ಬಿಎಸ್ವೈ ವಿರುದ್ಧ ಟೀಕೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಟಾಂಗ್
ಮಡಿಕೇರಿ: ದೇಶದ ಇತಿಹಾಸ ಅರಿಯದ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅತ್ಯಂತ ಸಣ್ಣತನದಿಂದ ಮಾತನಾಡುತ್ತಿದ್ದು, ಅವರು ಮಾನಸಿಕ ಸ್ಥೀಮಿತ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಭೇಟಿ ನೀಡಿದ ದಿನೇಶ್ ಗುಂಡೂರಾವ್ ಪಕ್ಷ ದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ, ಆರ್ಎಸ್ಎಸ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದನ್ನು ಖಂಡಿಸುವುದಾಗಿ ಹೇಳಿದರು.
ಖರ್ಗೆ ಅವರು ಲೋಕಸಭೆಯಲ್ಲಿ ಬಿಜೆಪಿ ವಿರುದ್ಧ ಮಾತನಾಡಿ ಛೀಮಾರಿ ಹಾಕಿಸಿಕೊಂಡಿದ್ದು ಅವರ ಹಾದಿಯನ್ನೇ ದಿನೇಶ್ ಗುಂಡೂರಾವ್ ಮುಂದುವರಿಸಿದ್ದಾರೆಂದು ಟೀಕಿಸಿದರು.
ಕೊಡಗು ಜಿಲ್ಲೆಯ ಮಾಜಿ ಮುಖ್ಯಮಂತ್ರಿ ಮಗನಾಗಿ ಗುಂಡೂರಾವ್ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ದಿನೇಶ್ ಗುಂಡೂರಾವ್ ಅವರು ಮಂತ್ರಿ ಸ್ಥಾನದಲ್ಲಿ ವೈಫಲ್ಯ ಕಂಡಿರುವುದರಿಂದ ಕಾಂಗ್ರೆಸ್ ಪಕ್ಷ ಕಾಟಾಚಾರಕ್ಕೆ ಅವರಿಗೆ ಕಾರ್ಯಾಧ್ಯಕ್ಷ ಸ್ಥಾನವನ್ನು ನೀಡಿದೆ ಎಂದು ಟೀಕಿಸಿದ್ದಾರೆ.
60 ಎಕರೆ ಒತ್ತುವರಿ ಆರೋಪ: ದಿನೇಶ್ ಗುಂಡೂರಾವ್ ಅವರು ಬೆಂಗಳೂರಿನಲ್ಲಿ 60 ಎಕರೆ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿದ ಮನು ಮುತಪ್ಪ ಗುಂಡೂರಾವ್ ಅವರಿಂದ ಬಿಜೆಪಿ ಪಾಠ ಕಲಿಯಬೇಕಿಲ್ಲ. ಯುಪಿಎ ಸರಕಾರದಲ್ಲಿರುವ ಎಲ್ಲರೂ ಭ್ರಷ್ಟರೇ. ಯುಪಿಎ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರಗಳ ಸರಮಾಲೆಯೇ ನಡೆದಿದೆ ಎಂದು ತಿರುಗೇಟು ನೀಡಿದರು.
ಬಿಜೆಪಿ ಹಲವು ನಾಯಕರು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದಾರೆ. 1925 ರಿಂದಲೇ ಆರ್ಎಸ್ಎಸ್ ಸ್ವಾತಂತ್ರ ಚಳುವಳಿಯಲ್ಲಿ ತೊಡಗಿಸಿಕೊಂಡಿದೆ. ಆದರೆ ಇದು ಕಾಂಗ್ರೆಸ್ನವರಿಗೆ ನೆನಪಿಲ್ಲ. ಗುಂಡೂರಾವ್ ಬಿಜೆಪಿಯದ್ದು ಹಿಟ್ಲರ್ ಸಂಸ್ಕೃತಿ ಎನ್ನುತ್ತಾರೆ ಆದರೆ ಕಾಂಗ್ರೆಸ್ ದೇಶವನ್ನು ಒಡೆದು ಆಳುವ ನೀತಿ ಮಾಡಿತ್ತು. ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೆ ತೆರುವ ಮೂಲಕ ಸರ್ವಾಧಿಕಾರಿ ಧೋರಣೆ ಮಾಡಿದ್ದರು ಎಂದರು.
1947ರಲ್ಲೇ ನೈಜವಾದ ಕಾಂಗ್ರೆಸ್ ಮುಕ್ತವಾಗಿದೆ. ಇಂದು ಅಸಲಿ ಬದಲಾಗಿ ನಕಲಿ ಕಾಂಗ್ರೆಸ್ ಅಸ್ಥಿತ್ವದಲ್ಲಿದೆ. ಗಾಂಧಿ ಅವರ ಹೆಸರನ್ನಿಟ್ಟುಕೊಳ್ಳುವ ಮೂಲಕ ಮಹತ್ಮಾ ಗಾಂಧಿ ಅವರ ಹೆಸರಿಗೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಮಾರಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವುದೇ ಕಾಂಗ್ರೆಸ್ನ ಕೊಡುಗೆ. ಕೊಂಗಣಹೊಳೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ಸ್ಥಳೀಯರ ವಿರುದ್ಧದ ಹಿನ್ನಲೆ ಅನಧಿಕೃತವಾಗಿ ಸರ್ವೇ ಮಾಡುವ ಮೂಲಕ ಕೊಡಗಿನ ಜನರ ಕಣ್ಣಿಗೆ ಬೂದಿ ಎರಚುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ದೂರಿದರು.
ಮೋದಿ ಸರಕಾರದ ನೋಟು ನಿಷೇಧದಿಂದ ತತ್ತರಿಸಿದ ಕಾಂಗ್ರೆಸ್ ಇಂದು ಹತಾಶರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ನ ಎಲ್ಲ ಹಗರಣಗಳು ಬೆಳಕಿಗೆ ಬರಲಿದೆ ಎಂದರು.
ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಮಾತನಾಡಿ, ದಿನೇಶ್ ಗುಂಡೂರಾವ್ ಕಾಂಗ್ರೆಸ್ ಕಾರ್ಯಧ್ಯಕ್ಷ ನಾಗಿರುವುದು ಪಕ್ಷ ದ ಅಧಃಪತನದ ಸಂಕೇತ. ದೇಶದ ಇತಿಹಾಸವನ್ನೇ ತಿಳಿಯದವನು ರಾಜ್ಯಕ್ಕೆ ಯಾವ ಕೊಡುಗೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.
ಡಾ. ಬಿ. ಆರ್ ಅಂಬೇಡ್ಕರ್ ಅವರನ್ನು ಸಂಸತ್ತಿಗೆ ಪ್ರವೇಶ ಮಾಡದ ರೀತಿ ಮಾಡಿದವರು ಕಾಂಗ್ರೆಸ್ ನವರು, ಚುನಾವಣೆಯಲ್ಲಿ ಸೋಲಿಸಿದವರು ಕಾಂಗ್ರೆಸ್ ನವರು, ಇವರಿಗೆ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲೋಕೇಶ್, ಬಾಲಚಂದ್ರ ಕಳಗಿ, ಅರುಣ್ ಕುಮಾರ್ ಹಾಗೂ ಜಿಲ್ಲಾ ಕಾರ್ಯದರ್ಶಿ ರವಿ ಬಸಪ್ಪ ಇದ್ದರು.