ಆ್ಯಪ್ನಗರ

ವಿಶಿಷ್ಟ ಆಚರಣೆ ಹುತ್ತರಿ ಸಂಭ್ರಮಕ್ಕೆ ಕೊಡಗು ಸಜ್ಜು

ಹುತ್ತರಿ ಪ್ರಯುಕ್ತ ಡಿ. 11 ರಂದು ರಾತ್ರಿ ಇಗ್ಗುತ್ತಪ್ಪ ದೇವಳದಲ್ಲಿ ರಾತ್ರಿ 7 ಗಂಟೆಗೆ ನೆರೆ ಕಟ್ಟುವುದು, 8 ಗಂಟೆಗೆ ಕದಿರು ತೆಗೆಯುವುದು ಮತ್ತು 9 ಗಂಟೆಗೆ ಫಲಹಾರ ಎಂದು ತಿಳಿಸಲಾಗಿದೆ.

Vijaya Karnataka 10 Dec 2019, 5:41 pm
ಮಡಿಕೇರಿ: ಡಿ. 11ರಂದು ಹುತ್ತರಿ ಸಂಭ್ರಮಕ್ಕೆ ಕೊಡಗು ಸಜ್ಜಾಗಿದೆ. ಹುಣ್ಣಿಮೆಯ ದಿನ ಕೊಡಗಿನಲ್ಲಿ ಹುತ್ತರಿ ಹಬ್ಬದ ಸಂಭ್ರಮ ಮನೆ ಮಾಡಲಿದ್ದು, ಜನ ಧ್ಯಾನಲಕ್ಷ್ಮೀಯನ್ನು ಮನೆ ತುಂಬಿಸಿಕೊಳ್ಳಲಿದ್ದಾರೆ.
Vijaya Karnataka Web Huttari Kodagu


ಕೊಡಗಿನಲ್ಲಿ ಹುತ್ತರಿ ಹಬ್ಬಕ್ಕೆ ವಿಶಿಷ್ಟ ಸ್ಥಾನಮಾನವಿದೆ. ಮುಂಗಾರು ಪ್ರಾರಂಭವಾಗುವ ಹಂತದಲ್ಲೇ ರೈತರು ತಾವು ಹಕ್ಕು ದಾರಿಕೆಯನ್ನು ಹೊಂದಿರುವ ಗದ್ದೆಯಲ್ಲಿ ಭೂಮಿಯನ್ನು ಉತ್ತು, ಪೈರು ಬೆಳೆದು ನಾಟಿ ಕಾರ್ಯವನ್ನು ಮುಗಿಸಿ ಹಲವು ತಿಂಗಳ ಕಾಲ ಬೆಳೆಯನ್ನು ಪೋಷಿಸಿ ಹೊಸ ಭತ್ತವನ್ನು ಮನೆಗೆ ತುಂಬಿಸಿಕೊಳ್ಳುವ ಸಡಗರವೇ ಹುತ್ತರಿ ಹಬ್ಬ.

ಹುತ್ತರಿ ಪ್ರಯುಕ್ತ ಡಿ. 11 ರಂದು ರಾತ್ರಿ ಇಗ್ಗುತ್ತಪ್ಪ ದೇವಳದಲ್ಲಿ ರಾತ್ರಿ 7 ಗಂಟೆಗೆ ನೆರೆ ಕಟ್ಟುವುದು, 8 ಗಂಟೆಗೆ ಕದಿರು ತೆಗೆಯುವುದು ಮತ್ತು 9 ಗಂಟೆಗೆ ಫಲಹಾರ ಎಂದು ತಿಳಿಸಲಾಗಿದ್ದು, ಅದರಂತೆ ನಾಡಿನೆಲ್ಲೆಡೆ 7.35 ಕ್ಕೆ ನೆರೆ ಕಟ್ಟುವುದು. 8.35 ಕ್ಕೆ ಕದಿರು ತೆಗೆಯುವುದು ಮತ್ತು 9.35 ಫಲಹಾರವನ್ನು ಸ್ವೀಕರಿಸಲಾಗುವುದು.

ಹುತ್ತರಿಯಂದು ವಿಶೇಷವಾಗಿ ಮಾಡುವ ಹುತ್ತರಿ ಗೆಣಸನ್ನು ಬೇಯಿಸಿ ಐನ್‌ಮನೆಯಲ್ಲಿ ಸಾಮೂಹಿಕವಾಗಿ ಭೋಜನ ಮಾಡುತ್ತಾರೆ. ಹುರಿದ ಅಕ್ಕಿಯಿಂದ ಮಾಡುವ ಹಿಟ್ಟು, ಬಾಳೆ, ಎಳ್ಳು ಸೇರಿಸಿ ತಂಬಿಟ್ಟು ಮಾಡುವುದು ಹುತ್ತರಿ ವಿಶೇಷ ಭೋಜನ. ಹುತ್ತರಿ ನಂತರದ ದಿನ ಊರಿನಾದ್ಯಂತ ಮಂದ್‌ನಲ್ಲಿ ಕೊಡವರು ಸೇರುತ್ತಾರೆ. ಕೊಡವ ಉಡುಗೆಗಳನ್ನು ತೊಟ್ಟು ಸಾಂಪ್ರದಾಯಿಕವಾಗಿ ಕೋಲಾಟ ನಡೆಸುತ್ತಾರೆ. ಕೋಟಾಲ್‌, ಕತ್ತಿಯಟ್‌ ಸೇರಿದಂತೆ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಂಭ್ರಮದಿಂದ ಹಬ್ಬ ಆಚರಿಸುವುದು ವಾಡಿಕೆ.

ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಹಾಗೂ ಪಾಂಡಿರ ಕುಟುಂಬದ ಸಹಯೋಗದಲ್ಲಿ ಹುತ್ತರಿ ಹಬ್ಬದ ಪ್ರಯುಕ್ತ ಡಿ. 12 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಕೋಟೆ ಆವರಣದಲ್ಲಿ ಹುತ್ತರಿ ಕೋಲಾಟ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ