ಆ್ಯಪ್ನಗರ

ಮಾಂಸದಂಗಡಿಯ ನವಿಲು ಕವಿತಾ ಸಂಕಲನ ವಿಮರ್ಶೆ

ತನ್ನೊಳಗಿನ ಅಸೂಯೆ, ದ್ವೇಷ, ಕೊರಗುಗಳ ವಿರುದ್ದ ಧ್ವನಿ ಎತ್ತದಿದ್ದರೆ ಕವಿ ಕವಿಯಾಗಲಾರ ಎಂದು ಉಜಿರೆ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ, ವಿಮರ್ಶಕ ಡಾ.ರಾಜಶೇಖರ ಹಳೇಮನೆ ಹೇಳಿದರು.

Vijaya Karnataka 25 Jun 2019, 5:00 am
ಮಂಜೇಶ್ವರ: ತನ್ನೊಳಗಿನ ಅಸೂಯೆ, ದ್ವೇಷ, ಕೊರಗುಗಳ ವಿರುದ್ದ ಧ್ವನಿ ಎತ್ತದಿದ್ದರೆ ಕವಿ ಕವಿಯಾಗಲಾರ. ಪರಂಪರೆಯಿಂದ ಹೊರತಾದ ಬರಹಗಳಿಂದ ಕವಿತ್ವ ಸಿದ್ದಿಸುವುದಿಲ್ಲ. ದಲಿತ ಚಳವಳಿಗಳು ಏನು ಮಾಡಬೇಕಿತ್ತೋ ಅದರಿಂದ ಹೊರತಾಗಿ ಅಡ್ಡದಾರಿಗಳನ್ನು ಹಿಡಿದಾಗ ಅದರೊಳಗೆ ಇದ್ದು ಧ್ವನಿಯೆತ್ತಿದ ಮಹಾನ್‌ ಕವಿಯಾದ ಎನ್ಕೆ ಹನುಮಂತಯ್ಯರ ಬರಹದಂತೆಯೇ ಬದುಕೂ ಸಂಘರ್ಷದೊಂದಿಗೆ ಅವನತಿಗೊಂಡದ್ದು ದುರಂತ ಎಂದು ಉಜಿರೆ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ, ವಿಮರ್ಶಕ ಡಾ.ರಾಜಶೇಖರ ಹಳೇಮನೆ ಹೇಳಿದರು.
Vijaya Karnataka Web mamsadangadiya navilu kavana sankalana vimarshe
ಮಾಂಸದಂಗಡಿಯ ನವಿಲು ಕವಿತಾ ಸಂಕಲನ ವಿಮರ್ಶೆ


ತಲಪಾಡಿ ಬಳಿಯ ಕಣ್ವತೀರ್ಥದಲ್ಲಿರುವ ಮೂಡುಬಿದಿರೆ ಆಳ್ವಾಸ್‌ ವಿದ್ಯಾಸಂಸ್ಥೆಯ ಪ್ರಾದ್ಯಾಪಕ, ಸಾಹಿತಿ ಟಿ.ಎ.ಎನ್‌.ಖಂಡಿಗೆ ಅವರ ಸ್ವಗೃಹದಲ್ಲಿ ಆಯೋಜಿಸುತ್ತಿರುವ ಸರಣಿ ಕೃತಿ ವಿಮರ್ಶೆಯ 8ನೇ ಕಾರ್ಯಕ್ರಮದಲ್ಲಿ ದಿ.ಎನ್ಕೆ. ಹನುಮಂತಯ್ಯ ಅವರ ಮಾಂಸದಂಗಡಿಯ ನವಿಲು ಕವಿತಾ ಸಂಕಲನದ ವಿಮರ್ಶೆ ಸಂವಾದದಲ್ಲಿ ಮಾತನಾಡಿದರು.

ಲೋಕವನ್ನು ಕರುಣೆಯಿಂದ ನೋಡುವ ಕಲೆಯನ್ನು ಅರಗಿಸಿಕೊಂಡಿದ್ದ ಹನುಮಂತಯ್ಯನವರ ಬರಹಗಳು ತೀವ್ರ ಒಳನೋಟಗಳ ಸಂವೇದನೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸಿದೆ. ಅವರ ಬರಹಗಳ ಸತ್ಯದಂತೆ ನಡವಳಿಕೆಗಳೂ ಉತ್ಕೃಷ್ಟವಾಗಿತ್ತು. 20ನೇ ಶತಮಾನದ ಕೊನೆಯ ದಶಕದಲ್ಲಿ ಭಾರತಕ್ಕೆ ಕಾಲಿರಿಸಿದ ಜಾಗತೀಕರಣದಿಂದ ಹುಟ್ಟಿದ ಹೊಸ ಆರ್ಥಿಕ ನೀತಿ, ವ್ಯಾಪಾರೀಕರಣ ಇಲ್ಲಿಯ ಪರಂಪರೆಯನ್ನು ನಾಶಗೊಳಿಸಿತು. ಈ ವಿದ್ಯಮಾನಗಳ ಪರಿಣಾಮಗಳನ್ನು ಸ್ವತಃ ಅನುಭವಿಸಿ ರೂಪಕಗಳ ಮೂಲಕ ಕವಿತೆಗಳಲ್ಲಿ ಅಭಿವ್ಯಕ್ತಿಸಿದ ಹನುಮಂತಯ್ಯ ಕವಿತೆಯೊಂದರ ಹುಟ್ಟು ಮಿಂಚಿನ ಅಪ್ಪ್ಪುಗೆಯಂತೆ ಎಂದು ನಂಬಿದವರು ಎಂದರು.

ಟಿ.ಎ.ಎನ್‌.ಖಂಡಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಸುಂದರ ಸಮಾಜ ಸೃಷ್ಟಿಯಲ್ಲಿ ಕೈದೀವಿಗೆಗಳಾಗಿ ಮುನ್ನಡೆಸುವ ಸಾಹಿತ್ಯ ಬರಹಗಳ ಗಂಭೀರ ಚಿಂತನೆಗಳು ಇಂದು ಕುಸಿದಿರುವುದರಿಂದ ದ್ವೀಪಗಳಂತೆ ಮನುಷ್ಯ ಜೀವನ ಕರಾಳತೆಯತ್ತ ಕುಸಿಯುವ ಭೀತಿ ಇದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕ ಸಾಹಿತ್ಯ ಪ್ರೇಮಿಗಳು ಅಕ್ಷ ರ ಲೋಕದ ಬೆಳಕನ್ನು ಕತ್ತಲೆಯತ್ತ ಬೀರುವ ಯತ್ನಗಳನ್ನು ಬಲಪಡಿಸಬೇಕು. ಕನ್ನಡ ತಾಯ್ನೆಲದ ಮಣ್ಣಿನ ಋುಣವನ್ನು ಸಾಹಿತ್ಯ ಸೇವೆಯ ಕಿರು ಯತ್ನದ ಮೂಲಕ ಸಲ್ಲಿಸಿದ ಹೆಮ್ಮೆ ಕೃತಿ ವಿಮರ್ಶೆಯ ಸರಣಿ ಕಾರ್ಯಕ್ರಮಗಳ ಮೂಲಕ ಸಾಧಿಸಲಾಗಿದೆ. ಮನೆ ಮನಗಳಲ್ಲಿ ಇಂತಹ ತಿದಿ ಎಚ್ಚರಗೊಳಿಸಬೇಕು ಎಂದರು.

ಡಾ.ವಿಜಯಕುಮಾರ್‌, ಶಂಭು ನಂಬೂದಿರಿ, ಸದಾನಂದ ನಾರಾವಿ, ಮೊಹಮ್ಮದ್‌ ಮೂಡುಬಿದಿರೆ, ಈಶ್ವರ ಮಾಸ್ತರ್‌, ನಿರುಪಮಾ, ಕೃಷ್ಣಪ್ಪ ಪೂಜಾರಿ, ನಾರಾಯಣ ಮತ್ತಿತರರು ಉಪಸ್ಥಿತರಿದ್ದು ಸಂವಾದದಲ್ಲಿ ಭಾಗವಹಿಸಿದರು. ಕವಿತಾ ಖಂಡಿಗೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ