ಕುಶಾಲನಗರ: ದೇಶದಲ್ಲಿನ ಮಾನವ ಸಂಪನ್ಮೂಲದ ಸಮರ್ಪಕ ವಾಗಿ ಸದ್ಬಳಕೆ ಆಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಬಿ.ಭಾರತೀಶ್ ಹೇಳಿದರು.
ಕೊಡಗು ಜಿ.ಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸೋಮವಾರಪೇಟೆ, ಫಾತಿಮಾ ಪ್ರೌಢಶಾಲೆ ಕುಶಾಲನಗರ ಸಂಯುಕ್ತಾಶ್ರ ಯದಲ್ಲಿ ಇಲ್ಲಿನ ಫಾತಿಮಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿ ಯರ ಕ್ರೀಡಾಕೂಟದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತ ದೇಶ ಅತಿ ಹೆಚ್ಚು ಸಂಪನ್ಮೂಲಗಳನ್ನು ಹೊಂದಿರುವ ದೇಶವಾ ಗಿದೆ. ಇಲ್ಲಿನ ಮಾನವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವ ನಿಟ್ಟನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಶಿಕ್ಷಣ ಕ್ಷೇತ್ರ ದಲ್ಲಿ ಇಂದು ಹೆಚ್ಚಿನ ಪೈಪೋಟಿ ತಲೆದೋರಿದ್ದು ಶೈಕ್ಷಣಿಕ ಕ್ಷೇತ್ರ ಪ್ಯಾಪಾರೀಕರಣವಾಗದಂತೆ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ಒದಗಿಸುವಲ್ಲಿ ಬದ್ಧರಾಗಬೇಕಿದೆ.
ಮೌಲ್ಯಯುತ ಶಿಕ್ಷಣ ಒದಗಿಸುವ ವಿಚಾರದಲ್ಲಿ ಸರಕಾರಿ ಹಾಗೂ ಖಾಸಗಿ ಶಾಲೆಗಳ ನಡುವೆ ಪೈಪೋಟಿ ಏರ್ಪಡಬೇಕಿದೆ. ಅದರಂತೆ ಸರಕಾರ ಕೂಡ ಶಿಕ್ಷಣ ಕ್ರಮದಲ್ಲಿ ಪರಿಣಾಮಕಾರಿಯಾದ ಬದಲಾವಣೆಗಳನ್ನು ತರಬೇಕಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಹೆಚ್ಚಿನ ಮುತುವರ್ಜಿ ಸರಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದರು.
ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿ.ಪಂ.ಉಪಾಧ್ಯಕ್ಷೆ ಬೀನಾ ಬೊಳ್ಳಮ್ಮ, ಕ್ರೀಡೆಯ ಜೊತೆಗೆ ಶಿಕ್ಷಣವು ಅಗತ್ಯವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸೌಜನ್ಯ ಮನೋಭಾವವನ್ನು ಬೆಳೆಸುವುದರ ಮೂಲಕ ಪ್ರಗತಿಗೆ ಸಾಧ್ಯವಾಗುತ್ತದೆ.
ಕ್ರೀಡೆಯು ಸಾಧಕರಿಗೆ ಸ್ಫೂರ್ತಿದಾಯಕವಾಗುತ್ತದೆ. ಇದನ್ನು ಶಿಕ್ಷಕರು ಬೆಳೆಸುವಲ್ಲಿ ಪ್ರೋತ್ಸಾಹಿಸಿದರೆ ಉನ್ನತೀಕರಣಕ್ಕೆ ಸಹಕಾರಿಯಾಗುವುದು ಎಂದರು.
ಅಧ್ಯಕ್ಷತೆಯನ್ನು ತಾ.ಪಂ.ಅಧ್ಯಕ್ಷ ಜ್ಯೋತಿ ಶಿವಣ್ಣ ವಹಿಸಿದ್ದರು. ಕುಶಾಲನಗರ ಪ.ಪಂ.ಅಧ್ಯಕ್ಷ ಡಿ.ಕೆ.ತಿಮ್ಮಪ್ಪ, ಜಿ.ಪಂ.ಸದಸ್ಯೆ ಚಿತ್ರಕಲಾ ರಾಜೇಶ್, ಫಾತಿಮಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಫಾ.ಮೈಕಲ್ಮೇರಿ, ಕೂಡಿಗೆ ಡಯಟ್ ಪ್ರಾಂಶುಪಾಲ ದೊಡ್ಡಮಲ್ಲಪ್ಪ, ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ಕೊಡಗು ಜಿಲ್ಲಾ ದೈಹಿಕ್ಷ ಶಿಕ್ಷಣಾಧಿಕಾರಿ ಎ.ಎಂ.ಕಾವೇರಮ್ಮ, ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಆರ್.ಬಸವರಾಜ್ ಇದ್ದರು.
ಮೂರು ತಾಲೂಕುಗಳಿಂದ ಸುಮಾರು 500 ಕ್ಕೂ ಅಧಿಕ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.
ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ಅಗಸ್ಟಿನ್, ಅಜರುದ್ದಿನ್ ಹಾಗೂ ವೆಸ್ಲಿ ಜಾರ್ಜ್ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.