ಆ್ಯಪ್ನಗರ

ಅಕಾಲಿಕ ಮಳೆ ಎಫೆಕ್ಟ್: ಮಳೆಗಾಲದಲ್ಲೇ ಹಣ್ಣಾದ ಕಾಫಿ

ಡಿಸೆಂಬರ್‌ ಅಲ್ಲ, ಜುಲೈನಲ್ಲೇ ಮಾಗಿದ ಕಾಫಿ | ಮಳೆಯಿಂದ ಕೊಯ್ಲು ಮಾಡಲಾಗದೆ ಅಸಹಾಯಕತೆ | ನಷ್ಟದ ಭೀತಿಯಲ್ಲಿ ಬೆಳೆಗಾರರು ತೇಲಪಂಡ ಕವನ್‌ ಕಾರ್ಯಪ್ಪ ಸೋಮವಾರಪೇಟೆ ಕೆಲವು ...

Vijaya Karnataka 26 Jul 2019, 5:00 am
ತೇಲಪಂಡ ಕವನ್‌ ಕಾರ್ಯಪ್ಪ ಸೋಮವಾರಪೇಟೆ
Vijaya Karnataka Web untimely rain effect coffee seeds ripen
ಅಕಾಲಿಕ ಮಳೆ ಎಫೆಕ್ಟ್: ಮಳೆಗಾಲದಲ್ಲೇ ಹಣ್ಣಾದ ಕಾಫಿ


ಕೆಲವು ದಿನಗಳಿಂದ ಮುಂಗಾರು ಚುರುಕುಗೊಂಡಿದ್ದು, ಭತ್ತ ಬೆಳೆಯುವ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟರೆ, ಕಾಫಿ ಬೆಳೆಗಾರರು ಆತಂಕದಲ್ಲಿದ್ದಾರೆ.

ಸೋಮವಾರಪೇಟೆ ತಾಲೂಕಿನ ಕೆಲವು ತೋಟಗಳಲ್ಲಿ ಕಾಫಿ ಹಣ್ಣಾಗುತ್ತಿದ್ದು, ಮುಂಗಾರು ಇದೀಗ ಚುರುಕುಗೊಂಡಿರುವುದರಿಂದ ಬೆಳೆಗಾರರು ನಷ್ಟದ ಭೀತಿಯಲ್ಲಿದ್ದಾರೆ.

ಅಕಾಲಿಕ ಮಳೆ ಕಾರಣ ಪ್ರಸಕ್ತ ವರ್ಷ ಕಾಫಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬೇಗನೆ ಹಣ್ಣಾಗುತ್ತಿದೆ. ಮಳೆಗಾಲದಲ್ಲಿ ಮೋಡ ಆವರಿಸಿ ಸತತ ಮಳೆ ಸುರಿಯುತ್ತಿರುವುದರಿಂದ ಕಾಫಿ ಹಣ್ಣನ್ನು ಕೊಯ್ಲು ಮಾಡಿ, ಒಣಗಿಸಲು ಸಾಧ್ಯವಿಲ್ಲ. ಹಣ್ಣಾದ ಕಾಫಿ ಶೀತದಿಂದ ಕೊಳೆತು ಉದುರಿ ಮಣ್ಣು ಸೇರುತ್ತದೆ. ಕಷ್ಟಪಟ್ಟು ಕೊಯ್ಲು ಮಾಡಿ ಒಣಗಿಸಿದರೂ ಗುಣಮಟ್ಟ ಕಳೆದುಕೊಂಡು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮುಂಗಾರಿನಲ್ಲಿ ಧಾರಾಕಾರ ಮಳೆ ಸುರಿದು ಭೂಮಿಯಲ್ಲಿ ಶೀತ ಹೆಚ್ಚಾಗಿ ನಂತರ ಡಿಸೆಂಬರ್‌, ಜನವರಿ ತಿಂಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿತ್ತು. ಈ ಅಕಾಲಿಕ ಮಳೆ ಹಾಗೂ ಮಂಜಿನಿಂದ ಕೆಲ ತೋಟಗಳಲ್ಲಿ ಹೂ ಬಿಟ್ಟು ಮಳೆಗಾಲದಲ್ಲಿ ಕಾಫಿ ಹಣ್ಣಾಗಿದೆ. ಮಾರ್ಚ್‌ ಎರಡನೇ ವಾರ ಅಥವಾ ಏಪ್ರಿಲ್‌ ತಿಂಗಳ ಮೊದಲ ವಾರದಲ್ಲಿ ಹೂ ಮಳೆ ಸುರಿದು ಹೂ ಅರಳಿದ ನಂತರ ಮಳೆಯಾದರೆ ನವೆಂಬರ್‌, ಡಿಸೆಂಬರ್‌ ತಿಂಗಳಲ್ಲಿ ಕಾಫಿ ಕೊಯ್ಲಿಗೆ ಬರುತ್ತದೆ. ಅದಕ್ಕಿಂತ ಹಿಂದಿನ ತಿಂಗಳುಗಳಲ್ಲಿ ಕಾಫಿ ಹಣ್ಣಾದರೆ, ಫಸಲು ನಷ್ಟವಾಗುತ್ತದೆ.

ಮುಂಗಾರು ವಿಳಂಬಗೊಂಡು ಸೂರ್ಯನ ಪ್ರಖಾರ ಹೆಚ್ಚಾಗಿದ್ದರಿಂದಲೂ ಕಾಫಿ ಹಣ್ಣಾಗುತ್ತಿದೆ ಎಂದು ಬೆಳೆಗಾರರು ಅಭಿಪ್ರಾಯಪಟ್ಟಿದ್ದಾರೆ. ಶಾಂತಳ್ಳಿ ಹೋಬಳಿಯಲ್ಲಿ ಹೆಚ್ಚಿನ ಮಳೆ ಬೀಳುವುದರಿಂದ, ಕೆಲ ತೋಟಗಳಲ್ಲಿ ಕಾಫಿ ಹಣ್ಣಾಗಿದೆ. ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿಯ ಕೆಲ ತೋಟಗಳಲ್ಲೂ ಅಲ್ಪಸ್ವಲ್ಪ ಹಣ್ಣಾಗುತ್ತಿದೆ.

ಅಕಾಲಿಕವಾಗಿ ಕಾಫಿ ಹಣ್ಣಾಗುವುದು ರೋಬಸ್ಟಾ ತೋಟಗಳಲ್ಲಿ ಹೆಚ್ಚಾಗಿದೆ. ಕುಶಾಲನಗರ, ಸುಂಟಿಕೊಪ್ಪ ಹಾಗೂ ಸೋಮವಾರಪೇಟೆ ಹೋಬಳಿಯಲ್ಲಿ ಫೆಬ್ರವರಿಯಲ್ಲಿ ಮಳೆ ಬಿದ್ದು, ಕೆಲವು ರೋಬಸ್ಟಾ ತೋಟಗಳಲ್ಲಿ ಶೇ.10ರಷ್ಟು ಹಣ್ಣಾಗಿದೆ. ಮಳೆಗಾಲದಲ್ಲಿ ಹಣ್ಣಾದ ಕಾಫಿಯನ್ನು ಕೊಯ್ಲು ಮಾಡಲು ಸಾಧ್ಯವಾಗದೆ ಬೆಳೆಗಾರರು ಕೈಚೆಲ್ಲಿದ್ದಾರೆ.

ಈಗಾಗಲೇ ಸಾಧಾರಣ ಮಳೆ ಸುರಿಯಲಾರಂಭಿಸಿದೆ. ಹಣ್ಣು ಉದುರುತ್ತಿದೆ. ತಾಲೂಕಿನಲ್ಲಿ ಅರೇಬಿಕಾ ಕಾಫಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಕಳೆದ ವರ್ಷ ಪ್ರಕೃತಿ ವಿಕೋಪದಿಂದ ಧಾರಾಕಾರ ಮಳೆ ಸುರಿದು, ಕಾಫಿ ಫಸಲು ಹಾನಿಯಾಗಿತ್ತು. ಈಗ ಮಳೆಗಾಲದಲ್ಲಿ ಕಾಫಿ ಹಣ್ಣಾಗಿರುವುದರಿಂದ ಬೆಳೆಗಾರರು ಫಸಲು ನಷ್ಟ ಅನುಭವಿಸುವಂತಾಗಿದೆ.

ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದರೆ, ಕೊಳೆರೋಗದಿಂದ ಕಾಫಿ ಉದುರಬಹುದು. ಪ್ರತಿ ವರ್ಷ ಅಕಾಲಿಕ ಮಳೆ ಸೇರಿದಂತೆ ಹವಮಾನ ವೈಪ್ಯರಿತ್ಯದಿಂದ ಫಸಲು ನಷ್ಟ ಅನುಭವಿಸುವಂತಾಗಿದೆ. ಆದರೆ, ಬೆಳೆಹಾನಿಗೆ ಯಾವುದೇ ಪರಿಹಾರ ಸಿಗುತ್ತಿಲ್ಲ. ಕಾಫಿ ಬೆಳೆಗಾರರನ್ನು ರಕ್ಷಿಸಬೇಕಾದ ಕಾಫಿ ಮಂಡಳಿಯಿಂದ ಯಾವುದೇ ಅನುದಾನ ಸಿಗುತ್ತಿಲ್ಲ. ದಾಖಲು ಸಮಸ್ಯೆಯಿರುವ ಸಣ್ಣ ಕಾಫಿ ಬೆಳೆಗಾರರಿಗೆ ಕಾಫಿ ಮಂಡಳಿಯಿಂದ ನಯಾ ಪೈಸೆ ಪರಿಹಾರವಾಗಲಿ, ಸಹಾಯಧನವಾಗಲಿ ಸಿಗುತ್ತಿಲ್ಲ ಎಂದು ಬೆಳೆಗಾರರು ದೂರಿದ್ದಾರೆ.

ತಾಲೂಕಿನಲ್ಲಿ ಒಟ್ಟು 28,590 ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. 22,900 ಹೆಕ್ಟೇರ್‌ನಲ್ಲಿ ಅರೇಬಿಕಾ ಕಾಫಿ ಹಾಗೂ 5690 ಹೆ.ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ.

ಕಳೆದ ಫೆಬ್ರವರಿಯಲ್ಲಿ ಮಳೆ ಬಿದ್ದ ಹಿನ್ನೆಲೆಯಲ್ಲಿ ಹೂ ಅರಳಿ ಕೆಲವು ರೋಬಸ್ಟಾ ತೋಟಗಳಲ್ಲಿ ಈಗ ಹಣ್ಣಾಗಿದೆ. ಹಣ್ಣನ್ನು ಕೊಯ್ಲು ಮಾಡಿ, ಒಣಗಿಸಿಕೊಳ್ಳಬೇಕು. ಗಿಡದಲ್ಲೇ ಬಿಟ್ಟರೆ, ಹಣ್ಣಿನೊಳಗೆ ಬೆರ್ರಿ ಬೋರರ್‌ ಕೀಟಗಳ ಸಂತಾನೋತ್ಪತಿಯಾಗಿ ಕೀಟಬಾಧೆ ಜಾಸ್ತಿಯಾಗಲಿದೆ.

-ಮುರಳೀಧರ್‌ | ಹಿರಿಯ ಸಂಪರ್ಕಾಧಿಕಾರಿ | ಕಾಫಿ ಮಂಡಳಿ ಸೋಮವಾರಪೇಟೆ



ಮಳೆಗಾಲದಲ್ಲಿ ಕಾಫಿ ಹಣ್ಣಾಗುತ್ತಿರುವುದರಿಂದ ಫಸಲು ನಷ್ಟ ಅನುಭವಿಸಬೇಕಾಗಿದೆ. ಕಳೆದ ವರ್ಷ ಧಾರಾಕಾರ ಮಳೆ ಸುರಿದ ಪರಿಣಾಮ ಫಸಲು ನಷ್ಟ ಆಯಿತು. ಈಗ ಕಾಫಿ ಹಣ್ಣಾಗಿ ಕೊಳೆತು ಹೋಗುತ್ತಿದೆ. ಕಾಫಿ ತೋಟದ ನಿರ್ವಹಣೆ ಕಷ್ಟವಾಗುತ್ತಿದೆ.

-ಧಿಮೇರಿಯಂಡ ಮಣಿ ಉತ್ತಪ್ಪ | ಕಾಫಿ ಬೆಳೆಗಾರ | ಸೋಮವಾರಪೇಟೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ