ಆ್ಯಪ್ನಗರ

ರಾಜ್ಯ ಹೆದ್ದಾರಿ ಧೂಳುಮಯ!

ಕೇರಳ ಕರ್ನಾಟಕ ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಚೆರ್ಕಳದಿಂದ ಉಕ್ಕಿನಡ್ಕ, ಉಕ್ಕಿನಡ್ಕದಿಂದ ಅಡ್ಕಸ್ಥಳ ಕರ್ನಾಟಕ ಗಡಿ ಸಾರಡ್ಕ ತನಕ ಎರಡು.

Vijaya Karnataka 10 Apr 2019, 5:00 am
ಪೆರ್ಲ: ಕೇರಳ ಕರ್ನಾಟಕ ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಚೆರ್ಕಳದಿಂದ ಉಕ್ಕಿನಡ್ಕ, ಉಕ್ಕಿನಡ್ಕದಿಂದ ಅಡ್ಕಸ್ಥಳ ಕರ್ನಾಟಕ ಗಡಿ ಸಾರಡ್ಕ ತನಕ ಎರಡು ವಿಭಾಗಗಳಲ್ಲಿ ರಸ್ತೆ ನವೀಕರಣ ಕಾಮಗಾರಿ ನಡೆಯುತ್ತಿದೆ.
Vijaya Karnataka Web state highway full of mud
ರಾಜ್ಯ ಹೆದ್ದಾರಿ ಧೂಳುಮಯ!


ರಸ್ತೆ ಅಗಲಗೊಳಿಸಲು ರಸ್ತೆ ಬದಿಯ ಗುಡ್ಡ ಅಗೆದು ಡಾಮರ್‌ ಕೀಳಲಾಗಿದ್ದು ಘನ ವಾಹನಗಳು ಸಂಚರಿಸುವಾಗ ಧೂಳು ಮುಗಿಲೆತ್ತರ ಹಾರುತ್ತಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ.

ಶಾಲೆ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಬಸ್‌ ಪ್ರಯಾಣಿಕರು ಧೂಳಿನಿಂದ ಸಂಕಷ್ಟ ಅನುಭವಿಸುತ್ತಿದ್ದರೆ ಬೈಕ್‌ ಸವಾರರು, ರಸ್ತೆ ಬದಿಗಳಲ್ಲಿ ಅಂಗಡಿ ನಡೆಸುವ ಮಂದಿಯ ಸ್ಥಿತಿಯಂತೂ ಶೋಚನೀಯತೆಯಿಂದ ಕೂಡಿದೆ.

ಪೆರ್ಲದಿಂದ ಕಾಸರಗೋಡು ಸಂಚರಿಸುವ ಕಾರು ಹಾಗೂ ಇತರ ಖಾಸಗಿ ವಾಹನಗಳು ಅಂಗಡಿಮೊಗರು, ಸೀತಾಂಗೊಳಿ ರಸ್ತೆಯನ್ನು ಬದಲಿ ರಸ್ತೆಯಾಗಿ ಆಯ್ಕೆ ಮಾಡಿದ್ದರೆ, ಕಾಸರಗೋಡು, ಕುಂಬಳೆ ಭಾಗದಿಂದ ಪುತ್ತೂರು ಪ್ರಯಾಣಿಸುವವರು ಪೆರ್ಲದಿಂದ ಸ್ವರ್ಗ ಪಾಣಾಜೆ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.

ಕಿಫ್ಬಿ (ಕೇರಳ ಇನ್ಫ್ರಾಸ್ಟ್ರಕ್ಚರ್‌ ಇನ್ವೆಸ್ಟ್‌ಮ್ಮೆಂಟ್‌ ಫೈನಾನ್ಸ್‌ ಬೋರ್ಡ್‌) ಪಿಡಬ್ಲ್ಯೂಡಿ 006-17 ಪರಿಗಣನೆಯಂತೆ ಕಿಫ್ಬಿ ನಿರ್ದೇಶಕ ಮಂಡಳಿ ಸಭೆಯಲ್ಲಿ ಚೆರ್ಕಳದಿಂದ ಉಕ್ಕಿನಡ್ಕ ತನಕದ ರಸ್ತೆಯ ಮೆಕ್ಡಾಂ ಡಾಮರೀಕರಣಕ್ಕೆ 39 ಕೋಟಿ 76 ಲಕ್ಷ ರೂ. ಅನುಮತಿಸಿದ್ದು, ಕಿರು ಸೇತುವೆ ನವೀಕರಣ, ರಸ್ತೆ ಅಗಲೀಕರಣ, ತಡೆಗೋಡೆ ನಿರ್ಮಾಣ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ.

ಚೆರ್ಕಳದಿಂದ ಸಾರಡ್ಕ ತನಕ ಗಡಿಭಾಗ ತನಕದ 29 ಕಿ.ಮೀ. ರಸ್ತೆಯ ಮೆಕ್ಡಾಂ ಡಾಮರೀಕರಣ, ಕಿರು ಸೇತುವೆ ನಿರ್ಮಾಣ, ಸೂಚನಾ ಫಲಕ, ಇನ್ನಿತರ ಪೂರಕ ಕಾಮಗಾರಿಗಳೂ ಸೇರಿದಂತೆ 67.15 ಕೋಟಿ ರೂ. ಮಂಜೂರುಗೊಂಡಿದ್ದು, ಉಕ್ಕಿನಡ್ಕದಿಂದ ಅಡ್ಕಸ್ಥಳ, ಸಾರಡ್ಕ ಗಡಿ ತನಕದ 10 ಕಿ.ಮೀ. ನವೀಕರಣ ಕಾಮಗಾರಿಯೂ ನಡೆಯುತ್ತಿದೆ.

ಅಂತಾರಾಜ್ಯ ಸಂಪರ್ಕ ರಸ್ತೆ ಆಗಿರುವುದರಿಂದ ಈ ರಸ್ತೆಯಲ್ಲಿ ಎರಡೂ ರಾಜ್ಯಗಳ ಖಾಸಗಿ ಹಾಗೂ ಸರಕಾರಿ ಬಸ್‌ಗಳು, ಲಾರಿ, ಇನ್ನಿತರ ವಾಹನಗಳು ದಿನದ 24 ಗಂಟೆಯೂ ಎಡೆ ಬಿಡದೆ ಸಂಚರಿಸುತ್ತಿವೆ.

ಚೆರ್ಕಳದಿಂದ ಕರ್ನಾಟಕ ಗಡಿ ಭಾಗದ ಅಡ್ಕಸ್ಥಳ ಸಾರಡ್ಕ ತನಕ 29 ಕಿ.ಮೀ. ರಸ್ತೆಯು 15 ವರ್ಷಗಳ ಹಿಂದೆ ಮೆಕ್ಡಾಂ ರೀತಿಯ ಡಾಮರೀಕರಣ ನಡೆದ ಬಳಿಕ ದಶಕಗಳಿಂದ ಜರ್ಝರಿತವಾಗಿತ್ತು.

ರಸ್ತೆಯ ದುರಸ್ತಿಗೆ ಆಗ್ರಹಿಸಿ ವ್ಯಾಪಾರಿ ಏಕೋಪನಾ ಸಮಿತಿ, ನಾನಾ ಪಕ್ಷ ಗಳ ಮುಖಂಡರ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಹೋರಾಟ, ರಸ್ತೆ ತಡೆ, ಅಳು ಸಮರ, ಲೋಕೋಪಯೋಗಿ ಇಲಾಖೆ ಮುತ್ತಿಗೆ, ಸೆಗಣಿ ಸಮರ ಅಲ್ಲದೆ ಬಿಜೆಪಿ ಕಾಸರಗೋಡು ಸೇರಿದಂತೆ ಸ್ಥಳೀಯ ಸಮಿತಿಗಳ ನೇತೃತ್ವದಲ್ಲಿ ಅಲ್ಲಲ್ಲಿ ರಸ್ತೆ ತಡೆದು ಚಕ್ರಸ್ತಂಭನ ಚಳವಳಿ, ಆಟೋ ಟ್ಯಾಕ್ಸೀ ಚಾಲಕರು ಬಾಳೆ ಗಿಡ ನೆಡುವ ಮೂಲಕ ಪ್ರತಿಭಟಿಸಿದ್ದರಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದರು.

*ಚೆರ್ಕಳ ಕಲ್ಲಡ್ಕ ರಾಜ್ಯ ಹೆದ್ದಾರಿಯ ಕಾಮಗಾರಿ ಚೆರ್ಕಳ-ಉಕ್ಕಿನಡ್ಕ, ಉಕ್ಕಿನಡ್ಕ -ಅಡ್ಕಸ್ಥಳ ಎರಡು ವಿಭಾಗಗಳಲ್ಲಿ ನಡೆಯುತ್ತಿದ್ದು, ಅಡ್ಕಸ್ಥಳದಿಂದ ಸಾರಡ್ಕ ಗಡಿತನಕದ 3 ಕಿ.ಮೀ.ರಸ್ತೆಯಲ್ಲಿ ಧೂಳು ಹಾರದಂತೆ ನೀರು ಹಾಯಿಸಲಾಗುತ್ತಿದೆ. ಉಳಿದಂತೆ ಅಡ್ಕಸ್ಥಳದಿಂದ ಚೆರ್ಕಳ ತನಕದ 26 ಕಿ.ಮೀ. ರಸ್ತೆ ಧೂಳಿನಿಂದ ಆವೃತವಾಗುತ್ತಿದೆ'
-ಸತೀಶ್‌ ಕುಲಾಲ್‌, ವಾರ್ಡ್‌ ಸದಸ್ಯರು, ಎಣ್ಮಕಜೆ ಗ್ರಾ.ಪಂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ