ಇನ್ನು ಮುಂದೆ ಕಟ್ಟಡ ಕಟ್ಟಲು ಅವಕಾಶವಿಲ್ಲ
ಮಡಿಕೇರಿ: ನರದಲ್ಲಿ ಜಲಮೂಲಗಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಲು ನಗರಸಭೆ ತೀರ್ಮಾನಸಿದ್ದು, ಅವುಗಳ ಸುತ್ತ ಯಾವುದೇ ಕಟ್ಟಡ ಕಟ್ಟಲು ಅನುಮತಿ ನೀಡದಿರಲು ನಿರ್ಣಯ ಅಂಗೀಕರಿಸಿದೆ.
ಪೀಟರ್ ಹಾಗೂ ಸಂಗೀತ ಪ್ರಸನ್ನ ಅವರು, ತಮ್ಮ ವಾರ್ಡ್ಗಳಲ್ಲಿ ಕುಡಿಯುವ ನೀರು ಕಲುಷಿತವಾಗಿದೆ. ಶುದ್ಧ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ನಂದ ಕುಮಾರ್ ಮಾತನಾಡಿ, ಜಲ ಮೂಲಗಳು ನಾಶ ಆಗುತ್ತಿವೆ. ಅಲ್ಲಿ ಮನೆ ಕಟ್ಟಲಾಗುತ್ತಿದೆ. ಮಣ್ಣುಗಳನ್ನು ತಂದು ಹಾಕುವುದರಿಂದ ಅವುಗಳು ಮುಚ್ಚಿ ಹೋಗುತ್ತಿವೆ. ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿದಲ್ಲಿ ಮುಂದೆ ಕಾವೇರಿಯೇ ಬತ್ತಿ ಹೋಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಉಣ್ಣಿಕೃಷ್ಣ , ನಗರದಲ್ಲಿ ಸ್ವಾಭಾವಿಕ ಜಲ ಮೂಲವಾಗಿ ಕೊಲ್ಲಿ ಹರಿದು ಬರುತ್ತಿರುವುದು ಸುದರ್ಶನ ಬಳಿ ಮಾತ್ರ. ಆದರೆ ಇಲ್ಲಿ ಸರಕಾರಿ ಕಟ್ಟಡಗಳು ಏಳುತ್ತಿವೆ. ಅಕ್ರಮವಾಗಿ ಕೊಳವೆ ಬಾವಿ ಕೊರೆಯಲಾಗುತ್ತಿದೆ. ಮುಂದೆ ತೀವ್ರ ಸಮಸ್ಯೆ ಎದುರಾಗಲಿದೆ ಎಂದರು.
ಪಿ.ಡಿ.ಪೊನ್ನಪ್ಪ, ಚುಮ್ಮಿ ದೇವಯ್ಯ ಕೂಡ ಜಲ ಮೂಲಗಳ ಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಇನ್ನು ಮುಂದೆ ಜಲಮೂಲಗಳ ಬಳಿ ಯಾವುದೇ ಕಟ್ಟಡ ಕಟ್ಟಲು ಅನುಮತಿ ನೀಡುವುದಿಲ್ಲ. ಅಲ್ಲದೆ ಅಲ್ಲಿ ಭೂಮಿ ಪರಿವರ್ತನೆಗೆ ಅವಕಾಶ ಕೊಡದಂತೆ, ಖಾಸಗಿ ಜಾಗವಾದರೂ ಕೇವಲ ಕೃಷಿಗೆ ಮಾತ್ರ ಬಳಸುವಂತೆ ತೀರ್ಮಾನಿಸಲಾಯಿತು.
ನಗರದಲ್ಲಿರುವ ಮೆಡಿಕಲ್ ಕಾಲೇಜಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇನ್ನು ಮುಂದೆ ಮೆಡಿಕಲ್ ಕಾಲೇಜಿಗೆ ನೀರು ಪೂರೈಸದಂತೆ, ಕಾಲೇಜಿನವರೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲು ನಿರ್ಧರಿಸಲಾಯಿತು.
ಮಹದೇವಪೇಟೆ ರಸ್ತೆ ಸ್ಥಿತಿ:ಮಹದೇವಪೇಟೆ ರಸ್ತೆ ಅಗಲೀಕರಣ ನಡೆಸಿ ಸಾಕಷ್ಟು ದಿನಗಳು ಕಳೆದಿವೆ ಆದರೆ, ಇಲ್ಲಿ ನಿಧಾನ ಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಾಗಾರಿಯನ್ನು ಚುರುಕುಗೊಳಿಸಲು ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿದರು. ಮಹದೇವಪೇಟೆಯ ಎರಡೂ ಬದಿಗಳಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಒಳಚರಂಡಿ ಮಂಡಳಿಯವರನ್ನು ಕರೆಯಿಸಿ ಚರ್ಚೆ ನಡೆಸುವಂತೆ ತಿಳಿಸಿದ್ದರೂ ಇನ್ನೂ ಆಗಲಿಲ್ಲ ಎಂದು ಅಮೀನ್ ಮೊಹಿಸಿನ್ ಆಕ್ಷೇಪ ವ್ಯಕ್ತಪಡಿಸಿದರು. ಇನ್ನು ಮೂರು ದಿನಗಳ ಒಳಗಾಗಿ ಸಭೆ ಏರ್ಪಡಿಸಲಾಗುವುದು ಎಂದು ಅಧ್ಯಕ್ಷೆ ಬಂಗೇರ ಅವರು ತಿಳಿಸಿದರು.