ಆ್ಯಪ್ನಗರ

ಪತಿ ಕೊಲೆ: ಪತ್ನಿಗೆ 5 ವರ್ಷ ಸಜೆ

ಪತಿಯನ್ನು ಕೊಂದು ಮನೆ ಹಿಂದೆ ಹೂತು ಹಾಕಿದ್ದ ಪತ್ನಿಗೆ 5 ವರ್ಷ ಸಜೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

Vijaya Karnataka 20 Jul 2019, 5:00 am
ವಿರಾಜಪೇಟೆ : ಪತಿಯನ್ನು ಕೊಂದು ಮನೆ ಹಿಂದೆ ಹೂತು ಹಾಕಿದ್ದ ಪತ್ನಿಗೆ 5 ವರ್ಷ ಸಜೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
Vijaya Karnataka Web murder of husband 5 years punishment to wife
ಪತಿ ಕೊಲೆ: ಪತ್ನಿಗೆ 5 ವರ್ಷ ಸಜೆ


ಕೋತೂರು ಗ್ರಾಮದ ಕಾಫಿ ತೋಟದ ಲೈನ್‌ ಮನೆಯಲ್ಲಿ ವಾಸವಿದ್ದ ಚೆನ್ನಪ್ಪ ನಾಯ್ಕ ಅಲಿಯಾಸ್‌ ಚೆನ್ನಪ್ಪ ಅವರನ್ನು ಕೊಲೆ ಮಾಡಿದ ಅವರ ಪತ್ನಿ ನೀಲಮ್ಮ ಅಲಿಯಾಸ್‌ ಚೆನ್ನಮ್ಮ ಶಿಕ್ಷೆಗೆ ಗುರಿಯಾದ ಮಹಿಳೆ.

2018ರ ಮಾರ್ಚ್‌ 30ರಂದು ಕೋತೂರು ಗ್ರಾಮದ ಲೈನ್‌ ಮನೆಯಲ್ಲಿದ್ದ ಚೆನ್ನಪ್ಪ ನಾಯ್ಕ ಮದ್ಯ ಸೇವಿಸಿ ಪತ್ನಿ ನೀಲಮ್ಮನೊಂದಿಗೆ ಜಗಳ ತೆಗೆದು ಹಲ್ಲೆಗೆ ಮುಂದಾದಾಗ ಆಕೆ ಆತನನ್ನು ತಳ್ಳಿದಾಗ ಮೆಟ್ಟಿಲ ಮೇಲೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಮೃತಪಟ್ಟಿದ್ದರು. ಕೊಲೆಯನ್ನು ಮರೆ ಮಾಚುವ ಉದ್ದೇಶದಿಂದ ನೀಲಮ್ಮ ಮನೆಯ ಹಿಂಬದಿಯಲ್ಲಿ ಗುಂಡಿ ತೆಗೆದು ಮೃತದೇಹವನ್ನು ಮುಚ್ಚಿ ಹಾಕಿದ್ದರು. 2018ರ ಮೇ 21ರಂದು ಮೃತದೇಹ ಪತ್ತೆಯಾಗಿದ್ದು, ತೋಟದ ಮಾಲೀಕರು ಕುಟ್ಟ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿ ನೀಲಮ್ಮನನ್ನು ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಅಗತ್ತೂರು ಗ್ರಾಮದಲ್ಲಿ ಬಂಧಿಸಿದ್ದರು.

ನೀಲಮ್ಮ ವಿರುದ್ಧ ಐಪಿಸಿ 304(2) ಕಲಂ 201ರ ಪ್ರಕಾರ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕಲಂ 304(2)ರ ಪ್ರಕಾರ 3 ವರ್ಷ ಸಜೆ ಹಾಗೂ 15 ಸಾವಿರ ರೂ. ದಂಡ ವಿಧಿಸಿದ್ದು, ದಂಡ ಕಟ್ಟದೆ ಹೋದರೆ 3 ತಿಂಗಳ ಸಾದ ಸಜೆ ವಿಧಿಸಲಾಗಿದೆ. ಅಲ್ಲದೆ, ಕಲಂ 201ರಲ್ಲಿ 2 ವರ್ಷದ ಸಾದ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ದಂಡ ಪಾವತಿಸದೆ ಹೋದರೆ 2 ತಿಂಗಳ ಸಾದ ಸಜೆ ಅನುಭವಿಸಬೇಕು ಎಂದು ತೀಪು ನೀಡಿದ್ದಾರೆ. ಸರಕಾರದ ಪರ ಅಭಿಯೋಜಕ ಡಿ.ನಾರಾಯಣ್‌ ವಾದಿಸಿದ್ದರು.

ನೀಲಮ್ಮ ಮೂಲತಃ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಅಗತ್ತೂರು ಗ್ರಾಮದ ನಿವಾಸಿಯಾಗಿದ್ದು, ತನ್ನ ಮೊದಲ ಗಂಡ ಕೆಂಚ ನಾಯ್ಕ ಮೃತಪಟ್ಟ ನಂತರ ಚೆನ್ನಪ್ಪ ನಾಯ್ಕನನ್ನು ಎರಡನೇ ವಿವಾಹವಾಗಿದ್ದಳು. ಕೆಲಸ ಅರಸಿ ಕೊಡಗಿಗೆ ಬಂದ ನೀಲಮ್ಮ ಹಾಗೂ ಚೆನ್ನಪ್ಪ ನಾಯ್ಕ ಕೋತೂರು ಗ್ರಾಮದ ಕಾಫಿ ತೋಟದ ಲೈನು ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ