ಆ್ಯಪ್ನಗರ

ಪರಿಹಾರ ಕಾರ‍್ಯ ಹೈಜಾಕ್‌ ಅಗತ್ಯವಿಲ್ಲ: ಸಿಎಂ

ಕೊಡಗಿನ ಪ್ರಾಕೃತಿಕ ವಿಕೋಪ ಸಂತ್ರಸ್ತರು ಗೌರವದ ಬದುಕು ನಡೆಸಲು ಅನುಕೂಲವಾಗುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಪರಿಹಾರ ಕಾರ್ಯಗಳು ಅತ್ಯುತ್ತಮವಾಗಿ ನಡೆಯುತ್ತಿದ್ದು, ಯಾರೊಬ್ಬರೂ ಇದನ್ನು ಹೈಜಾಕ್‌ ಮಾಡುವ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

Vijaya Karnataka 8 Dec 2018, 5:00 am
ಮಡಿಕೇರಿ: ಕೊಡಗಿನ ಪ್ರಾಕೃತಿಕ ವಿಕೋಪ ಸಂತ್ರಸ್ತರು ಗೌರವದ ಬದುಕು ನಡೆಸಲು ಅನುಕೂಲವಾಗುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಪರಿಹಾರ ಕಾರ್ಯಗಳು ಅತ್ಯುತ್ತಮವಾಗಿ ನಡೆಯುತ್ತಿದ್ದು, ಯಾರೊಬ್ಬರೂ ಇದನ್ನು ಹೈಜಾಕ್‌ ಮಾಡುವ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
Vijaya Karnataka Web MDK-mdk7jay12


ಸೋಮವಾರಪೇಟೆ ತಾಲೂಕಿನ ಮಾದಾಪುರದ ಜಂಬೂರಿನಲ್ಲಿ ಶುಕ್ರವಾರ ನಡೆದ ಪ್ರಾಕೃತಿಕ ವಿಕೋಪದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸುವ ಕಾಮಗಾರಿಗೆ ಗುದ್ದಲಿ ಪೂಜೆ ಮತ್ತು ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಕೃತಿಕ ವಿಕೋಪದಂತಹ ಸಂದರ್ಭವನ್ನು ಸಮರ್ಥವಾಗಿ ಎದುರಿಸಿದ ಜಿಲ್ಲೆಯ ಜನತೆಯನ್ನು ಅಭಿನಂದಿಸಿದ ಅವರು, ''ಸಂಕಷ್ಟದ ಸಂದರ್ಭದಲ್ಲಿ ಸ್ಪಂದಿಸುವುದು ಸರಕಾರದ ಕರ್ತವ್ಯ. ಉದಾರತೆಯಿಂದ ಕೊಡುಗೆ ಕೊಟ್ಟಿದ್ದೇನೆ ಎಂದರೆ ಅದು ಹುಂಬತನ ಆಗುತ್ತದೆ. ನಾವೇನೂ ಮನೆಯಿಂದ ಹಣ ತಂದು ಖರ್ಚು ಮಾಡುವುದಿಲ್ಲ. ಜನರ ದುಡ್ಡು ಜನರಿಗೆ ತಲುಪಿಸಲಾಗುವುದು,'' ಎಂದರು.

''ಇನ್ಫೋಸಿಸ್‌ ಸೇರಿ ಸಾಕಷ್ಟು ಸಂಸ್ಥೆಗಳು, ವ್ಯಕ್ತಿಗಳು ಕೊಡಗು ಪುನರ್‌ ನಿರ್ಮಾಣ ಕಾರ್ಯಕ್ಕೆ ಮುಂದೆ ಬಂದಿದ್ದಾರೆ. ಎಲ್ಲರ ನೆರವನ್ನೂ ಬಳಸಿಕೊಳ್ಳಲಾಗುವುದು. ಈತನಕ ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ 102.23 ಕೋಟಿ ಜಮಾ ಆಗಿದೆ. ಸರಕಾರಿ ನೌಕರರ ಸಂಘದಿಂದ ನೀಡಿರುವ 100 ಕೋಟಿ ಸೇರಿದರೆ ಒಟ್ಟು 202.23 ಕೋಟಿ ಆಗುತ್ತದೆ. ಸರಕಾರಿ ನೌಕರರ ಹಣವನ್ನು ಅವರ ಅಭಿಲಾಷೆಯಂತೆ ಮನೆಗಳ ನಿರ್ಮಾಣಕ್ಕೆ ಬಳಸಿಕೊಂಡು ಮನೆಗಳ ಮೇಲೆ ನೌಕರರ ಸಂಘದ ಲಾಂಛನವನ್ನೂ ಹಾಕಲಾಗುತ್ತದೆ,'' ಎಂದು ಹೇಳಿದರು.

''ಸಂತ್ರಸ್ತರ ನಿರೀಕ್ಷೆ ಸಂಪೂರ್ಣ ಮುಟ್ಟಲಾಗದಿದ್ದರೂ ಉತ್ತಮ ಮಟ್ಟದ ಜೀವನ ನಡೆಸಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು. ಈಗಾಗಲೇ ಮುಖ್ಯಮಂತ್ರಿ ಅಧ್ಯಕ್ಷ ತೆಯಲ್ಲಿ ಕೊಡಗು ಪುನರ್‌ನಿರ್ಮಾಣ ಪ್ರಾಧಿಕಾರವೂ ರಚನೆ ಆಗಿದೆ. ಹಾಲಿ ಮನೆಗಳು ನಿರ್ಮಾಣ ಆಗುತ್ತಿರುವ ಜಾಗದಲ್ಲಿ 1.5 ಎಕರೆ ಭೂಮಿ ಬಳಸಿಕೊಂಡು ವಿದ್ಯುತ್‌ ಉಪಕೇಂದ್ರ ಆರಂಭಿಸುವಂತೆ,'' ಸೆಸ್ಕ್‌ ಅಧಿಕಾರಿಗಳಿಗೆ ಸ್ಥಳದಲ್ಲೇ ಅದೇಶ ನೀಡಿದರು.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮಾತನಾಡಿ, ''ಕರ್ನಾಟಕದ ಹೆಮ್ಮೆಯ ಜಿಲ್ಲೆಗೆ 118 ವರ್ಷಗಳ ನಂತರ ಇಂತಹ ಪ್ರಾಕೃತಿಕ ಆಪತ್ತು ಎದುರಾಗಿದೆ. ಹಾಗೆಂದು ಸರಕಾರ ಕೈಕಟ್ಟಿ ಕೂತಿಲ್ಲ. ಟೀಕೆಗಳಿಗೆ ಏನೂ ಮಾಡಲಾಗುವುದಿಲ್ಲ. ಪರಿಹಾರ ಕೆಲಸ ಮಾಡಲು ಸರಕಾರಕ್ಕೆ ಹಣದ ಕೊರತೆ ಇಲ್ಲ. ನಾವು ಸಂತ್ರಸ್ತರ ಜತೆ ಸದಾ ಇರುವುದಾಗಿ,'' ಭರವಸೆ ತುಂಬಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಮಾತನಾಡಿ, ''ಪ್ರಚಾರದ ಆಸೆ ಅಥವಾ ಬೇರೆಯವರ ಒತ್ತಾಯದಿಂದ ಕೆಲವರು ಸರಕಾರದ ವಿರುದ್ಧ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇಂತಹ ಮಾತುಗಳಿಂದ ಕೆಲಸ ಮಾಡುವವರ ಮನಸ್ಸಿಗೆ ನೋವಾಗುತ್ತದೆ. ಆದರೂ ಸರಕಾರ ಕೊಟ್ಟ ಮಾತಿನಂತೆ ಸಂತ್ರಸ್ತರ ಬಡಾವಣೆಗೆ ಒಳಚರಂಡಿ, ಬೀದಿ ದೀಪ, ಕಾಂಕ್ರೀಟ್‌ ರಸ್ತೆ, ಮೂಲಭೂತ ಸೌಕರ್ಯ ಕಲ್ಪಿಸಿ, ಮನೆ ಕಟ್ಟಿಸಿ ಕೊಟ್ಟ ನಂತರ ಆರ್ಥಿಕ ಸಹಕಾರ ನೀಡುವ ನಿಟ್ಟಿನಲ್ಲೂ ಚಿಂತನೆ ನಡೆಸಿದೆ,'' ಎಂದರು.

ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ವಸತಿ ಸಚಿವ ಯು.ಟಿ.ಖಾದರ್‌, ಸಂಸದ ಪ್ರತಾಪ್‌ ಸಿಂಹ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎ.ಹರೀಶ್‌, ಶಾಸಕರಾದ ಭೋಜೇಗೌಡ, ಸುನಿಲ್‌ ಸುಬ್ರಮಣಿ, ವೀಣಾ ಅಚ್ಚಯ್ಯ, ಕೆ.ಜಿ.ಬೋಪಯ್ಯ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಚ್‌.ಕೆ.ರಾಮು, ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್‌, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಐಜಿ ಶರತ್ಚಂದ್ರ, ಎಸ್ಪಿ ಡಾ.ಸುಮನ್‌ ಡಿ. ಪನ್ನೇಕರ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ