ಶ್ರೀಮಂಗಲ: ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಈಗಾಗಲೆ 150ಕ್ಕೂ ಅಧಿಕ ಸಂಘ-ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ. ಮುಂದಿನ ದಿನಗಳಲ್ಲಿ ಈ ಸಂಘಟನೆಗಳ ಬೆಂಬಲದೊಂದಿಗೆ ಕನಿಷ್ಠ 10 ಸಾವಿರ ಜನರನ್ನು ಸೇರಿಸಿ ಬೃಹತ್ ರಾರಯಲಿ ಮೂಲಕ ಸರಕಾರದ ಗಮನ ಸೆಳೆಯಬೇಕಾಗಿದೆ ಎಂದು ಪೊನ್ನಂಪೇಟೆಯ ಇಗ್ಗುತ್ತಪ್ಪ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಮದ್ರೀರ ಗಿಣಿ ಸೋಮಯ್ಯ ಅಭಿಪ್ರಾಯಪಟ್ಟರು.
ಪೊನ್ನಂಪೇಟೆ ತಾಲೂಕು ಪುನರ್ ರಚನೆಗೆ ಆಗ್ರಹಿಸಿ 46ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನಾ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು. ಹಿಂದೆ ಪೊನ್ನಂಪೇಟೆ ತಾಲೂಕು ಕೇಂದ್ರವಾಗಿ ಕ್ಗ್ಗಟ್ಟ್ನಾಡ್ ಹೆಸರಿನಲ್ಲಿ ಇದ್ದ ನಕ್ಷೆಯನ್ನು ಸಮಿತಿ ಬಿಡುಗಡೆ ಮಾಡಿತು.
ಈ ಸಂದರ್ಭ ತಾಲೂಕು ಹೋರಾಟ ಸಮಿತಿಯ ಸಂಚಾಲಕ ಎಂ.ಎಂ. ರವೀಂದ್ರ, ತಾ.ಪಂ. ಮಾಜಿ ಉಪಾಧ್ಯಕ್ಷ ಕೋಳೇರ ದಯಾ ಚಂಗಪ್ಪ, ಜಿ.ಪಂ. ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ, ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಪೊಕ್ಕಳಿಚಂಡ ಪೂಣಚ್ಚ, ಉಪಾಧ್ಯಕ್ಷ ಚೆಪ್ಪುಡಿರ ಸೋಮಯ್ಯ, ರೈತ ಸಂಘದ ಚೆಟ್ರುಮಾಡ ಶಂಕರು, ಕಾಟಿಮಾಡ ಜಿಮ್ಮಿ ಅಯ್ಯಣ್ಣ, ಪೊನ್ನಂಪೇಟೆ ಕೊಡವ ಸಮಾಜದ ಕಾಳಿಮಾಡ ಮೋಟಯ್ಯ, ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಎರ್ಮು ಹಾಜಿ, ಹೆಗ್ಗಡೆ ಸಮಾಜದ ಮುಖಂಡ ಕಾಕೇರ ರವಿ, ಹಾತೂರು ಗ್ರಾಮದ ಸಣ್ಣುವಂಡ ಪಿ. ದೇವಯ್ಯ, ಕೊಟ್ಟಗೇರಿಯ ಬಾಚಮಾಡ ಜನಾರ್ದನ ರಾಜು, ಮಾಣಿಯಪಂಡ ಜೋಯಪ್ಪ, ಚೆಪ್ಪ್ಪುಡಿರ ಲಾಲ ಮುತ್ತಪ್ಪ, ಮುಗುಟಗೇರಿಯ ಮಾಣಿಯಪಂಡ ದೇವಯ್ಯ, ಕಿರುಗೂರಿನ ಕೋದೇಂಗಡ ವಿಠಲ, ನಿವೃತ್ತ ತಹಸೀಲ್ದಾರ್ ಕಳ್ಳೇಂಗಡ ಶಂಭು, ಕಿರುಗೂರು ಗ್ರಾ.ಪಂ. ಸದಸ್ಯ ಪಡಿಞಂರಂಡ ಗಿರೀಶ್, ನಡಿಕೇರಿಯ ಚೆಟ್ಟಮಾಡ ಜಯಾ, ಮತ್ರಂಡ ಅಪ್ಪಯ್ಯ, ಚೇಂದಿರ ಅಪ್ಪಯ್ಯ, ಚೆಕ್ಕೇರ ಸನ್ನಿ ಸುಬ್ಬಯ್ಯ, ಕಿರಿಯಮಾಡ ಬೆಳ್ಯಪ್ಪ, ಬಲ್ಯಮಂಡೂರುವಿನ ಅಜ್ಜಿಕುಟ್ಟಿರ ರಂಜು ಭಾಗವಹಿಸಿದ್ದರು.
ಬೆಂಬಲ: ತಾ. 17ರಂದು ನಡೆಯಲಿರುವ ಸತ್ಯಾಗ್ರಹದಲ್ಲಿ ಗೋಣಿಕೊಪ್ಪಲು ವಿಶ್ವಕರ್ಮ ಸಮಾಜ, ಪೊನ್ನಂಪೇಟೆಯ ತ್ಯಾಗರಾಜ ರಸ್ತೆ ನಿವಾಸಿಗಳು ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಭಾಗವಹಿಸಲಿದ್ದಾರೆ.
ಡಿ. 19ಕ್ಕೆ ಕೈಕೇರಿ ಸವಿತಾ ಸಮಾಜ, ಬಾಡಗರಕೇರಿ-ಪೊರಾಡು ಗ್ರಾಮಸ್ಥರು ಮತ್ತು ಬಾಡಗರಕೇರಿ ಮೃತ್ಯುಂಜಯ ದೇವಸ್ಥಾನ ಸಮಿತಿ, ಬಾಡಗರಕೇರಿ ಮಹಿಳಾ ಸಮಾಜದಿಂದ ಬೈಕ್ ಜಾಥದೊಂದಿಗೆ ತಾಲೂಕು ಹೋರಾಟಕ್ಕೆ ಬೆಂಬಲ ನೀಡಲಿದೆ.
20ರಂದು ಅರುವತ್ತೋಕ್ಲು ಕಾಡ್ಲಯ್ಯಪ್ಪ ಯುವಕ ಸಂಘ ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಪಾಲ್ಗೊಳ್ಳಲಿದೆ ಎಂದು ತಾಲೂಕು ಹೋರಾಟ ಸಮಿತಿ ಪ್ರಕಟಣೆ ತಿಳಿಸಿದೆ.