ಆ್ಯಪ್ನಗರ

ಕೊಡವ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಮೂವರ ಆಯ್ಕೆ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ 2018ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕಾರಕ್ಕೆ ವಿವಿಧ ಕ್ಷೇತ್ರದ ಮೂವರು ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ ತಿಳಿಸಿದರು.

Vijaya Karnataka 26 May 2019, 9:04 pm
ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ 2018ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕಾರಕ್ಕೆ ವಿವಿಧ ಕ್ಷೇತ್ರದ ಮೂವರು ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ ತಿಳಿಸಿದರು.
Vijaya Karnataka Web kodava sahitya akademi
ಕೊಡವ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಮೂವರ ಆಯ್ಕೆ


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಡಾ.ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ, (ಕೊಡವ ಸಾಹಿತ್ಯ ಸಂಶೋಧನಾ ಕ್ಷೇತ್ರ) ಕೋಳೆರ ಸನ್ನು ಕಾವೇರಪ್ಪ (ಕೊಡವ ಕಲಾ ಕ್ಷೇತ್ರ), ನಾಳಿಯಮ್ಮಂಡ ಕೆ. ಅಚ್ಚಮ್ಮಯ್ಯ (ಕೊಡವ ಜಾನಪದ ಕ್ಷೇತ್ರ)ದಲ್ಲಿ ಆಯ್ಕೆಯಾಗಿದ್ದಾರೆ. ಈ ಗೌರವ ಪ್ರಶಸ್ತಿ 50 ಸಾವಿರ ರೂ. ನಗದು, ಶಾಲು, ಹಾರ, ಫಲತಾಂಬೂಲ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ,'' ಎಂದು ವಿವರಿಸಿದರು.

''ಜೂ.9ರಂದು ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ನಡೆಯುವ ಬೊಳ್ಳಿನಮ್ಮೆ ಕಾರ್ಯಕ್ರಮದಲ್ಲಿ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು,'' ಎಂದು ಹೇಳಿದರು.

ಅಕಾಡೆಮಿ ರಿಜಿಸ್ಟ್ರಾರ್‌ ಚಂದ್ರಹಾಸ ರೈ, ಸದಸ್ಯರಾದ ತೋರೇರ ಮುದ್ದಯ್ಯ, ಹಂಚೇಟ್ಟಿರ ಮನು ಮುದ್ದಯ್ಯ, ಬೊಳ್ಳಜಿರ ಬಿ. ಅಯ್ಯಪ್ಪ ಹಾಜರಿದ್ದರು.

ಡಾ.ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ: ದೇಶ ವಿದೇಶಗಳ ಹಲವು ಸಂಸ್ಥೆಗಳಲ್ಲಿ ಕೆಲಸ ಮಾಡಿ ಅನುಭವವಿರುವ ಇವರು 1995ರಲ್ಲಿ ಕೆನಡಾದಿಂದ ಹಿಂತಿರುಗಿದ ನಂತರ ಬರೆಯುವ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಬೊವ್ವೇರಿಯಂಡ ಎಂ.ಚಿಣ್ಣಪ್ಪ ಅವರನ್ನು ವಿವಾಹವಾಗಿದ್ದಾರೆ. ಇವರ ಅಜ್ಜ ನಡಿಕೇರಿಯಂಡ ಚಿಣ್ಣಪ್ಪ ಬರೆದಿರುವಂತಹ ಪಟ್ಟೋಲೆ ಪಳಮೆ ಪುಸ್ತಕವನ್ನು ಇಂಗ್ಲಿಷ್‌ಗೆ ಅನುವಾದಗೊಳಿಸಿ 2003ರಲ್ಲಿ ಮುದ್ರಣ ಪಡಿಸಿದರು. 2003ರಿಂದ 2008ರವರೆಗೆ ಕೊಡಗಿನ ಎಲ್ಲಾ ಭಾಷಿಕ ಜನಾಂಗದವರ ಐನ್‌ಮನೆಗಳಿಗೆ ತೆರಳಿ 800ಕ್ಕೂ ಹೆಚ್ಚು ಐನ್‌ಮನೆಗಳ ವಿವರಗಳನ್ನು ಸಂಗ್ರಹಿಸಿ 'ಐನ್‌ಮನೆಸ್‌ ಆಫ್‌ ಕೊಡಗು' ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ.

ಕೋಳೇರ ಸನ್ನು ಕಾವೇರಪ್ಪ: ವಿರಾಜಪೇಟೆ ತಾಲೂಕಿನ ನಡಿಕೇರಿ ಗ್ರಾಮದ ಕೋಳೆರ ಪೆಮ್ಮಯ್ಯ ಮತ್ತು ನೀಲಮ್ಮ ದಂಪತಿಯ ಪುತ್ರರಾಗಿದ್ದಾರೆ. 3ನೇ ತರಗತಿಯಲ್ಲಿದ್ದಾಗಲೇ ಪಾದುಕಾ ಪಟ್ಟಾಭಿಷೇಕ ನಾಟಕದಲ್ಲಿ ಅಭಿನಯಿಸುವ ಮುಖಾಂತರ ಕಲಾ ಜೀವನ ಆರಂಭಿಸಿದರು. ನಂತರ ವರ್ಷಂಪ್ರತಿ ನಾಟಕ, ಛದ್ಮವೇಷಗಳಲ್ಲಿ ಅಭಿನಯಿಸುತ್ತಾ, 1981ರಲ್ಲಿ ಸೃಷ್ಠಿ ಕೊಡವರಂಗ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ. 1985ರಲ್ಲಿ ನಿ.ನಾ.ಸಂ.ನಲ್ಲಿ ರಂಗ ಶಿಕ್ಷ ಣ ತರಬೇತಿ ಪಡೆದು ಸೃಷ್ಟಿ ಸಂಸ್ಥೆಯ ನಾಟಕಗಳಾದ ಕಳ್ಳ್‌, ಪೆರ್ಚೊಳಿಯ, ದಿವಾನ್‌ ಬೋಪಣ್ಣ, ನೀಲಿ ಕುದುರೆ, ತಬರನ ಕಥೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. 1996ರಲ್ಲಿ ಕೊಡವ ತಕ್ಕ್‌ ಎಳ್ತ್‌ ಕಾರಡ ಕೂಟದ ತಂಡದಲ್ಲಿ ನಾಟಕ ನಿರ್ದೇಶನದೊಂದಿಗೆ ಓಂಕಾರೇಶ್ವರ, ಪರ್‌ಂಜ ಕಣ್ಣೀರ್‌, ಇಗ್ಗುತ್ತಪ್ಪ, ಕಾವೇರಿ, ಯಯಾತಿ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕೊಡವ ನಾಟಕ, ಧಾರಾವಾಹಿಗಳಲ್ಲಿ ಕನ್ನಡ ಮತ್ತು ಕೊಡವ ಭಾಷಾ ಚಲನಚಿತ್ರಗಳಲ್ಲಿ ಅಭಿನಯ ಹಾಗೂ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ.

ನಾಳಿಯಮ್ಮಂಡ ಕೆ. ಅಚ್ಚಮ್ಮಯ್ಯ:
ವಿರಾಜಪೇಟೆ ತಾಲೂಕಿನ ಕುಟ್ಟಂದಿ ಗ್ರಾಮಕ್ಕೆ ಸೇರಿರುವ ದಿ.ನಾಳಿಯಮ್ಮಂಡ ಕುಟ್ಟಮ್ಮಯ್ಯ ಅವರ ಪುತ್ರರಾಗಿರುವ ನಾಳಿಯಮ್ಮಂಡ ಕೆ.ಅಚ್ಚಮ್ಮಯ್ಯ, ಮೂಲತಃ ಸೂರ್ಲಬ್ಬಿ ನಾಡ್‌ಗೆ ಸೇರಿದವರಾಗಿದ್ದು, ಈಗ ಕುಟ್ಟಂದಿಯಲ್ಲಿ ವಾಸವಿದ್ದಾರೆ. 45 ವರ್ಷದಿಂದ ಬಾಳೋಪಾಟ್‌, ತಾಲಿಪಾಟ್‌, ಕೋಲಾಟ್‌, ಬೊಳಕಾಟ್‌, ಕಪ್ಪೆಯಾಟ್‌, ಪರೆಯಕಳಿ, ಸಂಬಂಧ ಅಡ್‌ಕುವೊ, ಅಲ್ಲದೆ ಕೊಡವ ಪದ್ಧತಿ ಸಂಸ್ಕೃತಿಯನ್ನು ಕಲಿತಿದ್ದಲ್ಲದೇ ಊರಿನ ಎಷ್ಟೋ ಜನರಿಗೆ ಕಲಿಸಿದ್ದಾರೆ. ಸಾವು ಮನೆಯಲ್ಲಿ ಚಾವುಪಾಟ್‌, ಮಾದ ಮನೆಯಲ್ಲಿ ಮಾದಪಾಟ್‌ ಹಾಡಿ ಸತ್ತವರನ್ನು ಓಣಿಕ್‌ಕೂಟುವ ಪದ್ಧತಿಯನ್ನು 200ಕ್ಕೂ ಹೆಚ್ಚು ಮಾಡಿದ್ದಾರೆ. ಪುತ್ತರಿ ನಮ್ಮೆಯ ಸಮಯದಲ್ಲಿ ಮನೆಪಾಟ್‌ ಹಾಡುವುದು, ರೈತರ ಪರಿಕರವಾದ ನೇಗಿ ನೊಗ ತಾವೆ ತಯ ಕಳಿಕೋಲ್‌, ತಮಿಕೇರ್‌, ನೆಲ್ಲ್‌ಕುಟ್ಟುವ ರಾಟೆ, ವನಕೆ ಅಲ್ಲದೆ ಇನ್ನು ಹಲವು ರೈತರ ಪರಿಕರವನ್ನು ತಯಾರಿಸುತ್ತಾ ಬಂದಿದ್ದಾರೆ. ಕೊಡಗಿನ ಭದ್ರಕಾಳಿ ಈಶ್ವರ ದೇವಸ್ಥಾನ ಬಿದುರಿನ ಕುದುರೆ ತಯಾರಿ, ಬೆಕ್ಕೆಸೊಡ್ಲೂರು, ಕುತ್ತ್‌ನಾಡ್‌, ಹಳ್ಳಿಗಟ್‌, ಕುಟ್ಟಂದಿ, ಕೊಟ್ಟಂಗೇರಿ ದೇವಸ್ಥಾನಗಳಿಗೆ ದೇವರ ಕುದುರೆಯನ್ನು ತಯಾರಿಸಿಕೊಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ