ಆ್ಯಪ್ನಗರ

ಸೃಜನಶೀಲ ಸಾಹಿತ್ಯದಿಂದ ಸಂಸ್ಕಾರಯುತ ಜೀವನ

ಸಾಂಸ್ಕೃತಿಕವಾಗಿ ಶ್ರೀಮಂತಿಕೆಯಿಂದ ಕೂಡಿದ ಪರಿಸರವು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲದು ಎಂದು ಲೇಖಕಿ, ಕಾದಂಬರಿಗಾರ್ತಿ ಕೃಷ್ಣವೇಣಿ ಕಿದೂರು ಹೇಳಿದರು.

Vijaya Karnataka 12 Dec 2018, 5:00 am
ಪೆರ್ಲ : ಸಾಂಸ್ಕೃತಿಕವಾಗಿ ಶ್ರೀಮಂತಿಕೆಯಿಂದ ಕೂಡಿದ ಪರಿಸರವು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲದು. ಸಾಹಿತ್ಯದ ಪ್ರೀತಿ ಜೀವನ ಪ್ರೀತಿಯು ಆಗಿರುವುದರಿಂದ ಮನುಷ್ಯನಿಗೆ ಅನುಭವ ಓದಗಿಸುವ ಮಾಧ್ಯಮ ಸಾಹಿತ್ಯವಾಗಿದೆ ಎಂದು ಲೇಖಕಿ, ಕಾದಂಬರಿಗಾರ್ತಿ ಕೃಷ್ಣವೇಣಿ ಕಿದೂರು ಹೇಳಿದರು.
Vijaya Karnataka Web srujanasheela sahityadinda samskaryuta jeevana
ಸೃಜನಶೀಲ ಸಾಹಿತ್ಯದಿಂದ ಸಂಸ್ಕಾರಯುತ ಜೀವನ


ಸ್ತ್ರೀಯರ ಸವಲತ್ತುಗಳು, ಮಹಿಳಾ ಸಂಘಟನೆ ಹಾಗೂ ಮಹಿಳಾ ಹಕ್ಕುಗಳನ್ನು ತಿಳಿಯಪಡಿಸುವ ಸಲುವಾಗಿ ಮಾತೃ ಶಕ್ತಿ ಪೆರ್ಲ ಆಶ್ರಯದಲ್ಲಿ ಪೆರ್ಲ ಶ್ರೀ ಸತ್ಯ ನಾರಾಯಣ ಶಾಲೆಯಲ್ಲಿ ಭಾನುವಾರ ನಡೆದ ಮಹಿಳಾ ಚೇತನ ಕಾರ್ಯಕ್ರಮದಲ್ಲಿ ಆಧುನಿಕ ಸಮಾಜದಲ್ಲಿ ಮಹಿಳೆಯರು ಎದುರಿಸುವ ಸವಾಲುಗಳು ವಿಚಾರ ಗೋಷ್ಠಿಯ ಸಾಹಿತ್ಯ ಕ್ಷೇತ್ರ ಹಾಗೂ ಮಹಿಳೆಯರು ವಿಷಯ ಕುರಿತಾದ ವಿಚಾರಗೋಷ್ಠಿಯ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.

ಮನುಷ್ಯನ ಆಶಯಗಳಿಗೆ ಸ್ಪಂದಿಸುವ ಬರವಣಿಗೆಗಳು ಕಲ್ಪನೆ ಮತ್ತು ಕನಸುಗಳಿಂದ ಬದುಕಿನ ಹೊಸ ಸಾಧ್ಯತೆ ಅನಾವರಣಗೊಳ್ಳುವುದು. ಸುಸಂಸ್ಕೃತ ಮನಸ್ಸು, ಸಂಸ್ಕಾರಯುತ ವ್ಯಕ್ತಿತ್ವ ದುರ್ವಿಚಾರಗಳನ್ನು ಒಪ್ಪಿಕೊಳ್ಳದು. ಮನಸ್ಸಿನಲ್ಲಿ ಬೇರೂರುವ ಶ್ರೇಷ್ಠ ಮೌಲ್ಯಗಳನ್ನು ಸಾಹಿತ್ಯದ ಮೂಲಕ ನೀಡಬೇಕು. ಕೊಲೆ, ರಕ್ತಪಾತ, ದರೋಡೆ, ಹಿಂಸೆಗಳನ್ನು ಬಿಂಬಿಸುವ ಸಾಹಿತ್ಯಗಳು ಉತ್ತಮ ಸಾಹಿತ್ಯಗಳ ಮಧ್ಯೆ ನುಗ್ಗಿ ಬರುತ್ತಿವೆ. ಈ ರೀತಿಯ ವಿಚಾರಗಳ ಓದುವಿಕೆಗೆ ಜನರು ಒಗ್ಗಿಕೊಳ್ಳುವುದರ ಬದಲು ಸಮಾಜಕ್ಕೆ ಉತ್ತಮ ವಿಚಾರ, ಸಂದೇಶ ಸಾರುವ ಮಹಿಳಾ ಸಾಹಿತ್ಯಗಳು ಮೂಡಿ ಬರಬೇಕು ಎಂದರು.

ಮಂಗಳೂರು ವಿಭಾಗ ದುರ್ಗಾ ವಾಹಿನಿ ಸಂಯೋಜಕಿ ವಿದ್ಯಾ ಮಲ್ಯ ರಾಜಕೀಯ ಜೀವನದಲ್ಲಿ ಮಹಿಳೆ ಕುರಿತಾಗಿ ನಡೆದ ಸಂವಾದದಲ್ಲಿ ಮಾತನಾಡಿ, ಹಿಂದೂ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳನ್ನು ಪೂಜನೀಯ ಸ್ಥಾನ ಕಲ್ಪಿಸಲಾಗಿದೆ. ಸಂಘಟನೆಗಳ ಮೂಲಕ ಮಹಿಳೆಯರು ದೈಹಿಕ, ಮಾನಸಿಕವಾಗಿ ಸದೃಢರಾಗುತ್ತಾರೆ. ಸಮಸ್ಯೆಗಳನ್ನು ಎದುರಿಸುವ ಆತ್ಮವಿಶ್ವಾಸ ವೃದ್ಧಿಯಾಗುವುದು. ಹಿಂದೂ ಧರ್ಮದ ಧಾರ್ಮಿಕ ವಿಚಾರಗಳಲ್ಲಿ ಸಮಾನತೆಗಿಂತ ಮಿಗಿಲಾದ ಸ್ಥಾನವನ್ನು ಸ್ತ್ರೀಯರಿಗೆ ಕೊಡಲಾಗಿದೆ ಎಂದರು.

ಕೇರಳ ರಾಜ್ಯ ಮೊಗೇರ ಸವೀರ್‍ಸಸ್‌ ಸೊಸೈಟಿ ಪ್ರಧಾನ ಕಾರ್ಯದರ್ಶಿ ಗಿರಿಜಾ ತಾರನಾಥ್‌ ಕುಂಬಳೆ, ಔದ್ಯೋಗಿಕ ಜೀವನದಲ್ಲಿ ಸ್ತ್ರೀ ಅನುಭವಿಸುವ ಸಮಸ್ಯೆಗಳು ಕುರಿತು ವಿಚಾರ ಮಂಡಿಸುತ್ತಾ, ಆಧುನಿಕ ಸಮಾಜದಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿ ಮಹಿಳೆಯರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವೆಲ್ಲವನ್ನೂ ಪ್ರಶ್ನಿಸುವ, ದಿಟ್ಟವಾಗಿ ಎದುರಿಸುವ ಎದೆಗಾರಿಕೆ ಸ್ತ್ರೀಯರಿಗಿರಬೇಕು. ಸಮಾಜ ಹಾಗೂ ಕುಟುಂಬವನ್ನು ಸರಿದೂಗಿಸಿ ಕೊಂಡೊಯ್ಯಲು ಮಹಿಳೆಯರು ತಮ್ಮನ್ನು ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ತಾಳ್ಮೆ ಸಹನೆಯಿಂದ ಸೂಕ್ಷ ವಾಗಿ ವ್ಯವಹರಿಸುವ ಮೂಲಕ ಕ್ರೀಯಾ ಶೀಲರಾಗಿರಬೇಕು ಎಂದರು.

ವಿವೇಕಾನಂದ ಕಾಲೇಜು ಉಪನ್ಯಾಸಕಿ ಶೋಭಿತಾ ಸತೀಶ್‌ ಮಕ್ಕಳು ಮತ್ತು ಮಹಿಳೆಯರು ವಿಷಯದ ಕುರಿತು ಮಾತನಾಡಿ, ವ್ಯಕ್ತಿತ್ವವನ್ನು ರೂಪಿಸುವ ಎಲ್ಲ್ಲ ಗುಣಗಳು ಅವಿಭಕ್ತ ಕುಟುಂಬಗಳಲ್ಲಿ ಬೆಳೆದ ಮಗುವಿಗೆ ಇಂದಿಗೂ ಲಭಿಸುತ್ತಿದೆ. ಅತಿಯಾದ ಮುದ್ದುತನ, ಎಲ್ಲೆ ಮೀರಿದ ನಿರೀಕ್ಷೆ, ಆಕಾಂಕ್ಷೆಗಳು ಮಕ್ಕಳನ್ನು ಕೆಟ್ಟ ದಾರಿಗೆ ಕೊಂಡೊಯ್ಯಬಲ್ಲುದು. ಮಕ್ಕಳನ್ನು ಸದುದ್ದೇಶದಿಂದ ಕೂಡಿದ ಸಂಘಟನೆಗಳಲ್ಲಿ ತೊಡಗಲು ಪ್ರೇರೇಪಿಸಬೇಕು ಎಂದರು.

ಎಣ್ಮಕಜೆ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷೆ ರೂಪವಾಣಿ ಆರ್‌. ಭಟ್‌ ನಿರೂಪಣೆಯೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಉತ್ತಮ ರೀತಿಯಲ್ಲಿ ಕಾರ್ಯಕ್ರಮವನ್ನು ಸಂಯೋಜಿಸಿದರು. ದೇವಿಕಾ ಸಪಂರ್‍ಗಳ ಸ್ವಾಗತಿಸಿದರು. ಭಾಮಿನಿ ಇಂದುಗುಳಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ