ಆ್ಯಪ್ನಗರ

ಹನಿಟ್ರ್ಯಾಪ್‌: ಯುವತಿ ಸೇರಿ 6 ಮಂದಿ ಬಂಧನ

ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸೇರಿ ಎಮ್ಮೆಮಾಡು ಗ್ರಾಮದ 6 ಮಂದಿಯನ್ನು ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ. ಆದರೆ ಪ್ರಮುಖ ಆರೋಪಿ ಪೊಲೀಸರತ್ತ ಗುಂಡು ಹಾರಿಸಿ ತಪ್ಪಿಸಿಕೊಂಡಿದ್ದಾನೆ.

Vijaya Karnataka 28 Sep 2019, 5:00 am
ಪೊಲೀಸರತ್ತ ಗುಂಡು ಹಾರಿಸಿ ಪ್ರಮುಖ ಆರೋಪಿ ಪರಾರಿ
Vijaya Karnataka Web honeytrap six arrested with young woman
ಹನಿಟ್ರ್ಯಾಪ್‌: ಯುವತಿ ಸೇರಿ 6 ಮಂದಿ ಬಂಧನ


ಮಡಿಕೇರಿ:
ಹನಿಟ್ರ್ಯಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸೇರಿ ಎಮ್ಮೆಮಾಡು ಗ್ರಾಮದ 6 ಮಂದಿಯನ್ನು ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ. ಆದರೆ ಪ್ರಮುಖ ಆರೋಪಿ ಪೊಲೀಸರತ್ತ ಗುಂಡು ಹಾರಿಸಿ ತಪ್ಪಿಸಿಕೊಂಡಿದ್ದಾನೆ.

ಮಡಿಕೇರಿ ತಾಲೂಕು ಎಮ್ಮೆಮಾಡು ಗ್ರಾಮದ ಮೊಹಮ್ಮದ್‌ ಅಜರುದ್ದೀನ್‌, ಅಬೂಬಕ್ಕರ್‌ ಸಿದ್ದಿಕ್‌, ಹಸೈನಾರ್‌, ಇರ್ಷಾದ್‌ ಅಲಿ, ಎ.ಎ. ಸಮೀರ್‌ ಹಾಗೂ ಯುವತಿಯನ್ನು ಬಂಧಿಸಲಾಗಿದ್ದು, ಆರೋಪಿಗಳಿಂದ 1 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ಕರೀಂ ಸೇರಿ ಇತರ ನಾಲ್ವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ದುಬೈನಲ್ಲಿ ನೌಕರಿಯಲ್ಲಿದ್ದ ಎಮ್ಮೆಮಾಡು ಗ್ರಾಮದ ಗಫೂರ್‌ ಅವರು ಸ್ವಗ್ರಾಮದಲ್ಲಿ ಮನೆ ಕಟ್ಟಿಸುವ ಉದ್ದೇಶದಿಂದ ಊರಿಗೆ ಬಂದಿದ್ದರು. ಗಫೂರ್‌ ಬಳಿ ದೊಡ್ಡ ಮೊತ್ತದ ಹಣ ಇದ್ದು ಅದನ್ನು ಲಪಟಾಯಿಸುವ ಉದ್ದೇಶದಿಂದ ಅವರನ್ನು ಹನಿಟ್ರ್ಯಾಪ್‌ ಬಲೆಗೆ ಕೆಡವಲು ಅದೇ ಗ್ರಾಮದ ಕರೀಂ ಮತ್ತು ಇತರರು ಸಂಚು ರೂಪಿಸಿದರು. ಮೊದಲೇ ರೂಪಿಸಿದ ಪ್ಲಾನ್‌ನಂತೆ ಗಫೂರ್‌ ಅವರನ್ನು ಆರೋಪಿಗಳ ಒಂದು ತಂಡದವರು ಮೈಸೂರಿಗೆ ಕರೆದೊಯ್ಯುತ್ತಾರೆ. ದಾರಿ ಮಧ್ಯೆ ಕುಶಾಲನಗರದಲ್ಲಿ ಆರೋಪಿ ಯುವತಿಯನ್ನೂ ತಮ್ಮ ವಾಹನಕ್ಕೆ ಹತ್ತಿಸಿಕೊಳ್ಳುತ್ತಾರೆ. ಮೈಸೂರಿನಲ್ಲಿ ಹೋಂಸ್ಟೇ ಒಂದಕ್ಕೆ ವಿಶ್ರಾಂತಿಗೆಂದು ತೆರಳಿ ಅಲ್ಲಿ ಗಫೂರ್‌ಗೆ ಮಾದಕ ಪದಾರ್ಥ ಕೊಡುತ್ತಾರೆ. ಇದೇ ವೇಳೆಗೆ ತಾವು ಪ್ರೆಸ್‌ನವರು ಎಂದುಕೊಂಡು ರೂಂಗೆ ನುಗ್ಗುವ ಆರೋಪಿಗಳ ಇನ್ನೊಂದು ತಂಡ ಗಫೂರ್‌ಗೆ ಥಳಿಸಿ ಅವರ ಬಳಿ ಇದ್ದ ಹಣ ಕಿತ್ತುಕೊಳ್ಳುತ್ತಾರೆ. ಬಲವಂತವಾಗಿ ಯುವತಿ ಜೊತೆಯಲ್ಲಿ ನಿಲ್ಲಿಸಿ ಫೋಟೋ ತೆಗೆದು, ವೀಡಿಯೋ ಚಿತ್ರೀಕರಿಸಿ 50 ಲಕ್ಷ ರೂ.ಗೆ ಬೇಡಿಕೆ ಇಡುತ್ತಾರೆ. ಕೊನೆಗೆ 3 ಲಕ್ಷಕ್ಕೆ ವ್ಯವಹಾರ ಕುದುರುತ್ತದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಗಫೂರ್‌ ತಿಳಿಸಿದ್ದಾರೆ.

ಪೊಲೀಸರತ್ತ ಗುಂಡು: ಘಟನೆ ನಂತರ ಊರಿಗೆ ಮರಳುವ ಗಫೂರ್‌ ನಾಪೋಕ್ಲು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗುವ ಪೊಲೀಸರು ಪ್ರಮುಖ ಆರೋಪಿ ಕರೀಂನನ್ನು ಬಂಧಿಸಲು ತೆರಳಿದ ವೇಳೆ ಆತ ಪೊಲೀಸರ ಮೇಲೆಯೇ ಗುಂಡು ಹಾರಿಸಲು ಯತ್ನಿಸಿ, ತನ್ನ ಇಬ್ಬರು ಪತ್ನಿಯರ ಜೊತೆ ತಪ್ಪಿಸಿಕೊಂಡಿದ್ದಾನೆ. ಪೊಲೀಸರಿಗೆಂದು ಹಾರಿಸಿದ ಗುಂಡು ಕರೀಂನ ಮನೆ ಕಾಂಪೌಂಡ್‌ಗೆ ತಗುಲಿದೆ.

ಜಿಲ್ಲಾಎಸ್‌ಪಿ ಡಾ.ಸುಮನ್‌ ಡಿ. ಪನ್ನೇಕರ್‌ ಮಾರ್ಗದರ್ಶನದಲ್ಲಿ ಜಿಲ್ಲಾಅಪರಾಧ ಪತ್ತೆ ದಳದ ಪೊಲೀಸ್‌ ನಿರೀಕ್ಷಕ ಎಂ. ಮಹೇಶ್‌ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್‌ಐ ಹಮೀದ್‌, ಸಿಬ್ಬಂದಿ ಬಿ.ಎಲ್‌. ಯೋಗೇಶ್‌, ಎಂ.ಎನ್‌.ನಿರಂಜನ್‌, ವಿ.ಜಿ. ವೆಂಕಟೇಶ್‌, ಕೆ.ಎಸ್‌. ಅನಿಲ್‌ ಕುಮಾರ್‌, ಕೆ.ಆರ್‌. ವಸಂತ, ಸುಮತಿ ಎಂ.ಜಿ., ಮಹೇಶ್‌ ಯು.ಎ., ಸಿ.ಕೆ. ರಾಜೇಶ್‌ ಹಾಗೂ ಗಿರೀಶ್‌ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ