ಆ್ಯಪ್ನಗರ

ಕಾಫಿ ಬೆಳೆಗಾರರ ಸಮಸ್ಯೆ ಪರಿಶೀಲನೆಗೆ ಸಮಿತಿ

ಕಾಫಿ ಬೆಳೆಗಾರರ ಸಮಸ್ಯೆಯನ್ನು ಪರಿಪೂರ್ಣವಾಗಿ ಅಧ್ಯಯನ ನಡೆಸಿ ಕಾಫಿ ಮಂಡಳಿ ಅಧ್ಯಕ್ಷ ರಿಗೆ ಹೆಚ್ಚಿನ ಅಧಿಕಾರ ನೀಡುವ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ವಿಶೇಷ ಸಮಿತಿ ರಚಿಸಿ ಆದೇಶ ಹೊರಡಿಸಿದ್ದಾರೆ.

Vijaya Karnataka 25 Jul 2019, 5:00 am
ಅಧಿಕಾರಿಗಳಾದ ದರ್ಪಣ್‌ ಜೈನ್‌, ಪಿ.ಶರವಣನ್‌ ನೇತೃತ್ವ: ಸಚಿವ ಪಿಯೂಷ್‌ ಗೋಯಲ್‌ ಆದೇಶ
Vijaya Karnataka Web coffee growers problem review committee
ಕಾಫಿ ಬೆಳೆಗಾರರ ಸಮಸ್ಯೆ ಪರಿಶೀಲನೆಗೆ ಸಮಿತಿ


ಮಡಿಕೇರಿ:
ಕಾಫಿ ಬೆಳೆಗಾರರ ಸಮಸ್ಯೆಯನ್ನು ಪರಿಪೂರ್ಣವಾಗಿ ಅಧ್ಯಯನ ನಡೆಸಿ ಕಾಫಿ ಮಂಡಳಿ ಅಧ್ಯಕ್ಷ ರಿಗೆ ಹೆಚ್ಚಿನ ಅಧಿಕಾರ ನೀಡುವ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ವಿಶೇಷ ಸಮಿತಿ ರಚಿಸಿ ಆದೇಶ ಹೊರಡಿಸಿದ್ದಾರೆ.

ದಿಲ್ಲಿಯಲ್ಲಿ ರಾಜ್ಯದ ಸಂಸದರು, ಕರ್ನಾಟಕ ಬೆಳೆಗಾರರ ಒಕ್ಕೂಟ, ಕರ್ನಾಟಕ ಬೆಳೆಗಾರರ ಸಂಘ ಮತ್ತು ಉಪಾಸಿ ಸೇರಿದಂತೆ ನಾನಾ ಕಾಫಿ ಬೆಳೆಗಾರ ಸಂಘಟನೆಗಳ ಪ್ರಮುಖರು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ಅವರನ್ನು ಭೇಟಿಯಾಗಿ ಕಾಫಿ ಉದ್ಯಮ ಎದುರಿಸುತ್ತಿರುವ ಸಂಕಷ್ಟಗಳ ನಿವಾರಣೆ ನಿಟ್ಟಿನಲ್ಲಿ ಚರ್ಚೆ ನಡೆಸಿದರು.

ಈ ಸಂದರ್ಭ ಸಚಿವ ಪಿಯೂಷ್‌ ಗೋಯಲ್‌, ಕಾಫಿ ಬೆಳೆಗಾರರ ಸಮಸ್ಯೆಯನ್ನು ಖುದ್ದಾಗಿ ಪರಿಶೀಲಿಸಲು ಕೇಂದ್ರದ ವಾಣಿಜ್ಯ ಇಲಾಖೆಯ ತೋಟಗಾರಿಕಾ ವಿಭಾಗದ ಜಂಟಿ ಕಾರ್ಯದರ್ಶಿ ದರ್ಪಣ್‌ ಜೈನ್‌ ಮತ್ತು ತೋಟಗಾರಿಕಾ ವಿಭಾಗದ ನಿರ್ದೇಶಕ ಪಿ.ಶರವಣನ್‌ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆಯ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದರು. ''ಈ ಸಮಿತಿಯು 15 ದಿನಗಳೊಳಗಾಗಿ ಸಂಸತ್ತಿನ ಅಧಿವೇಶನ ಮುಗಿದ ಬಳಿಕ ಕಾರ್ಯಾರಂಭ ಮಾಡಲಿದ್ದು, ಕಾಫಿ ಬೆಳೆಯುವ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆಗಾರರ ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಿದೆ. ಬೆಳೆಗಾರರ ಸಂಘಟನೆಗಳೊಂದಿಗೆ ಚರ್ಚಿಸಿ ಅಧ್ಯಯನ ನಡೆಸಲಿದೆ. ಈ ಸಮಿತಿ ನೀಡುವ ವರದಿ ಆಧಾರದಲ್ಲಿ ಕೇಂದ್ರ ಸರಕಾರ ಕಾಫಿ ಬೆಳೆಗಾರರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂದು ತೀರ್ಮಾನಿಸುವುದಾಗಿ,''ಪಿಯೂಷ್‌ ಗೋಯಲ್‌ ತಿಳಿಸಿದರು.

ನಿಯೋಗದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್‌ ಸಿಂಹ, ತೇಜಸ್ವಿ ಸೂರ್ಯ, ಮುನಿಸ್ವಾಮಿ, ಪ್ರಭಾಕರ ಕೋರೆ, ಶಿವಕುಮಾರ ಉದಾಸಿ, ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್‌.ಭೋಜೇಗೌಡ, ಉಪಾಸಿಯ ಕಾಫಿ ಸಮಿತಿ ಅಧ್ಯಕ್ಷ ಜೆಫ್ರಿ ರೆಬೆಲ್ಲೊ, ಕರ್ನಾಟಕ ಬೆಳೆಗಾರರ ಸಂಘದ ಉಪಾಧ್ಯಕ್ಷ ಶಿರಿಷ್‌ ವಿಜಯೇಂದ್ರನ್‌, ಕೊಡಗು ಬೆಳೆಗಾರರ ಸಂಘದ ಪ್ರತಿನಿಧಿ ಐಚೆಟ್ಟೀರ ಬೋಪಣ್ಣ, ಕಾಫಿ ಎಕ್ಸ್‌ ಪೋರ್ಟರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ರಮೇಶ್‌ ರಾಜ, ಕಾಫಿ ಮಂಡಳಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀವತ್ಸ ಕೃಷ್ಣ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ