ಆ್ಯಪ್ನಗರ

ಬರಿದಾಗುತ್ತಿದೆ ಉಪ್ಪಳ ಹೊಳೆ !

ಮುಂಗಾರು ಮಳೆಗಾಲ ಮುಗಿದು ಕೆಲವೇ ದಿನಗಳು ಕಳೆದಿದ್ದು, ಇದೀಗಾಗಲೇ ಹೊಳೆಗಳು ಬರಿದಾಗುತ್ತಿರುವುದು ನಾಗರಿಕರಲ್ಲಿ ಆತಂಕವನ್ನು ಉಂಟುಮಾಡುತ್ತಿದೆ.

Vijaya Karnataka 21 Sep 2018, 5:00 am
ಉಪ್ಪಳ: ಮುಂಗಾರು ಮಳೆಗಾಲ ಮುಗಿದು ಕೆಲವೇ ದಿನಗಳು ಕಳೆದಿದ್ದು, ಇದೀಗಾಗಲೇ ಹೊಳೆಗಳು ಬರಿದಾಗುತ್ತಿರುವುದು ನಾಗರಿಕರಲ್ಲಿ ಆತಂಕವನ್ನು ಉಂಟುಮಾಡುತ್ತಿದೆ. ಬೇಸಿಗೆ ಕಾಲದ ಏಪ್ರಿಲ್‌ ಮೇ ತಿಂಗಳಲ್ಲಿ ಕಾಸರಗೋಡು ಜಿಲ್ಲೆ ಕುಡಿಯುವ ನೀರಿಗಾಗಿ ಸಾಕಷ್ಟು ಸಂಕಷ್ಟ ಅನುಭವಿಸುತ್ತಿರುವುದು ಸಾಮಾನ್ಯ. ಆದರೆ ಇದೀಗ ಸೆಪ್ಟೆಂಬರ್‌ ತಿಂಗಳ ಆರಂಭದಲ್ಲೇ ಹೊಳೆಗಳು ಬತ್ತುತ್ತಿರುವುದು ಅಪಾಯದ ಮುನ್ಸೂಚನೆ ನೀಡುತ್ತಿದೆ.
Vijaya Karnataka Web uppala river drying
ಬರಿದಾಗುತ್ತಿದೆ ಉಪ್ಪಳ ಹೊಳೆ !


ಬಿಸಿಲಿನ ತಾಪ ದಿನೇ ದಿನೆ ಏರುತ್ತಿರುವುದು ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುವ ಭೀತಿಯನ್ನು ಜನ ಎದುರಿಸುತ್ತಿದ್ದಾರೆ. ಉಪ್ಪಳ ಸಮೀಪದ ಕೊಡಂಗೆ ಹೊಳೆಯಲ್ಲಿ ನೀರಿನ ಮಟ್ಟ ಭಾರಿ ಇಳಿಕೆಯಾಗಿದ್ದು, ಇದರಿಂದ ಕೊಡಂಗೆಯಲ್ಲಿ ನಿರ್ಮಿಸಿದ ಕುಡಿಯುವ ನೀರು ಯೋಜನೆಯ ಬಾವಿಯಿಂದ ಮಂಗಲ್ಪಾಡಿ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಿಗೆ ವಿತರಿಸುವ ಕುಡಿಯುವ ನೀರಿಗಾಗಿ ಭಾರಿ ಸಮಸ್ಯೆ ಎದುರಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ.

ಕೊಡಂಗೆ ಹೊಳೆಯಲ್ಲಿ ನಿರ್ಮಿಸಲಾದ ಬಾವಿಯಿಂದ ನೀರು ಬೇಕೂರು ಸಬ್‌ ಸ್ಟೇಶನ್‌ ಪರಿಸರದಲ್ಲಿರುವ ಬೃಹತ್‌ ಟ್ಯಾಂಕ್‌ಗೆ ಸರಬರಾಜುಗೊಂಡು ಅಲ್ಲಿಂದ ಶುದ್ಧೀಕರಿಸಿದ ಬಳಿಕ ವಿತರಿಸಲಾಗುತ್ತಿತ್ತು. ಪಂಚಾಯಿತಿ ವ್ಯಾಪ್ತಿಯಲ್ಲಿ ಸಾವಿರಾರು ಕುಟುಂಬಗಳು ಈ ನೀರಿನ ಪ್ರಯೋಜನ ಪಡೆಯುತ್ತಿದ್ದು, ಈಗಾಗಲೇ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಪ್ರಕ್ರಿಯೆ ಆರಂಭಗೊಂಡಿದೆ.

ಇದಲ್ಲದೆ ಉಪ್ಪಳ ಹೊಳೆಯ ಎರಡೂ ಬದಿಗಳಲ್ಲಿ ಎಕರೆಗಟ್ಟಲೆ ಕೃಷಿ ಪ್ರದೇಶವಿದ್ದು, ಕೃಷಿ ಭೂಮಿಗೂ ನೀರಿನ ಅಭಾವ ಉಂಟಾಗಲಿದೆ. ಕೊಡಂಗೆ ಹೊಳೆಯಲ್ಲಿನ ಬೃಹತ್‌ ಡ್ಯಾಂನಲ್ಲಿ ಕೂಡ ಬೇಸಿಗೆ ಕಾಲದಲ್ಲಿ ನೀರಿನ ಕೊರತೆ ಕಂಡುಬರುತ್ತಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಮಳೆಗಾಲ ಬೆನ್ನಿಗೇ ಹೊಳೆಯ ನೀರು ಬತ್ತಲಾರಂಭಿಸಿದ್ದು ಜನತೆಯನ್ನು ಕಂಗೆಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ