ಆ್ಯಪ್ನಗರ

ಬಿಎಸ್ಸೆನ್ನೆಲ್‌ಗಾಗಿ ಭಿಕ್ಷೆ ಅಭಿಯಾನ !

ಕಳಪೆ ಸೇವೆಯ ಮೂಲಕ ದಿನೇದಿನೆ ಗ್ರಾಹಕರಿಂದ ದೂರವಾಗುತ್ತಿರುವ ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ಗೆ ಸಮೀಪದ ಮರಗೋಡು ಗ್ರಾಮಸ್ಥರು 'ಬಿಎಸ್ಸೆನ್ನೆಲ್‌ಗಾಗಿ ಭಿಕ್ಷೆ' ಅಭಿಯಾನದಡಿ ಶುಕ್ರವಾರ ಗ್ರಾಮದಲ್ಲಿ ಭಿಕ್ಷೆ ಎತ್ತಿ ಆ ಹಣದಿಂದ ಡೀಸೆಲ್‌ ಖರೀದಿಸಿ ಬಿಎಸ್ಸೆನ್ನೆಲ್‌ ಕಚೇರಿಗೆ ನೀಡಿದ್ದಾರೆ.

Vijaya Karnataka 15 Jun 2019, 9:13 pm
ಕುಶಾಲನಗರ : ಕಳಪೆ ಸೇವೆಯ ಮೂಲಕ ದಿನೇದಿನೆ ಗ್ರಾಹಕರಿಂದ ದೂರವಾಗುತ್ತಿರುವ ಸರಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್‌ಗೆ ಸಮೀಪದ ಮರಗೋಡು ಗ್ರಾಮಸ್ಥರು 'ಬಿಎಸ್ಸೆನ್ನೆಲ್‌ಗಾಗಿ ಭಿಕ್ಷೆ' ಅಭಿಯಾನದಡಿ ಶುಕ್ರವಾರ ಗ್ರಾಮದಲ್ಲಿ ಭಿಕ್ಷೆ ಎತ್ತಿ ಆ ಹಣದಿಂದ ಡೀಸೆಲ್‌ ಖರೀದಿಸಿ ಬಿಎಸ್ಸೆನ್ನೆಲ್‌ ಕಚೇರಿಗೆ ನೀಡಿದ್ದಾರೆ.
Vijaya Karnataka Web a beggar campaign for bsnl
ಬಿಎಸ್ಸೆನ್ನೆಲ್‌ಗಾಗಿ ಭಿಕ್ಷೆ ಅಭಿಯಾನ !


ಮರಗೋಡು ಗ್ರಾಪಂ ಕಟ್ಟಡದಲ್ಲಿರುವ ಬಿಎಸ್ಸೆನ್ನೆಲ್‌ ಕೇಂದ್ರ ವಿದ್ಯುತ್‌ ಕೈಕೊಟ್ಟಾಗಲೆಲ್ಲಾ ತನ್ನ ಸೇವೆ ಸ್ಥಗಿತಗೊಳಿಸುತ್ತದೆ. ಈ ಸಂದರ್ಭ ಪರ್ಯಾಯ ವ್ಯವಸ್ಥೆಯಾಗಿ ಜನರೇಟರ್‌ ಇದ್ದರೂ ಇದಕ್ಕೆ ಡೀಸೆಲ್‌ ಪೂರೈಸಲು ಅಧಿಕಾರಿಗಳಿಂದ ಹಣ ಸಿಗುತ್ತಿಲ್ಲ. ಇದೇ ಟವರ್‌ನಲ್ಲೇ ಮತ್ತೊಂದು ಖಾಸಗಿ ಕಂಪೆನಿ ಕೂಡ ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯುತ್‌ ವ್ಯತ್ಯಯದ ವೇಳೆ ಇದಕ್ಕೂ ಸಮಸ್ಯೆಯಾಗುತ್ತಿದೆ.

ಮರಗೋಡು ಗ್ರಾಮದಲ್ಲಿ ಕಳೆದ 4-5 ದಿನಗಳಿಂದ ವಿದ್ಯುತ್‌ ಕೈಕೊಟ್ಟಿದ್ದು ಬಿಎಸ್ಸೆನ್ನೆಲ್‌ ಸೇವೆ ಆಗಿಂದಾಗ್ಗೆ ಸ್ಥಗಿತವಾಗುತ್ತಿದೆ. ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಶುಕ್ರವಾರ ಬೆಳಗ್ಗೆ ಗ್ರಾಮದ ಕೇಂದ್ರ ಭಾಗದಲ್ಲಿ ಸೇರಿ ಸಾರ್ವಜನಿಕರಿಂದ, ವಾಹನ ಚಾಲಕರಿಂದ ಹಾಗೂ ಅಂಗಡಿ ಮಳಿಗೆಗಳಿಂದ ಭಿಕ್ಷೆ ಎತ್ತಿದ್ದಾರೆ. ಮರಗೋಡು ಬ್ಯಾಂಕ್‌ ಸಿಬ್ಬಂದಿ ಕೂಡ ಭಿಕ್ಷೆ ನೀಡಿದ್ದಾರೆ. ಕೊನೆಗೆ ಸಂಗ್ರಹವಾದ 2800 ರೂ. ನಿಂದ 35 ಲೀ. ಡೀಸೆಲ್‌ ಖರೀದಿಸಿದ ಗ್ರಾಮಸ್ಥರು ಬಿಎಸ್ಸೆನ್ನೆಲ್‌ ಕೇಂದ್ರಕ್ಕೆ ನೀಡಿದ್ದಾರೆ.

ಈ ಸಂದರ್ಭ ಮಾತನಾಡಿದ ಆಟೋ ಚಾಲಕರ ಸಂಘದ ಅಧ್ಯಕ್ಷ ತಮ್ಮುಣಿ, ''ಮರಗೋಡಿನಲ್ಲಿ 30 ಆಟೋರಿಕ್ಷಾಗಳಿದ್ದು ತುರ್ತು ಸಂದರ್ಭದಲ್ಲಿ ಗ್ರಾಹಕರು ಕರೆ ಮಾಡಿದರೂ ನಮಗೆ ಸಂಪರ್ಕ ಸಿಗುತ್ತಿಲ್ಲ,'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಬಡುವಂಡ್ರ ಲಕ್ಷ್ಮೇಪತಿ ಮಾತನಾಡಿ, ''ನಮ್ಮಿಂದ ದುಬಾರಿ ಹಣ ಪಡೆಯುವ ಬಿಎಸ್ಸೆನ್ನೆಲ್‌ ಅದೇ ಮಟ್ಟದ ಸೇವೆ ನೀಡುವಲ್ಲಿ ವಿಫಲವಾಗುತ್ತಿದೆ,'' ಎಂದು ದೂರಿದರು.

ಮರಗೋಡು ವಿಎಸ್ಸೆಸ್ಸೆನ್‌ ಬ್ಯಾಂಕ್‌ ಅಧ್ಯಕ್ಷ ಬಾಳೆಕಜೆ ಯೋಗೇಂದ್ರ, ವೈಷ್ಣವಿ ಫುಟ್ಬಾಲ್‌ ಕ್ಲಬ್‌ನ ಅಧ್ಯಕ್ಷ ಪಾಣತ್ತಲೆ ಜಗದೀಶ್‌ ಮಂದಪ್ಪ, ಕಾಫಿ ಬೆಳೆಗಾರ ಮಂಡೇಪಂಡ ಗಣಪತಿ, ಕಲಾವಿದ ಐಮಂಡ ರೂಪೇಶ್‌ ನಾಣಯ್ಯ, ಸ್ಪೋರ್ಟ್‌ ಆ್ಯಂಡ್‌ ರಿಕ್ರಿಯೇಷನ್‌ ಕ್ಲಬ್‌ ಕಾರ್ಯದರ್ಶಿ ಕೋಚನ ಅನೂಪ್‌ ಮತ್ತಿತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ