ಆ್ಯಪ್ನಗರ

ಚಂಡ ವ್ಯಾಘ್ರನ ಹಿಮ್ಮೆಟ್ಟಿಸಿದ ‘ಕರ್ಪಿ’ಗೆ ಈಗ ತಾಯ್ತನದ ಖುಷಿ !

ವಿರಾಜಪೇಟೆ ತಾಲೂಕಿನ ಮರಪಾಲ ಗ್ರಾಮದಲ್ಲಿ ಹುಲಿಯೊಂದಿಗೆ ಹೋರಾಡಿ ಗೆದ್ದಿದ್ದ ತುಂಬು ಗರ್ಭಿಣಿ ಹಸುವೊಂದು ಈಗ ಮುದ್ದಾದ ಕರುವಿಗೆ ಜನ್ಮ ನೀಡಿದ್ದು, ತಾಯ್ತನದ ಖುಷಿ ಅನುಭವಿಸುತ್ತಿದೆ.

Vijaya Karnataka Web 28 May 2019, 9:03 pm
ಮಡಿಕೇರಿ
Vijaya Karnataka Web karpi gives birth to calf
ಚಂಡ ವ್ಯಾಘ್ರನ ಹಿಮ್ಮೆಟ್ಟಿಸಿದ ‘ಕರ್ಪಿ’ಗೆ ಈಗ ತಾಯ್ತನದ ಖುಷಿ !


ವಿರಾಜಪೇಟೆ ತಾಲೂಕಿನ ಮರಪಾಲ ಗ್ರಾಮದಲ್ಲಿ ಹುಲಿಯೊಂದಿಗೆ ಹೋರಾಡಿ ಗೆದ್ದಿದ್ದ ತುಂಬು ಗರ್ಭಿಣಿ ಹಸುವೊಂದು ಈಗ ಮುದ್ದಾದ ಕರುವಿಗೆ ಜನ್ಮ ನೀಡಿದ್ದು, ತಾಯ್ತನದ ಖುಷಿ ಅನುಭವಿಸುತ್ತಿದೆ.

ಇಲ್ಲಿನ ರವಿ ಎಂಬುವವರಿಗೆ ಸೇರಿದ ಹಸು 10 ದಿನಗಳ ಹಿಂದೆ ಕಾಫಿ ತೋಟದಲ್ಲಿ ಮೇಯುತ್ತಿದ್ದ ವೇಳೆ ಹುಲಿ ದಾಳಿ ಮಾಡಿತ್ತು. ಕೂಡಲೇ ಎಚ್ಚೆತ್ತುಕೊಂಡಿದ್ದ ಆ ಹಸು ತನ್ನ ಹೊಟ್ಟೆಯಲ್ಲಿರುವ ಕಂದಮ್ಮನ ಕಾಪಾಡಲು ಎಂಬಂತೆ ಹುಲಿಯೊಂದಿಗೆ ಸುಮಾರು ನಾಲ್ಕು ನಿಮಿಷಕ್ಕೂ ಹೆಚ್ಚು ಕಾಲ ಹೋರಾಟ ನಡೆಸಿ ಚಂಡ ವ್ಯಾಘ್ರ ಹಿಮ್ಮೆಟ್ಟುವಂತೆ ಮಾಡುವುದರೊಂದಿಗೆ ತನ್ನ ಜತೆಯಲ್ಲಿ ಕರುಳ ಕುಡಿಯ ಪ್ರಾಣವನ್ನೂ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಈ ವೇಳೆ ದೇಹದ ಹಲವೆಡೆ ಗಂಭೀರ ಗಾಯಗಳಾಗಿ ನರಳುತ್ತಿದ್ದ ತನ್ನ ಪ್ರೀತಿಯ ಹಸು 'ಕರ್ಪಿ'ಗೆ ಚಿಕಿತ್ಸೆ ಕೊಡಿಸಿದ ರವಿ ಅದು ಚೇತರಿಸಿಕೊಳ್ಳುವಂತೆ ನೋಡಿಕೊಂಡಿದ್ದಾರೆ. ಹಸು ಈಗ ಮುದ್ದಾದ ಕರುವಿಗೆ ಜನ್ಮ ನೀಡಿದೆ. ಹುಲಿ ದಾಳಿಯಿಂದ ಕಾಲು, ಕುತ್ತಿಗೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿದ್ದರೂ, ಕಂದಮ್ಮನ ತುಂಟಾಟಗಳನ್ನು ನೋಡುತ್ತ ನೋವನ್ನೆಲ್ಲ ಮರೆಯುವ ಪ್ರಯತ್ನ ಮಾಡುತ್ತಿದೆ.

ಗ್ರಾಮಸ್ಥರಲ್ಲಿ ಸಂತಸ: ಕೊಡಗಿನ ಹಲವೆಡೆ ಇತ್ತೀಚಿಗೆ ಹುಲಿ ಹಾವಳಿ ಮಿತಿಮೀರಿದೆ. ಕೊಟ್ಟಿಗೆಯಲ್ಲಿ ಕಟ್ಟಿರುವ ಜಾನುವಾರುಗಳನ್ನು ಕೊಂದು ತಿನ್ನುವುದು ಸಾಮಾನ್ಯ ಎಂಬಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮರಪಾಲದ ಹಸು ಹುಲಿ ವಿರುದ್ಧವೇ ತಿರುಗಿ ನಿಂತು ತನ್ನ ಜತೆಯಲ್ಲಿ ಹೊಟ್ಟೆಯಲ್ಲಿದ್ದ ಕರುವಿನ ಪ್ರಾಣವನ್ನೂ ಉಳಿಸಿಕೊಂಡಿರುವುದು ಗ್ರಾಮಸ್ಥರ ಖುಷಿಗೆ ಕಾರಣವಾಗಿದೆ.


ವ್ಯಾಘ್ರನ ಜತೆ ನಡೆದ ಸುಮಾರು ನಾಲ್ಕು ನಿಮಿಷ ನಡೆದ ಕಾಳಗದಲ್ಲಿ 'ಕರ್ಪಿ' ತನ್ನ ಪ್ರಾಣ ಉಳಿಸಿಕೊಳ್ಳುವುದರ ಜತೆಗೆ ಕಂದಮ್ಮನ ಜೀವವನ್ನೂ ಉಳಿಸುವ ಮೂಲಕ ಮಹಾತಾಯಿ ಅನ್ನಿಸಿಕೊಂಡಿದ್ದಾಳೆ. ಮೈ ಪೂರ್ತಿ ರಕ್ತ ಸುರಿಸುತ್ತ, ನೋವಿನಿಂದ ನರಕ ಯಾತನೆ ಅನುಭವಿಸುತ್ತಿದ್ದರೂ ಮತ್ತೊಂದು ಜೀವಕ್ಕೆ ಜೀವಕೊಟ್ಟ ಜೀವದಾತೆ ಆಕೆ.

-ರವಿ, ಹಸುವಿನ ಮಾಲೀಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ