ಆ್ಯಪ್ನಗರ

ಸತ್ಕರ್ಮಗಳಿಂದ ಮನೆ, ಮನ ಪರಿವರ್ತನೆ: ಮಾಣಿಲ ಶ್ರೀ

ಒಂದು ತರವಾಡು ಮನೆಯನ್ನು ನಿರ್ಮಿಸುವುದು ಸುಲಭವಾಗಿದೆ. ಆದರೆ ಅದನ್ನು ಉಳಿಸುವ ಮಹತ್ತರವಾದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸತ್ಕರ್ಮಗಳಿಂದ ಮನೆ, ಮನ ಪರಿವರ್ತನೆಯನ್ನು ಕಾಣುತ್ತದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

Vijaya Karnataka 18 Apr 2019, 5:00 am
ಬದಿಯಡ್ಕ: ಒಂದು ತರವಾಡು ಮನೆಯನ್ನು ನಿರ್ಮಿಸುವುದು ಸುಲಭವಾಗಿದೆ. ಆದರೆ ಅದನ್ನು ಉಳಿಸುವ ಮಹತ್ತರವಾದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸತ್ಕರ್ಮಗಳಿಂದ ಮನೆ, ಮನ ಪರಿವರ್ತನೆಯನ್ನು ಕಾಣುತ್ತದೆ ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
Vijaya Karnataka Web satkarmaglinda mana mane parivarthane manila shree
ಸತ್ಕರ್ಮಗಳಿಂದ ಮನೆ, ಮನ ಪರಿವರ್ತನೆ: ಮಾಣಿಲ ಶ್ರೀ


ಬುಧವಾರ ಪಳ್ಳತ್ತಡ್ಕ ಕರಿಪ್ಪಾಡಗಂ ತರವಾಡು ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೃತ್ಯೋತ್ಸವ ಕಾರ್ಯಕ್ರಮದ ಎರಡನೇ ದಿನ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ನಮ್ಮ ಕರ್ಮಗಳ ಅಪವಿತ್ರತೆ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ಪ್ರಭಾವ ಬೀರುತ್ತದೆ. ಮದುವೆ ಮುಂತಾದ ಮಂಗಳ ಕಾರ್ಯಕ್ರಮಗಳಲ್ಲಿ ಅಮಂಗಳ ವಿಚಾರಗಳನ್ನು ತುರುಕಿಸುವುದರಿಂದ ಒಳ್ಳೆಯತನವು ಹಾಳಾಗುತ್ತದೆ. ಮಾತೆಯರು ಕೈಬಳೆ, ಹೂ ಮುಡಿದು, ಅರಸಿನ ಕುಂಕುಮಗಳಿಂದ ಮುತ್ತೈದೆಯಾಗಿ ಸದಾ ಇರಬೇಕು. ಅದು ಮನುಷ್ಯ ಜೀವನದ ಬಹು ದೊಡ್ಡ ಸಂಪತ್ತಾಗಿದೆ. ಪಳ್ಳತ್ತಡ್ಕವೆಂಬುದು ಧಾರ್ಮಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ದೈವಿಕ ಹಿನ್ನೆಲೆಯುಳ್ಳ ಪ್ರಬಲ ಶಕ್ತಿಕೇಂದ್ರವಾಗಿದೆ. ನಮ್ಮ ಆಚರಣೆಗಳನ್ನು ಉಳಿಸುವಲ್ಲಿ ನಾವು ಸದಾ ಕಾರ್ಯಪ್ರವೃತ್ತರಾಗಬೇಕು ಎಂದ ಸ್ವಾಮೀಜಿಯರು ಮತದಾನದ ಹಕ್ಕನ್ನು ಎಲ್ಲರೂ ತಪ್ಪದೆ ಚಲಾಯಿಸುವ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ನಾವೆಲ್ಲ ಪಣತೊಡಬೇಕಾಗಿದೆ ಎಂದು ಹೇಳಿದರು.

ಯಾದವ ಸಭಾ ಕಾಸರಗೋಡು ತಾಲೂಕು ಅಧ್ಯಕ್ಷ ನಾರಾಯಣ ಮಣಿಯಾಣಿ ನೀರ್ಚಾಲು ಸಭೆಯ ಅಧ್ಯಕ್ಷ ತೆಯನ್ನು ವಹಿಸಿದ್ದರು. ಇಂದು ಅನೇಕ ತರವಾಡುಗಳು ಜೀರ್ಣೋದ್ಧಾರಗೊಂಡು ಉತ್ತಮ ಸ್ಥಿತಿಗೆ ಬಂದಿರುವುದು ಸಂತಸದ ವಿಚಾರವಾಗಿದೆ. ನಮ್ಮ ಆಚಾರ ಸಂಸ್ಕಾರಗಳನ್ನು ಸಮರ್ಪಕವಾಗಿ ಮುಂದುವರಿಸಿಕೊಂಡು ಹೋಗದಿರುವ ಪರಿಣಾಮದಿಂದಾಗಿ ಅನೇಕ ತರವಾಡುಗಳು ನಶಿಸಿಹೋಗಿವೆ. ಆದರೆ ಇಂದು ಸಮುದಾಯದವರು ಸಂಘಟಿತರಾಗಿ ತಮ್ಮ ತರವಾಡಿನ ಬಗ್ಗೆ ಆಭಿಮಾನ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ. ಸಾಧಿಸಬೇಕೆಂಬ ಛಲವಿದ್ದರೆ ಅದು ಶೀಘ್ರದಲ್ಲಿ ನೆರವೇರುತ್ತದೆ ಎಂಬುದಕ್ಕೆ ಇಲ್ಲಿನ ತರವಾಡು ಸಾಕ್ಷಿಯಾಗಿದೆ ಎಂದು ಹೇಳಿದರು.

ಕೇರಳ ಕ್ಷೇತ್ರ ಆಚಾರ ಸಂರಕ್ಷ ಣಾ ಸಮಿತಿ ರಾಜ್ಯ ಉಪಾಧ್ಯಕ್ಷ ಪ್ರಭಾಷಣ ರತ್ನಂ ಮಾಧವನ್‌ ಮಾಸ್ತರ್‌ ಪಯ್ಯಾವೂರು ಧಾರ್ಮಿಕ ಭಾಷಣ ಮಾಡಿದರು. ಬದಿಯಡ್ಕ ಗ್ರಾಪಂ ಸದಸ್ಯರಾದ ಪ್ರಸನ್ನ ಕುಮಾರಿ, ಪುಷ್ಪ ಕುಮಾರಿ, ಲಕ್ಷ್ಮೀನಾರಾಯಣ ಪೈ, ಪಳ್ಳತ್ತಡ್ಕ ಒತ್ತೆಕೋಲ ಸಮಿತಿ ಅಧ್ಯಕ್ಷ ಉದಯಕೇಶವ ಭಟ್‌, ರಾಮ ಮಾಸ್ಟರ್‌ ಇಕ್ಕೇರಿ, ಶಿವಪ್ರಸಾದ ರೈ, ಗೋಪಾಲನ್‌ ಕೀಕ್ಕಾನ, ಅಣ್ಣು ನಾಯ್ಕ, ಉಷಾ ರಾಮನ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಾಧವ ಚೆಟ್ಟಿಯಾರ್‌ ಉಪಸ್ಥಿತರಿದ್ದರು. ಬದಿಯಡ್ಕ ಗ್ರಾಪಂ ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗೋಪಾಲನ್‌ ಇರಿಯಣ್ಣಿ ಸ್ವಾಗತಿಸಿ, ಕುಂಞಿರಾಮ ಮಾಸ್ಟರ್‌ ಬೆಳೇರಿ ವಂದಿಸಿದರು. ಇದೇ ಸಂದರ್ಭದಲ್ಲಿ ಮಾಧವ ಚೆಟ್ಟಿಯಾರ್‌, ಚಂದ್ರನ್‌ ಪಳ್ಳತ್ತಡ್ಕ, ಮಾಲಿಂಗ ಮಣಿಯಾಣಿ ಪಳ್ಳತ್ತಡ್ಕ, ರಮಣಿ, ಗೋಕುಲಾಕ್ಷಿ ಮತ್ತಿತರರನ್ನು ಶ್ರೀಗಳು ಆಶೀರ್ವದಿಸಿದರು.

ಬೆಳಗ್ಗೆ ಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಮಿಥುನ ಲಗ್ನದಲ್ಲಿ ನಾಗಪ್ರತಿಷ್ಠೆ, ವಿಷ್ಣುಮೂರ್ತಿ, ಧರ್ಮದೈವ ಪನ್ನಿಕೊಳತ್ತಿ ಚಾಮುಂಡಿ, ಕೊರತ್ತಿಯಮ್ಮ, ರಕ್ತೇಶ್ವರಿ, ಗುಳಿಗ ಪ್ರತಿಷ್ಠೆ ಹಾಗೂ ಪಂಜುರ್ಲಿ, ಕಲ್ಲುರ್ಟಿ ತಂಬಿಲ, ಬ್ರಹ್ಮಕಲಶಾಭಿಷೇಕ, ಮಹಾ ಪೂಜೆ ವಿಜೃಂಭಣೆಯಿಂದ ಜರುಗಿತು. ಮಧ್ಯಾಹ್ನ ಶ್ರೀ ವೆಂಕಟರಮಣ ದೇವರಿಗೆ ಪಾನಕ ಪೂಜೆ, ಅನ್ನದಾನ ನಡೆಯಿತು.

ಏ. 18ರಂದು ಸಂಜೆ 6.30ಕ್ಕೆ ಪಳ್ಳತ್ತಡ್ಕವಯನಾಟು ಕುಲವನ್‌ ವಿಷ್ಣುಮೂರ್ತಿ ಕ್ಷೇತ್ರದಿಂದ ಭಂಡಾರ ಹೊರಡುವುದು, 7 ಗಂಟೆಗೆ ತೈಯ್ಯಂ ಕೂಡಲ್‌, 7.30ಕ್ಕೆ ವಿಷ್ಣುಮೂರ್ತಿ, ಕೊರತ್ತಿಯಮ್ಮ , ಮಾಣಿಚ್ಚಿ , ಬಬ್ಬರ್ಯ, ಧೂಮಾವತಿ, ಪನ್ನಿಕೊಳತ್ತಿ ಚಾಮುಂಡಿ ಗುಳಿಗ ದೈವಗಳ ತೊಡಂಙಲ್‌, 8 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಅನಂತರ ಅನ್ನಸಂತರ್ಪಣೆ, ರಾತ್ರಿ 10ಕ್ಕೆ ಕೊರತ್ತಿಯಮ್ಮನ ಕೋಲ, 1ರಿಂದ ಬಬ್ಬರ್ಯ ಮಾಣಿಚ್ಚಿ ದೈವ ಕೋಲ, 19ರಂದು ಬೆಳಗ್ಗೆ 6ಕ್ಕೆ ಧೂಮಾವತಿ ಕೋಲ, 11 ರಿಂದ ಪನ್ನಿಕೊಳತ್ತಿ ಚಾಮುಂಡಿ ಕೋಲ, 1ರಿಂದ ಅನ್ನಸಂತರ್ಪಣೆ, 3ಕ್ಕೆ ಗುಳಿಗ ದೈವ ಕೋಲ, ನಂತರ ಗುಳಿಗ ವನಕ್ಕೆ ಹೊರಡುವುದು, ಸಂಜೆ 5.30ಕ್ಕೆ ಭಂಡಾರ ನಿರ್ಗಮನ ಕಾರ್ಯಕ್ರಮಗಳು ನಡೆಯಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ