ಆ್ಯಪ್ನಗರ

ಕೊಡಗು ದುರಂತಕ್ಕೆ ಸಾಮಾಜಿಕ ಅರಣ್ಯ ಕಾರಣ?

ಕೊಡಗಿನಲ್ಲಿ ಸಂಭವಿಸಿದ ಭೂಕುಸಿತ ದುರಂತಕ್ಕೆ ಸಾಮಾಜಿಕ ಅರಣ್ಯದ ಮರಗಳು ಕಾರಣವಾಯಿತೇ? ಅವೈಜ್ಞಾನಿಕವಾಗಿ ಬೆಳೆಸಿದ ಈ ಗಿಡಮರಗಳು ಮುಂದಿನ ದಿನಗಳಲ್ಲೂ ಅಪಾಯಕ್ಕೆ ರಹದಾರಿಯೇ?

Vijaya Karnataka 10 Sep 2018, 7:56 am
-ಹರಿಶ್ಚಂದ್ರ ದೇವರಮಾರು ಮೈಸೂರು
Vijaya Karnataka Web 2


ಕೊಡಗಿನಲ್ಲಿ ಸಂಭವಿಸಿದ ಭೂಕುಸಿತ ದುರಂತಕ್ಕೆ ಸಾಮಾಜಿಕ ಅರಣ್ಯದ ಮರಗಳು ಕಾರಣವಾಯಿತೇ? ಅವೈಜ್ಞಾನಿಕವಾಗಿ ಬೆಳೆಸಿದ ಈ ಗಿಡಮರಗಳು ಮುಂದಿನ ದಿನಗಳಲ್ಲೂ ಅಪಾಯಕ್ಕೆ ರಹದಾರಿಯೇ?

ಹೌದು, ಅರಣ್ಯ ಇಲಾಖೆ ಹಾಗೂ ನರ್ಸರಿಗಳಲ್ಲಿ ಪಾಲಿಥಿನ್‌ ಕವರ್‌ನಲ್ಲಿ ಬೀಜ ಹಾಕಿ ಬೆಳೆಸಿದ ಗಿಡಗಳ ತಾಯಿ ಬೇರು ನೇರವಾಗಿ ಭೂಮಿಯೊಳಗೆ ಇಳಿಯಲು ಅವಕಾಶವಿಲ್ಲದೆ ಅಡ್ಡವಾಗಿ ಸಾಗಿ ಅಂಗ ಊನತೆ ಪಡೆದುಕೊಳ್ಳುತ್ತವೆ. ಈ ಸಸಿಯನ್ನು ವರ್ಷದ ನಂತರ ನೆಟ್ಟಾಗ ಅಡ್ಡ ಹೋದ ಬೇರು ಭೂಮಿಯೊಳಗೆ ಹೋಗದೆ ಮೇಲ್ಭಾಗದಲ್ಲೇ ಅಡ್ಡಾದಿಡ್ಡಿಯಾಗಿ ಸಾಗುತ್ತದೆ. ಇಂತಹ ಮರಗಳಿಗೆ ಗಟ್ಟಿಯಾದ ಆಧಾರವೇ ಇಲ್ಲದಂತಾಗುತ್ತದೆ. ಭಾರಿ ಗಾಳಿ, ಮಳೆ ಬಂದಾಗ ಇಂತಹ ಮರಗಳು ಬುಡಸಮೇತ ಉರುಳಿ ಬೀಳುತ್ತವೆ. ಕೊಡಗಿನಲ್ಲೂ ನರ್ಸರಿಗಳಲ್ಲಿ ಸಾಕಿ ಸಲಹಿ ನೆಡಲಾಗಿದ್ದ ಕಾಫಿ ಗಿಡಗಳು ಸೇರಿದಂತೆ ಸಾಮಾಜಿಕ ಅರಣ್ಯ ಭೂಕುಸಿತವನ್ನು ತಡೆಯುವಲ್ಲಿ ವಿಫಲವಾಗಿದ್ದೇ ದುರಂತಕ್ಕೆ ಮೂಲವಾಯಿತು ಎಂದು ಹೇಳುತ್ತಾರೆ ಕಳೆದ 20ಕ್ಕೂ ಹೆಚ್ಚು ವರ್ಷಗಳಿಂದ ಸಹಜ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಮೈಸೂರಿನ ಎಂ.ಕೆ. ಕೈಲಾಸ್‌ಮೂರ್ತಿ.
ಸಾಮಾನ್ಯವಾಗಿ ನಿಸರ್ಗದತ್ತವಾಗಿ ಬೆಳೆದ ಮರಗಳ ತಾಯಿ ಬೇರು 30 ಅಡಿಗೂ ಹೆಚ್ಚು ಆಳಕ್ಕೆ ತೂರಿ ಹೋಗುತ್ತದೆ. ಮಣ್ಣಿನೊಳಗೆ ಬಂಡೆಕಲ್ಲು ಎದುರಾದರೂ ಅವುಗಳನ್ನು ಬಿಗಿಯಾಗಿ ಹಿಡಿದಿಟ್ಟು ಆಧಾರವಾಗಿ ಬಳಸಿಕೊಳ್ಳುತ್ತದೆ. ಭೂಮಿಯೊಳಗಿನ ಖನಿಜಾಂಶಗಳನ್ನು ಹೀರಿಕೊಳ್ಳುತ್ತವೆ. ಈ ರೀತಿ ಸದೃಢ ಬೇರುಗಳಿರುವ ಇಂತಹ ಮರಗಳು ಭಾರಿ ಮಳೆ ಗಾಳಿ ಬಂದಾಗಲೂ ತಡೆದು ನಿಲ್ಲುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿರುವ ಇಂತಹ ಮರಗಳಿಗೆ ರೋಗಗಳು ಕೂಡ ಬಾಧಿಸದೆ ದೀರ್ಘಾಯುಷ್ಯ ಬಾಳುತ್ತವೆ. ಆದರೆ, ಪಳಗಿಸಿದ ಮರಗಳ ತಾಯಿ ಬೇರು ಊನಗೊಂಡಿರುವುದರಿಂದ ಆಳಕ್ಕೆ ಇಳಿಯುವುದಿಲ್ಲ. ಭೂಮಿಯ ಮೇಲ್ಭಾಗದಲ್ಲೇ ಇದರ ಬೇರು ಹರಡಿಕೊಳ್ಳುತ್ತವೆ. ಎನ್ನುತ್ತಾರೆ ಕೈಲಾಸ್‌ ಮೂರ್ತಿ. ಪರಿಸರ ಕುರಿತ ಅಂಕಣಕಾರ ಶಿವಾನಂದ ಕಳವೆ ಅವರು ಕೂಡ ಈ ವಾದವನ್ನು ಒಪ್ಪುತ್ತಾರೆ.

ಪರ್ಯಾಯ ಮಾರ್ಗ ಏನು?

ಸಾಮಾಜಿಕ ಅರಣ್ಯಕ್ಕೆ ಬೆಳೆಸುವ ಗಿಡಗಳನ್ನು ನಾಲ್ಕೈದು ಅಡಿ ಉದ್ದವಿರುವ ಪಾಲಿಥಿನ್‌ ಕವರ್‌ನಲ್ಲಿ ಬೆಳೆಸಿದರೆ ತಾಯಿ ಬೇರು ಊನಗೊಳ್ಳುವುದನ್ನು ತಪ್ಪಿಸಬಹುದು ಎಂಬುದು ಈ ತಜ್ಞರ ಅಭಿಮತ.

ಪ್ಲಾಸ್ಟಿಕ್‌ ಕವರ್‌ನಲ್ಲಿ ಎರಡು ವರ್ಷ ಗಿಡಗಳನ್ನು ಹಾಗೆ ಬಿಟ್ಟರೆ ಅದರ ತಾಯಿ ಬೇರು ಕೆಳಗಡೆ ಸುರುಳಿಯಾಕಾರದಲ್ಲಿ ಸುತ್ತಿಕೊಳ್ಳುತ್ತದೆ. ಈ ಗಿಡಗಳನ್ನು ನೆಟ್ಟರೂ ಸರಿಯಾದ ಬೆಳವಣಿಗೆಯಾಗುವುದಿಲ್ಲ. ಈ ಗಿಡಗಳ ಬೇರುಗಳು ನೇರವಾಗಿ ಭೂಮಿಯೊಳಗೂ ಹೋಗುವುದಿಲ್ಲ. ಆದರೆ, ಅರಣ್ಯ ಇಲಾಖೆ ಪ್ಲಾಸ್ಟಿಕ್‌ ಕವರ್‌ನಲ್ಲಿ ಹಾಕಿದ ಸಸಿಗಳನ್ನು ವರ್ಷದೊಳಗೆ ಬೇರೆಡೆ ನೆಡಲಾಗುತ್ತಿದೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ.
-ಡಾ.ಹನುಮಂತಪ್ಪ, ಡಿಸಿಎಫ್‌, ಅರಣ್ಯ ಇಲಾಖೆ ಮೈಸೂರು.

ಪಾಲಿಥಿನ್‌ ಕವರ್‌ಗಳಲ್ಲಿ ಬೀಜ ಹಾಕಿ ಬೆಳೆಸಿದ ಗಿಡಗಳ ತಾಯಿ ಬೇರು ಊನವಾಗುವುದು ನಿಜ. ಇಂತಹ ಗಿಡಗಳನ್ನು ನೆಟ್ಟ ಮೇಲೆ ಅವುಗಳು ಕಾಡಿನಲ್ಲಿ ಬೆಳೆಯುವ ಮರಗಳಂತೆ ಸದೃಢವಾಗಿ ಬೆಳೆಯುವುದಿಲ್ಲ. ಹಾಗಾಗಿ ಪಾಲಿಥಿನ್‌ ಕವರ್‌ಗಳಲ್ಲಿ ಬೀಜ ಹಾಕಿದ ಆರು ತಿಂಗಳೊಳಗೆ ಈ ಗಿಡಗಳನ್ನು ನೆಡುವ ಕಾರ್ಯ ಆಗಬೇಕು.
- ಎ.ಸಿ.ಲಕ್ಷ್ಮಣ್‌, ನಿವೃತ್ತ ಕಾರ್ಯದರ್ಶಿ, ಅರಣ್ಯ ಇಲಾಖೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ