ಆ್ಯಪ್ನಗರ

ಅಶಕ್ತ ಮುಸ್ಲಿಂ ಸಹೋದರಿಯರ ಕುಟುಂಬಕ್ಕೆ ಆಸರೆಯಾದ 'ಭಗವಾನ್ ಸಂಘ ಊರುಬೈಲು'

ಕೊಡಗಿನಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾದ ಸಮಯದಲ್ಲಿ ಕೊಯನಾಡಿನ ನದಿ ದಂಡೆಯಲ್ಲಿ ಮುರುಕಲು ಮನೆಯಲ್ಲಿ ವಾಸಿಸುತ್ತಿದ್ದ ಮುಸ್ಲಿಂ ಸಹೋದರಿಯರಿಬ್ಬರಿಗೆ ಆಸರೆಯಾದ 'ಭಗವಾನ್ ಸಂಘ ಊರುಬೈಲು' ಈಗ ಮತ್ತೊಮ್ಮೆ ಅವರಿಗೆ ಮನೆಯ ಛಾವಣಿಯ ಪುನನಿರ್ಮಾಣ ಮಾಡಿ ಮಾನವೀಯತೆಯ ಮುಂದೆ ಜಾತಿ, ಮತ, ಧರ್ಮವೆಲ್ಲವೂ ಗೌಣ ಎನ್ನುವ ಸಂದೇಶವನ್ನು ಸಾರಿದೆ.

Vijaya Karnataka Web 22 May 2020, 1:14 pm
ಎರಡು ವರ್ಷಗಳ ಹಿಂದೆ ಕೊಡಗಿನಲ್ಲುಂಟಾದ ಭೀಕರ ನೈಸರ್ಗಿಕ ವಿಕೋಪವನ್ನು ಯಾರಿಗೂ ಊಹಿಸಲು ಸಾಧ್ಯವಿಲ್ಲ. ಪ್ರವಾಹ ತನಗಿಷ್ಟ ಬಂದಂತೆ ಜನರ ಜೀವನದಲ್ಲಿ ಚೆಲ್ಲಾಟವಾಡಿತ್ತು. ಆ ಸಂದರ್ಭ ಉಂಟಾದ ಕಷ್ಟ-ನಷ್ಟಗಳು ಅಪಾರ. ಮಡಿಕೇರಿ ತಾಲೂಕಿನ ಜೋಡುಪಾಲ, ಮೊಣ್ಣಂಗೇರಿ ವಿಭಾಗದಲ್ಲಿ ಉಂಟಾದ ಭೂ ಕುಸಿತ, ನೆರೆಯಿಂದ ಹಲವು ಸಾವು ನೋವುಗಳು ಸಂಭವಿಸಿತ್ತು. ಈ ಪ್ರದೇಶದಲ್ಲಿ ಜಲಪ್ರಳಯದಿಂದಾಗಿ ಪಯಸ್ವಿನಿ ನದಿಯಲ್ಲಿ ಅಸಂಖ್ಯ ಪ್ರಾಣಿ, ಪಕ್ಷಿಗಳು, ಮರ, ಕಲ್ಲು ಬಂಡೆಗಳು ಮತ್ತು ದೊಡ್ಡ ಪ್ರಮಾಣದಲ್ಲಿ ಮಣ್ಣು ಕೆಸರು ಹರಿದು ಬಂದಿತ್ತು. ಆ ಸಂದರ್ಭದಲ್ಲಿ ಕೊಯನಾಡಿನ ನದಿ ದಂಡೆಯಲ್ಲಿ ಮುರುಕಲು ಮನೆಯಲ್ಲಿ ಅಂಗವಿಕಲ ವೃದ್ದೆ ಆಯೇಷಾ ತಮ್ಮ ಸಹೋದರಿ ವೃದ್ದೆ ಸೈನಾಬಿರವರೊಂದಿಗೆ ವಾಸವಾಗಿದ್ದರು. ಭೀಕರ ಪ್ರವಾಹಕ್ಕೆ ಅವರ ಅಂಗೈಯಗಲ ಭೂಮಿ, ಬಾವಿ, ಮನೆ ಸೇರಿದಂತೆ ಸರ್ವಸ್ವವು ಕೆಸರಿನಲ್ಲಿ ಮುಚ್ಚಿ ಹೋಗಿತ್ತು. ಆಗ ಅವರ ನೆರವಿಗೆ ಧಾವಿಸಿದ್ದ 'ಶ್ರೀ ಭಗವಾನ್ ಸಂಘ ಊರುಬೈಲು' ಇದರ ಸದಸ್ಯರು ಬಾವಿ, ಭೂಮಿ, ಮನೆಯನ್ನು ಸುಸ್ಥಿತಿಗೆ ತಂದು ಅವರಿಗೆ ಬದುಕಲು ದಾರಿ ಕಲ್ಪಿಸಿಕೊಟ್ಟಿದ್ದರು.
Vijaya Karnataka Web bhagwan sangh urubail helps poor and needy muslim community sisters
ಅಶಕ್ತ ಮುಸ್ಲಿಂ ಸಹೋದರಿಯರ ಕುಟುಂಬಕ್ಕೆ ಆಸರೆಯಾದ 'ಭಗವಾನ್ ಸಂಘ ಊರುಬೈಲು'


​ಅಶಕ್ತ ಕುಟುಂಬಕ್ಕೆ ಆಸರೆ

ನೆರೆ ಹಾವಳಿ ಇಳಿದ ಬಳಿಕ ಮತ್ತೊಮ್ಮೆ ಶ್ರೀ ಭಗವಾನ್ ಸಂಘದ ಸದಸ್ಯರು ಈ ಅಶಕ್ತ ಬಡ ಕುಟುಂಬದ ದುಸ್ಥಿತಿಗೆ ಮರುಗಿ ಮತ್ತೊಮ್ಮೆ ತಮ್ಮದೇ ಸಂಪನ್ಮೂಲಗಳನ್ನು ಬಳಸಿ, ಬಾವಿ ತೋಡಿ ಕುಡಿಯುವ ನೀರಿನ ವ್ಯವಸ್ಥೆ, ಮನೆಯ ದುರಸ್ಥಿ, ಮುಂತಾದ ಮೂಲಭೂತ ಅಗತ್ಯಗಳನ್ನು ಕಲ್ಪಿಸಿಕೊಟ್ಟಿದ್ದರು. ಈ ಸುದ್ದಿ ರಾಜ್ಯದ ಪ್ರಮುಖ ಮಾದ್ಯಮಗಳಲ್ಲಿ ಪ್ರಸಾರವಾಗಿ, ಜಾತಿ, ಮತ, ಧರ್ಮ ಪರಿಗಣಿಸದೆ ಶ್ರೀ ಭಗವಾನ್ ಸಂಘದ ಸೇವಾ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

ಆರ್ಥಿಕ ನೆರವು

ನಂತರದ ದಿನಗಳಲ್ಲಿ ಸಹೋದರಿಯರಿಬ್ಬರ ಜೀವನ ನಿರ್ವಹಣೆಗೆ ಕಷ್ಟವಾದಾಗ, ಸಂಪಾಜೆ ಸಹಕಾರ ಸಂಸ್ಥೆಯ ಆಧ್ಯಕ್ಷರು ಹಾಗೂ ಭಗವಾನ್ ಸಂಘದ ನಾಯಕರಾದ ಅನಂತ್ ಊರುಬೈಲುರವರು ತಮ್ಮ ಸಂಸ್ಥೆಯ ವತಿಯಿಂದ ಸಂತ್ರಸ್ತರ ನಿಧಿಯಡಿ ಆರ್ಥಿಕ ನೆರವನ್ನು ನೀಡಿ ಪರಿಸ್ಥಿತಿಯನ್ನು ಸುಧಾರಿಸಲು ಸಹಕರಿಸಿದ್ದಾರೆ.

ಸಹಾಯಕ್ಕೆ ಧಾವಿಸಿದ ಯುವಕರ ತಂಡ

​ಹುಸಿಯಾದ ಭರವಸೆ

ಹಲವಾರು ಸಂಘ ಸಂಸ್ಥೆಗಳು, ವ್ಯಕ್ತಿಗಳು ಕೊಯನಾಡಿನಲ್ಲಿರುವ ಈ ಬಡಕುಟುಂಬಕ್ಕೆ ನೆರವಾಗುವುದಾಗಿ ಭರವಸೆ ನೀಡಿದ್ದರು. ಆದರೆ, ಎಲ್ಲಾ ಭರವಸೆಗಳು ಭರವಸೆಗಳಾಗಿಯೇ ಉಳಿದು, ಅಂತಿಮವಾಗಿ ಅವರ ಮನೆಯೇ ಕುಸಿದು ಬೀಳುವ ಹಂತಕ್ಕೆ ಬಂದು ನಿಂತಿತ್ತು.

​ನೋವಿಗೆ ದನಿಯಾದ 'ಶ್ರೀ ಭಗವಾನ್ ಸಂಘ ಊರುಬೈಲು'

ಒಂದು ಕಡೆ ಕೊರೊನಾದ ಚಿಂತೆ, ಇನ್ನೊಂದು ಕಡೆ ಮಳೆಗಾಲದ ಚಿಂತೆ. ನಮ್ಮ ಸಹಾಯಕ್ಕೆ ಯಾರು ಧಾವಿಸಬಹುದು ಎಂದು ಎರಡು ವಯಸ್ಸಾದ ಹಿರಿಜೀವಗಳು ಜೀವವನ್ನು ಕೈಯಲ್ಲಿ ಹಿಡಿದು ಭಯದಲ್ಲೇ ಜೀವಿಸುತ್ತಿದ್ದರೆ, ಇವರ ನೋವನ್ನು ಅರ್ಥೈಸಿಕೊಂಡ ಶ್ರೀ ಭಗವಾನ್ ಸಂಘ ಊರುಬೈಲು ದಾನಿಗಳ ನೆರವು ಪಡೆದು ಮತ್ತು ತಮ್ಮ ಸ್ವಂತ ಖರ್ಚಿನಲ್ಲಿ ಸಂತ್ರಸ್ತರ ಮನೆಯ ಛಾವಣಿಯನ್ನು ಪುನರ್ನಿರ್ಮಾಣ ಮಾಡಿ ಮನೆ, ಪರಿಸರವನ್ನು ಸ್ವಚ್ಛಗೊಳಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಈ ಕಾರ್ಯಾಚರಣೆಯ ನೇತೃತ್ವವನ್ನು ಸಂಘದ ಸ್ಥಾಪಕರಾದ ಅನಂತ್ ಯನ್.ಸಿ ಊರುಬೈಲು ಮತ್ತು ಅಧ್ಯಕ್ಷ ರವಿರಾಜ್ ಹೊಸೂರು ವಹಿಸಿದ್ದರು.

​ಮಾನವೀಯತೆಯ ಮುಂದೆ ಜಾತಿ, ಮತ, ಧರ್ಮವೆಲ್ಲವೂ ಗೌಣ

ನೊಂದವರಿಗೆ ಸಹಾಯ ಮಾಡುವ ಮಾನವೀಯತೆಯ ಮುಂದೆ ಜಾತಿ, ಮತ, ಧರ್ಮವೆಲ್ಲವೂ ಗೌಣ ಎನ್ನುವ ಸಂದೇಶವನ್ನು ತಮ್ಮ ಸಮಾಜಮುಖಿ ಕಾರ್ಯಗಳಿಂದ ಮತ್ತೊಮ್ಮೆ ತೋರಿಸಿಕೊಟ್ಟ ' ಶ್ರೀ ಭಗವಾನ್ ಸಂಘ ಊರುಬೈಲು' ಇದರ ಸದಸ್ಯರ ಸೇವೆ ಸಹೃದಯರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಪ್ರದೇಶಗಳಲ್ಲಿ ಯಾವುದೇ ದುರಂತ, ಆಕಸ್ಮಿಕಗಳು ಸಂಭವಿಸಿದರೆ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ, ಅಶಕ್ತರಿಗೆ ನೆರವು ನೀಡುವಲ್ಲಿ, ಜನರನ್ನು ಜಾಗೃತಿಗೊಳಿಸುವಲ್ಲಿ 'ಶ್ರೀ ಭಗವಾನ್ ಸಂಘ ಊರುಬೈಲು' ಪ್ರಮುಖ ಪಾತ್ರವನ್ನು ವಹಿಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ