ಆ್ಯಪ್ನಗರ

ಗಾಂಧಿ ಹತ್ಯೆ ಪ್ರಹಸನ: ದೇಶದ್ರೋಹಿಗಳ ಗಡಿಪಾರಿಗೆ ಆಗ್ರಹ

ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಲ್ಲುವ ಪ್ರಹಸನ ಮಾಡುವ ದ್ರೋಹಿಗಳನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಪ್ರಗತಿಪರ ಜನಾಂದೋಲನ ವೇದಿಕೆಯ ಜಿಲ್ಲಾ ಸಂಚಾಲಕ ವಿ.ಪಿ.ಶಶಿಧರ್‌ ಒತ್ತಾಯಿಸಿದ್ದಾರೆ.

Vijaya Karnataka 5 Feb 2019, 5:00 am
ಸೋಮವಾರಪೇಟೆ: ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಲ್ಲುವ ಪ್ರಹಸನ ಮಾಡುವ ದ್ರೋಹಿಗಳನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಪ್ರಗತಿಪರ ಜನಾಂದೋಲನ ವೇದಿಕೆಯ ಜಿಲ್ಲಾ ಸಂಚಾಲಕ ವಿ.ಪಿ.ಶಶಿಧರ್‌ ಒತ್ತಾಯಿಸಿದ್ದಾರೆ.
Vijaya Karnataka Web gandhi murder drama extradition demanded
ಗಾಂಧಿ ಹತ್ಯೆ ಪ್ರಹಸನ: ದೇಶದ್ರೋಹಿಗಳ ಗಡಿಪಾರಿಗೆ ಆಗ್ರಹ


''ಸ್ವತಂತ್ರ ಭಾರತ ಎಂದರೆ ಮಹಾತ್ಮ ಗಾಂಧೀಜಿ, ವಿದೇಶಿಗರು ಕೂಡ ಅರಾಧಿಸುವ ದೈವ ಅವರು, ಅಂತಹವರ ಸಾವನ್ನು ಸಂಭ್ರಮಿಸುವ ಮನಸ್ಥಿತಿಯವರು ಗಾಂಧೀಜಿಯ ಭಾವಚಿತ್ರಕ್ಕೆ ನಕಲಿ ಪಿಸ್ತೂಲಿನಿಂದ ಗುಂಡು ಹಾರಿಸಿ ಕೃತಕವಾಗಿ ಎದೆಯಿಂದ ಚಿಮ್ಮುವ ರಕ್ತವನ್ನು ನೋಡಿ ವಿಕೃತ ಸಂತೋಷ ಪಡುವವರು ಇಂದಿಗೂ ಭಾರತದಲ್ಲಿದ್ದಾರೆ ಎಂಬುದೇ ದೇಶದ ದುರಂತ,'' ಎಂದು ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

''ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರದ ಮಂತ್ರಿಯೊಬ್ಬರು ಕೊಡಗಿಗೆ ಬಂದು ಕೈ ಕಡಿಯಿರಿ ಎಂದು ತನ್ನ ಸಂಘದವರಿಗೆ ಸಾರ್ವಜನಿಕವಾಗಿ ಆದೇಶ ಕೊಟ್ಟು ಹೋಗುತ್ತಾರೆ. ಈ ಹೇಳಿಕೆಯಿಂದ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಡೀ ದೇಶ ತಲೆತಗ್ಗಿಸುವಂತಾಗಿದೆ. ಪ್ರಧಾನಿಗಳಾದ ನರೇಂದ್ರ ಮೋದಿಯವರಿಗೆ ದೇಶದ ಘನತೆಯನ್ನು ಕಾಪಾಡುವ ಮನಸ್ಸಿದ್ದರೆ, ಕೂಡಲೆ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು,'' ಎಂದು ಒತ್ತಾಯಿಸಿದರು.

''ಕೊಡಗಿನಲ್ಲಿ ಬೆರಳಣಿಕೆಯ ಪ್ರಾಮಾಣಿಕ ಅಧಿಕಾರಿಗಳಿದ್ದಾರೆ. ಅಂತಹ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾವಣೆ ಮಾಡುವ ಪಟ್ಟಭದ್ರ ಹಿತಾಸಕ್ತಿಗಳ ತಂಡ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯ ಎಡಿಎಲ್‌ಆರ್‌ ಷಂಶುದ್ಧೀನ್‌ ಎಂಬ ಪ್ರಾಮಾಣಿಕ ಅಧಿಕಾರಿಯನ್ನು ಹಿತರಕ್ಷ ಣೆ ಸಮಿತಿ ಹೆಸರಿನಲ್ಲಿ ಮಾನಸಿಕ ಹಾಗೂ ನೈತಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಅವರ ವರ್ಗಾವಣೆಗೆ ಒತ್ತಡ ಹೇರಲಾಗುತ್ತಿದೆ. ಜಿಲ್ಲಾಡಳಿತ ಪ್ರಾಮಾಣಿಕ ಅಧಿಕಾರಿಗಳ ರಕ್ಷ ಣೆಗೆ ನಿಲ್ಲಬೇಕು. ವರ್ಗಾವಣೆ ಪ್ರಯತ್ನಕ್ಕೆ ಮುಂದಾದರೆ, ವೇದಿಕೆ ತೀವ್ರ ತರದ ವಿರೋಧ ವ್ಯಕ್ತಪಡಿಸಲಿದೆ,'' ಎಂದು ಎಚ್ಚರಿಸಿದರು.

''ಕೊಡಗಿನಲ್ಲಿ ಅನೇಕ ಗಂಡಾಂತರಗಳು, ಅಪಾಯಕಾರಿ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಸ್ವಚ್ಛ ಹಾಗೂ ಆರೋಗ್ಯಪೂರ್ಣ ಕೊಡಗು ನಿರ್ಮಾಣದ ಜವಾಬ್ದಾರಿ ಪ್ರಜ್ಞಾವಂತ ಪ್ರಗತಿಪರರ ಕೈಯಲ್ಲಿದೆ. ಪರಸ್ಪರ ಸೌಹಾರ್ದ ಹಾಗೂ ಭಾತೃತ್ವದಿಂದ ಮುಂದಿನ ಪೀಳಿಗೆಯೂ ಬದುಕಬೇಕಾಗಿದೆ. ರಾಜಕೀಯ ಗದ್ದುಗೆ ಹಿಡಿಯಲು ನಿರ್ದಿಷ್ಟ ಧರ್ಮವನ್ನು ದ್ವೇಷಿಸುತ್ತ ಮತಗಳ ಕ್ರೋಢೀಕರಣದ ಧಾವಂತದಲ್ಲಿ ಜಿಲ್ಲೆಯಲ್ಲಿ ಕ್ಷೋಭೆಯನ್ನು ಸೃಷ್ಟಿಸುತ್ತಿದ್ದಾರೆ. ಸಾಮಾಜಿಕ ಜಾಗೃತಿಗಾಗಿ ಜಾತ್ಯತೀತ ಮನಸುಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಮುಂದುವರಿದಿದೆ. ಸಂಘಟನೆ ಹಾಗೂ ಜಾಗೃತಿಗಾಗಿ ತಾಲೂಕಿನ ಆರು ಹೋಬಳಿಗಳಲ್ಲಿ ಚಾಲನ ಸಮಿತಿಯನ್ನು ರಚಿಸಲಾಗಿದೆ,'' ಎಂದು ಹೇಳಿದರು.

ವೇದಿಕೆಯ ಹೋಬಳಿ ಸಮಿತಿ ಅಧ್ಯಕ್ಷ ಎಚ್‌.ಎಂ.ಸೋಮಪ್ಪ, ಜಿಲ್ಲಾ ಸಮಿತಿ ಸದಸ್ಯ ಡಿ.ಎಸ್‌.ನಿರ್ವಾಣಪ್ಪ, ಪ್ರಮುಖರಾದ ಕೆ.ಎ.ಆದಂ, ಬಿ.ಇ.ಜಯೇಂದ್ರ, ಕೆ.ಪಿ.ರವೀಶ್‌, ಪಿ.ಎ.ಅಬ್ಬಾಸ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ