಲ್ಲಿ 967 ಮಂದಿ ಮತ ಚಲಾಯಿಸಿದ್ದಾರೆ. ಇಷ್ಟು ಮಂದಿಗೆ ನೋವಿನ ನಡುವೆಯೂ ಶಾಯಿ ಹಾಕಿದ್ದಾರೆ. ಸಂಜೆಯಾಗುತ್ತಲೇ ನೋವು ಕಾಣಿಸಿಕೊಂಡದ್ದಲ್ಲದೇ ಶಾಯಿ ತಗುಲಿದ ಕಡೆ ಚರ್ಮ ಕೊರೆತ ಉಂಟಾಗಿತ್ತು. ಬಳಿಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿತ್ತು. ಸಂಪೂರ್ಣ ಗುಣಮುಖವಾಗಲು ಇನ್ನೂ ಮೂರು ತಿಂಗಳ ಕಾಲಾವಕಾಶ ಬೇಕಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕೈ ಬೆರಳಿಗೆ ಹಾಕುವ ಇಂಕ್‌ ರಾಸಾಯಿನಿಕ ಪದಾರ್ಥಗಳಿಂದ ಕೂಡಿರುವುದಾಗಿ ತಿಳಿದಿದ್ದರೆ ಕರ್ತವ್ಯ ನಿರ್ವಹಿಸುವ ಮೊದಲೇ ಕೈ ಕವಚ ಬಳಸಬಹುದಿತ್ತು. ಇದೀಗ ಯಾವು ಕೆಲಸ ನಿರ್ವಹಿಸಲೂ ಸಾಧ್ಯವಾಗುವುದಿಲ್ಲ ಎಂದು ರಮ್ಲಾಬೀಬಿ ತಿಳಿಸಿದ್ದಾರೆ. ಬಾಟ್ಲಿಯಿಂದ ತೆಗೆದು ಇಂಕ್‌ ಹಾಕುವ ಕಡ್ಡಿ ಸ್ಪಲ್ಪ ಉದ್ದದ್ದಾಗಿದ್ದರೆ ಸಹ ಈ ರೀತಿಯಲ್ಲಿ ಸುಟ್ಟಗಾಯಗಳಾಗುತ್ತಿರಲಿಲ್ಲ ಎಂಬುದಾಗಿಯೂ ಅವರು ಹೇಳಿದರು. ಈ ಮೊದಲು ನಾಲ್ಕು ಬಾರಿ ಚುನಾವಣಾ ಕರ್ತವ್ಯ ನಿರ್ವಹಿಸಿದ್ದರೂ ಈ ರೀತಿಯಲ್ಲಿ ಸುಟ್ಟ ಗಾಯಗಳಾಗಿರುವುದು ಇದೇ ಮೊದಲ ಬಾರಿಯಾಗಿದೆ.

ಶಾಯಿ ತಗುಲಿ ಗಾಯವಾಗಿರುವ ಬಗ್ಗೆ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ. ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ತಿಳಿಸುವುದಾಗಿಯೂ, ಅದರಂತೆ ಚಿಕಿತ್ಸಾ ಸಹಾಯ ನೀಡುವುದಕ್ಕಾಗಿ ಮೆಡಿಕಲ್‌ ಸರ್ಟಿಫಿಕೆಟ್‌ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ ಬಾಬು ನಿರ್ದೇಶಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ