ಪೊನ್ನಂಪೇಟೆ (ಕೊಡಗು)
ವಿರಾಜಪೇಟೆ ತಾಲೂಕು ಗೋಣಿಕೊಪ್ಪಲುವಿನಲ್ಲಿ ಮನೆ ನಿರ್ಮಾಣ ಕೆಲಸ ಮಾಡುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಮೃತಪಟ್ಟಿದ್ದಾರೆ.
ರಾಯಚೂರಿನ ವರುಣಕೋಡು ಗ್ರಾಮದ ಯಮನೂರು (25) ಮೃತರು.
ಪಟ್ಟಣದ ಉಮಾಮಹೇಶ್ವರಿ ದೇವಸ್ಥಾನದ ಎದುರಿನಲ್ಲಿ ರಾಧಾಕೃಷ್ಣ ಎಂಬುವವರಿಗೆ ಸೇರಿದ ಮನೆ ನಿರ್ಮಾಣ ಕೆಲಸ ನಡೆಯುತ್ತಿದೆ. ಕಾರ್ಮಿಕ ಯಮನೂರು ಅವರು ಕಟ್ಟಡ ನಿರ್ಮಾಣಕ್ಕೆ ಬಳಸಲು ಕಬ್ಬಿಣದ ಕಂಬಿ ಮೇಲೆತ್ತುವಾಗ ಅದು ವಿದ್ಯುತ್ ತಂತಿಗೆ ತಗುಲಿದ್ದು, ತೀವ್ರ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟರು. ಸ್ಥಳಕ್ಕೆ ಸೆಸ್ಕ್ ಜೆಇ ಕೃಷ್ಣಕುಮಾರ್, ಪೊಲೀಸ್ ವೃತ್ತ ನಿರೀಕ್ಷ ಕ ದಿವಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮನೆ ಸಮೀಪ ನೆಲದಿಂದ ಕೇವಲ 20 ಅಡಿಗಳಷ್ಟು ಎತ್ತರದಲ್ಲಿ 11 ಕೆ. ವಿ. ವಿದ್ಯುತ್ ತಂತಿ ಹಾದು ಹೋಗಿರುವುದರಿಂದ ಅವಘಡ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗ್ರಾಮ ಪಂಚಾಯಿತಿ ಮನೆ ಕಟ್ಟಲು ಅನುಮತಿ ನೀಡುವಾಗ ಪರಿಶೀಲನೆ ನಡೆಸಬೇಕಿತ್ತು ಎಂಬ ಆರೋಪ ವ್ಯಕ್ತವಾಗಿದೆ. ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.