ಕುಶಾಲನಗರ: ಮನುಷ್ಯ ಸಂಬಂಧ ಹಾಗೂ ಸಮಾಜದಲ್ಲಿ ಶಾಂತಿ ವಾತಾವರಣ ವೃದ್ಧಿಸಲು ಸೌಹಾರ್ದ ಸಂದೇಶ ಸಾರುವ ನಿಟ್ಟಿನಲ್ಲಿ ಸೌಹಾರ್ದ ಕರ್ನಾಟಕ ಸಂಘಟನೆಯಿಂದ ಜ.30ರಂದು ಪಟ್ಟಣದಲ್ಲ್ಲಿ ಮಾನವ ಸರಪಳಿ ರಚನೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟನೆಯ ತಾಲೂಕು ಸಂಚಾಲಕ ವಿ.ಪಿ.ಶಶಿಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ''ಪ್ರತಿಯೊಬ್ಬರೂ ಮಾನವೀಯ ನೆಲೆಗಟ್ಟಿನಲ್ಲಿ ಜೀವಿಸುವುದು ಅಗತ್ಯ. ಜಾತಿ, ಧರ್ಮ, ಪಕ್ಷ ಗಳಿಂದ ವಿಭಜನೆಯಾಗಿರುವ ಹಿನ್ನೆಲೆಯಲ್ಲಿ ಮನುಷ್ಯರ ನಡುವೆ ಬೃಹತ್ ಕಂದಕ ನಿರ್ಮಾಣಗೊಂಡಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಮತಾಂಧತೆ, ಧಾರ್ಮಿಕತೆಯ ವಿಚಾರದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡುತ್ತಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇದನ್ನು ಕೊನೆಗಾಣಿಸಿ ಜಾತೀಯತೆ, ಮತೀಯತೆ ತೊರೆದು ಮಾನವೀಯತೆ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಸಂದೇಶ ಸಾರಲು ರಾಜ್ಯದಾದ್ಯಂತ ಜ. 30ರಂದು ಮಾನವ ಸರಪಳಿ ರಚಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆ, ತಾಲೂಕು ಕೇಂದ್ರಗಳನ್ನು ಒಳಗೊಂಡಂತೆ ಪ್ರಮುಖ ನಗರಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸಂಜೆ 3.30ಕ್ಕೆ ಕಾರ್ಯಕ್ರಮ ನಡೆಯಲಿದೆ,'' ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಪಿ.ಆರ್.ಭರತ್, ಪ್ರಮುಖರಾದ ವಿ.ಎಸ್.ಆನಂದಕುಮಾರ್, ಕೆ.ಬಿ.ರಾಜು, ಎಂ.ಕೆ.ಹಮೀದ್, ಕೆ.ಎಸ್.ಮಹೇಶ್ ಹಾಜರಿದ್ದರು.