ಆ್ಯಪ್ನಗರ

ಕಾಫಿತೋಟದಲ್ಲಿ ಬೀಡುಬಿಟ್ಟಿದ ಪುಂಡಾನೆ ಸೆರೆ

ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

Vijaya Karnataka 29 May 2019, 5:00 am
ಸಾಕಾನೆಗಳ ಸಹಕಾರದಿಂದ ಕಾರ್ಯಾಚರಣೆ | ದುಬಾರೆ ಆನೆ ಶಿಬಿರಕ್ಕೆ ರವಾನೆ
Vijaya Karnataka Web pundane was a prisoner in coffee estate
ಕಾಫಿತೋಟದಲ್ಲಿ ಬೀಡುಬಿಟ್ಟಿದ ಪುಂಡಾನೆ ಸೆರೆ


ಸಿದ್ದಾಪುರ (ಕೊಡಗು):
ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಸೋಮವಾರಪೇಟೆ ತಾಲೂಕು ನೆಲ್ಯಹುದಿಕೇರಿ ಸಮೀಪದ ಪಿಂಟೋ ಎಂಬುವವರ ತೋಟದಲ್ಲಿ ಹತ್ತಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿರುವ ಬಗ್ಗೆ ಮಾಹಿತಿ ಪಡೆದ ಇಲಾಖೆ ಸಿಬ್ಬಂದಿ, ಅದರಲ್ಲಿ ಪುಂಡಾಟಿಕೆ ನಡೆಸುತ್ತಿದ್ದ ಆನೆಯನ್ನು ಪತ್ತೆ ಹಚ್ಚಿ, ದುಬಾರೆ ಹಾಗೂ ಮತ್ತಿಗೋಡು ಶಿಬಿರದ ಎಂಟು ಸಾಕಾನೆಗಳ ಸಹಕಾರದಿಂದ ಸೆರೆ ಹಿಡಿದಿದ್ದು, ದುಬಾರೆ ಸಾಕಾನೆ ಶಿಬಿರಕ್ಕೆ ರವಾನಿಸಲಾಗಿದೆ.

ಸೋಮವಾರಪೇಟೆ ತಾಲೂಕಿನ ಕುಶಾಲನಗರ ವ್ಯಾಪ್ತಿಯಲ್ಲಿ ಪುಂಡಾಟಿಕೆ ನಡೆಸುತ್ತಿರುವ ಎರಡು ಕಾಡಾನೆಗಳ ಸೆರೆಗೆ ಅನುಮತಿ ಸಿಕ್ಕಿದ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಅಭ್ಯತ್‌ಮಂಗಲದ ಸಮೀಪ ಕಾಡಾನೆ ಸೆರೆಗೆ ಸಿದ್ಧತೆ ನಡೆಸಲಾಗಿತ್ತು. ದುಬಾರೆ ಹಾಗೂ ಮತ್ತಿಗೋಡು ಆನೆ ಶಿಬಿರದ 8 ಆನೆಗಳೊಂದಿಗೆ ಸುಮಾರು ಐವತ್ತಕ್ಕೂ ಹೆಚ್ಚು ಸಿಬ್ಬಂದಿ ಬೆಳಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಪಿಂಟೋ ಅವರ ಕಾಫಿ ತೋಟದಲ್ಲಿ 10ಕ್ಕೂ ಹೆಚ್ಚು ಆನೆಗಳ ಹಿಂಡು ಇರುವುದನ್ನು ಪತ್ತೆ ಹಚ್ಚಿ ಮೇಲಧಿಕಾರಿಗೆ ಮಾಹಿತಿ ನೀಡಿದರು. ಡಿಎಫ್‌ಒ ಮಂಜುನಾಥ್‌, ಎಸಿಎಫ್‌ ಚಿಣ್ಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಕಾರ್ಯಾಚರಣೆ ಆರಂಭವಾಯಿತು.

ಪಶುವೈದ್ಯಾಧಿಕಾರಿ ಮುಜೀಬ್‌ ಕಾಡಾನೆಗೆ ಅರವಳಿಕೆ ನೀಡಿದ ನಂತರ ಸತತ ಎರಡು ಗಂಟೆ ಕಾಲ ಸಾಕಾನೆಗಳ ಸಹಕಾರದಿಂದ ಹಗ್ಗವನ್ನು ಕುತ್ತಿಗೆ ಹಾಗೂ ಕಾಲಿಗೆ ಕಟ್ಟಿ ಕಾಫಿ ತೋಟದಿಂದ ಮುಖ್ಯ ರಸ್ತೆವರೆಗೆ ಎಳೆದು ತರಲಾಯಿತು. ನಂತರ ಅದನ್ನು ಲಾರಿಗೆ ಹತ್ತಿಸಲು ಸಾಕಾನೆಗಳು ಹಾಗೂ ಸಿಬ್ಬಂದಿ ಹರಸಾಹಸಪಟ್ಟರು. ಕಾಡಾನೆ ಸೆರೆ ಹಿಡಿಯುವ ಮಾಹಿತಿ ತಿಳಿದು ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಕಾರ್ಯಾಚರಣೆ ವೀಕ್ಷಿಸಿ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದರು.

ಈ ಸಂದರ್ಭ ಮಾತನಾಡಿದ ಡಿಎಫ್‌ಒ ಮಂಜುನಾಥ್‌, ''ಕಾಫಿತೋಟಗಳಲ್ಲಿ ಬೀಡು ಬಿಟ್ಟು ಕಾರ್ಮಿಕರು, ಗ್ರಾಮಸ್ಥರಿಗೆ ಆತಂಕ ಸೃಷ್ಟಿ ಮಾಡುತ್ತಿದ್ದ ಇಪ್ಪತ್ತು ವರ್ಷದ ಹೆಣ್ಣಾನೆಯನ್ನು ಸೆರೆ ಹಿಡಿಯಲಾಗಿದೆ. ಎರಡು ಪುಂಡಾನೆಗಳನ್ನು ಸೆರೆ ಹಿಡಿಯಲು ಅನುಮತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ಮತ್ತೊಂದು ಗಂಡಾನೆಯನ್ನು ಸೆರೆಹಿಡಿಯಲು ಕ್ರಮ ವಹಿಸಲಾಗುವುದು. ಕಾಡಾನೆ ಹಾವಳಿ ತಡೆಗೆ ಶಾಶ್ವತ ಯೋಜನೆಗಳನ್ನು ರೂಪಿಸಿದ್ದು, ದುಬಾರೆ ವ್ಯಾಪ್ತಿಯಲ್ಲಿ ರೈಲ್ವೆ ಕಂಬಿಗಳ ಬೇಲಿ ಅಳವಡಿಸುವ ಕಾರ್ಯ ಸದ್ಯದಲ್ಲೇ ನಡೆಯಲಿದೆ,'' ಎಂದರು.

ಡಾ. ಮುಜೀಬ್‌ ಮಾತನಾಡಿ, ''ಇದುವರೆಗೂ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಹದಿನೈದು ಕಾಡಾನೆಗಳನ್ನು ಸೆರೆ ಹಿಡಿಯಲಾಗಿದೆ. ಹದಿನೈದಕ್ಕೂ ಹೆಚ್ಚು ಕಾಡಾನೆಗಳಿಗೆ ರೇಡಿಯೊ ಕಾಲರ್‌ ಅಳವಡಿಸಲಾಗಿದೆ,''ಎಂದು ಹೇಳಿದರು.

ವಲಯ ಅರಣ್ಯಾಧಿಕಾರಿ ಅರುಣ್‌, ಉಪವಲಯ ಅರಣ್ಯಾಧಿಕಾರಿಗಳಾದ ರಂಜನ್‌, ವಿಲಾಸ್‌ , ರೈತ ಸಂಘದ ಪ್ರಮುಖರು ಸೇರಿದಂತೆ ಸಾಕಾನೆ ಮವುತರು ಹಾಗೂ ಸಿಬ್ಬಂದಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ