ಆ್ಯಪ್ನಗರ

ಗೋವುಗಳಿಗೆ ಶಿಸ್ತಿನ ಆಹಾರದಿಂದ ಆರೋಗ್ಯ: ಡಾ. ನಾಗರಾಜ್‌

ಗೋವುಗಳ ಆರೋಗ್ಯ ಅತ್ಯಂತ ಸಂಕೀರ್ಣವಾಗಿದ್ದು, ಅವುಗಳ ಆಹಾರ ಕ್ರಮ ಶಿಸ್ತಿನಿಂದ ಇರಬೇಕು...

Vijaya Karnataka 16 Jul 2019, 5:00 am
ಮುಳ್ಳೇರಿಯ: ಗೋವುಗಳ ಆರೋಗ್ಯ ಅತ್ಯಂತ ಸಂಕೀರ್ಣವಾಗಿದ್ದು, ಅವುಗಳ ಆಹಾರ ಕ್ರಮ ಶಿಸ್ತಿನಿಂದ ಇರಬೇಕು. ಬೇಕಾಬಿಟ್ಟಿಯಾಗಿ ಆಹಾರ ನೀಡುವುದರಿಂದ ಅಜೀರ್ಣದಂತಹಾ ಸಮಸ್ಯೆಗಳಿಂದ ಅವುಗಳ ಆರೋಗ್ಯ ಕೆಡುವ ಸಾಧ್ಯತೆ ಇದೆ. ಇದೀಗ ಚಾಲ್ತಿಯಲ್ಲಿರುವ ಗೋ ಸಮೃದ್ಧಿ ಪ್ಲಸ್‌ ವಿಮೆ ವ್ಯವಸ್ಥೆ ಅತ್ಯುತ್ತಮವಾಗಿದ್ದು, ನಬಾರ್ಡ್‌ ಸಹಕಾರದಲ್ಲಿ ಇನ್ನ್ನು ಅನೇಕ ಯೋಜನೆಗಳು ಅನುಷ್ಠಾನಗೊಂಡಿವೆ. ಅವುಗಳ ಮಾಹಿತಿಯು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಲಭ್ಯವಿದೆ ಎಂದು ಕಾಸರಗೋಡು ಜಿಲ್ಲಾ ವೆಟರ್ನರಿ ಸೆಂಟರ್‌ನ ಹಿರಿಯ ವೆಟರ್ನರಿ ಅಧಿಕಾರಿ ಡಾ. ನಾಗರಾಜ್‌ ಹೇಳಿದರು.
Vijaya Karnataka Web good health to cow by disciplined food
ಗೋವುಗಳಿಗೆ ಶಿಸ್ತಿನ ಆಹಾರದಿಂದ ಆರೋಗ್ಯ: ಡಾ. ನಾಗರಾಜ್‌


ಭಾನುವಾರ ಅಡೂರಿನ ವಿದ್ಯಾಭಾರತಿ ವಿದ್ಯಾಲಯದಲ್ಲಿ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ವತಿಯಿಂದ ನಡೆದ ಮಳೆಗಾಲದಲ್ಲಿ ದನಗಳ ಆರೋಗ್ಯ ಆರೈಕೆ ಹಾಗೂ ಹೈನುಗಾರರಿಗೆ ದೊರೆಯುವ ಸರಕಾರಿ ಸವವತ್ತುಗಳು ಎಂಬ ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿ ಮಾತನಾಡಿದರು.

ದನದ ಶರೀರದಲ್ಲಿ ಏಕಜೀವ ಕೋಶಗಳು ನಾಶವಾಗದಂತೆ ಸೂಕ್ತ ಮುಂಜಾಗ್ರತೆ ಕೈಗೊಳ್ಳಬೇಕು. ಈ ಕೋಶಗಳು ನಾಶವಾದರೆ ಬ್ಯಾಕ್ಟೀರಿಯಾಗಳು ದನದ ಶರೀರವನ್ನು ಪ್ರವೇಶಿಸಿ, ರೋಗಕಾರಕವಾಗುತ್ತವೆ. ಹೆಣ್ಣು ಕರುವಿಗೆ ಪೋಷಕಾಂಶ ನೀಡುವ ಉದ್ದೇಶದಿಂದ ಗೋವರ್ಧಿನಿ ಎಂಬ ಯೋಜನೆಯೂ ಚಾಲ್ತಿಯಲ್ಲಿದೆ. ಹಟ್ಟಿಯಿಂದ ಮಲಿನ ನೀರು ಸರಾಗವಾಗಿ ಹರಿದು ಹೋಗುವಂತೆ ಹಟ್ಟಿಯನ್ನು ನಿರ್ಮಿಸಬೇಕು. ಇದರಿಂದ ದನಗಳ ಕೆಚ್ಚಲು ರೋಗ, ಗೊರಸು ರೋಗವನ್ನು ನಿಯಂತ್ರಿಸಬಹುದು. ದನಗಳ ಹಟ್ಟಿಯ ಪರಿಸರದಲ್ಲಿ ಇತರ ಸಾಕುಪ್ರಾಣಿಗಳನ್ನು ಕಟ್ಟಬಾರದು. ಇದರಿಂದ ಅನೇಕ ರೋಗಗಳು ದನಗಳಿಗೆ ಹರಡುವ ಸಾಧ್ಯತೆ ಇದೆ. ಆರೋಗ್ಯ ಕೆಟ್ಟಾಗ ದನಗಳ ಹೊಟ್ಟೆ ಉಬ್ಬರಿಸಿದಂತಾಗಿ, ಮೆಲುಕು ಹಾಕುವುದನ್ನು ನಿಲ್ಲಿಸಿ ದನಗಳು ಮಲಗುತ್ತವೆ. ಆಗ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದರು.

ಸಭೆಯ ಅಧ್ಯಕ್ಷ ತೆಯನ್ನು ಸಂಘಟನೆಯ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷೆ ಸತ್ಯಪ್ರೇಮ ಭಾರಿತ್ತಾಯ, ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಜತೆ ಕಾರ್ಯದರ್ಶಿ ಪ್ರಕಾಶ್‌ ಪಾಂಙಣ್ಣಾಯ ಮೊದಲಾದವರು ಭಾಗವಹಿಸಿದ್ದರು.

ನಂತರ ನಡೆದ ಸಂವಾದದಲ್ಲಿ ಶಿವಳ್ಳಿ ಸಮುದಾಯದ ಅನೇಕ ಮಂದಿ ಹೈನುಗಾರರ ಸಮಸ್ಯೆಗಳಿಗೆ ಡಾ. ನಾಗರಾಜ್‌ ಸೂಕ್ತ ಪರಿಹಾರ ನೀಡಿ, ದನಗಳಿಗೆ ನೀಡಬಹುದಾದ ಅನೇಕ ತುರ್ತು ಚಿಕಿತ್ಸೆಗಳ ಮಾಹಿತಿ ನೀಡಿದರು.

ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಕಾರ್ಯದರ್ಶಿ ಪ್ರಶಾಂತ ರಾಜ್‌ ವಿ. ತಂತ್ರಿ ಸ್ವಾಗತಿಸಿದರು. ಮಾಲೆಂಕಿ ಅನಂತರಾಮ ಕಡಂಬಳಿತ್ತಾಯ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ