ಆ್ಯಪ್ನಗರ

ದೇಶ ರಕ್ಷಿಸಿದ ಸೈನಿಕ ಬೀದಿಪಾಲು

ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ವಾಸದ ಮನೆ, ತೋಟ ಕಳೆದುಕೊಂಡ ತಾಲೂಕಿನ ನಿವೃತ್ತ ಸೈನಿಕರೊಬ್ಬರ ಬದುಕು ಕೂಡ ಈಗ ಮೂರಾಬಟ್ಟೆಯಾಗಿದೆ.

Vijaya Karnataka 3 Sep 2018, 5:00 am
ಕವನ್‌ ಕಾರ್ಯಪ್ಪ ಸೋಮವಾರಪೇಟೆ
Vijaya Karnataka Web rain disaster soldier in street
ದೇಶ ರಕ್ಷಿಸಿದ ಸೈನಿಕ ಬೀದಿಪಾಲು


ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ವಾಸದ ಮನೆ, ತೋಟ ಕಳೆದುಕೊಂಡ ತಾಲೂಕಿನ ನಿವೃತ್ತ ಸೈನಿಕರೊಬ್ಬರ ಬದುಕು ಕೂಡ ಈಗ ಮೂರಾಬಟ್ಟೆಯಾಗಿದೆ.

ದಶಕಗಳ ದೇಶ ರಕ್ಷಣೆ ಮಾಡಿದ ಮಾದಾಪುರ ಗ್ರಾಪಂ ವ್ಯಾಪ್ತಿಯ ಇಗ್ಗೋಡ್ಲು ಗ್ರಾಮದ ನಿವೃತ್ತ ಹವಾಲ್ದಾರ್‌ ಜಗ್ಗಾರಂಡ ದೇವಯ್ಯ ತಮ್ಮ ಲಕ್ಷಾಂತರ ಮೌಲ್ಯದ ಮನೆ, ಆಸ್ತಿಪಾಸ್ತಿ, ಬೆಳೆ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.

ಜಗ್ಗಾರಂಡ ದೇವಯ್ಯ ಅವರು 1984ರ ಪಂಜಾಬ್‌ನ ಅಮೃತಸರದಲ್ಲಿ ನಡೆದ ಆಪರೇಷನ್‌ ಬ್ಲೂಸ್ಟಾರ್‌ ಹಾಗೂ 1987ರಲ್ಲಿ ಶ್ರೀಲಂಕಾಕ್ಕೆ ತೆರಳಿದ ಭಾರತೀಯ ಶಾಂತಿಪಾಲನಾ ಪಡೆಯಲ್ಲಿ ಜೀವದ ಹಂಗು ತೊರೆದು ಹೋರಾಡಿದ್ದರು. ಮದ್ರಾಸ್‌ ರೆಜಿಮೆಂಟ್‌ನಲ್ಲಿ ಸೈನಿಕನಾಗಿ ಸೇರಿದ್ದ ಅವರು 17 ವರ್ಷಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿ 1996ರಲ್ಲಿ ನಿವೃತ್ತಿಯಾದರು. ಬಳಿಕ ಇಗ್ಗೊಡ್ಲು ಗ್ರಾಮದಲ್ಲಿ ಕುಟುಂಬದಿಂದ ಬಂದ ಪಾಲಿನಲ್ಲಿ ತಮಗೆ ಸೇರಿದ 6 ಎಕರೆ ಜಮೀನಿನಲ್ಲಿ ಕಾಫಿ ತೋಟ ಮಾಡಿದರು. ಉಪ ಬೆಳೆಯಾಗಿ ಕರಿಮೆಣಸು ಬೆಳೆಯುವುದರೊಂದಿಗೆ ಉತ್ತಮ ಕೃಷಿಕರಾಗಿಯೂ ಮನ್ನಣೆ ಪಡೆದಿದ್ದರು. ಆದರೆ, ಇವೆಲ್ಲವೂ ಈಗ ಸರ್ವನಾಶವಾಗಿದೆ.

ಮಾಜಿ ಸೈನಿಕನ ಕೋಟಾದಡಿ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ದೇವಯ್ಯ ಅವರು, ಪತ್ನಿ ನಯನಾ ದೇವಯ್ಯ, ಪುತ್ರರಾದ ವಿನೋದ್‌ ಬೋಪಯ್ಯ ಹಾಗೂ ರೋಹಿತ್‌ ಸೋಮಯ್ಯ ಅವರೊಂದಿಗೆ ಜೀವನ ಸಾಗಿಸುತ್ತಿದ್ದರು. ಆದರೆ, ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದಾಗಿ ಆ. 17ರಂದು ರಾತ್ರಿ 9ರ ವೇಳೆಗೆ ದಿಢೀರ್‌ ಭೂಕುಸಿತದಿಂದ ಮನೆ ಹಾಗೂ ತೋಟ, ಗದ್ದೆಗಳ ಅಸ್ತಿತ್ವವೇ ಈಗ ಇಲ್ಲ. ಇವರೊಂದಿಗೆ ಸಹೋದರ ಜಗ್ಗಾರಂಡ ಕಾವೇರಪ್ಪ ಅವರ ಮನೆ ಹಾಗೂ 4 ಏಕರೆ ತೋಟ ನಾಶವಾಗಿದೆ.

ಪ್ರಸ್ತುತ ಗರಗಂದೂರು ಗ್ರಾಮದಲ್ಲಿ ನೆಲೆಸಿರುವ ದೇವಯ್ಯ ಕುಟುಂಬ, ಯಾವುದೇ ಪ್ರತಿಫಲಾಪೇಕ್ಷೆಯಲ್ಲದೆ ತಮ್ಮ ಕುಟುಂಬವನ್ನು ಸಲಹುತ್ತಿರುವ ಅಂತಾರಾಷ್ಟ್ರೀಯ ಟೆನಿಸ್‌ ಆಟಗಾರ ಮಚ್ಚಂಡ ರೋಹನ್‌ ಬೋಪಣ್ಣ ಮತ್ತು ಅವರ ಕುಟುಂಬದ ಉಪಕಾರವನ್ನು ಸ್ಮರಿಸುತ್ತಾ ಗದ್ಗದಿತರಾಗುತ್ತಾರೆ. ರಾಜ್ಯ ಮತ್ತು ಕೇಂದ್ರ ಸರಕಾರ ನಮ್ಮ ಸಂಕಷ್ಟಕ್ಕೆ ತಕ್ಕ ಪರಿಹಾರ ನೀಡಬೇಕು. ತೋಟ ಹಾಗೂ ಮನೆ ನಿರ್ಮಾಣಕ್ಕೆ ಪಡೆದುಕೊಂಡಿರುವ ಸಾಲ ಮನ್ನಾ ಮಾಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಅವರು.

ಮಾದಾಪುರ ಪಂಚಾಯಿತಿ ವ್ಯಾಪ್ತಿಯ ಸಾಕಷ್ಟು ಗ್ರಾಮಸ್ಥರು ಭೂಕುಸಿತದಿಂದ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ಲಕ್ಷಾಂತರ ರೂ.ವೆಚ್ಚದಲ್ಲಿ ನಿರ್ಮಾಣವಾದ ಮನೆಗಳು ಮಣ್ಣುಪಾಲಾಗಿವೆ. ಈ ಭಾಗದ ಜನರಿಗೆ ಅವರಿಗೆ ಸೇರಿದ ಜಾಗದಲ್ಲಿಯೇ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

-ಮೋಟನಾಳಿರ ಸನ್ನಿ ಕಾರ್ಯಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ