ಆ್ಯಪ್ನಗರ

ರಸ್ತೆ ಬದಿ ತ್ಯಾಜ್ಯ ಎಸೆತ: ಪರಿಹಾರ ಕಾಣದ ಸಮಸ್ಯೆ

ಜನ ಸಂಚಾರ ಕಡಿಮೆ ಇರುವ ಕಾಡು ತುಂಬಿದ ಪ್ರದೇಶಗಳಲ್ಲಿ ರಸ್ತೆ ಹಾಗೂ ರಸ್ತೆ ಬದಿಯಲ್ಲಿ ಕಸಾಯಿಖಾನೆಗಳ ತ್ಯಾಜ್ಯಗಳನ್ನು ಎಸೆಯುವುದು ಭಾರಿ ಸಮಸ್ಯೆಯಾಗುತ್ತಿದೆ.

Vijaya Karnataka 26 May 2019, 3:15 pm
ಮುಳ್ಳೇರಿಯ: ಜನ ಸಂಚಾರ ಕಡಿಮೆ ಇರುವ ಕಾಡು ತುಂಬಿದ ಪ್ರದೇಶಗಳಲ್ಲಿ ರಸ್ತೆ ಹಾಗೂ ರಸ್ತೆ ಬದಿಯಲ್ಲಿ ಕಸಾಯಿಖಾನೆಗಳ ತ್ಯಾಜ್ಯಗಳನ್ನು ಎಸೆಯುವುದು ಭಾರಿ ಸಮಸ್ಯೆಯಾಗುತ್ತಿದೆ.
Vijaya Karnataka Web roadside wastage throw problem not solved
ರಸ್ತೆ ಬದಿ ತ್ಯಾಜ್ಯ ಎಸೆತ: ಪರಿಹಾರ ಕಾಣದ ಸಮಸ್ಯೆ


ರಾತ್ರಿ ವೇಳೆ ಗೋಣಿಗಳಲ್ಲಿ ತುಂಬಿಸಿದ ತ್ಯಾಜ್ಯಗಳನ್ನು ವಾಹನಗಳಲ್ಲಿ ಹೇರಿ ಕಂಡ ಕಂಡಲ್ಲಿ ಎಸೆಯುತ್ತಿರುವುದು. ಕಸಾಯಿಖಾನೆಗಳ ಕೋಳಿ, ಜಾನುವಾರು, ಇನ್ನಿತರ ಪ್ರಾಣಿಗಳ ತ್ಯಾಜ್ಯಗಳು, ಆಹಾರ ಸೇವಿಸಿದ ಬಿಸಾಡಿದ ಎಂಜಲು ಪದಾರ್ಥಗಳು, ಪ್ಲಾಸ್ಟಿಕ್‌ ವಸ್ತು ಮತ್ತಿತರೆ ವಸ್ತುಗಳು ತುಂಬಿದ ಗೋಣಿ ಚೀಲಗಳು ಬೆಳಗಾಗುವಾಗ ಅಲ್ಲಲ್ಲಿ ಬಿದ್ದುಕೊಂಡಿರುತ್ತವೆ. ಚೆರ್ಕಳ-ಜಾಲ್ಸೂರು ಪ್ರಧಾನ ರಸ್ತೆಯಲ್ಲಿ, ಬೋವಿಕ್ಕಾನ ಸಮೀಪದ ಬೇಪ್ಪ್‌-ಪುದಿಯಕಂಡ ರಸ್ತೆಯು ಹಾದುಹೋಗುವ ವನ ಪ್ರದೇಶಗಳಲ್ಲಿ ಇಂತಹ ರಾಶಿ ಸಾಮಾನ್ಯವಾಗುತ್ತಿದೆ.

ಬೇಪ್ಪ್‌-ಪುದಿಯಕಂಡ ರಸ್ತೆ ಪ್ರದೇಶದಲ್ಲಿ ಕಸಾಯಿಖಾನೆಯ ತ್ಯಾಜ್ಯಗಳನ್ನು ಲಾರಿಗಳಲ್ಲಿ ತಂದು ಸುರಿಯುತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ. ಮುಳಿಯಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಕಸಾಯಿಖಾನೆಗಳೇ ಇಲ್ಲದ ಕಾರಣ ಹೊರಗಿನಿಂದ ತಂದು ಸುರಿಯುತ್ತಿರಬೇಕು. ಈ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ , ಅರಣ್ಯ ಇಲಾಖೆಯ ಉದ್ಯೋಗಿಗಳು ಆಗಮಿಸಿ ಜೆಸಿಬಿಯ ಸಹಾಯದಿಂದ ಹೊಂಡ ತೋಡಿ ಈ ತ್ಯಾಜ್ಯವನ್ನು ಹಾಕಿ ಮಣ್ಣು ಮುಚ್ಚಿದರು. ಆದೂರು ಠಾಣೆ ಸಿಬ್ಬಂದಿ ಸಹ ಪರಿಶೀಲನೆ ನಡೆಸಿದ್ದರು. ಬೋವಿಕ್ಕಾನದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರೂ ಈ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ.

ನಿಯಮ ಪ್ರಕಾರ ಕಸಾಯಿಖಾನೆಗಳನ್ನು ತೆರೆಯಲು ಮಾಲಿನ್ಯ ಸಂಸ್ಕರಣೆಗೆ ಅಗತ್ಯ ವ್ಯವಸ್ಥೆ ಮಾಡಿ ಕೊಂಡಿರಬೇಕು. ಆದರೆ, ಗ್ರಾ.ಪಂ.ಗಳು ಈ ವ್ಯವಸ್ಥೆ ಇಲ್ಲದಿದ್ದರೂ ಅನುಮತಿ ನೀಡುತ್ತಿರುವ ಪರಿಣಾಮವಾಗಿ ತ್ಯಾಜ್ಯಗಳನ್ನು ಅಲ್ಲಲ್ಲಿ ಎಸೆಯಲಾಗುತ್ತಿದೆ. ಆರೋಗ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಸಂಸ್ಥೆಯು ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ಪರವಾನಗಿ ನೀಡಬೇಕಾಗಿದೆ. ಕೋಳಿ ಅಂಗಡಿಗಳಾಗಲೀ ಕೇವಲ ಸಂಗ್ರಹ ಮತ್ತು ಮಾರಾಟ ಎಂಬ ಹೆಸರಿನಲ್ಲಿ ಪರವಾನಗಿ ಪಡೆಯುತ್ತಾರೆ. ಅಂದರೆ, ಜೀವಂತ ಕೋಳಿಯ ಮಾರಾಟಕ್ಕೆ ಅವಕಾಶ. ಆದರೆ, ಇಲ್ಲಿ ಮಾಂಸದ ಮಾರಾಟ ಕಣ್ಣೆದುರೇ ನಡೆಯುತ್ತದೆ. ವಿಷಯ ತಿಳಿದರೂ ಅಧಿಕೃತರು ಕಣ್ಣುಮುಚ್ಚಿ ಸುಮ್ಮನಿರುತ್ತಾರೆ. ಇಂತಹ ಅಂಗಡಿಗಳವರು ತ್ಯಾಜ್ಯಗಳನ್ನು ಗೋಣಿಗಳಲ್ಲಿ ತುಂಬಿಸಿ ವಾಹನಗಳ ಮೂಲಕ ಸಾಗಿಸಿ ತಮಗೆ ತೋಚಿದಲ್ಲಿ ಬಿಸಾಡುತ್ತಿದ್ದಾರೆ.

ತ್ಯಾಜ್ಯಗಳನ್ನು ನಾನಾ ಕಡೆಗಳಿಂದ ಲಾರಿಗಳಲ್ಲಿ ಸಂಗ್ರಹಿಸಿ ಅವನ್ನು ಅಲ್ಲಲ್ಲಿ ಎಸೆದು ಹಣ ಮಾಡುವವರೂ ಇದ್ದಾರೆ. ಇದರಿಂದ ಸಾವಿರಗಟ್ಟಲೆ ಸಂಪಾದನೆಯಾಗುತ್ತದೆ. ಇತ್ತೀಚೆಗೆ ಬೆಳ್ಳೂರಿನಿಂದ ಸೆರೆ ಹಿಡಿಯಲ್ಪಟ್ಟ ತ್ಯಾಜ್ಯ ಎಸೆಯುವ ತಂಡದಿಂದ ಸಾಕಷ್ಟು ಮಾಹಿತಿ ಲಭಿಸಿದೆ. ಹತ್ತಾರು ವಾಹನಗಳು ಈ ರೀತಿಯಲ್ಲಿ ತ್ಯಾಜ್ಯ ಸಂಗ್ರಹಣೆಗಾಗಿ ಓಡಾಟ ನಡೆಸುತ್ತಿವೆ. ಆದರೆ, ಈ ತ್ಯಾಜ್ಯಗಳನ್ನು ಏನು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಇವರು ಅಧಿಕೃತರ ಸೆರೆಗೆ ಬಿದ್ದರೂ ನಷ್ಟಕ್ಕೆ ಭಯಪಡುವುದಿಲ್ಲ. ಅಷ್ಟೂ ಲಾಭದ ವ್ಯವಹಾರದಲ್ಲಿ ಒಂದಷ್ಟು ಹಣವನ್ನು ನೀಡಲು ಸಿದ್ಧರಾಗಿಯೇ ವ್ಯವಹಾರ ಮಾಡುತ್ತಾರೆ.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಅಗತ್ಯವಾಗಿದೆ. ತಪ್ಪು ಎಸಗುವ ಮಂದಿಗೆ ಕಠಿಣ ಶಿಕ್ಷೆ ನೀಡಬೇಕಾಗಿದೆ. ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ತ್ಯಾಜ್ಯವು ಜನರನ್ನು ಮೂಗು ಮುಚ್ಚಿಸುತ್ತದೆ. ಗ್ರಾ.ಪಂ. ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ