ಮಡಿಕೇರಿ: ಮಡಿಕೇರಿ ಸಮೀಪದ ಕಡಗದಾಳುವಿನ ಖ್ಯಾತ ಕುರುಳಿ ಅಂಬಲ ಮಂದ್ನಲ್ಲಿ ಭಾನುವಾರ ಆಕರ್ಷಕ ''ಪುತ್ತರಿ ಕೋಲಾಟ್'' ನಡೆದು ನೆರೆದಿದ್ದ ನೂರಾರು ಮಂದಿಯನ್ನು ರಂಜಿಸಿತು.
ಕೊಡಗಿನ ಸಾಂಪ್ರದಾಯಿಕ ಪುತ್ತರಿ ಹಬ್ಬದ ಆಚರಣೆಯ ನಂತರ ನಡೆಯುವ ಇತಿಹಾಸ ಪ್ರಸಿದ್ಧ ಕುರುಳಿ ಅಂಬಲದ ಕೋಲಾಟ್ ವೀಕ್ಷಿಸಲು ವಿವಿಧ ಪ್ರದೇಶಗಳಿಂದ ಜನರು ಆಗಮಿಸುತ್ತಾರೆ. ಬೆಳಗ್ಗೆ ಮಂದ್ನಲ್ಲಿ ಊರಿನವರು ತೋರಣ ಕಟ್ಟಿ ಸಂಪ್ರದಾಯದಂತೆ ಊರುತಕ್ಕರಾದ ಕೊರವಂಡ ಅಯ್ಯಪ್ಪ ಅವರ ಮನೆಗೆ ತೆರಳಿ ಫಲಹಾರ ಸ್ವೀಕರಿಸಿ ವಾಲಗ, ದುಡಿಕೊಟ್ಟ್ ಹಾಡಿನೊಂದಿಗೆ ಮಂದ್ಗೆ ಆಗಮಿಸಿದರು.
ದೇಶ ತಕ್ಕರಾದ ಪಾಂಡಿರ ಕುಟುಂಬದವರನ್ನು, ಕಗ್ಗೋಡುವಿನ ಬಿಳಿಗೇರಿ, ಅಂದಗೋವೆ, ಇಬ್ನಿಒಳವಾಡಿ, ಈರಳೆವಳಮುಡಿ, ಚೆಟ್ಟಳ್ಳಿಯ ನೂರಕೋಲು ನಾಡು, ಮರಗೋಡು ನಾಡಿನ ತಕ್ಕಮುಖ್ಯಸ್ಥರನ್ನು ತಳಿಯತಕ್ಕಿ ಬೊಳಕ್ ಸಹಿತ ವಾಲಗ, ದುಡಿಕೊಟ್ಟ್ ಹಾಡಿನೊಂದಿಗೆ ಊರಿನವರು ಮಂದ್ಗೆ ಸ್ವಾಗತಿಸಿದರು.
ನಂತರ ಕೋಲಾಟ,ಬೊಳಕಾಟ್, ಪರೆಕಳಿ, ಕಪ್ಪೆಯಾಟ್, ವಾಲಗತಾಟ್ ನಡೆಯಿತು. ನಂತರ ಹುತ್ತರಿ ಫಲಹಾರ ನೀಡಿ ವಾಲಗ ಹಾಗೂ ದುಡಿಕೊಟ್ಟ್ ಹಾಡಿನೊಂದಿಗೆ ತಕ್ಕರನ್ನು ಬೀಳ್ಕೊಡಲಾಯಿತು.
ಸೋಮವಾರ ಮಹಾವಿಷ್ಣು ಉತ್ಸವ ಪೂಜೆ ನಡೆಯಲಿದೆ. ನಂತರ ದೇವರ ನಡೆಯಲ್ಲಿ ಕೋಲನ್ನು ಒಪ್ಪಿಸಲಾಗುವುದು.