ಆ್ಯಪ್ನಗರ

ಶಬರಿಮಲೆ ದರ್ಶನ ಪಡೆದ ಶ್ರೀಲಂಕಾ ಮಹಿಳೆ

ಅಯ್ಯಪ್ಪ ಸ್ವಾಮಿ ವೇಷದಲ್ಲಿದ್ದ ಪೊಲೀಸರ ಸಹಾಯದಿಂದ ಶ್ರೀಲಂಕಾ ಮಹಿಳೆಯೊಬ್ಬರು ಗುರುವಾರ ರಾತ್ರಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.

Vijaya Karnataka 5 Jan 2019, 8:35 pm
ಶಬರಿಮಲೆ: ಅಯ್ಯಪ್ಪ ಸ್ವಾಮಿ ವೇಷದಲ್ಲಿದ್ದ ಪೊಲೀಸರ ಸಹಾಯದಿಂದ ಶ್ರೀಲಂಕಾ ಮಹಿಳೆಯೊಬ್ಬರು ಗುರುವಾರ ರಾತ್ರಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.
Vijaya Karnataka Web lanka woman shabarimale darshana
ಶಬರಿಮಲೆ ದರ್ಶನ ಪಡೆದ ಶ್ರೀಲಂಕಾ ಮಹಿಳೆ


ಗುರುವಾರ ರಾತ್ರಿ ಗರ್ಭಗುಡಿ ಮುಚ್ಚುವ ಸ್ವಲ್ಪ ಮೊದಲು ಶ್ರೀಲಂಕಾದ ಮಹಿಳೆಯನ್ನು ಗೌಪ್ಯವಾಗಿ ಶಬರಿಮಲೆ ಸನ್ನಿಧಾನದ 18 ಮೆಟ್ಟಿಲು ಬಳಿಗೆ ಪೊಲೀಸರು ತಲುಪಿಸಿದದಾರೆ. ಶಬರಿಮಲೆ ಪ್ರವೇಶ ಮಾಡಿಲ್ಲ ಎಂಬ ಬಗ್ಗೆ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಸಿಸಿಟಿವಿ ದೃಶ್ಯವನ್ನು ಹೊರ ಬಿಡಲಾಯಿತು.

ಶ್ರೀಲಂಕಾದ ಮಹಿಳೆಯ ಜತೆ ಅಯ್ಯಪ್ಪ ವೇಷದಲ್ಲಿ ಇಬ್ಬರು ತೆರಳುತ್ತಿರುವುದನ್ನು ಖಾಸಗಿ ಚಾನೆಲ್‌ ಸೆರೆ ಹಿಡಿದಾಗ ಮುಖ ಮರೆ ಮಾಡಿಕೊಂಡು ಸನ್ನಿಧಾನದಿಂದ ಕಾಲ್ಕಿತ್ತರು. ಪೊಲೀಸರು ಮಾರುವೇಷದಲ್ಲಿ ಅಯ್ಯಪ್ಪ ವ್ರತಧಾರಿಯಾಗಿ ಮಹಿಳೆಯ ಪ್ರವೇಶಕ್ಕೆ ಸಹಾಯ ಮಾಡುವುದಕ್ಕಾಗಿ ಪೊಲೀಸರನ್ನು ಕೇರಳ ಸರಕಾರ ನೇಮಿಸಿದೆ.

ಶ್ರೀಲಂಕಾ ಮೂಲದ 47 ವರ್ಷದ ಶಶಿಕಲಾ ಎಂಬಾಕೆಯೊಂದಿಗೆ ಆಕೆಯ ಪತಿ ಶರವಣ ಮಾರನ್‌ ಹಾಗೂ ಪುತ್ರ ಇದ್ದರು. ಪಂಪಾದಿಂದಲೇ ಮಾರುವೇಷದಲ್ಲಿ ಪೊಲೀಸರು ಅವರೊಂದಿಗಿದ್ದರು. ಮರಕ್ಕೂಟಂನಲ್ಲಿ ಮಾಧ್ಯಮದ ಕ್ಯಾಮೆರಾದಲ್ಲಿ ಸೆರೆ ಹಿಡಿದಾಗ ದರ್ಶನ ಪಡೆಯದೇ ಹಿಂತಿರುಗಿರುವುದಾಗಿ ತಿಳಿಸಿದ್ದರು. ಬಳಿಕವಷ್ಟೇ ಸಿಸಿ ಕ್ಯಾಮೆರಾದಲ್ಲಿ ಶಶಿಕಲಾ 18 ಮೆಟ್ಟಿಲಿನ ಮೂಲಕ ಪ್ರವೇಶಿಸಿ ದರ್ಶನ ಪಡೆದಿರುವುದನ್ನು ಖಚಿತಪಡಿಸಿದ್ದರು. ಅಲ್ಲದೇ ಕೇರಳ ಸರಕಾರ ಕೂಡ ಆಕೆ ಅಯ್ಯಪ್ಪನ ದರ್ಶನ ಪಡೆದಿರುವುದಾಗಿ ತಿಳಿಸಿದೆ.

ಪೊಲೀಸರು ಹಾಗೂ ಶಶಿಕಲಾ ಅವರು ಭದ್ರತೆ ದೃಷ್ಟಿಯಿಂದ ಈ ವಿಷಯ ಬಹಿರಂಗಪಡಿಸಿರಲಿಲ್ಲ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿಕಲಾ, ತಾನು 47 ದಿನಗಳ ವ್ರತಾನುಷ್ಠಾನದೊಂದಿಗೆ ಶಬರಿಮಲೆ ಸಹಿತ ಹಲವು ಕ್ಷೇತ್ರಗಳಿಗೆ ತೆರಳುವ ಸಲುವಾಗಿ ಆಗಮಿಸಿರುವುದಾಗಿ ತಿಳಿಸಿದ್ದರು.

ಈ ಮಧ್ಯೆ ಪೊಲೀಸರಲ್ಲಿ ತಾನು ಗರ್ಭಾಶಯ ಶಸ್ತ್ರ ಚಿಕಿತ್ಸೆಗೊಳಗಾಗಿರುವುದಾಗಿ ತಿಳಿಸಿದ್ದರೆನ್ನಲಾಗಿದೆ. ದರ್ಶನ ಪಡೆದ ಬಳಿಕ ಆ ಮಹಿಳೆ ಪೊಲೀಸ್‌ ಭದ್ರತೆಯಲ್ಲೇ ಹಿಂತಿರುಗಿದ್ದರು. ಬುಧವಾರ ಬಿಂದು, ಕನಕದುರ್ಗ ಎಂಬಿಬ್ಬರು ಮಹಿಳೆಯರು ಅಯ್ಯಪ್ಪ ದರ್ಶನ ಪಡೆದಿದ್ದು, ಬಳಿಕ ಸನ್ನಿಧಾನದಲ್ಲಿ ಶುದ್ಧೀಕರಣ ಕ್ರಿಯೆ ನಡೆದಿತ್ತಲ್ಲದೆ, ಕೇರಳ ರಾಜ್ಯಾದ್ಯಂತ ಪ್ರತಿಭಟನೆ ನಡೆದು ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು.

ಶುಕ್ರವಾರ ಟ್ರಾನ್ಸ್‌ಜೆಂಡರ್‌ ವ್ಯಕ್ತಿಯೊಬ್ಬರು ಶಬರಿಮಲೆ ದರ್ಶನಕ್ಕಾಗಿ ಪಂಪಾ ಬಳಿ ಬಂದರೂ ಅಯ್ಯಪ್ಪ ಭಕ್ತರ ವಿರೋಧದ ಹಿನ್ನೆಲೆಯಲ್ಲಿ ಹಿಂತಿರುಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ