ಆ್ಯಪ್ನಗರ

ಕಾಣೆಯಾಗಿದ್ದ ಕೊಡಗು ವಿದ್ಯಾರ್ಥಿನಿ ಶವ ಪತ್ತೆ: ಅತ್ಯಾಚಾರವೆಸಗಿ ಕೊಲೆ

ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪಶ್ಚಿಮ ಬಂಗಾಳದ ಕಾರ್ಮಿಕರನ್ನು ಬಂಧಿಸಲಾಗಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಓರ್ವ ಆರೋಪಿ ಮತ್ತು ಮೃತ ಕಾಲೇಜು ವಿದ್ಯಾರ್ಥಿನಿ ನಡುವೆ ಜಗಳ ನಡೆದಿತ್ತು. ಸೇಡಿಗಾಗಿ ಸ್ನೇಹಿತನ ಜತೆ ಸೇರಿ ಆಕೆಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ.

Vijaya Karnataka 14 Feb 2019, 10:01 am
ಸಿದ್ದಾಪುರ (ಕೊಡಗು ಜಿಲ್ಲೆ): ಹತ್ತು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ನೆಲ್ಯಹುದಿಕೇರಿ ಕಾಲೇಜು ವಿದ್ಯಾರ್ಥಿನಿಯ ಶವ ಬುಧವಾರ ಪತ್ತೆಯಾಗಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಗುಹೆಯಲ್ಲಿ ಬಿಸಾಡಿದ್ದ ಮೃತ ದೇಹವನ್ನು ಹೊರ ತೆಗೆಯಲಾಗಿದ್ದು, ಪಶ್ಚಿಮ ಬಂಗಾಳ ಮೂಲದ ಇಬ್ಬರನ್ನು ಬಂಧಿಸಲಾಗಿದೆ.
Vijaya Karnataka Web Gang rape


ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಡಿ.ಪಿ.ಸುಮನ್‌, ''ವಿದ್ಯಾರ್ಥಿನಿ ಕೊಲೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರಾದ ರಂಜಿತ್‌ (21) ಮತ್ತು ಸಂದೀಪ್‌ (30) ಅವರನ್ನು ಬಂಧಿಸಲಾಗಿದೆ. ರಂಜಿತ್‌ ಹಾಗೂ ಮೃತಳ ನಡುವೆ ಜಗಳವಾಗಿತ್ತು. ಆಕೆ ತನ್ನನ್ನು ಅವಮಾನಿಸಿದ್ದಾಳೆ ಎಂದು ಸೇಡು ತೀರಿಸಿಕೊಳ್ಳಲು ರಂಜಿತ್‌ ಸಂಚು ರೂಪಿಸಿದ್ದ. ವಿಷಯ ತಿಳಿದ ತನಿಖಾ ತಂಡ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸ್ನೇಹಿತ ಸಂದೀಪನೊಂದಿಗೆ ಆಕೆಯನ್ನು ಅಪಹರಿಸಿ ಕೊಲೆ ಮಾಡಿ ಎಮ್ಮೆಗುಂಡಿ ಎಸ್ಟೇಟಿನ ದೇವಾಲಯದ ಸಮೀಪ ಇರುವ ಕಲ್ಲು ಬಂಡೆಯ ಗುಹೆಯೊಳಗೆ ಶವ ಬಿಸಾಕಿದ್ದನ್ನು ಹಾಗೂ ಕೊಲೆಗೂ ಮೊದಲು ಅತ್ಯಾಚಾರ ಎಸಗಿರುವುದನ್ನು ಒಪ್ಪಿಕೊಂಡ,'' ಎಂದು ತಿಳಿಸಿದರು.

ನೆಲ್ಯಹುದಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಫೆ.4ರಂದು ಕಾಲೇಜು ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅಪಹರಣವಾಗಿದೆ ಎಂದು ಪೋಷಕರು ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದರು. ಫೆ.10ರಂದು ವಿದ್ಯಾರ್ಥಿನಿಯ ಬ್ಯಾಗ್‌ ಮತ್ತು ಶೂ ಸಿದ್ದಾಪುರ ಎಸ್ಟೇಟಿನ ಕಾಫಿ ತೋಟದಲ್ಲಿ ಪತ್ತೆಯಾಗಿತ್ತು.

ತನಿಖಾ ತಂಡದಲ್ಲಿದ್ದ ಕೊಡಗು ಅಪರಾಧ ಪತ್ತೆ ದಳದ ಪಿಎಸ್ಸೈ ಎಂ.ಮಹೇಶ್‌, ಮಡಿಕೇರಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಅನೂಪ್‌ ಮಾದಪ್ಪ, ಸಿದ್ದಾಪುರ ಪಿಎಸ್‌ಐ ದಯಾನಂದ, ಸಿಬ್ಬಂದಿ ಯೋಗೇಶ್‌ ಕುಮಾರ್‌, ವೆಂಕಟೇಶ್‌, ಅನಿಲ್‌, ವಸಂತ, ನಿರಂಜನ್‌, ಸಿಡಿಆರ್‌ ಸೆಲ್‌ನ ಎಂ.ಎ.ಗಿರೀಶ್‌, ಸಿ.ಕೆ.ರಾಜೇಶ್‌, ಮಂಜುನಾಥ್‌, ಪೃಥ್ವೀಶ, ಮಲ್ಲಪ್ಪ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ