ಆ್ಯಪ್ನಗರ

ಎಂಡೋ ಬಾಧಿತ ವೃದ್ಧೆಯನ್ನು ಅರ್ಧ ಕಿ.ಮೀ. ಹೊತ್ತುಕೊಂಡೇ ಮನೆಗೆ ತಲುಪಿಸಿದರು!

ಹಣವಿಲ್ಲದ ಕಾರಣಕ್ಕೆ ಒಡಿಶಾದಲ್ಲಿ ತಂದೆ-ತಾಯಿ ತಮ್ಮ ಪುತ್ರಿಯ ಮೃತದೇಹವನ್ನು ರುದ್ರಭೂಮಿಗೆ ಸುಮಾರು 10 ಕಿ.ಮೀ. ಹೊತ್ತುಕೊಂಡೇ ಹೋಗಿ ಅಂತ್ಯಸಂಸ್ಕಾರ ನಡೆಸಿದ ಸುದ್ದಿ ಮಾಸುವ ಮುನ್ನವೇ ಅಂಥದ್ದೇ ಮನ ಕಲಕುವ ಸುದ್ದಿಯೊಂದು ಸೋಮವಾರ ಕಾಸರಗೋಡಿನಲ್ಲಿ ನಡೆದಿದೆ.

Vijaya Karnataka 28 Jun 2018, 3:23 pm
ಲವೀನ ಪೆರ್ಮುದೆ ಕಾಸರಗೋಡು
Vijaya Karnataka Web endo victim
ಎಂಡೋ ಬಾಧಿತ ವೃದ್ಧೆಯನ್ನು ಅರ್ಧ ಕಿ.ಮೀ. ಹೊತ್ತುಕೊಂಡೇ ಮನೆಗೆ ತಲುಪಿಸಿದರು!


ಹಣವಿಲ್ಲದ ಕಾರಣಕ್ಕೆ ಒಡಿಶಾದಲ್ಲಿ ತಂದೆ-ತಾಯಿ ತಮ್ಮ ಪುತ್ರಿಯ ಮೃತದೇಹವನ್ನು ರುದ್ರಭೂಮಿಗೆ ಸುಮಾರು 10 ಕಿ.ಮೀ. ಹೊತ್ತುಕೊಂಡೇ ಹೋಗಿ ಅಂತ್ಯಸಂಸ್ಕಾರ ನಡೆಸಿದ ಸುದ್ದಿ ಮಾಸುವ ಮುನ್ನವೇ ಅಂಥದ್ದೇ ಮನ ಕಲಕುವ ಸುದ್ದಿಯೊಂದು ಸೋಮವಾರ ಕಾಸರಗೋಡಿನಲ್ಲಿ ನಡೆದಿದೆ.

ಕಾಸರಗೋಡು ಜಿಲ್ಲೆಯ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ನಡೆದ ಘಟನೆಯಿದು. ಕಾಲೊನಿಯ ನಿವಾಸಿ ತೋಟದಮೂಲೆ ಸೀತು (66) ಎಂಡೋಸಲ್ಫಾನ್‌ ಬಾಧಿತ ವೃದ್ಧ ಮಹಿಳೆ. ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಆಸ್ಪತ್ರೆಯಿಂದ ಡಿಸ್ಕಾರ್ಚ್‌ ಮಾಡಲಾಗಿದೆ. ಆದರೆ ವೃದ್ಧ ತಾಯಿಯನ್ನು ಅವರ ಮಕ್ಕಳು, ಸ್ಥಳೀಯ ಯುವಕರು ಸುಮಾರು ಅರ್ಧ ಕಿ.ಮೀ. ಹೊತ್ತುಕೊಂಡೇ ಮನೆ ತಲುಪಿಸಿದರು.

ಈ ಕಾಲೊನಿಗೆ ರಸ್ತೆ ಸಂಪರ್ಕವಿಲ್ಲ. ಎತ್ತರ ತಗ್ಗಿನ ಪ್ರದೇಶದಲ್ಲಿ ಕಾಲುದಾರಿಯಲ್ಲಿ ಸಾಗಬೇಕು. ಪರಿಣಾಮ ಆಕೆಯ ಮಕ್ಕಳು ಹಾಗೂ ಕಾಲೊನಿ ಸಮೀಪದ ಯುವಕರು ಎತ್ತರ ತಗ್ಗಿನ ಪ್ರದೇಶದಲ್ಲಿ ಕಷ್ಟಪಟ್ಟು ಹೊತ್ತುಕೊಂಡೇ ಮನೆಗೆ ತಲುಪಿಸುವ ಅನಿವಾರ್ಯತೆ ಎದುರಾಯಿತು.

ಕಾಲೊನಿ 78 ಕುಟುಂಬಗಳು: ಎರಡು ಎಸ್‌ಸಿ ಕಾಲೊನಿಗಳಿರುವ ಪೊಸೋಳಿಗೆಯಲ್ಲಿ 78 ಕುಟುಂಬಗಳು ವಾಸವಿದ್ದು, ರಸ್ತೆ ಸಂಪರ್ಕವಿಲ್ಲ. ಈ ಕಾಲೊನಿ ಬಳಿಯಲ್ಲೇ ಖಾಸಗಿ ವ್ಯಕ್ತಿಯೊಬ್ಬರ ಸುಮಾರು 80 ಎಕರೆ ಜಾಗವಿದೆ. ಅವರ ಜಾಗದ ಮೂಲಕ ಈ ಕಾಲೊನಿಗೆ ರಸ್ತೆ ಸೌಕರ್ಯ ಲಭಿಸಬಹುದಾದರೂ ಅದಕ್ಕೆ ಅನುಮತಿ ಇಲ್ಲ. ಕಾಲೊನಿಗೆ ಸಣ್ಣ ರಸ್ತೆ ಇದ್ದರೂ, ನ್ಯಾಯಾಲಯದಲ್ಲಿ ಈ ಕುರಿತು ದಾವೆ ಇರುವುದರಿಂದ ಅದರಲ್ಲಿ ನಡೆದುಕೊಂಡು ಹೋಗಲು ಸಾಧ್ಯವಿಲ್ಲದಂತಾಗಿದೆ. ನ್ಯಾಯಾಲಯದಲ್ಲಿ ವಾದ ವಿವಾದ ನಡೆಯುವುದರಿಂದ ದಶಕಗಳಿಂದ ನಾಗರಿಕರು ಉಪಯೋಗಿಸುವ ರಸ್ತೆ ದುರಸ್ತಿಗೊಳಿಸಲು ಪಂಚಾಯಿತಿ ಅಧಿಕಾರಿಗಳು ಮುಂದೆ ಬರುತ್ತಿಲ್ಲ. ಮುಂಗಾರು ಆರಂಭಗೊಂಡಿರುವುದರಿಂದ ಈ ರಸ್ತೆಯ ಮೂಲಕ ವಾಹನ ಸಂಚಾರವೂ ಇಲ್ಲ.

ತಿಂಗಳ ಹಿಂದೆ ಕಾಲೊನಿಯ ಯುವಕನೊಬ್ಬ ಹಾವು ಕಚ್ಚಿ ಚಿಕಿತ್ಸೆ ಲಭಿಸದೆ ಮೃತಪಟ್ಟಿದ್ದ. ತೋಟದಲ್ಲಿನ ಕಣಜ ಹುಳುವಿನ ಗೂಡು ನಾಶಗೊಳಿಸಲು ಕಳುಹಿಸಿದ ವ್ಯಕ್ತಿಗೆ ಹಾವು ಕಚ್ಚಿದ್ದು, ಆತನನ್ನು ಆಸ್ಪತ್ರೆಗೆ ತಲುಪಿಸಲು ತೋಟದ ಮಾಲೀಕ ಜೀಪು ನೀಡದ ಹಿನ್ನೆಲೆಯಲ್ಲಿ ಚಿಕಿತ್ಸೆ ವಿಳಂಬವಾಗಿತ್ತು. ವಾಹನ ಸೌಕರ್ಯ ಇದ್ದಿದ್ದರೆ ಆ ಯುವಕನಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಲಭಿಸಿ ಜೀವ ಉಳಿಯುತ್ತಿತ್ತು.

ಇಷ್ಟೆಲ್ಲ ಆದರೂ ಅಧಿಕಾರಿಗಳು ಈ ಕಾಲೊನಿ ನಿವಾಸಿಗಳ ನೆರವಿಗೆ ಬರುತ್ತಿಲ್ಲ. ಕಾಲೊನಿ ನಿವಾಸಿಗಳ ಮೌನವೇದನೆ ಯಾರಿಗೂ ತಿಳಿಯದಂತಾಗಿದೆ.

*1980ರಲ್ಲಿ ಈ ಕಾಲೊನಿ ನಿವಾಸಿಗಳಿಗೆ ರಸ್ತೆ ಸೌಕರ್ಯವಿತ್ತು. ಆದರೆ ಕಾಲಕ್ರಮೇಣ ಖಾಸಗಿ ವ್ಯಕ್ತಿಗಳು ಈ ಸ್ಥಳವನ್ನು ಬಿಟ್ಟುಕೊಡದೆ ರಸ್ತೆ ಸೌಕರ್ಯ ಕಡಿತಗೊಳಿಸಿದ್ದಾರೆ. ಸಾವು ಬದುಕಿನೊಂದಿಗೆ ಹೋರಾಡುವ ವ್ಯಕ್ತಿಯನ್ನು ಏರುತಗ್ಗುಗಳ ರಸ್ತೆಯಲ್ಲಿ ಹೊತ್ತುಕೊಂಡೇ ಬರಬೇಕಾದ ಸ್ಥಿತಿ ಇಲ್ಲಿಯದು. ಬೇರೆ ರಾಜ್ಯಗಳಲ್ಲಿ ಇಂತಹ ಘಟನೆಗಳು ನಡೆದಾಗ ನಾವು ಅಯ್ಯೋ ಎನ್ನುತ್ತೇವೆ. ಆದರೆ ನಮ್ಮದೇ ನಾಡಿನಲ್ಲಿ ಇಂತಹ ಘಟನೆಗಳು ನಡೆದಾಗ ನಾವು ಗಮನಿಸೋದೇ ಇಲ್ಲ. ಇನ್ನಾದರೂ ಈ ಕಾಲೊನಿ ನಿವಾಸಿಗಳಿಗೆ ರಸ್ತೆ ಸೌಕರ್ಯ ಒದಗಿಸಲು ಸಂಬಂಧಪಟ್ಟವರು ಗಮನ ಹರಿಸಿದರೆ ಮುಂದೆ ನಡೆಯಬಹುದಾದ ದುರಂತಗಳನ್ನು ತಪ್ಪಿಸಬಹುದಾಗಿದೆ.
-ನಿಝಾಮ್‌ ರಾವುತ್ತರ್‌, ಸ್ಥಳೀಯರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ