ವಿಕ ಹಸಿರುಯಾನಕ್ಕೆಅಧಿಕೃತ ಚಾಲನೆ
- ಪತ್ರಿಕೆಯ ಸಾಮಾಜಿಕ ಕಳಿಕಳಿಗೆ ಮೆಚ್ಚುಗೆ
ಮಡಿಕೇರಿ: ''ಬನ್ನಿ, ನಾಳೆಗಾಗಿ ಗಿಡ ನೆಡೋಣ'' ಎಂಬ ಘೋಷವಾಕ್ಯದೊಂದಿಗೆ ವಿಜಯ ಕರ್ನಾಟಕ ಆರಂಭಿಸಿರುವ ''ವಿಕ ಹಸಿರುಯಾನ'' ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಜಿಲ್ಲೆಯ ಹಲವೆಡೆಗಳಲ್ಲಿ ಗಿಡ ನೆಟ್ಟು ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಜಿಲ್ಲೆಯ ಮಡಿಕೇರಿ, ನೆಲ್ಲಿಹುದಿಕೇರಿ, ವಿರಾಜಪೇಟೆ, ಕುಶಾಲನಗರ, ಶನಿವಾರಸಂತೆ, ನಾಪೋಕ್ಲು ಸೇರಿದಂತೆ ವಿವಿಧೆಡೆಗಳಲ್ಲಿ ಜಿಲ್ಲಾಡಳಿತ, ಜಿಲ್ಲೆಯ ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಹಲವು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಶಾಲಾ ಕಾಲೇಜುಗಳಲ್ಲಿ ಗಿಡ ನೆಟ್ಟು ವಿದ್ಯಾರ್ಥಿಗಳಿಗೆ ಪ್ರಕೃತಿ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು.
ಈಗಾಗಲೇ ನಮ್ಮೂರ ಕೆರೆ ಉಳಿಸಿ ಅಭಿಯಾನದ ಮೂಲಕ ಮೈಸೂರಿನಾದ್ಯಂತ ಜಲ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿ ಹಲವು ಕೆರೆಗಳ ಪುನಶ್ಚೇತನಕ್ಕೆ ಕಾರಣವಾಗಿರುವ ವಿಜಯ ಕರ್ನಾಟಕ ಇದೀಗ ಮತ್ತೊಂದು ಸಮಾಜಮುಖಿ ಆಂದೋಲವನ್ನು ಹಮ್ಮಿಕೊಂಡಿದೆ.
ಜಿಲ್ಲಾಧಿಕಾರಿ ಶ್ಲಾಘನೆ: ಮಡಿಕೇರಿ ಜೂನಿಯರ್ ಕಾಲೇಜು ಆವರಣದಲ್ಲಿರುವ ಸರಕಾರಿ ಪ್ರೌಢಶಾಲೆಯಲ್ಲಿ ''ವಿಕ ಹಸಿರುಯಾನ''ಕ್ಕೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸೋಮವಾರ ಚಾಲನೆ ನೀಡಿ, ಪತ್ರಿಕೆಯ ಸಾಮಾಜಿಕ ಕಳಿಕಳಿಯನ್ನು ಶ್ಲಾಘಿಸಿದರು. ಕೇವಲ ಸುದ್ದಿ ನೀಡುವುದೊಂದೇ ಗುರಿಯಾಗದೆ ಈ ರೀತಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಪ್ರಶಂಸನೀಯ. ಅದರಲ್ಲೂ ಪರಿಸರ ರಕ್ಷಣೆಯ ಜಾಗೃತಿಯಂತಹ ತುರ್ತು ಅಗತ್ಯವಿರುವ ಕಾರ್ಯದಲ್ಲಿ ಕೈಜೋಡಿಸಿದೆ. ಇದು ಮಾದರಿಯಾದುದು ಎಂದು ಹೇಳಿದರು.
''ನಾವು ಯಾರೂ ಭೂಮಿಯ ಮೇಲೆ ಶಾಶ್ವತವಲ್ಲ. ಆದರೆ, ನಾವು ಇಂದು ಪ್ರಕೃತಿಯಿಂದ ಸಾಕಷ್ಟು ಕೊಡುಗೆಗಳನ್ನು ಪಡೆದಿದ್ದೇವೆ. ಅದರ ಋುಣಕ್ಕಾಗಿ ಮುಂದಿನ ಪೀಳಿಗೆಯ ಹಿತಕ್ಕಾಗಿ ಇಂದು ಗಿಡ ನೆಡಬೇಕಿದೆ. ಮರ, ಗಿಡಗಳು ಇಲ್ಲದಿದ್ದರೆ ಯಾವುದೇ ಜೀವಿಗೆ ಭೂಮಿಯಲ್ಲಿ ಬದುಕಲು ಸಾಧ್ಯವಿಲ್ಲ. ಇರುವ ಮರಗಳನ್ನು ನಾವು ನಾಶ ಮಾಡಿದರೆ, ನಾಳೆ ಭೂಮಿ ಬಂಜರು ಆಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಪ್ರಕೃತಿಯ ರಕ್ಷಣೆಗೆ ಮುಂದಾಗಬೇಕು'' ಎಂದು ಹೇಳಿದರು.
ಯಾವುದೇ ಒಂದು ಕಾರ್ಯ ಮಾಡಬೇಕಾದಲ್ಲಿ ಅದಕ್ಕೆ ಪ್ರೇರಣೆ ಬೇಕು. ಯುವಕರಲ್ಲಿ ಜಾಗೃತಿ ಮೂಡಿಸಬೇಕು. ಈ ಕಾರ್ಯವನ್ನು ವಿಜಯ ಕರ್ನಾಟಕದಂತೆ ನಾನಾ ಸಂಘ-ಸಂಸ್ಥೆಗಳು ಮಾಡುತ್ತಿವೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ ಎಂದು ಹೇಳಿದರು.
ಜೀವನದಿ ಎಂದು ಹೇಳುತ್ತಿರುವ ಕಾವೇರಿ ನದಿ ನೀರು ಮಲೀನಗೊಳ್ಳುತ್ತಿದೆ. ತ್ಯಾಜ್ಯವನ್ನು ನೀರಿಗೆ ಬಿಡಲಾಗುತ್ತಿದೆ. ಇದಕ್ಕೆ ನಾವೇ ಕಾರಣ. ಪ್ರಕೃತಿಯಿಂದ ಪ್ರಯೋಜನ ಪಡೆಯುವ ನಾವೇ ಅದನ್ನು ಹಾಳುಗೆಡವುತ್ತಿದ್ದೇವೆ. ಈ ರೀತಿ ಆಗದಂತೆ ಎಚ್ಚರ ವಹಿಸಬೇಕು. ನದಿಗೆ ತ್ಯಾಜ್ಯ ಸೇರದಂತೆ ಎಚ್ಚರ ವಹಿಸಬೇಕು. ಕೇವಲ ಜಿಲ್ಲಾಡಳಿತದಿಂದಾಗಲಿ, ಕೆಲವರಿಂದಾಗಲಿ ಸ್ವಚ್ಛತಾ ಕಾರ್ಯ ಸಾಧ್ಯವಾಗುವುದಿಲ್ಲ. ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.
ಯುವ ಜನತೆ ಎಚ್ಚೆತ್ತುಕೊಳ್ಳಬೇಕು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ವಿಜಯ ಕರ್ನಾಟಕ ಪತ್ರಿಕೆ ಈ ರೀತಿಯ ಹಲವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವುದನ್ನು ಗಮನಿಸಿದ್ದೇನೆ. ಮಾಧ್ಯಮಗಳಲ್ಲಿ ಈ ರೀತಿಯ ಬದಲಾವಣೆಯಿಂದ ಸಮಾಜಕ್ಕೆ ಸಾಕಷ್ಟು ಪ್ರಯೋಜನವಾಗುತ್ತದೆ. ಇಂದು ಪ್ರಕೃತಿಯನ್ನು ರಕ್ಷಿಸಲು ತೀವ್ರ ಪ್ರಯತ್ನ ನಡೆಯಬೇಕಿದೆ. ಇಂದು ಬರಗಾಲದಿಂದ ತತ್ತರಿಸುವಂತಾಗಿದೆ. ಇದಕ್ಕೆ ಪ್ರಕೃತಿ ನಾಶವೇ ಕಾರಣ. ಯುವ ಜನತೆ ಎಚ್ಚೆತ್ತುಕೊಂಡು ನಾಳೆಯ ಉತ್ತಮ ಭವಿಷ್ಯಕ್ಕಾಗಿ ಗಿಡಗಳನ್ನು ನೆಟ್ಟು ಅವುಗಳನ್ನು ರಕ್ಷಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ವಿಶ್ವ ಪರಿಸರ ದಿನಾಚರಣೆಯಂದು ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಪ್ರಕೃತಿ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಆಗಬೇಕು ಎಂದು ಹೇಳಿದರು.
ಗ್ರೀನ್ ಸಿಟಿ ಫೋರಂನ ಸಂಚಾಲಕ ಚೆಯ್ಯಂಡ ಸತ್ಯ ಅವರು ಪರಿಸರ ರಕ್ಷಣೆಯ ಪ್ರತಿಜ್ಞೆಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಡಿಎಫ್ಒ ಎಂ.ಎಂ. ಜಯ, ಅರಣ್ಯ ಇಲಾಖೆಯ ಪೂರ್ಣಿಕಾರಾಣಿ, ಮುಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ಬಿಇಒ ಗಾಯತ್ರಿ, ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಸಾವಿತ್ರಿ, ಮುಖ್ಯೋಪಾಧ್ಯಾಯರಾದ ಗುರುರಾಜ್, ಗ್ರಿನ್ ಸಿಟಿ ಪದಾಧಿಕಾರಿಗಳಾದ ಕುಕ್ಕೇರ ಜಯ ಚಿಣ್ಣಪ್ಪ, ಅಂಬೆಕಲ್ ನವೀನ್ ಕುಶಾಲಪ್ಪ, ವಕೀಲ ರತನ್ ತಮ್ಮಯ್ಯ ಮತ್ತಿತರರು ಇದ್ದರು.