ಆ್ಯಪ್ನಗರ

ಎಂಡೋಸಲ್ಫಾನ್‌ ಕೀಟನಾಶಕ ಸ್ಯಾಂಪಲ್‌ ತಪಾಸಣೆ ಪೂರ್ಣ

ತೋಟಗಾರಿಕಾ ನಿಗಮದ ಗೋದಾಮಿನಲ್ಲಿ ದಾಸ್ತಾನಿಟ್ಟಿದ್ದ ಎಂಡೋಸಲ್ಫಾನ್‌ ಕೀಟನಾಶಕದ ಸ್ಯಾಂಪಲ್‌ ತಪಾಸಣೆ ಪೂರ್ಣಗೊಂಡಿದೆ. ಸಾರ್ವಜನಿಕ ವಲಯ ಸಂಸ್ಥೆಯಾದ ಕೊಚ್ಚಿಯ ಹಿಂದೂಸ್ತಾನ್‌ ಇನ್‌ಸೆಕ್ಟಿಸೈಟ್‌(ಎಚ್‌ಎಎಲ್‌)ನಲ್ಲಿ ತಪಾಸಣೆ ಪೂರ್ಣಗೊಂಡಿದೆ.

ವಿಕ ಸುದ್ದಿಲೋಕ 7 May 2018, 5:00 am
ಲವೀನ ಪೆರ್ಮುದೆ ಕಾಸರಗೋಡು
Vijaya Karnataka Web endo sample

ತೋಟಗಾರಿಕಾ ನಿಗಮದ ಗೋದಾಮಿನಲ್ಲಿ ದಾಸ್ತಾನಿಟ್ಟಿದ್ದ ಎಂಡೋಸಲ್ಫಾನ್‌ ಕೀಟನಾಶಕದ ಸ್ಯಾಂಪಲ್‌ ತಪಾಸಣೆ ಪೂರ್ಣಗೊಂಡಿದೆ. ಸಾರ್ವಜನಿಕ ವಲಯ ಸಂಸ್ಥೆಯಾದ ಕೊಚ್ಚಿಯ ಹಿಂದೂಸ್ತಾನ್‌ ಇನ್‌ಸೆಕ್ಟಿಸೈಟ್‌(ಎಚ್‌ಎಎಲ್‌)ನಲ್ಲಿ ತಪಾಸಣೆ ಪೂರ್ಣಗೊಂಡಿದೆ. ಕೀಟನಾಶಕದಲ್ಲಿರುವ ಎಂಡೋಸಲ್ಫಾನ್‌ ಅಂಶ ಹಾಗೂ ಸಾಮರ್ಥ್ಯ‌ವನ್ನು ಒಳಗೊಂಡ ವರದಿಯನ್ನು ಕಾಸರಗೋಡು ಜಿಲ್ಲಾಧಿಕಾರಿಗೆ ನೀಡಲಾಗುವುದು. ಹೊರಗಿನ ಏಜೆನ್ಸಿಯ ತಪಾಸಣಾ ಫಲಿತಾಂಶವನ್ನು ಪರಿಗಣಿಸಿ ಎಂಡೋಸಲ್ಫಾನ್‌ ಕೀಟನಾಶಕ ನಿಷ್ಕ್ರಿಯಗೊಳಿಸಲಾಗುವುದು.

ದಾಸ್ತಾನಿಟ್ಟ ಎಂಡೋಸಲ್ಫಾನ್‌ ಸ್ಯಾಂಪಲ್‌ನ್ನು ಎಚ್‌ಎಎಲ್‌ ತಪಾಸಣೆಗೊಳಪಡಿಸಿದಾಗ ಅದರಲ್ಲಿ ಶೇ. 28ರಿಂದ 32ರಷ್ಟು ಎಂಡೋಸಲ್ಫಾನ್‌ ಅಂಶ ಪತ್ತೆಯಾಗಿದೆ. ಈ ಹಿಂದೆ ಶೇ. 35 ಎಂಡೋಸಲ್ಫಾನ್‌ ಅಂಶ ಇತ್ತು. ಉಳಿದದ್ದು ಇತರ ಕೀಟನಾಶಕ ಮಿಶ್ರಣವಾಗಿದೆ. ಎಂಡೋಸಲ್ಫಾನ್‌ನ್ನು ನಾಶಗೊಳಿಸಲು ಪ್ರತ್ಯೇಕ ವ್ಯವಸ್ಥೆ ಮಾಡÜಲಾಗುತ್ತಿದೆ.

ಎಂಡೋಸಲ್ಫಾನ್‌ನ್ನು ಕೇರಳದಿಂದ ಹೊರಗೆ ಕೊಂಡೊಯ್ದು ಪ್ರಕೃತಿಗೆ ಮಾರಕವಾಗದಂತೆ ನಿಷ್ಕ್ರಿಯಗೊಳಿಸುವ ಬಗ್ಗೆ ಈ ಹಿಂದೆ ಕೈಗೊಂಡ ತಿರ್ಮಾನ ಫಲಕಂಡಿಲ್ಲ. ಟೆಂಡರ್‌ ಪ್ರಕ್ರಿಯೆಯೂ ನಡೆಯಲಿಲ್ಲ. ಕೊನೆಗೆ ಕೊಚ್ಚಿಯ ಎಚ್‌ಎಎಲ್‌ ಗುತ್ತಿಗೆ ಅಂಗೀಕರಿಸಿತು. ಎಂಡೋಸಲ್ಫಾನ್‌ನ್ನು ನಾಶಗೊಳಿಸಲು ಅಂಬಲಮುಕ್ಕಲ್‌ನ ಕೇರಳ ಎನ್‌ವಿಯೋ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ (ಕೆಇಐಎಲ್‌) ಒಪ್ಪಿಗೆ ಸೂಚಿಸಿತ್ತು.ಆದರೆ ಜನಾಕ್ರೋಶಕ್ಕೆ ಕಾರಣವಾಗಬಹುದು ಎಂದು ಎರ್ನಾಕುಲಂ ಜಿಲ್ಲಾಡಳಿತ ಇದಕ್ಕೆ ಅಸಮ್ಮತಿ ಸೂಚಿಸಿರುವುದರಿಂದ ಈ ಪ್ರಕ್ರಿಯೆ ಸ್ಥಗಿತಗೊಂಡಿತ್ತು.

ವ್ಯಾರಂಟಿ ಮುಕ್ತಾಯ: 1900 ಲೀಟರ್‌ ಕೀಟನಾಶಕ ತುಂಬಿಸಿಟ್ಟಿದ್ದ ಎಚ್‌ಡಿಪಿಇ (ಹೈಡೆನ್ಸಿಟಿ ಪೋಲಿ ಎತಿಲಿನ್‌) ಬ್ಯಾರಲ್‌ಗಳ ವ್ಯಾರಂಟಿ 2017 ಜೂನ್‌ನಲ್ಲಿ ಕೊನೆಗೊಂಡಿದೆ. ಯುನೈಟೆಡ್‌ ನೇಶನ್ಸ್‌ ಅಂಗೀಕರಿಸಿದ ಐದು ವರ್ಷಗಳ ಸುರಕ್ಷಿತ ಕಾಲಾವಕಾಶ (ವ್ಯಾರಂಟಿ) ಮುಗಿದಿದೆ. ಕಾಸರಗೋಡು ಹಾಗೂ ಮಣ್ಣಾರ್‌ಕ್ಕೋಡ್‌ನ ತೋಟಗಾರಿಕಾ ನಿಗಮದ ಗೋದಾಮುಗಳಲ್ಲಿ 2012ರಿಂದ ಈ ಎಂಡೋಸಲ್ಫಾನ್‌ನ್ನು ದಾಸ್ತಾನಿರಿಸಲಾಗುತ್ತಿದೆ. ಇದರ ವ್ಯಾರಂಟಿ ಮುಗಿದರೆ ಎಷ್ಟು ದಿನಗಳವರೆಗೆ ಉಳಿಯಬಹುದು ಎಂಬುದು ಯಾರಿಗೂ ತಿಳಿದಿಲ್ಲ. ದ್ರಾವಣವನ್ನು ನಿಷ್ಕ್ರಿಯಗೊಳಿಸುವ ಸರಕಾರದ ಪ್ರಯತ್ನ ವಿಳಂಬಗೊಳ್ಳುತ್ತಿರುವುದು ಆತಂಕಕ್ಕೊಳಗಾಗಿದೆ.

ಎಂಡೋದಿಂದ ಜಿಲ್ಲೆಗೆ ಮುಕ್ತಿ?: ಐದು ವರ್ಷಗಳ ಹಿಂದೆ ಪ್ರತ್ಯೇಕ ಬ್ಯಾರಲ್‌ಗಳಲ್ಲಿ ತುಂಬಿಸಿ ಪ್ಲಾಂಟೇಶನ್‌ ಕಾರ್ಪೊರೇಶನ್‌ನ ಗೋದಾಮುಗಳಲ್ಲಿ ದಾಸ್ತಾನಿಟ್ಟ ಎಂಡೋಸಲ್ಫಾನ್‌ನಿಂದ ಜಿಲ್ಲೆಗೆ ಮುಕ್ತಿ ಲಭಿಸುವ ಕಾಲ ಸಮೀಪಿಸುತ್ತಿದೆ. ಜಿಲ್ಲೆಯ ತೋಟಗರಿಕಾ ನಿಗಮದ ರಾಜಪುರ, ಚೀಮೇನಿ, ಪೆರಿಯ ಗೋದಾಮುಗಳಲ್ಲಿ ದಾಸ್ತಾನಿಟ್ಟ ಎಂಡೊಸಲ್ಫಾನ್‌ನ್ನು ನಿಷ್ಕ್ರಿಯಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಇದನ್ನು ನಿಷ್ಕ್ರಿಯಗೊಳಿಸುವುದರ ಪೂರ್ವಭಾವಿಯಾಗಿ ಬ್ಯಾರಲ್‌ಗಳ ಸ್ಯಾಂಪಲ್‌ಗಳನ್ನು ತಪಾಸಣೆಗಾಗಿ ಸಂಗ್ರಹಿಸುವ ಪ್ರಕ್ರಿಯೆ ಫೆ. 23 ಹಾಗೂ 24ರಂದು ನಡೆದಿತ್ತು.

ಐದು ವರ್ಷಗಳ ಹಿಂದೆ ಪ್ರತ್ಯೇಕ ಬ್ಯಾರಲ್‌ಗಳಲ್ಲಿ ತುಂಬಿಸಿ ಪ್ಲಾಂಟೇಶನ್‌ ಕಾರ್ಪೊರೇಶನ್‌ನ ಗೋದಾಮುಗಳಲ್ಲಿ ದಾಸ್ತಾನಿಟ್ಟ ಎಂಡೋಸಲ್ಫಾನ್‌ ಕೀಟನಾಶಕಗಳ ಸ್ಯಾಂಪಲ್‌ಗಳನ್ನು ತಪಾಸಣೆಗೊಳಪಡಿಸಲಾಗಿದೆ. ಕಾಲಾವಧಿ ಮುಗಿದಿರುವುದರಿಂದ ಈ ಎಂಡೋಸಲ್ಫಾನ್‌ನ್ನು ಹೊಸ ಬ್ಯಾರಲ್‌ಗಳಿಗೆ ವರ್ಗಾಯಿಸಿ ಬಳಿಕ ನಿಷ್ಕ್ರಿಯಗೊಳಿಸಲು ತೀರ್ಮಾನಿಸಲಾಗಿದೆ.

ಕಳೆದ ನವೆಂಬರ್‌ನಲ್ಲೇ ಎಂಡೋಸಲ್ಫಾನ್‌ ಕೀಟನಾಶಕಗಳ ಸ್ಯಾಂಪಲ್‌ ತಪಾಸಣೆಗೊಳಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತ ಕೊಚ್ಚಿಯ ಎಚ್‌ಐಎಲ್‌ಗೆ ಪತ್ರ ಬರೆದಿತ್ತು.

ಎಂಡೋಸಲ್ಫಾನ್‌ನ್ನು ಹೊಸ ಬ್ಯಾರಲ್‌ಗಳಿಗೆ ವರ್ಗಾಯಿಸುವುದು, ನಿಷ್ಕ್ರಿಯಗೊಳಿಸುವುದರ ಕುರಿತು ಚರ್ಚೆ ನಡೆಸಲು ಜಿಲ್ಲಾಧಿಕಾರಿ ಕೆ. ಜೀವನ್‌ಬಾಬು, ಸಮಾಜ ಸುರಕ್ಷಾ ಮಿಶನ್‌ ಎಕ್ಸಿಕ್ಯೂಟಿವ್‌ ನಿರ್ದೇಶಕ ಡಾ. ಮುಹಮ್ಮದ್‌ ಅಶೀಲ್‌ ಅವರು ಎಚ್‌ಐಎಲ್‌, ಮಾಲಿನ್ಯ ನಿಯಂತ್ರಣ ಮಂಡಳಿಯ ಉನ್ನತ ಅಧಿಕಾರಿಗಳ ಜತೆ ನಡೆಸಿದ ಚರ್ಚೆಯಲ್ಲಿ ಎಂಡೋಸಲ್ಫಾನ್‌ ಕೀಟನಾಶಕಗಳ ಸ್ಯಾಂಪಲ್‌ ತಪಾಸಣೆಗೊಳಪಡಿಸಲು ತೀರ್ಮಾನಿಸಲಾಗಿತ್ತು.

ಮೂರು ವರ್ಷಗಳ ಹಿಂದೆ ಕೊಚ್ಚಿಗೆ ಕೊಂಡೊಯ್ದು ನಿಷ್ಕ್ರಿಯಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ ಅಂದು ನಾಗರಿಕರ ವಿರೋಧ ಇರುವುದಾಗಿ ಎರ್ನಾಕುಳಂನ ಜಿಲ್ಲಾಧಿಕಾರಿ ಲಿಖಿತವಾಗಿ ತಿಳಿಸಿದ ಹಿನ್ನ್ನೆಲೆಯಲ್ಲಿ ಯೋಜನೆ ಕೈಬಿಡಲಾಗಿತ್ತು. ಇದೀಗ ಕೊಚ್ಚಿಯ ಎಚ್‌ಐಎಲ್‌ ಕೇಂದ್ರದಲ್ಲಿ ನಿಷ್ಕ್ರಿಯಗೊಳಿಸಲು ಹೊಸದಾಗಿ ತೀರ್ಮಾನ ಕೈಗೊಳ್ಳಲಾಗಿದೆ.

ಕಾಸರಗೋಡಿನ ಜನತೆಯನ್ನು ಕಣ್ಣೀರ ಕಡಲಲ್ಲಿ ಮುಳುಗಿಸಿದ ಎಂಡೋಸಲ್ಫಾನ್‌ನ್ನು ನಿಷೇಧಿಸಿ ಒಂದೂವರೆ ದಶಕ ಸಂದಿದೆ. ಕಾಸರಗೋಡು ಹಾಗೂ ಕರ್ನಾಟಕದ ಒಂದು ಭಾಗವನ್ನು ಬಡತನದ ಕೂಪಕ್ಕೆ ತಳ್ಳಿದ ಮಾರಕ ಎಂಡೋಸಲ್ಫಾನ್‌ನ್ನು 1999ರ ಮೇ ತಿಂಗಳಲ್ಲಿ ನಿಷೇಧಿಸಲಾಗಿತ್ತು. ಅದುವರೆಗೆ ಕೃಷಿ ತೋಟಗಳಿಗೆ ಪ್ರಯೋಗಿಸಲಾಗುತ್ತಿದ್ದ ಎಂಡೋಸಲ್ಫಾನ್‌ ಮಹಾ ದುರಂತದ ಬಳಿಕ ಕಣ್ಮರೆಯಾಯಿತು.

ಆದರೆ ದಶಕದ ಹಿಂದೆ ತೋಟಗಾರಿಕಾ ನಿಗಮದ ಗೇರು ಕೃಷಿತೋಟದ ಗೋದಾಮುಗಳಲ್ಲಿ ದಾಸ್ತಾನಿಟ್ಟಿದ್ದ ಎಂಡೋಸಲ್ಫಾನ್‌ ನಿಷ್ಕ್ರಿಯಗೊಳಿಸಲು ಇನ್ನೂ ಸಾಧ್ಯವಾಗದಿರುವುದು ಅಪಾಯಕಾರಿಯಾಗಿದೆ.

*ಜಿಲ್ಲಾಡಳಿತದ ಅನುಮತಿ ಲಭಿಸಿದರೆ ಕೇಂದ್ರ ಏಜೆನ್ಸಿಯಾದ ಇನ್ಸ್‌ಟಿಟ್ಯೂಟ್‌ ಆಫ್‌ ಪೆಸ್ಟಿಸೈಡ್‌ ಪರ್ಫಾರ್ಮೆನ್ಸ್‌ ಟೆಕ್ನಾಲಜಿ (ಐಪಿಎಪ್‌ಟಿ)ಗೂ ಎಂಡೋಸಲ್ಫಾನ್‌ ಸ್ಯಾಂಪಲ್‌ಗಳನ್ನು ತಪಾಸಣೆಗೆ ಕಳುಹಿಸಲಾಗುವುದು. ಅದರ ಬಳಿಕ ಪ್ರತ್ಯೇಕ ಪ್ಲಾಂಟ್‌ನಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ನಿಷ್ಕ್ರಿಯಗೊಳಿಸಲಾಗುವುದು.

-ಸಂತೋಷ್‌ ಕುಮಾರ್‌, ತಾಂತ್ರಿಕಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ