ಆ್ಯಪ್ನಗರ

ಕೊಡಗು: ಕಾಫಿ ಎಸ್ಟೇಟ್‌ ಮ್ಯಾನೇಜರ್‌ ಮೇಲೆ ಹಲ್ಲೆ, 5 ಲಕ್ಷ ದರೋಡೆ!

ಬ್ಯಾಂಕಿನಿಂದ ಹಣ ಪಡೆದು ವಾಪಸ್‌ ಬೈಕಿನಲ್ಲಿ ತೆರಳುತ್ತಿದ್ದ ಕಾಫಿ ಎಸ್ಟೇಟ್‌ ಮ್ಯಾನೇಜರ್ ಮೇಲೆ, ​ತೋಟದ ದಾರಿ ಮಧ್ಯೆ ಏಕಾಏಕಿ ಅಪರಿಚಿರಿಬ್ಬರೂ ಹಿಂದಿನಿಂದ ಹಲ್ಲೆ ನಡೆಸಿ, ಮಾರಕಾಸ್ತ್ರ ತೋರಿಸಿ, ಹಗ್ಗದಿಂದ ಕಟ್ಟಿಹಾಕಿ, ಮುಖದ ಮೇಲೆ ಹಲ್ಲೆ ನಡೆಸಿ ಹಣ ಮತ್ತು ಮೊಬೈಲ್‌ ದೋಚಿ ಪರಾರಿಯಾಗಿದ್ದಾರೆ.

Vijaya Karnataka Web 3 May 2020, 11:29 am
ಸುಂಟಿಕೊಪ್ಪ: ಕಾಫಿ ತೋಟದ ಕಾರ್ಮಿಕರಿಗೆ ವೇತನ ನೀಡಲು ಬ್ಯಾಂಕಿನಿಂದ ಹಣ ಪಡೆದು ವಾಪಸ್‌ ಬೈಕಿನಲ್ಲಿ ತೆರಳುತ್ತಿದ್ದ ವ್ಯವಸ್ಥಾಪಕರೊಬ್ಬರ ಮೇಲೆ ಆಗಂತಕರು ಹಲ್ಲೆನಡೆಸಿ, 5 ಲಕ್ಷ ರೂ. ಎಗರಿಸಿ ಪರಾರಿಯಾಗಿದ್ದಾರೆ. ಸುಂಟಿಕೊಪ್ಪದ ಕೆನರಾ ಬ್ಯಾಂಕಿನಿಂದ ಹರದೂರು ಗುಂಡುಕುಟ್ಟಿ ತೋಟದ ಮಾಲೀಕ ದಿ. ಜಿ.ಎಂ.ಮಹೇಂದ್ರ ಅವರ ಎಸ್ಟೇಟಿನ ವ್ಯವಸ್ಥಾಪಕ ವಿಜಯಕುಮಾರ್‌ 5.18 ಲಕ್ಷ ನಗದನ್ನು ಡ್ರಾ ಮಾಡಿಕೊಂಡು ವಾಪಸಾಗುತ್ತಿದ್ದರು. ಸುಂಟಿಕೊಪ್ಪ ಮಾದಾಪುರ ರಸ್ತೆಯ ಕರ್ನಲ್‌ ಕುಮಾರ್‌ ತೋಟಕ್ಕೆ ತೆರಳುವ ರಸ್ತೆ ಬದಿ ದ್ವಿಚಕ್ರ ವಾಹನವನ್ನು ನಿಲ್ಲಿಸಿಕೊಂಡು ನಿಂತಿದ್ದ ಇಬ್ಬರು ಅಪರಿಚಿತರು ವಿಜಯಕುಮಾರ್‌ ಅವರ ಬಳಿ ಕರ್ನಲ್‌ ಕುಮಾರ್‌ ಅವರ ಮನೆ ತೋರಿಸಿ ಎಂದು ಕೇಳಿದರು ಎನ್ನಲಾಗಿದೆ. ವಿಜಯ್‌ಕುಮಾರ್‌ ಅವರು ನನ್ನ ಹಿಂದೆ ಬರುವಂತೆ ಸೂಚಿಸಿ ಬೈಕಿನಲ್ಲಿ ಮುಂದೆ ಸಾಗಿದ್ದಾರೆ.
Vijaya Karnataka Web robbed


ತೋಟದ ದಾರಿ ಮಧ್ಯೆ ಏಕಾಏಕಿ ಅಪರಿಚಿರಿಬ್ಬರೂ ಹಿಂದಿನಿಂದ ಹಲ್ಲೆ ನಡೆಸಿ, ಮಾರಕಾಸ್ತ್ರ ತೋರಿಸಿ, ಹಗ್ಗದಿಂದ ಕಟ್ಟಿಹಾಕಿ, ಮುಖದ ಮೇಲೆ ಹಲ್ಲೆ ನಡೆಸಿ ಹಣ ಮತ್ತು ಮೊಬೈಲ್‌ ದೋಚಿ ಪರಾರಿಯಾಗಿದ್ದಾರೆ. ಸಮೀಪದ ಮುತ್ತಿನ ತೋಟದ ಬಳಿ ಕಸಿದುಕೊಂಡ ಮೊಬೈಲ್‌ ಸಿಕ್ಕಿದೆ. ಸುಂಟಿಕೊಪ್ಪ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಯಿಂದ ವಿಚಲಿತಗೊಂಡಿದ್ದ ವಿಜಯ್‌ಕುಮಾರ್‌ ಅವರಿಗೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪೇಣ್ನೆಕರ್‌, ಡಿವೈಎಸ್‌ಪಿ ಶೈಲೇಂದ್ರ, ವೃತ್ತ ನೀರೀಕ್ಷಕ ಮಹೇಶ್‌ ಸ್ಥಳಕ್ಕೆ ಭೇಟಿ ನೀಡಿದ್ದು, ಸುಂಟಿಕೊಪ್ಪ ಠಾಣಾಧಿಕಾರಿ ತಿಮ್ಮಪ್ಪ ಹಾಗೂ ಸಿಬ್ಬಂದಿ, ಅಪರಾಧ ವಿಭಾಗದ ಶ್ವಾನದಳ ತಂಡವು ಸ್ಥಳ ಪರಿಶೀಲಿಸಿ, ತನಿಖೆ ಚುರುಕುಗೊಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ