ಮಡಿಕೇರಿ: ನೂತನ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಕ್ಷಿದಾರರರಿಗೆ ಸೂಕ್ತ ಉಪಯೋಗ ನೀಡುವಂತೆ ಹೈಕೋರ್ಟ್ ವಕೀಲ, ದಕ್ಷ ಲೀಗಲ್ ಚಾರಿಟೇಬಲ್ ಟ್ರಸ್ಟ್ ಮುಖ್ಯಸ್ಥ ಎಸ್. ಬಸವರಾಜ್ ಸಲಹೆ ನೀಡಿದರು.
ಮಡಿಕೇರಿ ವಕೀಲರ ಸಂಘದಿಂದ ಕೊಡವ ಸಮಾಜದಲ್ಲಿ ನಡೆದ ವಕೀಲರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಫೇಸ್ಬುಕ್, ವಾಟ್ಸಪ್ಗಳಂಥ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ವಕೀಲ ವೃಂದ ಕಾನೂನು ವಿಚಾರಗಳ ಸಂಬಂಧ ಅನೇಕ ಪ್ರಯೋಜನ ಪಡೆಯಲು ಸಾಧ್ಯವಿದೆ. ಇಂಥ ಆನ್ಲೈನ್ ಜಾಲತಾಣಗಳು ವಕೀಲರಿಗೆ ಕಾನೂನು ಸಂಬಂಧಿತ ಚರ್ಚೆಗೆ ಅತ್ಯುತ್ತಮ ವೇದಿಕೆಯಾಗಿದ್ದು, ಅನೇಕ ಕಾನೂನು ವಿಚಾರಗಳ ತಿಳಿವಳಿಕೆ ಸಾಧ್ಯ ಎಂದರು.
ದಕ್ಷ ಲೀಗಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ನಾನಾ 50 ಸಾವಿರ ಮಂದಿಯನ್ನು ಫೇಸ್ ಬುಕ್ ಲೈವ್ನಲ್ಲಿ ಹೊಂದಿದ್ದು, ಎಲ್ಲಿಯೇ ಇರಲಿ ಈ ಮೂಲಕ ಇಷ್ಟೊಂದು ಸಾವಿರ ಜನರಿಗೆ ಮಾಹಿತಿ ನೀಡಬಹುದಾಗಿದೆ. ಇಂಥ ಸಂವಾದ ವೇದಿಕೆ ಮೂಲಕ ಕಾನೂನಿನ ಯಾವುದೇ ಸಮಸ್ಯೆಗೂ ಚರ್ಚೆಯೊಂದಿಗೆ ಸೂಕ್ತ ಪರಿಹಾರ ಕ್ಷ ಣಮಾತ್ರದಲ್ಲಿ ಅಗತ್ಯವುಳ್ಳವರಿಗೆ ದೊರಕುತ್ತಿದೆ ಎಂದರು.
ಸಾಮಾಜಿಕ ಜಾಲತಾಣಗಳ ಪ್ರಭಾವವನ್ನು ನಿರ್ಲಕ್ಷಿಸದೇ ಸಮರ್ಥವಾಗಿ ಬಳಸಿಕೊಂಡು ಕಾನೂನಿನ ಅಗಾಧ ಜ್ಞಾನವನ್ನೇ ವಕೀಲರು ತಮ್ಮದಾಗಿಸಿಕೊಳ್ಳಬೇಕು. ಇಂಥ ಜಾಲತಾಣಗಳು ವಕೀಲರ ಪಾಲಿಗೆ ಜ್ಞಾನಕೋಶ ಇದ್ದಂತಾಗಿದ್ದು, ಸಂಚಾರಿ ಗ್ರಂಥಾಲಯವೂ ಆಗಿದೆ. ಭಾರತದ ಪ್ರಥಮ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರಪ್ರಸಾದ್ ಕೂಡ ವಕೀಲರಾಗಿದ್ದವರು. ವಕೀಲರಾಗಿದ್ದುಕೊಂಡೇ ದೇಶದ ಅತ್ಯಂತ ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದರು. ಹೀಗಾಗಿಯೇ ಅವರ ಸ್ಮರಣಾರ್ಥ ವಕೀಲರ ದಿನಾಚರಣೆ ದೇಶವ್ಯಾಪಿ ಆಚರಿಸಲ್ಪಡುತ್ತಿದೆ ಎಂದರು.
ದಕ್ಷ ಲೀಗಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ದೇಶದ ಯಾವುದೇ ವಕೀಲರಿಗಾದರೂ ಆರೋಗ್ಯ ಸಂಬಂಧಿ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಲಾಗುತ್ತಿದೆ. ಪ್ರಸ್ತುತ ಸಮಾಜ ಯಾರ ಒಬ್ಬರ ಪ್ರಯತ್ನದಿಂದ ರೂಪುಗೊಂಡದ್ದಲ್ಲ. ಬದಲಿಗೆ, ಇದು ಸಮುದಾಯದ ಒಗ್ಗಟ್ಟಿನಿಂದ, ಎಲ್ಲರ ಶ್ರಮದಿಂದ ರೂಪುಗೊಂಡು ಭದ್ರಬುನಾದಿ ಹೊಂದಿದೆ ಎಂಬುದನ್ನು ಮರೆಯಬಾರದು ಎಂದು ಎಸ್. ಬಸವರಾಜ್ ವಿಶ್ಲೇಷಿಸಿದರು.
ವಕೀಲರ ಸಂಘದ ಅಧ್ಯಕ್ಷ ಸಿ.ಟಿ.ಜೋಸೆಫ್ ವಕೀಲರ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಮಡಿಕೇರಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಯು. ಪ್ರೀತಮ್, ಉಪಾಧ್ಯಕ್ಷ ಕೆ.ಡಿ.ದಯಾನಂದ್, ವಕೀಲರ ಸಂಘದ ಖಚಾಂಚಿ ರತನ್ ತಮ್ಮಯ್ಯ, ಜಂಟಿ ಕಾರ್ಯದರ್ಶಿ ಬಾಳೆಯಡ ಕಿಶನ್ ಪೂವಯ್ಯ, ನಿರ್ದೇಶಕರಾದ ರುದ್ರಪ್ರಸನ್ನ, ಕಪಿಲ್ ಕುಮಾರ್, ದೇವಿಪ್ರಸಾದ್, ನಳಿನಿ ಕುಮಾರಿ, ಅರುಣ್ ಕುಮಾರ್, ಶರತ್, ಸಂಜಯ್ ರಾಜ್ ಹಾಜರಿದ್ದರು.