ಆ್ಯಪ್ನಗರ

ಗಡಿನಾಡಿನಲ್ಲಿ ಕನ್ನಡ ಅಳಿವು-ಉಳಿವು, ಶರಣಾಗತಿ ಪ್ರಶ್ನೆಯಿಲ್ಲ

ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನಲ್ಲಿ ಕನ್ನಡ ಅಳಿವು-ಉಳಿವು ಬಗ್ಗೆ ಸರಕಾರದ ಎದುರು ಶರಣಾಗತಿಯ ಪ್ರಶ್ನೆಯಿಲ್ಲ, ಕನ್ನಡಿಗರ ಹಕ್ಕಿಗಾಗಿ ಯಾರ ಮುಂದೆಯು ಭಿಕ್ಷೆಯಾಚಿಸುವುದಲ್ಲ, ಇದು ನಮ್ಮ ಸಂವಿಧಾನ ಹಕ್ಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ , ಜಿಪಂ ಸದಸ್ಯ ನ್ಯಾಯವಾದಿ ಕೆ. ಶ್ರೀಕಾಂತ್‌ ಹೇಳಿದರು.

Vijaya Karnataka 26 May 2018, 3:43 pm
ಕಾಸರಗೋಡು: ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನಲ್ಲಿ ಕನ್ನಡ ಅಳಿವು-ಉಳಿವು ಬಗ್ಗೆ ಸರಕಾರದ ಎದುರು ಶರಣಾಗತಿಯ ಪ್ರಶ್ನೆಯಿಲ್ಲ, ಕನ್ನಡಿಗರ ಹಕ್ಕಿಗಾಗಿ ಯಾರ ಮುಂದೆಯು ಭಿಕ್ಷೆಯಾಚಿಸುವುದಲ್ಲ, ಇದು ನಮ್ಮ ಸಂವಿಧಾನ ಹಕ್ಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ , ಜಿಪಂ ಸದಸ್ಯ ನ್ಯಾಯವಾದಿ ಕೆ. ಶ್ರೀಕಾಂತ್‌ ಹೇಳಿದರು.
Vijaya Karnataka Web gadinadu


ಅವರು ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲೆಯಾಳ ಭಾಷೆ ಕಲಿಕೆ ಕಡ್ಡಾಯಗೊಳಿಸಿರುವುದನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಕನ್ನಡ ಹೋರಾಟ ಸಮಿತಿ ಕಾಸರಗೋಡು ಇದರ ವತಿಯಿಂದ ನಗರದ ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ನಡೆಯುವ ಸರಣಿ ಸತ್ಯಾಗ್ರಹ ಹಾಗೂ ಸಹಿ ಸಂಗ್ರಹದ ಎರಡನೇ ದಿನವಾದ ಗುರುವಾರ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದರು.

ರಾಜಕೀಯವಾಗಿ ಕನ್ನಡಿಗರಿಂದ ಲಾಭ ಪಡೆಯುತ್ತಿರುವ ಜನಪ್ರತಿನಿಧಿಗಳು ಕನ್ನಡಿಗಿರುವಲ್ಲಿ ಬಂದು ಸಮಸ್ಯೆ ಪರಿಹಾರ ಕಂಡುಕೊಳ್ಳಲು ತಯಾರಾಗಬೇಕು. ಅದಕ್ಕಾಗಿರುವ ಕಿಚ್ಚು ಕನ್ನಡಿಗರಲ್ಲಿ ಜ್ವಲಂತವಾಗಿರಬೇಕು. ಅದಕ್ಕಾಗಿ ಒಗ್ಗಟ್ಟಾಬೇಕು ಎಂದರು.

ಭಾಷಾ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ದಿಯ ದೃಷ್ಟಿಯಲ್ಲಿ ಡಾ. ಪ್ರಭಾಕರನ್‌ ಆಯೋಗದ ವರದಿಯಲ್ಲೂ ಉಲ್ಲೇಖಿಸಲಾಗಿದೆ. ಅದಲ್ಲದೇ ಅನೇಕ ಸುತ್ತೋಲೆಗಳು ಕನ್ನಡಿಗರ ಪರ ಇದ್ದರೂ ಅದು ಕೇವಲ ಕಡತದಲ್ಲಿ ಮಾತ್ರ, ಅನುಷ್ಠಾನಗೊಳಿಸಲು ಸರಕಾರ ಮುಂದಾಗುವುದಿಲ್ಲ. ಆದರೆ ಪ್ರಾರಂಭಿಕ ಹಂತವೆಂಬಂತೆ ಕೇರಳ ಸರಕಾರ ಮಲೆಯಾಳ ಭಾಷೆ ಹೇರಿಕೆಯ ಮೂಲಕ ನಿಧನವಾಗಿ ಕನ್ನಡವನ್ನು ನಿರ್ನಾಮಗೊಳಿಸುವ ಹುನ್ನಾರ ಮಾಡುತ್ತಿದೆ. ಇದನ್ನು ಕನ್ನಡಿಗರು ಅರ್ಥೈಸಿಗೊಳ್ಳಬೇಕು. ಈ ಬಗ್ಗೆ ಭಾಷಾ ಅಲ್ಪಸಂಖ್ಯಾತರಿಗೆ ತಿಳುವಳಿಕೆ ನೀಡಬೇಕು. ಇದರ ವಿರುದ್ಧ ಹೋರಾಟ ಮುಂದುವರಿಯಬೇಕು ಎಂದರು.

ದ್ವಿತೀಯ ದಿನದ ಸರಣಿ ಸತ್ಯಾಗ್ರದಲ್ಲಿ ಎಂ.ಬಿ. ಮಹಾಲಿಂಗೇಶ್ವರ ಭಟ್‌ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಮಲೆಯಾಳ ಭಾಷೆ ಹೇರಿಕೆ ಮೂಲಕ ಒಂದು ಪ್ರದೇಶದ ಭಾಷೆಯ ನಿರ್ನಾಮದೊಂದಿಗೆ ಅಲ್ಲಿಯ ಸಂಸ್ಕೃತಿಯನ್ನೇ ನಾಶಪಡಿಸುವಂತಾಗುತ್ತದೆ. ಇದನ್ನು ಪ್ರತಿಭಟಿಸುವ ಛಲ ಕನ್ನಡಿಗರಿಗೆ ಇರಬೇಕು. ಕೇವಲ ಸಾಮಾಜಿಕ ತಾಣಗಳಲ್ಲಿಯೇ ಸಮಯ ಕಳೆಯುವ ಯುವಕರು ಸಂವಿಧಾನ ಬದ್ಧ ಹಕ್ಕಿಗಾಗಿ ಹೋರಾಟ ನಡೆಸಲು ಮುಂಚೂಣಿಯಲ್ಲಿರಬೇಕು. ಪ್ರಧಾನವಾಗಿ ಅಧ್ಯಾಪಕರು, ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಪ್ರತಿಭಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಸರಣಿ ಸತ್ಯಾಗ್ರಹದಲ್ಲಿ ಮಧೂರು ಗ್ರಾಪಂ ಉಪಾಧ್ಯಕ್ಷ ದಿವಾಕರ ಆಚಾರ್ಯ, ಪ್ರೊ. ಶ್ರೀಕೃಷ್ಣ ಭಟ್‌ ಅಡ್ವಾ. ಸದಾನಂದ ರೈ, ಕೌನ್ಸಿಲರ್‌ ಲತಾ, ಸವಿತಾ ಟೀಚರ್‌, ಡಾ. ಗಣಪತಿ ಭಟ್‌, ಟಿ. ಶಂಕರನಾರಾಯಣ ಭಟ್‌, ಅಬ್ದುಲ್‌ರಹಿಮಾನ್‌, ಉಮೇಶ ನಾೖಕ್‌, ತಾರಾನಾಥ ಮಧೂರು, ವಾಮನ ಬೇಕಲ್‌, ಡಾ.ಮಹೇಶ್ವರಿ, ಎಂ. ಪದ್ಮರಾಜ್‌, ವಿಶಾಲಾಕ್ಷ ಪುತ್ರಕಳ, ಹರೀಶ್‌ ಪೆರ್ಲ, ಕಾಸರಗೋಡು ಚಿನ್ನಾ, ಸತ್ಯನಾರಾಯಣ ಕೆ., ಸೀತಾರಾಮ ಕೆ., ಅಡ್ವಾ. ಬಾಲಕೃಷ್ಣ ಶೆಟ್ಟಿ, ರಾಧಾಕೃಷ್ಣ ಉಳಿಯತ್ತಡ್ಕ, ನಾರಾಯಣ ಭಟ್‌ ಬದಿಯಡ್ಕ, ಸತೀಶ್‌ ಕೂಡ್ಲು, ಅಧ್ಯಾಪಕರು, ವಿದ್ಯಾರ್ಥಿಗಳು, ಕನ್ನಡ ಹಿತೈಷಿಗಳು ಭಾಗವಹಿಸಿದರು.

ಆರಂಭದಲ್ಲಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಪ್ರಾಸ್ತಾವಿಸಿ ಕಾರ್ಯಕ್ರಮ ನಿರೂಪಿಸಿದರು. ವಾಮನ ಬೇಕಲ ವಂದಿಸಿದರು. ಸತ್ಯಾಗ್ರಹದ ಮೂರನೇ ದಿನವಾದ ಶುಕ್ರವಾರ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಶ್ರೀ ಯೋಗಾನಂದ ಸ್ವಾಮೀಜಿಯವರು ಭಾಗವಹಿಸುವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ